ಕರುನಾಡ ಹಿರೆಕ್ಕ ಗೀತಕ್ಕ




ಗೀತ ನಾಗಭೂಷಣ ಪ್ರಸ್ತುತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಈ ಆಯ್ಕೆಯ ಬಗೆಗೆ ಯಾವುದೇ ವಿವಾದಗಳಿಲ್ಲದಿರುವುದೇ ಅವರ ಜೀವನ - ಸಾಧನೆಯ ದ್ಯೋತಕ. ಗೀತಕ್ಕರ ಆತ್ಮೀಯ ಗೆಳತಿ ಗುಲ್ಬರ್ಗದ ಮತ್ತೊಬ್ಬ ಅಕ್ಕ ಡಾ. ಮೀನಾಕ್ಷಿ ಬಾಳಿಯವರು ನುಡಿನಮನಕ್ಕಾಗಿ ಗೀತಕ್ಕರ ಬದುಕ ಕುರಿತು ಆಪ್ತವಾಗಿ ಬರೆದಿದ್ದಾರೆ, ಅಷ್ಟೇ ಅಲ್ಲ ಗೀತಕ್ಕರನ್ನು ಮಾತಿಗೆಳೆದಿದ್ದಾರೆ,





ಟಿಪಿಕಲ್ ಮೊಘಲಾಯಿ ಏರಿಯಾದ ಪ್ರಮುಖ ಲೇಖಕಿ ಗೀತಾ. ಸಮಕಾಲೀನ ಕನ್ನಡ ಲೇಖಕರ ಪಂಕ್ತಿಯಲ್ಲಿ ಎದ್ದು ಕಾಣಿಸುವ ಅಪರೂಪದ ಸಾಹಿತ್ಯದ ನಡೆ. ಸದಾ ಹಸನ್ಮುಖಿ. ಅಂತೆಯೇ ಅಂತರ್ಮುಖಿಯೂ ಹೌದು. ಗೀತಾ ಬರೆದಿದು, ಬದುಕಿದ್ದು ಎಲ್ಲವೂ ಸಂಘರ್ಷಮಯವೇ ಹೌದು. ಏಕೆಂದರೆ ಗೀತಾ ಹುಟ್ಟಿದ್ದು ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಕಲಬುಗರ್ಿಯ ಪುಟ್ಟ ಹಳ್ಳಿಯಲ್ಲಿ. 1942ನೇ ಮಾರ್ಚಿ 25ನೇ ತಾರೀಖು. ಕಲಬುರ್ಗಿಯ ನೆರೆ ಹಳ್ಳಿ ಶಿವಲಿಂಗೇಶ್ವರನ ಸಾವಳಗಿ ಎಂಬುದು ಅವರ ಹುಟ್ಟೂರು. ತಂದೆ ಶಾಂತಪ್ಪ, ತಾಯಿ ಶರಣಮ್ಮ. ಇವರ ಮೊದಲಿನ ಹೆಸರು ಶಾಂತಾ ಎಂದಿತ್ತು. ಗಂಗಾಮತವೆಂದು ಶಿಷ್ಯರಿಂದ ಕರೆಸಿಕೊಳ್ಳುತ್ತಿರುವ ಇವರದು ಬಡಕುಟುಂಬವಾಗಿತ್ತು. ತುಂಬಾ ಕಷ್ಟಪಟ್ಟು ಪಟ್ಟಣ ಸೇರಿದ ಶಾಂತಪ್ಪ, ಕಲಬುರ್ಗಿಯ ಎಂ.ಎಸ್.ಕೆ ಮಿಲ್ನಲ್ಲಿ ಕೂಲೀ ಕಾರ್ಮಿಕನಾಗಿ ಸೇರಿದ್ದೇ ದೊಡ್ಡ ಸಾಧನೆ ಎಂಬಂತಾಗಿತ್ತು. ಷಹರದ ಆಧುನಿಕ ಗಾಳಿಯ ಪ್ರಭಾವದಿಂದಾಗಿ ಮಗಳು ಶಾಂತಾಳಿಗೆ ಶಾಲೆಗೆ ಕಳಿಸಲು ಮನಸ್ಸು ಮಾಡಿದ್ದು ಕೂಡಾ ಕನ್ನಡ ಸಾಹಿತ್ಯಕ್ಕೆ ಮಾಡಿದ ಉಪಕಾರವೆಂದೇ ಈಗ ಪರಿಗಣಿಸಬೇಕಾಗಿದೆ.

ಏಕೆಂದರೆ ಇಲ್ಲಿ 1347ರಲ್ಲಿ ಹಸನ್ಗಂಗೂಬಹುಮನಿಯಿಂದ ಪ್ರಾರಂಭವಾದ ಮೊಘಲರ ಆಳ್ವಿಕೆಯು 1948ರ ನಿಜಾಮಶಾಹಿಯವರೆಗೂ ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿತ್ತು. ಎಲ್ಲಾ ದೇಶೀಯ ಅರಸೊತ್ತಿಗೆಗಳಂತೆ ಇಲ್ಲಿಯೂ ಮಡಿವಂತ ಸಾಮಾಜಿಕ ವ್ಯವಸ್ಥೆಯೇ ಮನೆ ಮಾಡಿಕೊಂಡಿತ್ತು. ಬ್ರಿಟೀಷ್ ಸಾಮ್ರಾಜ್ಯಶಾಹಿಯ ಆಳ್ವಿಕೆಗೆ ಒಳಪಟ್ಟ ಭಾಗದಲ್ಲಿ ಆಧುನಿಕ ಗಾಳಿ ಸೋಕಿದಂತೆ, ನಿಜಾಮಶಾಹಿ ಇಲಾಖೆಯು ಆಧುನಿಕತೆಯಿಂದ ದೂರವೇ ಉಳಿದಿತ್ತು. ಹೀಗಾಗಿ ಸಾರ್ವಜನಿಕ ಶಿಕ್ಷಣದಂಥ ಗಂಭೀರ ಬದಲಾವಣೆಗೆ ಈ ಭಾಗ ಒಗ್ಗಿಕೊಂಡಿರಲಿಲ್ಲ. ತತ್ಪರಿಣಾಮವಾಗಿ ಈ ಭಾಗದಲ್ಲಿ ಪಾಳೇಗಾರಿ ಪದ್ಧತಿಯು ಅನೂಚಾನವಾಗಿ ಮುಂದುವರೆದುಕೊಂಡು ಬಂದಿತ್ತು. ಸಾಮಾನ್ಯ ವರ್ಗದ ಪುರುಷರಿಗೇ ಇಲ್ಲಿ ಶಿಕ್ಷಣ ಸಿಕ್ಕಿರಲಿಲ್ಲ. ಅಂಥಾ ಸಂದಿಗ್ಧ ವಾತಾವರಣದಲ್ಲಿ ಮಹಿಳೆಯರಿಗೆ ಶಿಕ್ಷಣ ಎಂಬುದು ದೂರದ ಮಾತೇ ಆಗಿತ್ತು. ಅದಾಗ್ಯೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಇದ್ದಂಥ ಒಂದೇ ಒಂದು ಶಾಲೆಯಲ್ಲಿ ಬೆರಳೆಣಿಕೆಯಷ್ಟು ಹೆಣ್ಣು ಮಕ್ಕಳು ಶಾಲೆಯ ಮುಖ ನೋಡುವುದಿತ್ತು. ಕೆಳವರ್ಗದ ಮಂದಿಗೆ ಶಾಲೆ, ಓದು ವಜ್ರ್ಯವೇ ಆಗಿತ್ತು. ಮೇಲ್ವರ್ಗದ ಮಹಿಳೆಯರೂ 7ನೇ ಇಯುತ್ತೆಯವರೆಗೆ ಶಾಲೆ ಕಲಿಯುವುದು. ನಂತರ 12-14ರ ಬಾಲ್ಯದಲ್ಲಿಯೇ ಅವರಿಗೆ ಮದುವೆ ಕಡ್ಡಾಯವಾಗಿತ್ತು. ಇಂಥ ಸಂದಿಗ್ಧ ವಾತಾವರಣದಲ್ಲಿ ಬೆಳೆದ ಗೀತಾ ಹಟ ತೊಟ್ಟು ಶಾಲೆ ಕಲಿತರು. 10ನೇ ಪಾಸಾದ ಕೆಳವರ್ಗದ ಮಹಿಳೆಯರ ಸಾಲಿನಲ್ಲಿ ಮೊದಲಿಗರಾಗಿ ನಿಂತರು. ಕಿತ್ತು ತಿನ್ನುವ ಬಡತನದ ಮಧ್ಯೆ ಶಾಲೆ ಕಲಿಸುವುದು ಅವರ ಅಪ್ಪನಿಗೆ ಹರಸಾಹಸವೇ ಆಗಿತ್ತು. ಉಳ್ಳವರ ಮನೆಯ ಮಕ್ಕಳು ಓದಿ ಬಿಟ್ಟ ಪುಸ್ತಕಗಳನ್ನು ಎತ್ತಿಕೊಂಡು ಅಭ್ಯಾಸ ಮಾಡಿದ್ದನ್ನು ಗೀತಾ ತುಂಬಾ ನೋವಿನಿಂದ ನೆನಪಿಸಿಕೊಳ್ಳುತ್ತಾರೆ. ಚಿಮಣಿ ಎಣ್ಣೆ ದೀಪದಲ್ಲಿ ಹಟ ತೊಟ್ಟು ಓದಿದ ಗೀತಾ ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿದ್ದು ಆ ಹೊತ್ತು ಜಾತಿ ಬಾಂಧವರ ಕಣ್ಣು ಕೆರಳಿಸುವಂತೆ ಮಾಡಿತಂತೆ. ಅವರ ತಾಯಿ ಗೀತಾರನ್ನು ಮುಂದೆ ಶಾಲೆ ಕಲಿಸಲು ಸರ್ವಥಾ ತಯಾರಿರಲಿಲ್ಲವಂತೆ. ಏಕೆಂದರೆ ತಳವಾರ ಜಾತ್ಯಾಗ ಗಂಡಸರಿಗೆ ಹೆಚ್ಚಿನ ವಿದ್ಯಾಭ್ಯಾಸವಿರಲಿಲ್ಲ. ಇನ್ನು ಹೆಣ್ಣುಮಕ್ಕಳು ಹೆಚ್ಚು ಓದಿಬಿಟ್ಟರೆ, ಕಲಿತವಳನ್ನು ಮದುವೆಯಾಗಲು ಯಾವ ಗಂಡಸರು ಇಷ್ಟಪಟ್ಟಾರು? ಎಂಬ ಹೆದರಿಕೆ ಅವರದ್ದು. ಅವ್ವನ ವಿರೋಧದ ನಡುವೆಯೂ ಅಪ್ಪನ ಒತ್ತಾಸೆಯಿಂದಾಗಿ ಗೀತಾ ಗುಲ್ಬರಗಾದ ಶ್ರೀ ಶರಣಬಸವೇಶ್ವರ ಕಾಲೇಜಿನ ಮೆಟ್ಟಿಲು ಏರಿಯೇಬಿಟ್ಟರು. ಬಾಲ್ಯದಿಂದಲೂ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಇವರಿಗೆ, ತಾವೂ ಬರೆಯಬೇಕೆಂಬ ಹಂಬಲ ಮೂಡಿತ್ತು. ಈ ಹಂಬಲವೇ ಅವರಿಂದ ಕಾಲೇಜು ದಿನಗಳಲ್ಲಿ ಚಿಕ್ಕ ಕಥೆ ಬರೆಯಲು ಹಚ್ಚಿತು.

ಅಬ್ಬಾ ಆ ಹುಡುಗ ಎಂಬ ವರ ಮೊದಲ ಕಥೆಯು ಕಾಲೇಜಿನ ಮ್ಯಾಗಝಿನ್ನಲ್ಲಿ ಪ್ರಕಟವಾಯ್ತು. ಓದಿದವರು ಹುಬ್ಬೇರಿಸಿದ್ದು ಇತ್ತು. ಈ ನಡುವೆ ಹಿರಿಯರ ಒತ್ತಾಸೆಯಂತೆ ಮದುವೆ ಏನೋ ಆಯ್ತು. ಮನಸ್ಸಿಗೊಪ್ಪದ ಪುರುಷನೊಂದಿಗೆ ಬಾಳಲು ಇಷ್ಟ ಪಡದೆ, ದಾಂಪತ್ಯದ ಹಂಗು ಹರಿದು ಬಂದಿದ್ದು ಆ ಹೊತ್ತಿಗೆ ಬಹು ದೊಡ್ಡ ಕ್ರಾಂತಿಕಾರಿ ನಡೆಯೇ ಆಗಿತ್ತು. ಪರ್ಯಾಯ ಕ್ಕಾಗಿ ತಡಕಾಡಿ ಮಗದೊದೆಡೆ ಸಾಂಸಾರಿಕ ಸಂಬಂಧಗಳನ್ನು ಏರ್ಪಡಿಸಿಕೊಂಡದ್ದಾಗಿತ್ತು. ಒಂದು ಗಂಡು, ಒಂದು ಹೆಣ್ಣು, ಹೀಗೆ ಎರಡು ಮಕ್ಕಳನ್ನು ಹೆತ್ತು ಏಗಲಾರದ ಸಂಗತಿಯೊಂದಿಗೆ ದಿನದೂಡುವಲ್ಲಿಯೇ ಗೀತಾ ಹೈರಾಣಾಗಿದ್ದರು. ಇಂಥಾ ಎಲ್ಲಾ ವಿಪರೀತ ಸಂದರ್ಭಗಳಲ್ಲಿಯೂ ಗೀತಾ ತುಂಬಾ ಆಪ್ತವಾಗಿ ಅಂಟಿಕೊಂಡದ್ದು ಓದಿಗೆ ಮತ್ತು ಬರಹಕ್ಕೆ ಮಾತ್ರ. ಎಂ.ಎ, ಬಿ.ಎಡ್ ಮುಗಿಸಿ ಕಾರಕೂನಿಕೆ ಬಿಟ್ತು, ಖಾಸಗೀ ಕಾಲೇಜೊಂದರಲ್ಲಿ ಪ್ರಾಚಾರ್ಯರಾಗಿ ದೀರ್ಘ ಸೇವೆ ಸಲ್ಲಿಸಿದರು.

ಗೀತಾ ತುಂಬಾ ಗಟ್ಟಿಗಿತ್ತಿ ಮಹಿಳೆ. ಪಾಳೇಗಾರಿ ನಂಬಿಕೆಗಳುಳ್ಳ ಮಡಿವಂತ ಸಮಾಜದ ಮಧ್ಯೆ ಬದುಕಿಯೂ ಸ್ವತಂತ್ರ ಆಲೋಚನಾ ಲಹರಿಗೆ ಒಡ್ಡಿಕೊಂಡಿದ್ದಾರೆ. ಹಲವು ಅಡ್ಡಿ ಆತಂಕದ ನಡುವೆಯೂ ಎದೆಗುಂದದೆ ಮುನ್ನುಗ್ಗಿದ ಒಂಟಿ ಸಲಗ. ಉದರ್ುಮಯ ವಾತಾವರಣದಲ್ಲಿ ಕನ್ನಡ ಓದುವುದು, ಬರೆಯುವುದು ತುಂಬಾ ಅಪರೂಪವಾಗಿದ್ದ ಸಂದರ್ಭದಲ್ಲಿ ಹಟ ತೊಟ್ಟು ಕನ್ನಡ ಕಲಿತಾಕೆ. ಕಲಿತದ್ದನ್ನು ಸಾರ್ಥಕಗೊಳಿಸಬೇಕೆಂಬ ವ್ರತತೊಟ್ಟಾಕೆ. ತಮ್ಮ ಓದಿಗೆ ಗೆಳತಿಯರೆಲ್ಲಾ ಮನೆಯ ಸಂಪ್ರದಾಯದಂತೆ ಅರ್ಧಕ್ಕೆ ಓದು ನಿಲ್ಲಿಸಿ ಹಿರಿಯರು ಮಾಡಿದ ಮದುವೆಗೆ ರಾಜಿಯಾಗಿ ಎಂಟು, ಹತ್ತು ಮಕ್ಕಳನ್ನು ಹೆತ್ತು ನೇಪಥ್ಯಕ್ಕೆ ಸೇರಿಹೋದರೆ, ಗೀತಾ ಆ ದಾರಿಯನ್ನು ಬಿಟ್ಟು ಭಿನ್ನ ದಾರಿಯನ್ನು ಆರಿಸಿಕೊಂಡು ನೌಕರಿಗೆ ಸೇರಿದರು. ಸಮಕಾಲೀನ ಮಡಿವಂತ ಸಮಾಜದ ಬೆರಳಚ್ಚುವಂತೆ ಮಾಡಿದಲ್ಲದೆ, ಇಂದು ಅವರು ಬೆಳೆದ ಎತ್ತರ-ಬಿತ್ತರವನ್ನು ಕಂಡು ಅವರೆಲ್ಲಾ ದಿಗ್ಮೂಢರಾಗುವಂತೆ ಮಾಡಿದ್ದು ಇದೆ. ಗೀತಾ ಬರೆಯುವಾಗ ಈ ಭಾಗದ ಬುದ್ಧಿಜೀವಿಗಳೆನಿಸಿಕೊಂಡವರು ಅವರನ್ನು ಗಂಬೀರವಾಗಿ ಪರಿಗಣಿಸಲೇ ಇಲ್ಲವಂತೆ. ಅದಾಗ್ಯೂ ಗೀತಾ ಯಾರ ಹಂಗೂ-ಪರಾಮರ್ಶೆಗೂ ಆತು ಬೀಳದೆ ತಮ್ಮ ಪಾಡಿಗೆ ತಾವು ಬರೆಯುತ್ತ ಇಂದು ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಅವರ ಕನ್ನಡ ಸಾಹಿತ್ಯಕ್ಕೆ ಕೊಡುಗೆ ಹಲವಾರು.

ಅಷ್ಟಕ್ಕು ತಮ್ಮ ಬರವಣಿಗೆಯ ವಿಶಿಷ್ಟ ಶೈಲಿ ಮತ್ತು ಆರಿಸಿಕೊಂಡ ವಸ್ತುವಿನಿಂದಾಗಿ ಕನ್ನಡದ ಸಮಕಾಲೀನ ಲೇಖಕ ಸಾಲಿನಲ್ಲಿ ಭಿನ್ನರಾಗಿ ನಿಂತಿದ್ದಾರೆ. ಕನ್ನಡಲ್ಲಿ ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಬಹುಮಾನ ಪಡೆದ ಪ್ರಥಮ ಮಹಿಳೆ ಎನಿಸಿಕೊಂದಿದ್ದಾರೆ. ಅಂತೆಯೇ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜಾ ಪ್ರಶಸ್ತಿ, ಗುಲ್ಬಗರ್ಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ, ಸಾಹಿತ್ಯ ಅಕೆಡೆಮಿಯ ಗೌರವ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಹೀಗೆ ಇವರು ತಮ್ಮ ಸಾಹಿತ್ಯ ಸಾಧನೆಗಾಗಿ ಪಡೆದ ಪ್ರಶಸ್ತಿಗಳ ಪಟ್ಟಿಯು ತುಂಬಾ ದೊಡ್ಡದಿದೆ. ಈ ಎಲ್ಲಾ ಪ್ರಶಸ್ತಿಗೆ ಕಿರೀಟಪ್ರಾಯವಾಗುವಂತೆ, ಅಖಿಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ-ಪದವಿಗೆ ಎಂದೆಂದೂ ಲಾಬಿ ಮಾಡದ ಗೀತಾರಿಗೆ ಅವೆಲ್ಲವೂ ತಾವಾಗಿಯೇ ಒಲಿದು ಬಂದು ಪ್ರಶಸ್ತಿಗಳು ತಮ್ಮ ಗೌರವವನ್ನು ಹೆಚ್ಚಿಸಿಕೊಂಡಿವೆ. ಗೀತಾರನ್ನು ಸನಿಹದಿಂದ ಬಲ್ಲ ಯಾರಾದರೂ ಈ ಮಾತನ್ನು ಅಲ್ಲಗೆಳೆಯರಾರರು. ತಮಗೆ ಯಾವುದೇ ಪ್ರಶಸ್ತಿ-ಗೌರವಗಳು ಬಂದಾಗಲೆಲ್ಲಾ, ಗೀತಾ ಆ ಖುಷಿಯನ್ನು ಕಲಬುರ್ಗಿಯ ಸಾಹಿತ್ಯ ಬಳಗದೊಂದಿಗೆ ತುಂಬಾ ಮುಕ್ತವಾಗಿ ಹೊಂಚಿಕೊಳ್ಳುವುದುಂಟು.

ಕಲಬುರ್ಗಿಯಲ್ಲಿ ಪ್ರಗತಿಪರವಾಗಿ ಆಲೋಚಿಸುವ ಮತ್ತು ಬರೆಯುವ ಸಾಹಿತ್ಯದ ಬಳಗವೊಂದಿದೆ. ಸಮಾನತೆಯ ತಳಹದಿಯ ಮೇಲೆ ಹೊಸ ಸಮಾಜವನ್ನು ಕಟ್ಟಬೇಕೆಂಬ ಸೈದ್ಧಾಂತಿಕ ಬದ್ಧತೆಗಳೊಂದಿಗೆ ಕ್ರಿಯಾಶೀಲವಾಗಿರುವ ಈ ಬಳಗಕ್ಕೆ ಗೀತ ಹಿರಿಯಕ್ಕನಂತಿದ್ದಾರೆ. ಕಲ್ಯಾಣದ ಬಸವಾದಿ ಶರಣರ ಕ್ರಾಂತಿ ಕನಸುಗಳು, ತತ್ವಪದಕಾರರ ಪಾಳೆಗಾರಿ ಪದ್ಧತಿ ವಿರುದ್ಧದ ಬಂಡಾಯದ ಭಾಷೆಯನ್ನು ಕನ್ನಡಕ್ಕೆ ವಿಶಿಷ್ಟವೆನ್ನಿಸುವ ಸೂಫಿ ಪರಂಪರೆಯನ್ನು ಅದಮ್ಯವಾಗಿ ಪ್ರೀತಿಸುವ ಈ ಬಳಗವು ಯಾವತ್ತೂ ಗೀತಾ ಅವರೊಂದಿಗೆ, ಅವರು ಸಾಗಿ ಬಂದ ದಾರಿ ಕುರಿತು ಚಚರ್ಿಸುತ್ತಲೇ ಇರುತ್ತದೆ. ಅವರ ಮನೆಯಲ್ಲಿ ಸಾಹಿತ್ಯದ ಚರ್ಚೆ, ಸಮಕಾಲೀನ ವಿದ್ಯಮಾನಗಳ ವಿಮರ್ಶೆ ನಡೆಯುತ್ತಲೇ ಇರುತ್ತದೆ. ಈ ತಂಡವನ್ನು ಸೈದ್ಧಾಂತಿಕ ಬದ್ಧತೆಯೊಂದಿಗೆ ಬೆಳೆಸಿದವರು ಕನ್ನಡದ ಗಜಲ್ ಕೃಷಿಕಾರ ಶಾಂತರಸರು. ಡಾ. ಕಾಶೀನಾಥ ಅಂಬಲಗಿ, ಡಾ. ಪ್ರಭು ಖಾನಾಪುರ. ಪ್ರೊ. ಆರ್.ಕೆ.ಹುಡಗಿ, ಕೆ.ನೀಲಾ, ಡಾ.ಶಾಂತಾ ಮಠ, ಡಾ.ಶಾಂತಾ ಅಷ್ಟಗಿ, ಡಾ.ಮೀನಾಕ್ಷಿ ಬಾಳಿ, ಡಾ.ಇಂದುಮತಿ ಪಾಟೀಲ್, ಡಾ.ಈಶ್ವರಯ್ಯ ಮಠ, ಮಸ್ತಾನ ಬಿರಾದಾರ, ಸಿದ್ಧರಾಮ ಹೊನ್ಕಲ್, ಪ್ರೊ. ಶಿವಶರಣ ಮಳೆಗಾಂವ, ಡಾ.ಅಮೃತಾ ಕಟ್ಟೆ, ಡಾ.ಸೂರ್ಯಕಾಂತ ಸುಜಾತ, ಡಾ.ಮಲ್ಲಿಕಾರ್ಜುನ ಆಮ್ಣೆ, ಮುಂತಾಗಿ ಇದೊಂದು ದೊಡ್ಡ ಬಳಗವೇ ಇದೆ.

ಕಲಬುರ್ಗಿಯಲ್ಲಿ ಸಾಹಿತ್ಯಾಸಕ್ತರ ನಡುವೆ ಕರುಳ ಬಳ್ಳಿಯ ಸಂಬಂಧವಿದೆ. ಪರಸ್ಪರ ಅನ್ಯೋನ್ಯತೆ, ಗೌರವಾದರಗಳು ಗಟ್ಟಿಗೊಂಡು ಅನೌಪಚಾರಿಕ ಸಲುಗೆ ಇದೆ. ಈ ಸಲುಗೆ-ಕಾಳಜಿ ದೆಸೆಯಿಂದಾಗಿಯೇ ವಯಸ್ಸಿನಲ್ಲಿ ಕಿರಿಯರಾದ ನಮಗೆ ಗೀತಾ ಅವರೊಂದಿಗೆ ಮುಕ್ತವಾಗಿ ಸಂವಾದಿಸಲು, ಅಭಿಪ್ರಾಯ ಹಂಚಿಕೊಳ್ಳಲು ಸಾಧವಾಗಿದೆ. ಹಲವಾರು ಸಂದರ್ಭಗಳಲ್ಲಿ ಅವರೊಂದಿಗೆ ಅನೌಪಚಾರಿಕವಾಗಿ ಮಾತಾಡುವಾಗ ವ್ಯಕ್ತವಾದ ಅಭಿಪ್ರಾಯವನ್ನು ನೆನಪಿನಾಳದಿಂದ ಹೆಕ್ಕಿ ತೆಗೆದು ಇಲ್ಲಿ ಸಂದರ್ಶನದ ಚೌಕಟ್ಟು ತರಲು ಪ್ರಯತ್ನಿಸಲಾಗಿದೆ. ಏಕೆಂದರೆ ಗೀತಾ ಅವರೊಂದಿಗೆ ಔಪಚಾರಿಕ ನೆಲೆಯಲ್ಲಿ ಸಂದರ್ಶಿಸಿದ ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪುಂಖಾನುಪುಂಖವಾಗು ಬೆಳಕು ಕಂಡಿವೆ. ಆದ್ದರಿಂದ ಈ ಎಲ್ಲಾ ಸಂದರ್ಶನಗಳಿಗಿಂತ ತುಸು ಭಿನ್ನವಾದ ಮತ್ತು ಅಷ್ಟೇ ಆಪ್ತವಾದ ಸಂಭಾಷಣೆಯೊಂದನ್ನು ಹೆಣೆಯುವ ಪ್ರಯೋಗ ಇಲ್ಲಿದೆ.


ಗೀತಕ್ಕ ಕಿರಿಯ ಸಮಕಾಲೀನರಾದ ನಮ್ಮೆಲ್ಲರಿಗೂ ಹೆಮ್ಮೆಯ ಗೆಳೆತಿಯೂ ಹೌದು. ಸಾಹಿತ್ಯಕ ಮಾರ್ಗದರ್ಶಕಿಯೂ ಹೌದು. ಈ ಆಪ್ತ ತಳಹದಿಯ ಮೇಲೆ ನಡೆಸಿದ ಸಂಭಾಷಣಾ ತುಣುಕುಗಳು ಇಲ್ಲಿವೆ.

1. ಗೀತಕ್ಕ ಅಂದು ಈ ಭಾಗದ ಮಹಿಳೆಯರ್ಯಾರೂ ಬೆಳವಣಿಗೆಯಂಥ ಗಂಭೀರ ಪ್ರವೃತ್ತಿಗೆ ಒಡ್ಡಿಕೊಂಡಿರಲೇ ಇಲ್ಲ. ಅಂಥಾ ಹೇಳಿಕೊಳ್ಳುವ ಸಾಹಿತ್ಯಕ ವಾತಾವರಣವು ಇಲ್ಲಿರಲಿಲ್ಲ. ಆದರೂ ನೀವು ಬರವಣಿಗೆಯಂಥ ವ್ಯವಸಾಯಕ್ಕೆ ಬಂದಿರಲ್ಲ. ಅದು ಹೇಗೆ ಸಾಧ್ಯವಾಯಿತು.

ಹೌದು. ಆಧುನಿಕ ಸಂದರ್ಭದ ಕರ್ನಾಟಕದ ಇತರ ಭಾಗಗಳಿಗೆ ಹೋಲಿಸಿದರೆ ಇಲ್ಲಿ ಪುರುಷರೆ ಕನ್ನಡದ ಬೆಳವಣಿಗೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡದ್ದು ತುಸು ಕಡಿಮೆಯೇ ಎನ್ನಬೇಕು. ಇಂಗ್ಲೀಷ್ ಪ್ರಭಾವದಿಂದ ಬಂದ ಹೊಸ ಗಾಳಿಯ ಸಂಪರ್ಕವು ಚಾರಿತ್ರಿಕ ಕಾರಣವಾಗಿ ತಡವಾಗಿ ಬಂತು. ಅಂದರೆ ನಾವು ಬ್ರಿಟೀಷ್ ಭಾರತದ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ನಿಜಾಮಶಾಹಿಯ ಆಡಳಿತದಲ್ಲಿ ನಮ್ಮ ಬದುಕಿನ ಆದ್ಯತೆಗಳೇ ಬೇರೆಯಾಗಿದ್ದವು. ನಿಜಾಮಶಾಹಿ ಪ್ರಭುತ್ವದಡಿಯಲ್ಲಿ ಸ್ಥಳೀಯವಾಗಿ ಪೋಲೀಸ್ಗೌಡ, ಮಾಲಿಗೌಡ, ಕುಲಕಣರ್ಿ, ದೇಶಮುಖ, ತಳವಾರ, ವಾಲಿಕಾರ ಇವರ ದರ್ಪ-ದರ್ಬಾರಗಳೇ ಪ್ರಧಾನವಾಗಿದ್ದವು. ಬ್ರಿಟಿಷ್ ಸುಧಾರಣಾವಾದಿಯ ಗಾಳಿಯನ್ನು ಒಳ ನುಸುಳಲು ಈ ಪಾಳೇಗಾರಿ ಪ್ರಭುಗಳು ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ತುಂಬಾ ತಡವಾಗಿ ನಮಗೆ ದಕ್ಕಿತು. ಹೀಗೆಂದು ನಮಗೆ ಸಾಹಿತ್ಯ ರಚನೆ ಇರಲೇ ಇಲ್ಲ ಎಂದಲ್ಲ. ನಮ್ಮ ಸಾಹಿತ್ಯಿಕ ಚಟುವಟಿಕೆಗಳೇ ಬೇರೆ ಬಗೆಯದಾಗಿದ್ದವು. ಕನರ್ಾಟಕ ಇತರೆಡೆ ಆಧುನಿಕ ಸಾಹಿತ್ಯದಲ್ಲಿ ನವೋದಯದ ಭರಾಟೆ ಇದ್ದಾಗ ನಮ್ಮಲ್ಲಿ ಪುರಾಣಗಳ ರಚನೆ ಮತ್ತು ಪಠನ, ಅಂದರೆ ಪುರಾಣ ಹಚ್ಚುವುದು, ತತ್ವಪದಗಳ ರಚನೆ, ಭಜನಾಗೋಷ್ಠಿಗಳು, ಸಣ್ಣಾಟ, ಡಪ್ಪಿನಾಟ, ಲಾವಣಿ, ಜನಪದ ತ್ರಿಪದಿಗಳ ರಚನೆ ಮುಂತಾಗಿ, ದೇಶೀ ನೆಲೆಯ ಚಟುವಟಿಕೆಗಳು ನಡೆದೇ ಇದ್ದವು.

ಶಿಕ್ಷಣದಲ್ಲಿ ಉರ್ದುವಿನ ಹಿಡಿತವಿತ್ತಾದರೂ ಸ್ಥಳೀಯ ಮಠ, ಗುಡಿ-ಗುಂಡಾರಗಳಲ್ಲಿ ಅನೌಪಚಾರಿಕ, ಮೌಖಿಕ ಸಾಹಿತ್ಯ ರಚನೆ ಅವ್ಯಾಹತವಾಗಿ ನಡೆದೇ ಇತ್ತು. ಆದರೆ ಭಾರತಕ್ಕೆ ಸ್ವಾತಂತ್ರ ಬಂದು ಭಾಷಾವಾರು ಪ್ರಾಂತ್ಯ ರಚನೆಯೊಂದಿಗೆ ಕನ್ನಡದಲ್ಲಿ ಅಕೆಡೆಮಿಕ್ ಚಟುವಟಿಕೆಗಳು ಬೆಂಗಳೂರು-ಮೈಸೂರು-ಮಂಗಳೂರುಗಳಲ್ಲಿ ಕೇಂದ್ರೀಕರಿತವಾದವು. ಪ್ರಾಚೀನ ಕನ್ನಡ ಸಾಹಿತ್ಯದ ಇತಿಹಾಸವನ್ನು ಕಟ್ಟಿಕೊಡುವಾಗ ಕರ್ನಾಟಕದ ದಕ್ಷಿಣಾತ್ಯ ವಿದ್ವಾಂಸರು ನಮ್ಮ ಸಾಹಿತ್ಯದ ಬೆಳೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಮ್ಮವರು ಅದನ್ನು ಶಿಸ್ತುಬದ್ಧವಾಗಿ ದಾಖಲಿಸಲಿಲ್ಲ. ತತ್ಕಾರಣವಾಗಿ ಆಧುನಿಕ ಕನ್ನಡ ಸಾಹಿತ್ಯವೆಂದರೆ ದಕ್ಷಿಣ ಕರ್ನಾಟಕದ ನವೋದಯ ಸಾಹಿತ್ಯ ಎಂಬಂತೆ ಬಿಂಬಿಸಲಾಯಿತು. ಶಾಂತರಸತರು ಹೇಳುತ್ತಿದ್ದಂತೆ, ನಾವು ಮಾತಾಡುತ್ತಿರುವುದು ಕನ್ನಡವೇ ಅಲ್ಲ. ನಮಗೆ ಕನ್ನಡವೇ ಬರುವುದಿಲ್ಲ ಎಂಬ ಭಾವನೆ ಅವರಿಗಿತ್ತು. ಅಷ್ಟಕ್ಕೂ ಪಕ್ಕಾ ಫ್ಯೂಡಲ್ ದೊರೆಗಳೆ ಇಲ್ಲಿ ರಾಜಕೀಯ ಚುಕ್ಕಾಣಿಯನ್ನು ಹಿಡಿದಿದ್ದರಾದ್ದರಿಂದ ಅವರು ಮಹಿಳೆಯರನ್ನು ಪರಂಪರಾಗತ ಜಾಡಿನಲ್ಲಿಯೇ ಇರುವಂತೆ ಬಯಸುತ್ತಿದ್ದರು.

ನಾನು ಶಾಲೆಗೆ ಹೋಗುತ್ತಿರುವ ಕಾಲದಲ್ಲಿ ಮೇಲ್ವರ್ಗದ ಮಹಿಳೆಯರೇ ತುಂಬಾ ಅಪರೂಪವೆಂಬಂತೆ ಶಾಲೆಗೆ ಬರುತ್ತಿದ್ದರು. ಗುಲ್ಬಗರ್ಾದಲ್ಲಿ ಒಂದೇ ಒಂದು ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಇತ್ತು. ದೊಡ್ಡ ದೊಡ್ಡ ಮನೆಯ ಹುಡುಗಿಯರು ಟಾಂಗಾದಲ್ಲಿ ಕುಳಿತು ಶಾಲೆಗೆ ಬರುತ್ತಿದ್ದರು. ಅದೂ ಟಾಂಗಾಕ್ಕೆ ಪರದಾ ಕಟ್ಟಲಾಗುತ್ತಿತ್ತು. ಅಂಥಾ ಹೊತ್ತಿನಲ್ಲಿ ನಾನು ಎಂ.ಎಸ್.ಕೆ ಮಿಲ್ ಕೂಲಿ ಕಾರ್ಮಿಕನ ಮಗಳು. ಅದರಲ್ಲೂ ತಳವರ ಜಾತಿಗೆ ಸೇರಿದವಳು. ನಮ್ಮ ಮನೆಯಲ್ಲಿ ಯಾರಿಗೂ ಆ ಹೊತ್ತು ವಿದ್ಯಾಭ್ಯಾಸದ ಗಾಳಿ-ಗಂಧ ಇರಲಿಲ್ಲ. ಆದ್ರ ನಮ್ಮಪ್ಪ ಮಾತ್ರ ನನಗ್ ಸಾಲಿ ಕಲಿಸಾ ಮನಸು ಮಾಡಿದ್ದನು. ನಾನು ಆಸಕ್ತಿಯಿಂದ ಓದ ತೊಡಗಿದೆ. ನಮ್ಮ ಮನೆಯಲ್ಲಿ ಅಂದರೆ ಒಂದೇ ಒಂದು ಕೋಣೆಯಲ್ಲಿ, ರಾತ್ರಿ ಓದಿಕೊಳ್ಳಲು ಬೆಳಕು ಇರುತ್ತಿರಲ್ಲ. ನಮ್ಮ ಬಾಡಿಗೆ ಖೋಲಿ ಬ್ರಾಹ್ಮಣರ ಗಲ್ಲಿಯ ಕೊನೇಯ ತುದಿಯಲ್ಲಿತ್ತು. ಬಾಳಾಚಾರಿ ಎಂಬ ಬ್ರಾಹ್ಮಣ ಭಡಜಿಯ ಮನೆಗೆ ರಾತ್ರಿ ಓದಿಕೊಳ್ಳಲೆಂದು ಹೋಗುತ್ತಿದ್ದೆ. ಅವರ ಮನೆಯಲ್ಲಿ ಕಂದೀಲು ಇತ್ತು. ಅವರ ಮಕ್ಕಳೊಂದಿಗೆ ಕುಳಿತು ಓದುತ್ತಿದ್ದಾಗ ಆ ಮನೆಯ ಮಡಿ ಮುದುಕಿ- ಏ! ಶೂದ್ರ ಮುಂಡೇದೆ. ಆ ಕಡಿ ಕೂಡು. ನಮ್ ಪಾರಗೋಳಿಗಿ ಮುಟ್ಟಬ್ಯಾಡ ಅಂತಿತ್ತು. ಅವತ್ತು ಅದೆಲ್ಲಾ ಮಾಮೂಲಿ ಎಂಬಂತಾಗಿತ್ತು.

ಖರೆ ಹೇಳಬೇಕೂಂದ್ರ ಪಾಟಿ-ಪುಸ್ತಕ-ಕಾಪಿ ತರಲು ನಂಬಳಿ ರೊಕ್ಕ ಇರುತ್ತಿರಲಿಲ್ಲ. ಹೈಸ್ಕೂಲಿನಲ್ಲಿದ್ದಾಗ ನನ್ ಗೆಳತಿಯೊಬ್ಬಳಿಂದ ಎರಡು ಪುಸ್ತಕಗಳನ್ನು ಎರವಲು ಪಡೆದು ಓದುತ್ತಿದ್ದೆ. ನಾ ಅಥವಾ ನನ್ನಂಥವರು ಶಾಲಿ ಕಲಿತಿದ್ದು ಒಂದು ದೊಡ್ಡ ಪುರಾಣನೇ ಇದೆ. ಇರಲಿ. ಹೈಸ್ಕೂಲಿನ್ಯಾಗ ಇದ್ದಾಗಲೇ ನನಗೆ ಓದುವ ಗೀಳು ಹತ್ತಿತ್ತು. ಎಂ.ಕೆ.ಇಂದಿರಾ, ಅ.ನ.ಕೃ, ತ.ರಾ.ಸು, ಸಾಯಿಸುತೆ, ರಾಮರಾವ್, ಇವರ ಕಾದಂಬರಿಗಳನ್ನು ತುಂಬಾ ಆಸಕ್ತಿಯಿಂದ ಓದುತ್ತಿದ್ದೆ. ಹೀಂಗ ಓದುವಾಗಲೇ ನಾನು ಬರೀಬೇಕು ಅಂತ ಅನಸತಿತ್ತು. ಏನಾದರೂ ಬರೀಬೇಕು ಎಂಬ ತುಡಿತವಂತೂ ನನಗೆ ರಕ್ತಕ್ಕ ಮೆತ್ತಿದ ವಾಸನಿ ಹಂಗ್ ಬೆನ್ನ ಬಿತ್ತು. ಅಂತೂ ಕಾಲೇಜಿನ್ಯಾಗ ಇದ್ದಾಗ ಮ್ಯಾಗಝೀನ್ದಾಗ ಒಂದು ಸಣ್ಣ ಕತಿ ಬರಿದ್ಯ. ಅದೂ ಒಂದು ನಮೂನಿ ಖುಶಿ ಕೊಟ್ಟಿತು. ನಾನೂ ಬರೆಯಬಲ್ಲೆ ಎಂಬ ಧೈರ್ಯ ಮೂಡಿತು. ಹಂಗೇ ಬರಕೋಂತ ಹೊಂಟ್ಯಾ

2. ನೀವು ಬರೆದಿದ್ದನ್ನು ಯಾರಿಗಾದರೂ ಓದಿ ತೋರ್ಸಿ, ಸಲಹಾ, ಮಷ್ವರಾ, ಪಡಿತಿದ್ರೇನು?

ಛೆ! ಛೆ! ಅದೇನೂ ಇರಲಿಲ್ಲ. ನಮ್ ಕೇರ್ಯಾಗರೆ ಯಾರೂ ಸಾಹಿತ್ಯ, ಗೀಹಿತ್ಯಾ ಅಂತ ತಲೆ ಕೆಡಿಸಕೊತ್ತಿರಲಿಲ್ಲ. ಇನ್ ಮ್ಯಾಲಿನವರಂತೂ ನಮ್ಮನ್ ಖದರ್ ಮಾಡ್ತಿರಲಿಲ್ಲ. ನಾನ್ ಬರ್ಯಾದು, ನಾನೇ ಓದಾದು ಮಾಡ್ತಿದ್ದೆ. ಆಗ ಇಲ್ಲಿ ಅಂಥಾ ಸಾಹಿತ್ಯರ ವಾತಾವರಣನೂ ಅಷ್ಟಾಗಿ ಇರಲಿಲ್ಲ. ಹಿಂಗಾಗಿ ಅವಾಗೇನು ಜನಪ್ರಿಯ ಮಾದರಿಯ ಕಾದಂಬರಿ, ಕಥೆ ಪ್ರಕಟವಾಗಿತ್ತಿರಲಿಲ್ಲ. ನಾನು ಅವುಗಳಿಂದಲೇ ಪ್ರಭಾವಿತಳಾಗಿ ಅದೇ ಜಾಡಿನಲ್ಲಿ ಬರೆಯಲು ಪ್ರಯತ್ನಿಸಿದೆ.

3. ಅಂದ್ರ ಸಾಹಿತ್ಯ ದಾರಿಯಲ್ಲಿ ನೀವೂ ಏಕಲವ್ಯನಂತೆ ನಿಮಗ್ ನೀವೇ ಮಾದರಿಯಾಗಿ ತಿಳಿದಂಗ್ ಬರಿದ್ರಿ. ಓದಿಗಾಗಿ ಹ್ಯಾಂಗ್ ಸಂಘರ್ಷ ಮಾಡಿದೀರಲ್ಲ ಹಾಗೇ ಬರವಣಿಗೆಗಾಗಿ ಸಂಘರ್ಷ ಮಾಡಲಿಲ್ಲವೇ?

ಸಂಘರ್ಷ ಯಾಕ ಮಾಡಲಿಲ್ಲವ್ವ! ನನ್ನದು ತಣ್ಣಗಿನ ಸಂಘರ್ಷ, ನನ್ ಬಳಗಿನ ಸಂಘರ್ಷ ಅದು. ಬದುಕಿನ್ಯಾಗೂ ಪಡಬಾರದ ಪರಿಪಾಟಲು ಪಟ್ಟದ್ದಾಗಿತ್ತು. ಮಜ ಅಂದ್ರ ಬದುಕಿನ್ಯಾಗ ಕಿರಿಕಿರಿ ಹೆಚ್ಚಾದಾಗಲೆಲ್ಲಾ ನಾ ಹೆಚ್ಚೆಚ್ಚು ಬರವಣಿಗೆಯಲ್ಲಿ ತೊಡಗ್ತಿದ್ದೆ. ಬರಹಾ ನನಗೆ ಆಪ್ತಗೆಳತಿಯಾಗಿತ್ತು. ನೋವು ನುಂಗುವ ಧೃತಿಯಾಗಿತ್ತು. ನಾ ಬರೆದಿದ್ದು ನಾಡಿನ ಪತ್ರಿಕೆಗಳಲ್ಲಿ ಪ್ರಕಟಾದಾಗ, ಧನ್ಯತಾ ಭಾವ ಮೂಡುತ್ತಿತ್ತು. ಪ್ರಕಾಶಕರು, ಸಂಪಾದಕರು ನನ್ ಕತೆ, ಕಾದಂಬರಿಗಳಿಗಾಗಿ ದಾರಿ ಕಾಯುತ್ತಿದ್ದರು.

4. ನಿಮ್ಮೊಟ್ಟಿಗೆ ಅಂದು ಸಾಹಿತ್ಯದ ಸ್ಪರ್ಧೆಗಳಿರಲಿಲ್ಲವೇ?
ಅಯ್ಯೋ ಕನ್ನಡದಲ್ಲಿ ಬರೆಯುವ ಮಹಿಳೆಯರ ಸಂಖ್ಯನೇ ಕಡಿಮೆ ಇತ್ತು. ಅದರಲ್ಲೂ ನಮ್ ಭಾಗದಿಂದ ಕಥೆ, ಕಾದಂಬರಿ ಬರೆಯುವವರು ತುಂಬಾ ವಿರಳವಾಗಿದ್ದರು.

5. ನೀವು ಮೊದಮೊದಲಿನ ಜನಪ್ರಿಯ ಪ್ರೇಮಕಥಾ ಜಾಡನ್ನು ಬಿಟ್ಟು ಶೋಷಣಾ ಬದುಕನ್ನು ಕುರಿತು ಬರೆಯಲು ನಿಮಗೆ ಪ್ರೇರಣೆ ಎಲ್ಲಿಂದ ಬಂತು?

ನಮ್ ಭಾಗದ ಬದುಕಿನೊಳಗಿಂದ ನನಗೆ ಪ್ರೇರಣೆ ಸಿಕ್ತು. ನಮ್ ಭಾಗದ ಗುಡಿಸಲಗೇರಿ ಮಂದಿ ಬದುಕಿನ ಚಿತ್ರಣ, ಅದರಲ್ಲೂ ವಿಶೇಷವಾಗಿ ಹಿಂದುಳಿದ, ದಲಿತ ಮಹಿಳೆಯರ ಮೇಲಾಗುತ್ತಿರುವ, ತರಹೇವಾರಿ ಶೋಷಣೆಗಳು ನನ್ನ ಚಿತ್ತವನ್ನು ಕಲಕುತ್ತಲೇ ಇದ್ದವು. ನಮ್ ಭಾಗದ ಜನಪದ ಸಾಹಿತ್ಯದಲ್ಲಿ ಮಹಿಳೆಯರ ನೋವಿನ ನೆಲೆಗಳು ಮಡುಗಟ್ಟಿ ನಿಂತಿದ್ದವು. ವಚನಕಾರರು, ತತ್ವಪದಕಾರರು, ಇವರೆಲ್ಲಾ ಬೆನ್ನ ಹಿಂದಿನ ಬೆಳಕಾಗಿದ್ದರು. ಎಂಭತ್ತರ ದಶಕದಲ್ಲಿ ಬಂಡಾಯ-ದಲಿತ ಸಾಹಿತ್ಯ ಚಳುವಳಿಯು ಮುಂಚೂಣಿಗೆ ಬಂದಿತ್ತು. ಶಾಂತರಸ, ಲಂಕೇಶರಂಥ ಪ್ರಗತಿಪರ ಲೇಖಕರು ನನ್ನಂಥವರನ್ನು ಹುರಿದುಂಬಿಸಲೆಂದೇ ಟೊಂಕ ಕಟ್ಟಿ ನಿಂತಿದ್ದರು.

6. ಅದು ಸರಿ ಕಾದಂಬರಿ, ಕಥೆಗಳ ವಸ್ತುವಿನಲ್ಲೇನೊ ಒಂದು ನಿರ್ದಿಷ್ಟ ಒತ್ತಾಸೆ, ಪ್ರೇರಣೆ, ಒಳಗಿನ ತುಡಿತದಿಂದಾಗಿ ಜನಪ್ರಿಯ ಮಾದರಿ ಬಿಟ್ಟು ಗಂಭೀರ ಬರವಣಿಗೆಗೆ ಪಲ್ಲಟಗೊಂಡಿರಿ. ಆದರೆ ಭಾಷೆಯಲ್ಲೂ ಗ್ರಾಂಥಿಕ ಭಾಷಾ ವೈಖರಿಯಿಂದ ಇದ್ದಕ್ಕಿದ್ದಂತೆ ಹೈದ್ರಾಬಾದ ಕರ್ನಾಟಕದ ಜವಾರಿ ಭಾಷೆಗೆ ಪಲ್ಲಟಗೊಂಡಿರಲ್ಲಾ ಅದು ಏಕೆ?

ಅದು ಅನಿವಾರ್ಯವಾಗಿತ್ತು. ಒಂದು ವಸ್ತು ತನ್ನನ್ನು ಧಾರಣ ಮಾಡಬಲ್ಲಂಥ ಹೊರ ಮೈ ಚೌಕಟ್ಟನ್ನು ತಾನು ಸಿದ್ಧಪಡಿಸಿಕೊಳ್ಳುತ್ತದೆ. ಅಂದರೆ ಸೃಜನಶೀಲ ಬರವಣಿಗೆಯ ಶಕ್ತಿ ಇರುವುದೇ ಅದನ್ನು ನಿರ್ವಹಿಸುವ ಪರಿಕರದಲ್ಲಿ. ಅದು ರೂಪ ಇರಬಹುದು, ಭಾಷೆ ಇರಬಹುದು.
ನಾನು ಯಾರ ಬದುಕನ್ನು ಬರೆಯಲು ಹೊರಟಿದ್ದೆನೋ; ಅದು ಅವರದ್ದೇ ಭಾಷೆಯಲ್ಲಿ ಮಾತ್ರ ಹಿಡಿಯಲು ಸಾಧ್ಯವಾಗುತ್ತಿತ್ತು. ಭಾಷೆ ಎಂದರೆ ಕೇವಲ ಮಾತುಗಳಲ್ಲ. ಧ್ವನಿಯೂ ಅಲ್ಲ. ಅದು ಒಂದು ಬಗೆಯ ಸಂಸ್ಕೃತಿಯೂ ಹೌದು, ಒಂದು ರಾಜಕಾರಣವೂ ಹೌದು. ನನ್ ಕೆಳಗೇರಿಯ ಮಂದಿಯ ಬದುಕಿನ ಪಲಕುಗಳು ಹುದುಗಿರುವುದೇ ಅವರು ಆಡುತ್ತಿರುವ ಭಾಷೆಯಲ್ಲಿ. ನಮ್ಮ ದೇಶದಲ್ಲಿ ಸಾಮಾಜಿಕ ಭಾಷಾವಿಜ್ಞಾನ ಅಷ್ಟಾಗಿ ಅಭಿವೃದ್ಧಿಗೊಂಡಿಲ್ಲ. ಸಮಾಜೋರಾಜಕೀಯ ನೆಲೆಯಲ್ಲಿ ಭಾಷಾ ಅಧ್ಯಯನಗಳು ನಡೆಯುತ್ತಿಲ್ಲ. ಅಂಥಾ ಅಧ್ಯಯನಗಳು ನಡೆದಾಗ ಜನಸಾಮಾನ್ಯರು, ದಲಿತರು, ಶ್ರಮಿಕರು, ಆಡುವ ಭಾಷೆಯ ಸೊಗಡು, ಅದರ ಧ್ವನಿಕಾರು ಅನುರಣಶೀಲತೆ ಇವೆಲ್ಲವೂ ನಿಚ್ಚಳವಾಗುತ್ತದೆ.

7. ನೀವು ಬಳಸುವ ಭಾಷೆ ಮತ್ತು ವಸ್ತುವಿನ ಬಗೆಗೆ ಪುನರಾವರ್ತನೆಗಳಾಗಿವೆ ಎಂಬ ವಿಚಾರವಿದೆಯಲ್ಲ. ಹೌದೆ?

ಭಾಷೆಯ ಬಗೆಗೆ ಪುನರಾವರ್ತನೆ ಎಂಬ ವಿಷಯವೇ ಬರಬಾರದು. ನಾನು ಭಾಷಾ ಪ್ರಭೇದವನ್ನು ತೋರಿಸುವುದಾಗಿ ಆ ಭಾಷೆ ಬಳಸಿದವಳಲ್ಲ. ನಮ್ ಮಂದಿಯ ಭಾಷಾ ಇರುವುದೇ ಹಾಗೆ. ಅವರು ಎಷ್ಟು ಸಲ ಅಕ್ಷರಗಳಲ್ಲಿ ಪಡಿಮೂಡುತ್ತಾರೊ ಅಷ್ಟೂ ಸಲವೂ ಅವೇ ಮಾತಿನ ವರಸೆ ಇರಬೇಕಲ್ಲವೆ? ಇನ್ನು ವಸ್ತುವಿನ ಪುನರಾವರ್ತನೆ. ಅಲ್ಲಿಯೂ ಪುನರಾವರ್ತನೆ ಇದೆ ಎಂದು ನನಗೆ ಅನಿಸುತ್ತಿಲ್ಲ. ಪ್ರತಿಯೊಂದು ಭಿನ್ನ ವಿಭಿನ್ನ ಘಟನೆಗಳಿವೆ. ಈ ಭಾಗದ ಶೋಪಿತ ಮಂದಿಯ ಬದುಕು ಅಂದರೆ ಅದೊಂದು ನೋವಿನ ಸರಮಾಲೆ. ಅನಂತ ಸಂಕೀರ್ಣವಾದುದು. ಅದಕ್ಕೆ ಎಷ್ಟೋಂದು ಮಗ್ಗುಲಗಳಿವೆ ಗೊತ್ತೇ? ಎಷ್ಟೋ ಸಲ ಆ ಎಲ್ಲವನ್ನೂ ಹಿಡಿದಿಡಲು ಸಾಧ್ಯವಾಗಿಲ್ಲವಲ್ಲ ಎಂಬ ಹಳಹಳಿ ಇದೆ. ನಮ್ಮ ಭಾಗದಲ್ಲಿ ಜೋಗಣಿ ಬಿಡುವ ಸಂಪ್ರದಾಯ, ಉಪಪತ್ನಿಯರ ಪದ್ಧತಿ, ಕೂಡಿಕೆ ಮದುವೆಗಳು ಇವೆಲ್ಲಾ ಇನ್ನೂ ಇವೆ. ನಾ ಬರದದ್ದು ತುಸುಮಾತ್ರ. ಬರೆಯದೇ ಉಳಿದದ್ದು ಬಹಳವಿದೆ.

8. ಈಗ ಒಂದಿಷ್ಟು ನಿಮ್ಮ ಬದುಕು-ಬರಹದಾಚೆ ಮಾತಾಡೋಣ. ಸಮಕಾಲೀನ ಕನ್ನಡ ಸಾಹಿತ್ಯ ಸ್ಥಿತಿ-ಗತಿ ಬಗೆಗೆ ನಿಮಗೆ ಏನನಿಸುತ್ತದೆ?

ಏಕಕಾಲಕ್ಕೆ ಖುಷಿ ಮತ್ತು ವಿಷಾದ ಎರಡೂ ಆಗುತ್ತದೆ. ಖುಷಿ ಏಕೆಂದರೆ ನಮ್ಮ ಹೊಸ ತಲೆಮಾರಿನ ಲೇಖಕರು ನಮಗಿಂತ ತೀವ್ರವಾಗಿ ಭಾವ ಸಾಂದ್ರತೆಯೊಂದಿಗೆ ಮತ್ತು ಅಷ್ಟೇ ಆಪ್ತವಾಅಗಿ ಬರೆಯುತ್ತಿದ್ದಾರೆ. ಇದು ವೈಚಾರಿಕ, ವೈಜ್ಞಾನಿಕ ಬರಹಗಳ ಯುಗ. ಅನ್ಯ ಜ್ಞಾನಶಿಸ್ತುಗಳ ವಿಸ್ತೃತ ಅಧ್ಯಯನದ ಬೆಳಕಿನಲ್ಲಿ ಹೆಚ್ಚು ಮೌಲಿಕವಾದ, ಗಟ್ಟಿಯಾದ ಕೃತಿಗಳನ್ನು ರಚಿಸುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಸಾಹಿತ್ಯ ಮತ್ತು ಸೈದ್ಧಾಂತಿಕ ಬದ್ಧತೆಯಿಂದ ದೂರ ಸರಿದು ಜಾಗತಿಕ ಮಾರುಕಟ್ಟೆ ಲೋಕದಲ್ಲಿ ಅವರು ಕಳೆದುಹೋಗುತ್ತಿದ್ದಾರಲ್ಲ, ಇದಕ್ಕೆ ವಿಷಾದವಾಗುತ್ತದೆ. ಆನತೆಯ ಮನೋಭೂಮಿಕೆಯನ್ನು ಪ್ರಭಾವಿಸಬೇಕಾದ ಸಾಹಿತಿಯು ತಾನೇ ಜನಪ್ರಿಯ ಮಾರುಕಟ್ಟೆಯ ಜಾಹೀತಾತು ಲೋಕದಿಂದ ಪ್ರಭಾವಿತನಾದರೆ ಹೇಗೆ?

9. ಜಾಗತಿಕ ಮಾರುಕಟ್ಟೆ ನಿಯಂತ್ರಿತ ಏಕರೂಪೀ ಸಂಸ್ಕೃತಿ ನಿರ್ಮಾಣದಲ್ಲಿ ದೇಶೀಯ ಭಾಷೆ, ಸ್ಥಳೀಯ ಸಂಸ್ಕೃತಿಗಳು ನಾಶವಾಗುತ್ತದೆಯೆಂಬ ಕೂಗು ಕೇಳಿಬರುತ್ತಿದೆಯಲ್ಲ. ಅದಕ್ಕೆ ನಿಮ್ಮ ಅಭಿಪ್ರಾಯವೇನು?

ಹಾಂ! ಹಾಂ! ದೇಶೀ ಭಾಷೆ ಮತ್ತು ಸಂಸ್ಕೃತಿಯ ಅಳಿವಿನ ಬಗೆಗಿನ ಹೆದರಿಕೆಯೇನೋ ಸಕಾರಣವಾದದ್ದೇ. ಆದರೆ ಇದಕ್ಕೆ ಪರ್ಯಾಯವೇ ಇಲ್ಲ ಎಂದು ನಿರಾಶರಾಗಬೇಕಿಲ್ಲ. ಶ್ರಮಶಕ್ತಿ ಮತ್ತು ಬಂಡವಾಳಶಕ್ತಿಯ ನಡುವಿನ ಸಂಘರ್ಷ ಇದಾಗಿದೆ. ಈ ಹೊತ್ತಿನಲ್ಲಿ ಈ ಸಂಘರ್ಷ ಅನಿವಾರ್ಯ. ಅದನ್ನು ನಾವು ಎದುರಿಸಲೇಬೇಕಾಗಿದೆ. ಎದುರಿಸೋಣ. ಜಗತ್ತಿನಲ್ಲಿ ಶ್ರಮಿಕ ಮೂಲದ ಮುರನೇಯ ಶಕ್ತಿಯೊಂದು ಹೊಡೆ ಮುರಿದು ಏಳುತ್ತಿದೆ. ಇನ್ನೊಂದು ಜಗತ್ತು ಸಾಧ್ಯ ಎಂಬ ನಂಬಿಕೆ ನನ್ನದು.

10. ಭಯೋತ್ಪಾದನೆ, ಕೋಮುವಾದ, ಮೂಲಭೂತವಾದ ಇವುಗಳನ್ನು ಸಾಹಿತ್ಯದ ಮೂಲಕ ಎದುರಿಸಬಹುದೇ? ಸಾಹಿತ್ಯಕ್ಕೆ ಅಂಥ ಧಾರಣ ಶಕ್ತಿ ಇದೆಯಾ?

ಖಂಡಿತಾ ಇದೆ. ಎಲ್ಲೋ ಓದಿದ ನೆನಪು. ಕಾವ್ಯ ಕ್ರಾಂತಿಯ ಜನನಿ. ಕಾವ್ಯ ಎಂದರೆ ವಿಶಾಲ ಅರ್ಥದಲ್ಲಿ ಸಾಹಿತ್ಯ ಎಂದೇ ಇದೆ. ಬದುಕಿನ ಪ್ರತಿಬಿಂಬವೇ ಸಾಹಿತ್ಯ ಎಂದಾಗಿರುವುದರಿಂದ ಬದುಕಿನಲ್ಲಿರುವುದೆಲ್ಲವನ್ನು ಹಿಡಿಯಬಲ್ಲ ಶಕ್ತಿ ಸಾಹಿತ್ಯವೆಂಬ ಪರಿಕರಕ್ಕಿದೆ. ಪರಿಕರ ಎಂದೆನಲ್ಲಾ, ಅಂದರೆ ಇಷ್ಟೇ ಆಯಾಕಾಲದ ಕ್ರಿಯಾಶೀಲ ಮನಸ್ಸುಗಳು ತನ್ನ ಪ್ರತಿಭೆಯನ್ನು ನಿಕಷಕೊಡ್ಡಿ ಆಯಾಕಾಲ ಮತ್ತು ಸಂದರ್ಭ ಬಯಸುವ ಹೊಸ ಪರಿಕರ, ಪರಿಕಲ್ಪನೆಗಳನ್ನು ನೆರವಿಕೊಳ್ಳಬೇಕು. ಸಾಹಿತ್ಯ ಎನ್ನುವುದು ಒಂದು ಹೊಸ ಹರೆಯದ ಕುದುರಿ ಇದ್ದಂತೆ. ಸವಾರಿ ಮಾಡುವವನು ಅದಕ್ಕೆ, ತನಗೆ ಅನುಕೂಲವಾಗುವ ನಡೆ ಕಲಿಸಬೇಕಾಗುತ್ತದೆ ಅಷ್ಟೆ.

11. ಈಗಿನ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಮಾಧ್ಯಮವೇ ಮರೆಯಾಗುತ್ತಿರುವಾಗ ಈ ತೆರನ ಸಾಹಿತ್ಯ ಸಮ್ಮೇಳನ ಅಥವಾ ಕನ್ನಡಪರ ಚಳುವಳಿಗಳಿಂದ ಕನ್ನಡ ಉಳಿಸಿ ಬೆಳೆಸಲು ಸಾಧ್ಯವೇ?

ಗಂಭೀರವಾದ ಸಕಾಲಿಕ ಪ್ರಶ್ನೆ. ಶಿಕ್ಷಣದ ಖಾಸಗೀಕರಣ ಎಲ್ಲಿಯವರೆಗೆ ಮುಂದುವರೆಯುತ್ತಿದೆಯೋ ಅಲ್ಲಿಯವರೆಗೆ ಕನ್ನಡ ಮಾಧ್ಯಮಕ್ಕೆ ಕುತ್ತು ಇದ್ದದ್ದೆ. ಶಿಕ್ಷಣವನ್ನು ಮಾಫಿಯಾ ಮಾಡುತ್ತಿರುವ ವಿದ್ಯಮಾನದ ವಿರುದ್ಧ ಜನತೆ ಬಂಡೇಳಬೇಕು. ಜನತೆ ಬಂಡೆದ್ದಾಗಲೇ ರಾಜಕೀಯ ಇಚ್ಛಾಶಕ್ತಿ ಎಂಬುದು ಆಕಾರ ಪಡೆದುಕೊಳ್ಳುತ್ತದೆ. ಇಂದು ನಾವು ನೋಡುತ್ತಿರುವುದು ಕನ್ನಡ ಪರ ಚಳುವಳಿಗಳನ್ನಲ್ಲ. ಚಳುವಳಿಯ ರೂಪಧರಿಸಿಕೊಂಡಿರುವ ಕಾರ್ಯಕರ್ಮಗಳನ್ನು ಮಾತ್ರ ನೋಡುತ್ತಿದ್ದೇವೆ. ಯಾವುದೇ ಅದ್ದೂರಿ, ಅರ್ಥಪೂರ್ಣವೆನಿಸುವ ಕಾರ್ಯಕ್ರಮಗಳಿಗಾದರೂ ಒಂದು ಮಿತಿ ಇದೆ. ಇನ್ನು ಫೇಕ್ ಕಾರ್ಯಕ್ರಮಗಳಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ. ಕಾರ್ಯಕ್ರಮಗಳ ಮಿತಿಯನ್ನು ಮೀರುವುದೇ ಚಳುವಳಿ. ಚಳುವಳಿಗೆ ಪರಿಣಾಮವೇ ಗುರಿ. ಅವಿಶ್ರಾಂತ ಚಟುವತಿಕೆಗಳೇ ನಡೆ. ಇಂಥ ಚಳುವಳಿಗಳ ಅವಶ್ಯಕತೆ ಇದೆ.

ಇನ್ನು ಸಾಹಿತ್ಯ ಸಮ್ಮೇಳನಗಳ ಸಫಲತೆಯ ಪ್ರಶ್ನೆ. ಒಂದು ಮಾತನ್ನು ನಾವೆಲ್ಲ ಸ್ಪಷ್ಟಪಡಿಸಿಕೊಳ್ಳಬೇಕಿದೆ. ಇದು ಸಾಮ್ರಾಜಶಾಹಿ ಶಕ್ತಿಗಳ ಕೈ ಮೇಲಾಗಿರುವ ಜಾಗತಿಕ ಅರಾಜಕ ಸ್ಥಿತಿಯಾಗಿದೆ. ಇಂದ್ಥ ಸ್ಥಿತಿಯಲ್ಲಿ ಎಲ್ಲ ಚಟುವಟಿಕೆಗಳು ಅಂದರೆ ಸಾಂಸ್ಕೃತಿಕ ಚಟುವಟಿಕೆ ಇರಬಹುದು, ಆರ್ಥಿಕ ಪರ್ಯಾಯವಿರಬಹುದು, ಸಾಮಾಜಿಕ ಪಲ್ಲಟಗಳಿರಬಹುದು, ರಾಜಕೀಯ ಸ್ಥಿತ್ಯಂತರಗಳಿರಬಹುದು. ಹೀಗೆ ಎಲ್ಲ ವಿದ್ಯಮಾನಗಳ ಬಗೆಗೆ ಸಕಾರಣ ಗುಮಾನಿ, ದಿವ್ಯ ನಿರ್ಲಕ್ಷ್ಯ, ಒಂಥರಾ ನಿರಾಸೆ ಹುಟ್ಟಿಕೊಳ್ಳುತ್ತವೆ. ಆದರೆ ಈ ಸ್ಥಿತಿ ಶಾಶ್ವತವಲ್ಲ. ಒಂದು ಜನವಿರೋಧಿ ವ್ಯವಸ್ಥೆಯಿಂದ ಜನಪರ ದಿಕ್ಕಿಗೆ ಪಯಣಿಸುವ ಸಂದರ್ಭದಲ್ಲಿನ ಕ್ಷಣಿಕ ನಿಲುದಾಣ. ಇದನ್ನು ನಾವೆಲ್ಲ ಹಾದು ಬರಲೇಬೇಕು. ಆದರೆ ಮಿಂದಿನ ದಾರಿಯ ಹುಡಕಾಟಕ್ಕಾಗಿ ನಾವೆಲ್ಲ ಬದ್ಧರಾಗಿರಬೇಕು ಅಷ್ಟೇ. ಆ ಕಾರಣಕ್ಕಾಗಿ ಕತ್ತಲೆ ಎತ್ತೆತ್ತಲೂ ಆವರಿಸಿಕೊಂಡಿರುವ ಮನೆಯಲ್ಲಿ ಇಂಥ ಸಮ್ಮೇಳನಗಳ ಮೂಲಕ ಸಣ್ಣ ದೀಪ ಹಚ್ಚಿಕೊಂಡಾದರೂ ನಾಳಿನ ಉದಯದವರೆಗೆ ಕಾಯಬೇಕಿದೆ. ಆ ದೀಪವಾದರೂ ನನಗೆ ಬೆಳಕು ತೋರಲೆಂದು ಬೇಕು. ನನ್ನ ಕಣ್ಣ ಕತ್ತಲೆ ಕರಗಿಸುವಷ್ಟು ಶಕ್ತಿ ಪುಟ್ಟ ಪಣತೆಗಿದೆ ಎಂಬುದನ್ನು ಮರೆಯದಿರೋಣ.

ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು - ಭಾಗ -೨

೩) ತಾತ್ವಿಕವಾಗಿ ಭಿನ್ನ ನೆಲೆ-ನಿಲುವುಗಳ ಕಾರಣದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಿಗೆ ಪಯರ್ಾಯ ನೆಲೆಗಳು ಹುಟ್ಟಿಕೊಂಡಿದ್ದು, ಬೆಳೆದದ್ದು ಗಮನಿಸಲೇಬೇಕಾದ ಸಂಗತಿಯಾಗಿದೆ. ತಾತ್ವಿಕ ಭಿನ್ನ ನೆಲೆಗಳ ಕ್ರಿಯೆ ಕೇವಲ ಇತ್ತೀಚಿನದಲ್ಲ. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 23ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ (ಡಿಸೆಂಬರ್ 26, 27, 28) ಪ್ರಗತಿಶೀಲ ಲೇಖಕರು ಒಗ್ಗೂಡಿ ಒಂದು ಒಕ್ಕೂಟವನ್ನು ರಚಿಸಿಕೊಂಡರು. ಅದನ್ನು ಪ್ರಗತಿಶೀಲ ಲೆಖಕರ ಒಕ್ಕೂಟವೆಂದು ಕರೆಯಲಾಯಿತು. ಸಾಹುಇತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನಕ್ಕೆ ದ.ರಾ.ಬೇಂದ್ರೆಯವರು ಅಧ್ಯಕ್ಷರಾಗಿದ್ದರು. ಬೇಂದ್ರೆಯವರ ಬಗ್ಗೆ ಭಿನ್ನಾಭಿಪ್ರಾಯವಿರಲಿಲ್ಲ. ಭಾರತದಲ್ಲಿ ಪ್ರಗತಿಶೀಲ ಸಾಹಿತ್ಯ ಚಳುವಳಿ ರೂಪುಗೊಳ್ಳುತ್ತಿದ್ದ ಕಾಲವದು. ಹಿಂದಿನ ವರ್ಷ ಮುಂಬೈಯಿಯಲ್ಲಿ ನಡೆದ ಪ್ರಗತಿಶೀಲ ಸಾಹಿತ್ಯ ಸಮ್ಮೇಳನಕ್ಕೆ ಖ್ಯಾತ ನಾಟಕಕಾರ ಶ್ರೀರಂಗರು ಹೋಗಿ ಬಂದಿದ್ದರು. ಸಾಹಿತ್ಯ ಪರಿಷತ್ತಿನ ನೆಲೆ ನಿಲುವುಗಳಿಗೆ ಭಿನ್ನವಾಗಿ ಪ್ರಗತಿಪರ ಚಿಂತನೆಯ ಲೇಖಕರು ಒಂದಾಗಿ ಕ್ರಿಯಾಶೀಲರಾಗಬೇಕೆಂಬ ಹಂಬಲದಿಂದ ಹುಟ್ಟಿದ ಒಕ್ಕೂಟದಲ್ಲಿ ಶ್ರೀರಂಗ, ಅ.ನ.ಕೃ, ನಿರಂಜನ, ಬಸವರಾಜ ಕಟ್ಟೀಮನಿ, ಕೃಷ್ಣಕುಮಾರ ಕಲ್ಲೂರ, ಇನಾಂದಾರ್ ಮುಂತಾದ ಅನೇಕ ಪ್ರಸಿದ್ಧರು ಇದ್ದರು. ಮುಂದೆ 1952ನೇ ಜೂನ್ 4ರಿಂದ 7ರವರೆಗೆ ಹಿರಿಯೂರಿನಲ್ಲಿ ಪ್ರಗತಿಪರ ಲೇಖಕರ ಸಮಾವೇಶ ನಡೆಯಿತು. ಆನಂತರದ ದಿನಗಳಲ್ಲಿ ಅ.ನ.ಕೃ ಮತ್ತು ನಿರಂಜನರ ನಡುವೆ ತಾತ್ವಿಕ ಭಿನ್ನಾಭಿಪ್ರಾಯವುಂಟಾಗಿ ಒಕ್ಕೂಟದ ಒಡಕಿನಲ್ಲಿ ಪಯರ್ಾವಸಾನವಾಯಿತು.ಇದು ನಡೆದಿದ್ದು 1954ರಲ್ಲಿ. ಅ.ನ.ಕೃ ಅವರು ವೇಶ್ಯೆಯರನ್ನು ಕುರಿತು ಬರೆದ ನಗ್ನಸತ್ಯ, ಸಂಜೆಗತ್ತಲು ಮತ್ತು ಶನಿಸಂತಾನ- ಎಂಬ ಕಾದಂಬರಿಗಳು ವಿವಾದದ ಕೇಂದ್ರವಾದವು. ಅ.ನ.ಕೃ ಅವರು ಸಂಪ್ರದಾಯವಾದಿಗಳ ವಿರೋಧದ ಜೊತೆಗೆ ನಿರೂಪಣೆಯ ವಿಧಾನ ಮತ್ತು ವಸ್ತು ನಿರ್ವಹಣೆ ಕುರಿತಂತೆ ನಿರಂಜನರಾದಿಯಾಗಿ ಇನ್ನು ಕೆಲವರಿಂದ ಪ್ರತಿರೋಧ ಎದುರಿಸಿದರು. ತಮ್ಮ ನಿಲುವಿನ ಸಮರ್ಥನೆಗಾಗಿ ಸಾಹಿತ್ಯ ಮತ್ತು ಕಾಮ ಪ್ರಚೋದನೆ ಎಂಬ ಕೃತಿಯನ್ನು ಬರೆದರು.

ಮುಂದೆ 1979ರ ಮಾರ್ಚ್ ತಿಂಗಳಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನವು ವಿವಾದಕ್ಕೆ ಗುರಿಯಾಯಿತು. ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದ ಮತ್ತು ಧರ್ಮಸ್ಥಳದಲ್ಲಿ ನಡೆದ ಈ ಸಮ್ಮೇಳನದ ದಿನದಗಳಂದೇ ಬೆಂಗಳೂರಲ್ಲಿ ಬಂಡಾಯ ಸಾಹಿತ್ಯದ ಸಮ್ಮೇಳನ ನಡೆಯಿತು. ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೆಳೆಯುತ್ತಾ ಬಂದ ಎಡಪಂಥೀಯ, ಪ್ರಗತಿಪರ, ಪ್ರಜಾಸತ್ತಾತ್ಮಕ ನಿಲುವುಗಳಿಗೆ ಸಂಘಟನೆಯ ನೆಲೆ ಒದಗಿಸಲು ಧರ್ಮಸ್ಥಳದ ಸಮ್ಮೇಳನ ಒಂದು ಸನ್ನಿವೇಶವನ್ನು ಒದಗಿಸಿತು. ಆ ವೇಳೆಗಾಗಲೇ ಅಡಿಗರು ರಾಜಕೀಯವಾಗಿ ಸಂಘಪರಿವಾರದವರಾಗಿದ್ದರು. ಹಂಪನಾ ಅವರು ಸಮ್ಮೇಳನವನ್ನು ಧರ್ಮಸ್ಥಳಕ್ಕೆ ಕೊಂಡೊಯ್ದಿದ್ದರು. ಈ ವೇಳೆಗೆ ಕನರ್ಾಟಕದಲ್ಲಿ ದಲಿತ ಸಂಘರ್ಷ ಸಮಿತಿ, ಸಮುದಾಯದಂತಹ ಆಂದೋಲನಾತ್ಮಕ ಸಂಘಟನೆಗಳು ಕ್ರಿಯಾಶೀಲವಾಗಿದ್ದವು. ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಆಂದೋಲನಕ್ಕೆ ಅವಕಾಶವಿತ್ತು. ಅದು ಅನಿವಾರ್ಯವೂ ಆಗಿತ್ತು. ಆ ವೇಳೆಗೆ ರಾಷ್ಟ್ರದಲ್ಲಿ ರಾಜಕೀಯವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಧ್ರುವೀಕರಣ ಆರಂಭವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲೂ ಇಂತಹ ಧ್ರುವೀಕರಣದ ಅಗತ್ಯವನ್ನು ಕರ್ನಾಟಕವು ಮೊದಲನೇ ಬಂಡಾಯ ಸಾಹಿತ್ಯದ ಸಮ್ಮೇಳನದ ಮೂಲಕ ಕಂಡುಕೊಂಡಿತು. ಮಾರ್ಕ್ಸ್ವಾದ, ಗಾಂಧೀವಾದ, ಅಂಬೇಡ್ಕರ್ವಾದ, ಲೋಹಿಯಾವಾದ- ಇವೇ ಮುಂತಾದ ತಾತ್ವಿಕ ನಂಬಿಕೆ ಇರುವವರು ಮತ್ತು ಒಟ್ಟಾರೆ ಪ್ರಗತಿಪರರು ಬಂಡಾಯ್ ಅಸಾಹಿತ್ಯ ಸಂಘಟನೆಯ ವಿಶಾಲ ತಳಹದಿಯ ಮೇಲೆ ಒಂದಾದರು. ಆರಂಭದ ಕೆಲ ವರ್ಷ ತಾತ್ವಿಕ ಗಟ್ಟಿತನವನ್ನು ಬೆಳೆಸಿಕೊಳ್ಳುವ ಕಾರ್ಯತಂತ್ರವಾಗಿ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಗವಹಿಸದಿರಲು ನಿರ್ಧರಿಸಲಾಯಿತು. ಇದು ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳುವ ಕಾರ್ಯತಂತ್ರವಾಗಿದ್ದರಿಂದ ಅನಂತರ ಯಾವುದೇ ಸಂಸ್ಥೆಗಳಿಗೆ ಹೋದರೂ ನಮ್ಮ ವಿಚಾರಗಳನ್ನು ಪ್ರತಿಪಾದಿಸಬೇಕು ಎಂಬ ಬದ್ಧತೆಯಿಂದ ಷರತ್ತನ್ನು ತೆರವುಗೊಳಿಸಲಾಯಿತು. ಒಟ್ತಾರೆ ಕ್ರಿಯಾಶೀಲತೆಗಳ ಏರಿಳಿತಗಳಿದ್ದರೂ ಬಂಡಾಯ ಸಾಹಿತ್ಯ ಸಂಘಟನೆ ಈಗಲೂ ಇದೆ. ತನ್ನ ಮೊದಲನೇಯ ಸಮ್ಮೇಳನದ ಕರಪತ್ರದಲ್ಲೇ ಸ್ಪಷ್ಟಪಡಿಸಿದಂತೆ ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ವಿರುದ್ಧವಲ್ಲ ಸಾಂಸ್ಕೃತಿಕವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಕ್ರೋಢೀಕರಿಸುವ ಚಳುವಳಿ.

ತಾತ್ವಿಕ ವಿವಾದದ ಕಾರಣ ಹೇಳಿ ಹುಟ್ಟಿದ ಇನ್ನೊಂದು ಸಮ್ಮೇಳನ (ಸಂಘಟನೆಯಲ್ಲ) ಜಾಗತಿಕ ಸಾಹಿತ್ಯ ಸಮ್ಮೇಳನ 1990ರ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯಾಗಿ ಅಥವಾ ಪರ್ಯಾಯವಾಗಿ ಬೆಂಗಳೂರಿನಲ್ಲಿ ಜಾಗೃತ ಸಾಹಿತ್ಯ ಸಮ್ಮೇಳನ ನಡೆಯಿತು. 1990ರ 59ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಾ.ಆರ್.ಸಿ.ಹಿರೇಮಠ ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗ ವಿವಾದದ ಅಲೆಗಳು ಎದ್ದವು. ಕೆಲವರು ಶ್ರೇಷ್ಠತೆಯ ಪ್ರಶ್ನೆಯನ್ನು ಎತ್ತಿದರು ಮತ್ತು ಶ್ರೇಷ್ಠತೆಯ ವಾದವನ್ನು ಬೆಳೆಸಿದರು. ಸಾಹಿತ್ಯದ ಶ್ರೇಷ್ಠತೆ ಮುಖ್ಯವೆಂದು ಪ್ರತಿಪಾದಿಸಿದ ಈ ಗೆಳೆಯರಲ್ಲಿ ಕೆಲವರಿಗಾದರೂ ಶ್ರೇಷ್ಠತೆಯ ಪ್ರಶ್ನೆ ಜಟಿಲವೆಂಬ ಅರಿವು ಇತ್ತೆಂದು ನಾನು ಭಾವಿಸುತ್ತೇನೆ. ಆದರೆ ಎಲ್ಲರಿಗೂ ಇದರ ಅರಿವು ಇರಲಿಲ್ಲವಾದ್ದರಿಂದ ನವ್ಯ ಸಾಹಿತ್ಯದ ವ್ಯಕ್ತಿನಿಷ್ಠ ಶ್ರೇಷ್ಠತೆಯ ಹಿನ್ನೆಲೆ ಪಡೆದವರೇ ಹೆಚ್ಚಾಗಿ ಜಾಗೃತ ಸಾಹಿತ್ಯ ಸಮ್ಮೇಳನದ ಭಾಗವಾಗಿದ್ದರು. ನಮ್ಮ ಸಾಹಿತ್ಯದ ಶ್ರೇಷ್ಠದ ಕಲ್ಪನೆ ಪುನರ್ ನವೀಕರಣಗೊಳ್ಳುವ ಲಕ್ಷಣಗಳು ಕಾಣಿಸಿದ ಈ ಸಮ್ಮೇಳನವು ಚರ್ಚೆ ಮತ್ತು ಭಾಗವಹಿಸುವಿಕೆಯ ದೃಷ್ಟಿಯಿಂದ ಯಷಸ್ವಿಯಾಯಿತೆಂದೇ ಹೇಳಬೇಕು. ಆದರೆ ಈ ದೇಶದ ಸಾಮಾಜಿಕ ಸ್ಥರಗಳಿಂದುಂಟಾದ ವೈರುಧ್ಯಗಳನ್ನು ಗ್ರಹಿಸದೇ ಕೇವಲ ವ್ಯಕ್ತಿನಿಷ್ಠ ಅನುಭವ ಮತ್ತು ಕೃತಿನಿಷ್ಠ ನೆಲೆಯನ್ನು ಗಮನಿಸಿ ಪ್ರತಿಪಾದಿತವಾಗುವ ಸೀಮಿತ ಶ್ರೇಷ್ಠತೆಯ ಕಲ್ಪನೆಯ ಎದುರು ಅನೇಕ ಪ್ರಶ್ನೆಗಳಿವೆಯೆಂಬುದನ್ನು ಮರೆಯಬಾರದು. ಶ್ರೇಷ್ಠತೆಯು ಪ್ರಗತಿಪರಬದ್ಧ ಲೇಖಕರನ್ನು ಮುಗಿಸುವ ಒಂದು ಅಸ್ತ್ರವಾಗಬಾರದು. ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಕೆ.ವಿ.ಸುಬ್ಬಣ್ಣನವರು ಬರೆದ ಶ್ರೇಷ್ಠತೆಯ ವ್ಯಸನ ಎಂಬ ಲೇಖನವನ್ನು ಇಲ್ಲಿ ನೆನೆಯಬಹುದು.

ಈಗ 74ನೇ ಕನ್ನಡ ಸಾಹಿತ್ಯ ಸಮ್ಮೇಳನವು ಉಡುಪಿಯಲ್ಲಿ ನಡೆಯುವಾಗ ಸಂಘಪರಿವಾರದ ಸಂಬಂಧವುಳ್ಳವರೆಂದು ಭಾವಿಸಲಾದ ಪ್ರೊ.ಎಲ್.ಎಸ್.ಶೇಷಗಿರಿರಾಯರು ಅಧ್ಯಕ್ಷರಾದುದು ಮತ್ತು ಸಮ್ಮೇಳನದ ವ್ಯವಸ್ಥೆಯ ಮುಂಚೂಣಿಯಲ್ಲಿ ಸಂಘಪರಿವಾರದವರೇ ತುಂಬಿದ್ದರೆನ್ನುವುದು ತಮ್ಮ ತಾತ್ವಿಕ ವಿರೋಧಕ್ಕೆ ಕಾರಣವೆಂದು ಪ್ರತಿಪಾದಿಸುವ ಕೋಮು ಸೌಹಾರ್ಧ ವೇದಿಕೆಯ ಗೆಳೆಯರು ಇತರೆ ಪ್ರಗತಿಪರರ ಜೊತೆ ಸೇರಿ ಡಿಸೆಂಬರ್ 9ರಂದು ಉಡುಪಿಯಲ್ಲಿ ಸೌಹಾರ್ಧ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ್ದರು. ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಕೋಮು ಸೌಹಾರ್ದ ವೇದಿಕೆಯವರ ಪರವಾಗಿ ನಿಂತ ಚಂದ್ರಶೇಖರ ಪಾಟೀಲರು ಇಲ್ಲಿ ಅದೇ ವೇದಿಕೆಯವರ ಪ್ರತಿರೋಧವನ್ನಿ ಎದುರಿಸಬೇಕಾಗಿ ಬಂದಿದ್ದು ಒಂದು ವಿಪರ್ಯಾಸ! ಆದರೆ ಕೋಮು ಸೌಹಾರ್ದ ವೇದಿಕೆಯವರ ಜೊತೆ ಉಡುಪಿಯ ಪ್ರಗತಿಪರರು (ಉದಾ: ಜಿ.ರಾಜಶೇಖರ್ ಮುಂತಾದವರು) ಸೇರಿದ ಮೇಲ ಸೌಹಾರ್ದ ಸಮ್ಮೇಳನವು ಪರ್ಯಾಯ ಸಮ್ಮೇಳನವಲ್ಲ ಎಂದು ತಿಳಿಸಲಾಯಿತು. ಆದರೂ ತಾತ್ವಿಕ ಭಿನ್ನತೆ ಇದ್ದೇ-ಇತ್ತು. ಹೀಗಾಗಿ ಸೌಹಾರ್ಧ ಸಾಹಿತ್ಯ ಸಮ್ಮೇಳನವು ಧಾರ್ಮಿಕ ಮೂಲಭೂತವಾದಕ್ಕೆ ಪ್ರತಿರೋಧಿಯಾದ ಸಮ್ಮೇಳನವಾಯಿತು.

ಈ ತಾತ್ವಿಕ ಭಿನ್ನ ಮತದ ಘಟನೆಗಳು ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಇತಿಮಿತಿಯನ್ನು ತೋರಿಸುತ್ತವೆ. ಸಾಹಿತ್ಯ ಪರಿಷತ್ತಿನ ನೇತೃತ್ವ ವಹಿಸಿದವರು ಒಟ್ಟಾರೆ ಪ್ರಗತಿಪರ ಸ್ವರೂಪವನ್ನು ಪರಿಷತ್ತಿನ ವ್ಯಾಪ್ತಿಯಲ್ಲೇ ನೀಡಲು ಪ್ರಯತ್ನಿಸಬಹುದೆಂಬುದು ನಿಜವಾದರೂ ಅದು ತಾತ್ವಿಕವಾಗಿ ನಿರ್ದಿಷ್ಟ ಸಾಮಾಜಿಕ ರಾಜಕೀಯ ಬದ್ಧತೆ ತೋರುವುದು ಕಷ್ಟವೆಂದು ಇಲ್ಲೀವರೆಗಿನ ಬೆಳವಣಿಗೆಗಳು ತೋರಿಸಿವೆ- ಹೀಗಾಗಿ ತಾತ್ವಿಕ ವಿವಾದಗಳು ಹುಟ್ಟುತ್ತಲೇ ಇರುತ್ತವೆ