ಕನ್ನಡ ಸಾಹಿತ್ಯ ಸವೆಸಿದ ಹಾದಿ..
6:53 AM
Posted by ಆಲೆಮನೆ

ಪ್ರಾದೇಶಿಕ ಆಡುನುಡಿ ಬಗ್ಗೆ ಏಕೆ ಈ ಅಲಕ್ಷ ಮನೋಭಾವ?
6:31 AM
Posted by ಆಲೆಮನೆ
ಶರತ್ ಕಲ್ಕೋಡ್ - ಸದ್ಯ ಓ ಮನಸೇ ಪಾಕ್ಷಿಕದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಪತ್ರಿಕೋದ್ಯಮದ ಹಿರಿಯರು. ಕನ್ನಡದ ಆಡುನುಡಿಗಳನ್ನು ಮಾಧ್ಯಮಗಳಲ್ಲಿ ಅಪಹಾಸ್ಯ ಮಾಡುತ್ತಿರುವ ಪರಿಯನ್ನು ಕಂಡು ನೊಂದವರು. ಅದೇ ಅವರ ಲೇಖನಿಯಿಂದ ಹೊರ ಬಂದಿದೆ.
ಹೊಸ ಬಗೆಯ ಕ್ವಿಜ್ ಶುರು! - ಇದಾರ ಕೆತ್ತನೆ?
6:08 AM
Posted by ಆಲೆಮನೆ

ಕನ್ನಡ ಸಾಹಿತ್ಯ ಮತ್ತು ರಂಗಭೂಮಿ
5:54 AM
Posted by ಆಲೆಮನೆ
ತೌಡು ಕುಟ್ಟುವ ಕೆಲಸ: ಮುಖ್ಯಮಂತ್ರಿಗೆ ಸೊಗಸಾ?
5:44 AM
Posted by ಆಲೆಮನೆ
ಕರ್ನಾಟಕದಲ್ಲಿ ಕನ್ನಡಕ್ಕೊಂದು ಅಭಿವೃದ್ಧಿ ಪ್ರಾಧಿಕಾರ ಇರುವುದು ಕನ್ನಡದ ನೈಜ ಸ್ಥಿತಿಗತಿಯನ್ನು ತೋರಿಸುತ್ತದೆ. ಇರಲಿ . ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಗಿರಬೇಕೆನ್ನುವುದು ಉಸಿರಾಟದಷ್ಟೇ ಸಹಜ. ಆದರೆ ಕರ್ನಾಟಕ ಏಕೀಕರಣಗೊಂಡ ಈ ೫೩ ವರ್ಷಗಳಲ್ಲಿ ನೂರಾರು ಸರಕಾರೀ ಜಿಓಗಳು ಈ ವಿಷಯವಾಗಿ ಹೊರಡಿಸಲ್ಪತ್ತಿದ್ದರೂ ಮೊನ್ನೆ ಕೂಡ ಮುಖ್ಯಮಂತ್ರಿಗಳು ಈ ವಿಷಯವಾಗಿ ಗುಡುಗಬೆಕಾಯಿತು. ಈ ಎಲ್ಲ ಹಿನ್ನಲೆಯಲ್ಲಿ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡಿರುವ ಹಿರಿಯರು ಎಂ. ಕೆ. ಭಾಸ್ಕರ್ ರಾವ್ ಅವರು ತಮ್ಮ ಜ್ಹುಳುಪಾದ ಲೇಖನಿ ಪ್ರಯೋಗಿಸಿದ್ದಾರೆ
ನುಡಿನಮನದಲ್ಲಿ ನಾಳೆ ಬಿಸಿ ಬಿಸಿ..
6:50 PM
Posted by ಆಲೆಮನೆ
ಕನ್ನಡದ ರಂಗಭೂಮಿಗೆ ಅತ್ಯಂತ ಶ್ರೀಮಂತ ಇತಿಹಾಸವಿದೆ. ಇಂದು ಕೂಡ ಬೇರೆ ಇತರತ್ರ ಭಾಷೆಗಳಿಗಿಂತ ಕನ್ನಡದ ರಂಗಭೂಮಿ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿದೆ.ಈ ಕ್ರಿಯಾಶೀಲ ಶ್ರೀಮಂತಿಕೆಗೂ ಕನ್ನಡ ಸಾಹಿತ್ಯಕ್ಕೂ ನಡುವಿನ ಸೂಕ್ಷ್ಮ ಸಂಬಂಧದ ಕುರಿತು ಸದ್ಯ ಮೈಸೂರಿನ ರಂಗಾಯಣದ ನಿರ್ದೇಶಕರಾಗಿರುವ ಲಿಂಗದೇವರು ಹಳೆಮನೆ ಚರ್ಚಿಸಿದ್ದಾರೆ.ನಿರೀಕ್ಷಿಸಿ ನಾಳೆ...
ಕರ್ನಾಟಕದಲ್ಲಿ ಕನ್ನಡಕ್ಕೊಂದು ಅಭಿವೃದ್ಧಿ ಪ್ರಾಧಿಕಾರ ಇರುವುದು ಕನ್ನಡದ ನೈಜ ಸ್ಥಿತಿಗತಿಯನ್ನು ತೋರಿಸುತ್ತದೆ. ಇರಲಿ . ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಗಿರಬೇಕೆನ್ನುವುದು ಉಸಿರಾಟದಷ್ಟೇ ಸಹಜ. ಆದರೆ ಕರ್ನಾಟಕ ಏಕೀಕರಣಗೊಂಡ ಈ ೫೩ ವರ್ಷಗಳಲ್ಲಿ ನೂರಾರು ಸರಕಾರೀ ಜಿಓಗಳು ಈ ವಿಷಯವಾಗಿ ಹೊರಡಿಸಲ್ಪತ್ತಿದ್ದರೂ ಮೊನ್ನೆ ಕೂಡ ಮುಖ್ಯಮಂತ್ರಿಗಳು ಈ ವಿಷಯವಾಗಿ ಗುಡುಗಬೆಕಾಯಿತು. ಈ ಎಲ್ಲ ಹಿನ್ನಲೆಯಲ್ಲಿ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡಿರುವ ಹಿರಿಯರು ಎಂ. ಕೆ. ಭಾಸ್ಕರ್ ರಾವ್ ಅವರು ತಮ್ಮ ಜ್ಹುಳುಪಾದ ಲೇಖನಿ ಪ್ರಯೋಗಿಸಿದ್ದಾರೆ. ನಾಳೆ ನಿರೀಕ್ಷಿಸಿ........
ಸಾಹಿತಿಗಳು ಅನ್ಯಗ್ರಹ ಜೀವಿಗಳಲ್ಲ!
8:11 AM
Posted by ಆಲೆಮನೆ
ಉಷಾ ಕಟ್ಟೆಮನೆ ಕನ್ನಡದ ಪತಿಕೊದ್ಯಮದ ಮೂಸೆಯಲ್ಲಿ ಪಳಗಿದವರು. ಈಗ ಅದೆಲ್ಲವನ್ನೂ ಬಿಟ್ಟು ಹಸಿರು ಅರಸಿ ಊರ ದಾರಿ ಹಿಡಿದಿರುವವರು. ಆದರೆ ಬರವಣಿಗೆ ಅಷ್ಟು ಸುಲಭವಾಗಿ ಬಿದುವಂಥದಲ್ಲವಲ್ಲ - ಮೌನ ಕಣಿವೆ ಎಂಬ ಬ್ಲಾಗ್ನ ಮೂಲಕ ಓದುಗರನ್ನು ತಲುಪುತ್ತಿದ್ದಾರೆ. ಸದ್ಯ ಸಾಹಿತಿಗಳು, ಅದರಲ್ಲೂ ಮಹಿಳಾ ಸಾಹಿತಿಗಳು ಅನ್ಯಗ್ರಹ ಜೀವಿಗಳಲ್ಲ ಎಂದು ಸಾರಿದ್ದಾರೆ. ಕಸಾಪ, ಸಮ್ಮೇಳನ ಹಿಡಿಯಬೇಕಾದ ದಾರಿಯ ಕುರಿತು ಚರ್ಚಿಸಿದ್ದಾರೆ
ನಿಷ್ಕ್ರಿಯ ಕನ್ನಡಿಗರ ಮೇಲೆ - ಕ್ರಿಯಾಶೀಲ ಕನ್ನಡೇತರರ ಸವಾರಿ
7:39 AM
Posted by ಆಲೆಮನೆ
ಮಹಾದೇವ ಪ್ರಕಾಶ - `ಈ ಭಾನುವಾರ' ವಾರಪತ್ರಿಕೆಯ ಸಂಪಾದಕರು. ಕನ್ನಡಿಗರ ಮೇಲೆ ಕನ್ನಡೇತರರ ದಬ್ಬಾಳಿಕೆಯ ಬಗ್ಗೆ ಸುದೀರ್ಘ ಚರ್ಚಾತ್ಮಕ ಲೇಖನ ಬರೆದಿದ್ದಾರೆ., ಕನ್ನಡಿಗರು ನಿಷ್ಕ್ರಿಯರಾಗಿರುವುದರಿಂದಲೇ ಕ್ರಿಯಾಶೀಲ ಕನ್ನಡೇತರರು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬ ಅವರ ವಿಶ್ಲೇಷಣೆ ಒಪ್ಪತ್ತದಕ್ಕೆ! ಅಂದು ಏಕೀಕರಣ, ಇಂದು ನಡೆಯಬೇಕಿರುವುದು ಕನ್ನಡೀಕರಣ - ಹೌದಲ್ಲವೇ ಎಷ್ಟು ಸತ್ಯ ?
೭೭ನೇ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ
7:33 AM
Posted by ಆಲೆಮನೆ















ಕಸಾಪ ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್ - ವಿಶೇಷ ಸಂದರ್ಶನ.
7:08 AM
Posted by ಆಲೆಮನೆ

ನುಡಿ-ನಮನ, ಆಲೆಮನೆ ಬಳಗಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್ ಅವರು ಕೊಟ್ಟ ವಿಶೇಷ ಸಂದರ್ಶನ.
ಸಂದರ್ಶಿಸಿದವರು -ಡಾ.ಹೆಚ್.ವಿ.ವೇಣುಗೋಪಾಲ್
1. ನಲ್ಲೂರು ಪ್ರಸಾದ್ ಅವರೆ, ಇದು ನಿಮ್ಮ ನಾಯಕತ್ವದಲ್ಲಿ ಎರಡನೆಯ ಸಮ್ಮೇಳನ, ಕಳೆದ ಬಾರಿ ಚಿತ್ರದುರ್ಗದಲ್ಲಿ ಸಮ್ಮೇಳನವನ್ನು ಆಯೋಜಿಸಿದ್ದೀರಿ. ಸಾಹಿತ್ಯ ಪರಿಷತ್ತಿನ ಇದುವರೆವಿಗಿನ ಸಮ್ಮೇಳನಕ್ಕಿಂತ ಈ ಸಮ್ಮೇಳನ ಹೇಗೆ ಭಿನ್ನ?
- ಇದುವರೆಗೆ 75 ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸಿಕೊಂಡು ಬಂದಿದೆ. ಈ ಎಲ್ಲ 75 ಸಮ್ಮೇಳದಲ್ಲಿಯೂ ಕೂಡ ವೈಶಿಷ್ಟ್ಯತೆ ಅಂದರೆ ನಾಡಿನ ಮತ್ತು ನುಡಿಯ ಬಗೆಗೆ ಹಲವಾರು ಸಮಸ್ಯೆಗಳನ್ನು ಕುರಿತು ಆಯಾಕಾಲದ ವೇದಿಕೆ ಚರ್ಚಿಸಿದೆ. ಕನ್ನಡ ನಾಡಿನ ಒಂದು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವಂತಹ ರೀತಿಯಲ್ಲಿ ಈ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ನಾಡಿನಾದ್ಯಂತ ಇರುವಂತಹ ವಿದ್ವಾಂಸರನ್ನು ಕರೆಸಿ, ಅವರ ವಿಚಾರವನ್ನು ಇಲ್ಲಿ ಮಂಡಿಸುವಂತಹ ಕೆಲಸವನ್ನು ಈ ಪರಿಷತ್ತು ಮಾಡುತ್ತಿದೆ. ಕಾಲದಿಂದ ಕಾಲಕ್ಕೆ ಸಮ್ಮೇಳನದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಆಗಿದೆ. ಮೊದಲು ಸಮ್ಮೇಳನ ಅಂದರೆ ಹೆಚ್ಚು ಜನಾಕರ್ಷಣೆ ಇಲ್ಲದಿದ್ದಂತಹ ಕಾಲ ಇತ್ತು. ಆಗ ಸುಮಾರು ಸಾವಿರದ ಲೆಕ್ಕದಲ್ಲಿ ಜನ ಬರುತ್ತಿದ್ದರು. ಈಗ ಅದರ ಪ್ರಮಾಣ ಸಾಕಷ್ಟು ದೊಡ್ಡದಾಗಿದೆ. ಲಕ್ಷಗಟ್ಟಲೆ ಆಗಿದೆ. ಕಳೆದ ಬಾರಿ ನಮಗೆ 3.5ರಿಂದ 4 ಲಕ್ಷ ಜನ ಬಂದಿದ್ದರು ಎಂದು ಒಂದು ಅಂದಾಜು ಸಿಕ್ಕಿದೆ. ಇಲ್ಲಿಗೆ ಬರುವ ಜನರ ಆಸಕ್ತಿಯೂ ಕೂಡ ವಿಭಿನ್ನವಾಗಿರುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಸಾಹಿತ್ಯದ ಸಂಗತಿಗಳನ್ನು ಕುರಿತು ಚರ್ಚಿಸುವುದು ಅಷ್ಟೇ ಅಲ್ಲ, ಬದಲಾಗಿ ಒಟ್ಟು ಕನ್ನಡಿಗರ ಹಿತಚಿಂತನೆಗಳನ್ನು ಕುರಿತು ಚರ್ಚಿಸುವ ಒಂದು ವೇದಿಕೆ ಎಂಬ ನೆಲೆಯ ಮೇಲೆ ಈಗ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವಲ್ಲಿಗೆ ನಾವು ತಲುಪಿದ್ದೇವೆ.
ಕಳೆದವರ್ಷ ನಾನು ಅಧಿಕಾರ ಸ್ವೀಕಾರ ಮಾಡಿದ ಹೊಸ್ತಿಲಲ್ಲೇ ಚಿತ್ರದುರ್ಗದಲ್ಲಿ 75ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಾಡಬೇಕಾದ ಒಂದು ಅನಿವಾರ್ಯ ಸ್ಥಿತಿ ಬಂತು. ಕಳೆದ ಬಾರಿಯೂ ಅದೇ ರಿತಿಯ ಒಂದು ಬದಲಾವಣೆಗಳನ್ನು ನಾನು ಮಾಡಿಕೊಂಡಿದ್ದೆ. ಈ ಬಾರಿ ಕೂಡ ಅದೇ ರೀತಿಯಾದಂತಹ, ಒಂದಷ್ಟು ಹೆಚ್ಚು ಜನರನ್ನು ತಲುಪುವ ನೆಲೆಯೊಳಗೆ ಕೆಲವು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಎಲ್ಲಾ ಜನರಿಗೂ ಬೇಕಾಗಿರುವಂತಹ ನುಡಿ, ಭಾಷೆ, ಚಿಂತನೆಗಳಿಗೆ ಸಂಬಂಧಿಸಿದಂತಹ ಸಾಹಿತ್ಯದ ಸ್ವರೂಪ, ಅದರ ಬದಲಾವಣೆ, ಬೆಳವಣಿಗೆಗಳನ್ನು ಕುರಿತಾದಂತಹ ವಿಚಾರಗಳು ಆಗಿದೆ. ಅದರ ಜೊತೆಗೆ ನಾಡಿನ ಜನರ ಸಮಸ್ಯೆಗಳಾದಂತಹ ಹಲವು ಸಂಗತಿಗಳನ್ನು ಅಲ್ಲಿ ಪ್ರಸ್ತಾಪ ಮಾಡಿದ್ದೇವೆ. ಅದರಲ್ಲಿ ಮುಖ್ಯವಾದಂತಹದ್ದು ಅಂತ ನಾನು ಭಾವಿಸಿಕೊಂಡಂತದ್ದು, ಬೇಸಾಯ ಮತ್ತು ಬದುಕು. ಪ್ರಸ್ತುತ ಸಂದರ್ಭದಲ್ಲಿ ರೈತನ ಬದುಕು ಒಂದು ಶೋಚನೀಯ ಸ್ಥಿತಿಯನ್ನು ತಲುಪಿದೆ ಆ ಎಲ್ಲಾ ಸಮಸ್ಯೆಗಳಿಗೆ, ಪರಿಷತ್ತು ಬಾಯಾಗಬೇಕಿದೆ. ಮೌನವಾಗಿ ಕುಳಿತುಕೊಳ್ಳುವಂತಹದ್ದು ನಾವು ಮಾಡುವಂತಹ ಅಪರಾಧ. ಯಾಕೆಂದರೆ, 'ಅನ್ನ ದೇವರುಗಳಿಗಿಂತ ಇನ್ನು ದೇವರುಗಳಿಲ್ಲ' ಅನ್ನೋ ಮಾತಾಗಲೀ 'ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು' ಅನ್ನೋ ಮಾತಾಗಲಿ ಈಗ ಹೆಚ್ಚು ಅರ್ಥಪೂರ್ಣವಾಗಿದೆ.
2. ಸಾರ್, ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ತಿರುವು ಪಡೆದುಕೊಂಡಿರುವ ಇಂತಹ ಸಾಹಿತ್ಯಿಕ ಜಾತ್ರೆಗಳು ಕಾಲ ಕಳೆದಂತೆ ವಿದ್ವಾಂಸರನ್ನು ಆಕರ್ಷಿಸುವುದರಲ್ಲಿ ಕಡಿಮೆಯಾಗಿ ರಾಜಕಾರಣಗಳನ್ನು ಅಪ್ಪಿಕೊಳುತ್ತಿದೆ ಎಂಬ ಪುಕಾರು ಕಾಲದಿಂದ ಇರುವುದರ ಬಗ್ಗೆ ತಾವು ಏನೆನ್ನುತ್ತೀರಿ. ಮತ್ತು ಈ ಪುಕಾರಿಗೆ ಈ ವರ್ಷದ ಸಮ್ಮೇಳನ ಹೇಗೆ ಉತ್ತರಿಸುತ್ತದೆ?
- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಬರುವ ಮುನ್ನ, ಹಾಗು ಬಂದ ನಂತರದಲ್ಲಿ ಒಳಗೆ ಕುಳಿತು ವಿವರಗಳನ್ನು ತಿಳಿದು ನಾನು ಕೆಲವು ನಿಲುವನ್ನು ತಾಳಿದ್ದೇನೆ. ಪರಿಷತ್ತಿನ ಹಾಗು ನಾಡು-ನುಡಿಯ ಬೆಳವಣಿಗೆಯ ದೃಷ್ಟಿಯಿಂದ ಯಾವುದನ್ನೂ ನಾನು ನಿರಾಕರಿಸಿರಲಿಲ್ಲ. ರಾಜಕಾರಣವನ್ನೂ, ಧರ್ಮವನ್ನೂ, ಎಲ್ಲವನ್ನೂ ನಿರಾಕರಿಸಿದ್ದಲ್ಲ. ಆದರೆ ಸಕಾರಾತ್ಮಕವಾಗಿ ಬಂದರೆ ಮಾತ್ರ ಧರ್ಮ, ರಾಜಕೀಯ ಇತ್ಯಾದಿ ಯಾವುದೇ ವಿಚಾರವನ್ನು ಸ್ವೀಕರಿಸುತ್ತೇನೆ, ನಕಾರಾತ್ಮಕವಾದ ರೀತಿಯಲ್ಲಿ ಬಂದರೆ ನಾನು ಸ್ವೀಕರಿಸುವುದಿಲ್ಲ, ಬದಲಾಗಿ ಅದರಿಂದ ದೂರ ಇರುತ್ತೇನೆ. ಆದ್ದರಿಂದ ನಾನು ಬಹಳ ಬಾರಿ ಹೇಳಿದ್ದೇನೆ, ಗಾಂಧೀಗಿಂತ ದೊಡ್ಡ ರಾಜಕಾರಣಿ, ಗುರು ಯಾರು? ಅವರಿಗಿಂತ ಜನಪರವಾಗಿ ಸಮಾಜಕ್ಕೆಂದು ಚಿಂತೆ ಮಾಡಿದ ದೊಡ್ದವರಾರು? ಹಾಗಾಗಿ ನಾವು ಆ ನಿಟ್ಟಿನಲ್ಲಿ ಎಲ್ಲವನ್ನೂ ಕನ್ನಡ ಸಾಹಿತ್ಯಕ್ಕೆ ಬಳಸಿಕೊಳ್ಳುತ್ತಿದ್ದೇವೆ. ರಾಜಕಾರಣವನ್ನು ನಾನು ಹೇಗೆ ಬಳಕೆ ಮಾಡಿಕೊಳ್ಳುತ್ತೇನೆ ಅಂದರೆ, ಒಂದು ಇನ್ಫ್ರಾಸ್ಟ್ರಕ್ಚರ್ಗೆ-ಸಂಪನ್ಮೂಲ ಕ್ರೋಢೀಕರಣಕ್ಕೆ. ಸಮ್ಮೇಳನದಂತಹ ಬೃಹತ್ ವ್ಯವಸ್ಥೆಯನ್ನು ಮಾಡೊ ಸಂದರ್ಭದಲ್ಲಿ ಅದರ ಅಗತ್ಯವೂ ಇದೆ ನಮಗೆ. ಅದು ಬಿಟ್ಟರೆ ನಾನು ಗೋಷ್ಠಿಯಲ್ಲಿ ಬೇರೊಂದು ಕಡೆ ಎಲ್ಲಿಯೂ ಕೂಡ ಅವರನ್ನು ಬಳಕೆ ಮಾಡಿಕೊಂಡಿಲ್ಲ ಅನ್ನೋದನ್ನು ತಾವು ಗಮನಿಸಬಹುದು.
3. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ- ಇಂದಿನ ಪರಿಸ್ಥಿತಿ ಏನು, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಸಂಬಂಧಪಟ್ಟಂತೆ ಬಂದ ಸಂಗತಿಯ ಸಂದರ್ಭದೊಳಗಡೆ ನಾನು ಹೇಳಿದಂತಹ ಸಂಗತಿಯೊಳಗಡೆ, ಇಲ್ಲಿ ಹತ್ತಾರು ಪಕ್ಷಗಳು ಇರಬಹುದು, ನೂರಾರು ರಾಜಕಾರಣಿಗಳಿರಬಹುದು, ಆದರೆ ನೀವು ರಾಜಕಾರಣವನ್ನು ಮರೆತು, ಪಕ್ಷವನ್ನು ಮರೆತು ಇಲ್ಲಿ ಕನ್ನಡದ ವಿಚಾರಕ್ಕಷ್ಟೇ ನೀವು ತೊಡಗಿಸಿಕೊಳ್ಳತಕ್ಕಂತಹ ಅನಿವಾರ್ಯತೆಯನ್ನು ಗಮನಿಸಿ ಈ ಮಾತನ್ನು ಹೇಳಿದ್ದೇನೆ. ಶಾಸ್ತ್ರೀಯ ಭಾಷೆ ಬರುವುದಕ್ಕಿಂತ ಮುಂಚೆ ನಡೆದ ಒಂದು ಹೋರಾಟದ ಸಂದರ್ಭದೊಳಗೆ ಇದನ್ನು ಪ್ರಸ್ತಾಪ ಮಾಡಿದ್ದೆ. ಎಲ್ಲಾ ಪಕ್ಷದವರಿಗೂ ಈ ಮಾತನ್ನು ಹೇಳಿದ್ದೆ. ಇವತ್ತೂ ಕೂಡ ನಾನು ಆ ಮಾತನ್ನು ಹೇಳುತ್ತಿದ್ದೀನಿ. ಇತ್ತೀಚೆಗೆ ನಡೆದ ಮಡಿಕೇರಿ ಸಾಹಿತ್ಯ ಸಮ್ಮೇಳನದೊಳಗೆ ಕೂಡ ಈ ಮಾತನ್ನು ಹೇಳಿದೆ. ಅನ್ಯ ರಾಜ್ಯದವರು ರಾಜಕಾರಣ ಮಾಡುವ ಸಂದರ್ಭದಲ್ಲಷ್ಟೇ ಪಕ್ಷದ ಬಗ್ಗೆ ಮಾತನಾಡುತ್ತಾರೆ.
4. ಈಗ ಕನ್ನಡ ಹಾಗು ಶಾಸ್ತ್ರೀಯ ಸ್ಥಾನಮಾನ ವಿಷಯದ ಚರ್ಚೆ ನಾವು ಮಾಡುತ್ತಿರುವುದರಿಂದ ಇನ್ನೊಂದು ಬಹಳ ಮುಖ್ಯವಾಗಿ ಚರ್ಚಿಸಬೇಕು ಅಂತ ಅನ್ನಿಸುತ್ತದೆ. ಕಳೆದ 2-3 ವರ್ಷಗಳಲ್ಲಿ ಬಹಳ ಚರ್ಚಿತವಾದಂತಹ ಸಂಗತಿ ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಭಾಷಾ ಕಲಿಕೆ. ಈ ಸಮ್ಮೇಳನದ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯವೇನು?
ಒಂದು ನಿಲುವನ್ನು ನಾವು ಗಟ್ಟಿಯಾಗಿ ತಿಳಿದುಕೊಳ್ಳಬೇಕು. ಭಾಷಾ ನೀತಿ ಏನಿದೆ, ಅದು ಪ್ರಾಥಮಿಕ ಹಂತದ ಒಳಗಡೆ ದೇಶಭಾಷೆಯಲ್ಲೇ ಕಲಿಸಬೇಕು. ನಾನು ಇಲ್ಲಿ ಮಾತೃಭಾಷೆಯನ್ನು ದೇಶಭಾಷೆಯೆಂದೇ ಕರೆಯುತ್ತೇನೆ. ಯಾಕೆಂದರೆ, ಮಾತೃಭಾಷೆ ಎಂದ ತಕ್ಷಣ ಅದರಲ್ಲಿ ಅಪಾಯ ಏನಿದೆ ಅಂದರೆ, ಒಬ್ಬನಿಗೆ ತನ್ನ ಮಾತೃಭಾಷೆ ತಮಿಳು ಆಗಿದ್ದು - 'ಈಗ ಬೆಂಗಳೂರಿನಲ್ಲಿದ್ದೇನೆ, ಆದರೂ ನಾನು ನನ್ನ ಮಾತೃಭಾಷೆ ತಮಿಳಲ್ಲಿ ಕಲಿಯುತ್ತೀನಿ' ಅನ್ನುವುದು ತಪ್ಪು. ಯಾವ ದೇಶದಲ್ಲಿ ಅಥವಾ ಯಾವ ರಾಜ್ಯದಲ್ಲಿ ನಾವು ವಾಸ ಮಾಡುತ್ತಿದ್ದೇವೆಯೋ ಆ ನೆಲದ ಭಾಷೆ ನಮ್ಮ ಭಾಷೆಯಾಗಬೇಕಾಗಿದೆ . ಈ ಹಿನ್ನೆಲೆಯೊಳಗೆ ನಮಗೆ ಪ್ರಾಥಮಿಕ ಹಂತದೊಳಗಡೆ, ದೇಶಭಾಷೆಯನ್ನು ಕಲಿಸಬೇಕಾದಂತಹ ಅನಿವಾರ್ಯವಾಗಿಬಿಟ್ಟಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನಾನು, ಅನಂತಮೂರ್ತಿಯವರು, ಪಂಡಿತಾರಾಧ್ಯ ಮುಂತಾದವರೆಲ್ಲಾ ಸೇರಿ ಒಂದು ಕೇಸ್ ಹಾಕಿದ್ದೀವಿ. ಇದರಲ್ಲಿ ಪ್ರಾಥಮಿಕ ಹಂತದೊಳಗೆ ಕನ್ನಡಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಅನ್ನೊ ವಿಚಾರವನ್ನೂ ಕೂಡ ಪ್ರಸ್ತಾಪ ಮಾಡಿದ್ದೇವೆ.
5. ಧರ್ಮದ ಬಗ್ಗೆ ಹಾಗು ರಾಜಕಾರಣದ ಬಗ್ಗೆ ಮಾತನಾಡಿದ್ದೀವಿ, ಇಂಥ ಒಂದು ಸಂದರ್ಭಗಳಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಪಾಲ್ಗೊಳ್ಳುವ ಕಾರಣ ಧರ್ಮರಾಜಕಾರಣ ತನ್ನ ಹಿತಾಸಕ್ತಿಯಲ್ಲಿ ಕೆಲಸ ಮಾಡುವುದರ ಬಗ್ಗೆ ಏನು ಹೇಳುತ್ತೀರ?
ಸಾಹಿತ್ಯ ಸಮ್ಮೇಳನದಲ್ಲಿ ಆ ರೀತಿಯಾದಂತವುಗಳಿಗೆ ಅವಕಾಶವಿಲ್ಲ. ಧರ್ಮ ಮತ್ತು ರಾಜಕಾರಣ ಅದು ಸಾಹಿತ್ಯವಾಗಿ ಬಂದರೆ ಮಾತ್ರ ಸ್ವಾಗತ. ಅದು ಬಿಟ್ಟು ಅದು ತನ್ನ ಐಡೆಂಟಿಟಿಯನ್ನು ಉಳಿಸಿಕೊಂಡು ಇಲ್ಲಿಗೆ ಬಂದರೆ ಅದಕ್ಕೆ ಇಲ್ಲಿ ಜಾಗವಿಲ್ಲ. ಇದಕ್ಕೆ ಅದು ತನ್ನನ್ನ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಸ್ಥಿತಿಯೊಳಗೆ ಬಂದರೆ ಮಾತ್ರ ಸ್ವಾಗತ.
6. ಇದು ರೈತಪರ ಸಮ್ಮೇಳನ ಎಂದು ಹೇಳಿದಿರಿ. ಆದರೆ ಮಠಮಾನ್ಯಗಳಿಗೆ ರೈತರ ಹಸಿವಿನ ಬಗೆಗೆ, ಬವಣೆಯ ಬಗೆಗೆ ಮಾತನಾಡುವ ಅಭ್ಯಾಸವಿಲ್ಲ, ಸರ್ಕಾರ ಕೂಡ ಎಷ್ಟೋ ಕಾಲ ರೈತರ ಹಸಿವಿನ ಬಗ್ಗೆ ಮಾತನಾಡುವುದಿಲ್ಲ. ಒಮ್ಮೆ ಹಸಿವನ್ನು ಕುರಿತು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹೇಳಿ ನಂತರ ಕಾರ್ಯಕ್ರಮಗಳಲ್ಲಿ ಅದು ಕಾಣೆಯಾಗುವಂತಹ ಬಹಳ ಉದಾಹರಣೆಗಳು ಇಂದು ಕಾಣುತ್ತಿದೆ. ಹಾಗಾಗಿ ಹೆಚ್ಚಿನ ಮಟ್ಟಿಗೆ ಧರ್ಮ ಹಾಗು ರಾಜಕಾರಣಗಳು ತಮ್ಮನ್ನು ವೈಭವೀಕರಿಸಿಕೊಳ್ಳೋದಿಕ್ಕೆ ಇಂತಹ ಜಾಗಳನ್ನೂ ಆಕ್ರಮಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯದ ಬಗ್ಗೆ ನೀವು ಏನು ಹೇಳುತ್ತೀರಿ?
ಅಂಥಾ ಆಲೋಚನೆಗಳಿಗೆ ಇಲ್ಲಿ ಎಡೆ ಇಲ್ಲ. ಇದನ್ನು ಅತ್ಯಂತ ಸ್ಪಷ್ಟವಾಗಿ ನಾನು ನಿಮಗೆ ಹೇಳುತ್ತಿದ್ದೇನೆ. ಭವಿಷ್ಯತ್ತಿನ ಒಟ್ಟು ಆಶಯಗಳಿಗೆ ಅವರು ಧ್ವನಿಯಾಗಿ ಅವರು ಬರಬೇಕೆ ವಿನಹ ಅವರದ್ದೇ ಆದಂತಹ ಧ್ವನಿ ಅಲ್ಲಿ ಇರುವುದಿಲ್ಲ. ರೈತರ ವಿಚಾರ ಇರಬಹುದು, ಹೋರಾಟದ ವಿಚಾರ ಇರಬಹುದು, ಜನಸಾಮಾನ್ಯರ ವಿಚಾರ ಇರಬಹುದು, ಭಾಷೆಯ ವಿಚಾರ ಇರಬಹುದು, ಇದು ಬಹುಜನರಿಗೆ ಅನುಕೂಲ ಆಗುವಂತಹದ್ದು. ಆನಸಾಮಾನ್ಯರಿಗೆ ಅನುಕೂಲ ಆಗುವಂತಹ ನೆಲೆಯೊಳಗೆ ಆಲೋಚನೆ ಮಾಡುವವರು ಬರಬೇಕೆ ವಿನಹ ಅದನ್ನು ಬಿಟ್ಟು ನಾವು ಮಾತನಾಡುತ್ತೇವೆ ಅನ್ನುವವರು ಸಾಧ್ಯ ಇಲ್ಲ. ಪರಿಷತ್ತು ಇಲ್ಲಿರುವಂತಹ ಕವಿಗೋಷ್ಠಿ ಮುಂತಾದವುಗಳಿಗೂ ಒಂದು ಸ್ವರೂಪಗಳನ್ನು ಕೊಟ್ಟಿರುವಂತಹುದು ಪರಿಷತ್ತೇ ವಿನಹ ಬೇರೆ ಯಾರನ್ನೂ ಕೂಡ ಇಲ್ಲಿ ಪ್ರವೇಶ ಮಾಡುವುದಕ್ಕೆ ನಾನು ಬಿಡುವುದಿಲ್ಲ.
7. ಹೊಸ ತಂತ್ರಜ್ಞಾನ ಇಂದು ದಾಪುಗಾಲು ಇಡುತ್ತಿರುವಂತಹ ಒಂದು ಸಂದರ್ಭದಲ್ಲಿ, ಈ ನಿಟ್ಟಿನಲ್ಲಿ ಪರಿಷತ್ತಿನಿಂದ ಒಂದು ಹೊಸ ವೆಬ್ಸೈಟ್ ತಯಾರಾಗುತ್ತಿದೆ ಎಂಬ - ನೀವು ಹೇಳಿದ ವಿವರದ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ.
ಈ ವಿಚಾರಗೋಷ್ಠಿಯಲ್ಲೂ ಕೂಡ ಒಂದು ವಿಷಯ ಇದೆ, 'ಈ ಜಗತ್ತಿನಲ್ಲಿ ಇ-ಕನ್ನಡ'. ವಾಸ್ತವವಾಗಿ ನಾನು ಆಧುನಿಕ ತಂತ್ರಜ್ಞಾನದ ತಿಳುವಳಿಕೆ ಇಲ್ಲದವನು. ಆದರೆ ಕನ್ನಡ ಭಾಷೆ ಆಧುನಿಕ ಜಗತ್ತಿನೊಳಗೆ ತನ್ನನ್ನು ತೆರೆದುಕೊಳ್ಳಬೇಕು ಅನ್ನುವ ಆಸೆ ಇಟ್ಟುಕೊಡಿರುವವ ನಾನು. ಪ್ರಪಂಚದಲ್ಲಿ ಇರುವಂತಹ ಹಲವು ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬೇಕಾದಂತಹದ್ದು ಕನ್ನಡ ಭಾಷೆ. ಹಳೇ ಕಾಲದ ಹಾಗೆ ಯೋಚನೆ ಮಾಡಿ, ಒಂದು ಸೀಮಿತವಾದಂತಹ ಸ್ವರೂಪದೊಳಗಡೆಯೇ ಪುಸ್ತಕ ಮುದ್ರಣ ಹಾಗು ವಿಮರ್ಶೆ ಮಾತ್ರಗಳು ಈಗ ಸಾಧ್ಯವಿಲ್ಲ. ಜಗತ್ತಿಗೆ ನಮ್ಮನ್ನು ತೆರೆದು ತೋರಿಸಬೇಕಾಗಿದೆ. ಇವತ್ತು ಇಲ್ಲಿ ಕುಳಿತು ಮಾತನಾಡುತ್ತಿರುವಂತಹದ್ದು, ಅಮೇರಿಕಾದ ಮೂಲೆಯಲ್ಲಿ ಹೇಳುತ್ತಿದ್ದೇನೆ ಅನ್ನೋದು ನನಗೆ ಬಹಳ ಸಂತೋಷ ಹಾಗು ಆಶ್ಚರ್ಯ ಕೂಡ ಹೌದು. ಈ ಆಸೆಗಳಿಂದ ನಾನು ಬಂದ ಕ್ಷಣದಿಂದಲೂ ಕೂಡ ಯೋಚನೆ ಮಾಡುತ್ತಾ ಇದ್ದೆ. ನನಗೆ ಅದರ ತಿಳುವಳಿಕೆ ಇಲ್ಲದ್ದಿದ್ದರೂ ಈ ದಿಕ್ಕಿನೊಳಗೆ ಪರಿಷತ್ತನ್ನು ನಡೆಸಬೇಕೆನ್ನುವಂತಹ ಯೋಚನೆ ನನಗಿದೆ.
8. ಈಗ ಸಮ್ಮೇಳನ ಗದಗದಲ್ಲಿ ನಡೆಯುತ್ತಿದೆ. ಗದಗದಲ್ಲಿ ನಡಿಯಬೇಕು ಅಂತ ಹಿಂದಿನ ಸಮ್ಮೇಳನದಲ್ಲಿ ತೀರ್ಮಾನ ಆಗಿರುತ್ತದೆ ಆದರೆ ಇವತ್ತಿನ ಪ್ರಸಂಗದಲ್ಲಿ ಉತ್ತರ ಕರ್ನಾಟಕ ದಲ್ಲಿ ನೆರೆ ಸಂತ್ರಸ್ತರು ಇರುವಾಗ, ಹಸಿವು ವಸತಿ ಸಮಸ್ಯೆಯಿಂದ ತತ್ತರಿಸಿರುವ ಸಾವಿರಾರು ಜನಗಳ ಎದುರು ಇತ್ತೀಚೆಗೆ ಕೋಟ್ಯಾಂತರ ಹಣ ಖರ್ಚು ಮಾಡಿ ಒಂದು ಹಬ್ಬ ಆಗಿದೆ. ಈಗ ಇನ್ನೊಂದು ಹಣದ ಖರ್ಚಿನ ಹಬ್ಬ. ಪರಿಷತ್ತಿನ ಸಮ್ಮೇಳನ ಇಂದು-ನಿನ್ನೆಯದಲ್ಲ. ಇದು ನಿರಂತರ ಆಗುತ್ತಿರಬೇಕೆಂಬುದು ಇಡೀ ಕನ್ನಡ ಜನತೆಯ ಆಶಯ ಆದರೂ ಕೂಡ ಸಂದರ್ಭದ ಹಿನ್ನೆಲೆಯಲ್ಲಿ ನಿಮ್ಮ ಆಲೋಚನೆಗಳು, ನಿಮ್ಮ ಉಪಾಯಗಳು ಏನಿವೆ?
ವಾಸ್ತವವಾಗಿ ನಾನು 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗದಗದಲ್ಲಿ ನಡೆಸಬೇಕೆಂದು ಚಿತ್ರದುರ್ಗ ಸಮ್ಮೇಳನ ಮುಗಿಸಿ ಬಂದ ನಂತರ ತೀರ್ಮಾನ ತೆಗೆದುಕೊಂಡೆವು. ಅದಕ್ಕಾಗಿ ಒಂದು ಪರಿಶೀಲನಾ ಸಮಿತಿಯನ್ನೂ ಕೂಡ ರಚಿಸಿದ್ದೆವು. ಚಂಪಾ ಅವರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿ ಅವರಿಗೆ ಯಾರು ಯಾರು ಸಮ್ಮೇಳನವನ್ನು ಕೇಳುತ್ತಿದ್ದಾರೆಂದು ನೋಡಿಕೊಂಡು ಬರಲು ಹೇಳಿದ್ದೆವು. ಸಮಿತಿ ಶಿಫಾರಸ್ಸು ಮಾಡಿತು ಮತ್ತು ಎಲ್ಲಾ ಕಾರ್ಯಕಾರಿ ಸಮಿತಿ ಒಪ್ಪಿಗೆ ಕೊಟ್ಟಿತು, ಹೀಗೆ ಗದಗದಲ್ಲಿ ಮಾಡಬೇಕೆಂಬ ತೀಮರ್ಾನವನ್ನು ಕೈಗೊಂಡಿದ್ದೆವು. ಸಾಹಿತ್ಯ ಸಮ್ಮೇಳನ ಯಾವಾಗ ಎಂದು ಬಹಳಷ್ಟು ಜನ ಕೇಳುತ್ತಿರುತ್ತಾರೆ. ಹಾಗಾಗಬಾರದು, ಕನ್ನಡ ಸಾಹಿತ್ಯ ಸಮ್ಮೆಳನ ನವೆಂಬರ್ ತಿಂಗಳ ಕಡೆಯ ವಾರದಲ್ಲಿ ನಡೆಯಬೇಕೆಂಬತಹ ನಿಯಮವನ್ನು ರೂಪಿಸಿದ್ದೇನೆ. ಆದರೆ ಪ್ರಕೃತಿ ವಿಕೋಪದ ಕಾರಣದಿಂದ ಆಗ ನಡೆಸಲಾಗಲಿಲ್ಲ. ಅಲ್ಲಿದ್ದ ಜನ ನೆರೆ ಹಾವಳಿಯಿಂದ ತತ್ತರಿಸಿ ಹೋದಾಗ ನಾನೇ ಖುದ್ದಾಗಿ ಅಲ್ಲಿಗೆ ಹೋಗಿ, ಈ ಸಂದರ್ಭದಲ್ಲಿ ಸಮ್ಮೇಳನ ಮಾಡುವುದು ಸೂಕ್ತವಲ್ಲ ಎಂಬ ನಿರ್ಣಯವನ್ನು ನಾನೇ ಕೈಗೊಂಡೆ. ಆನಂತರದಲ್ಲಿ ವಾತಾವರಣ ತಿಳಿಯಾದ ಕಾರಣ ಅಲ್ಲಿರುವಂತಹ ಜನಪ್ರತಿನಿಧಿಗಳು, ಸಾಹಿತಿಗಳು ಮತ್ತು ಆಸಕ್ತರೆಲ್ಲರೂ ಕೂಡ, ಈ ತಿಂಗಳಲ್ಲಿ ನಡೆಸೊಣ ಎಂದು ಹೇಳಿದಾಗ (ಫೆಬ್ರವರಿ 19,20,21ನೇ ತಾರೀಖಿನಂದು) ಇಡೀ ಜನ ನೊಂದು ನಿಂತಿರೊ ಸಂದರ್ಭದೊಳಗೆ ನಮ್ಮ ಸಂಭ್ರಮದ ಆಚರಣೆ ಸಲ್ಲದು ಅನ್ನುವುದೇ ನನ್ನ ಆಶಯ. ಹಾಗಾಗಿ ಅತೀ ಅದ್ದೂರಿಯ ವಾತಾವರಣದಲ್ಲಿ ಸಮ್ಮೇಳನ ಇರಬಾರದು ಅನ್ನುವುದನ್ನು ಅಲ್ಲಿಯ ಸ್ವಾಗತ ಸಮಿತಿಗೆ ಮತ್ತು ಇಲ್ಲಿಯವರೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.
9. ಗೀತಾ ನಾಗಭೂಷಣ ಅವರು ಅಧ್ಯಕ್ಷರಾಗಿದ್ದಾರೆ. ಅವರ ಬಗ್ಗೆ ಒಂದೆರಡು ಮಾತು.
ನನಗಂತೂ ಗೀತಾ ನಾಗಭೂಷಣರ ಆಯ್ಕೆ ಬಗ್ಗೆ ಸಂಪೂರ್ಣ ತೃಪ್ತಿ, ಸಮಾಧಾನ ಮತ್ತು ಸಂತೋಷ ಇದೆ. ಎಲ್ಲಕ್ಕಿಂತ ಬಹುಮುಖ್ಯವಾಗಿ ನನಗನ್ನಿಸುವುದೇನೆಂದರೆ, ಅತ್ಯಂತ ಕೆಳವರ್ಗದಿಂದ ಬಂದಂತಹ ಒಬ್ಬ ಮಹಿಳೆ, ನೋವನ್ನೇ ಉಂಡು, ನೋವನ್ನೇ ಹಾಸಿ ಮಲಗಿಕೊಂಡು, ಆ ಎಲ್ಲಾ ತನ್ನ ಬದುಕಿನ ವಿಚಾರಗಳನ್ನು ಅಕ್ಷರ ರೂಪ ಕೊಟ್ಟು ಸಾಹಿತ್ಯ ಲೋಕದಲ್ಲಿ ಮೇಲೆದ್ದ ಸ್ವರೂಪ ಇದೆಯಲ್ಲಾ, ಅದು, ಮಣ್ಣೊಳಗೆ ಬೀಜ ನೆಟ್ಟು, ಅದು ಮೊಳೆತು, ಚಿಗುರಿ, ಮರವಾಗಿ ಹೂವಾಗಿ ಫಲಿತವಾಗುವಂತಹ ಪ್ರಕ್ರಿಯೆ ಇದೆಯಲ್ಲಾ, ಅಂತಹಾ ಒಂದು ಗಟ್ಟಿತನವನ್ನು ತೋರಿದಂತಹ ದಿಟ್ಟ ಮಹಿಳೆ ಆಕೆ. ಜೊತೆಗೆ ಸಾಹಿತ್ಯಲೋಕದಲ್ಲಿ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಪ್ರಶಸ್ತಿ, ಸಾಹಿತ್ಯ ಅಕ್ಯಾಡೆಮಿಯ ಪ್ರಶಸ್ತಿ, ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ, ಅದಕ್ಕಿಂತ ಹೆಚ್ಚಿನದು ಎಂದರೆ, ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಬಂಡಾಯದ ದನಿ ಅವರು. ಆ ಎಲ್ಲಾ ಹಿನ್ನೆಲೆಯನ್ನು ಗಮನಿಸಿ ಅವರನ್ನು ಈ ಬಾರಿಗೆ ಆಯ್ಕೆ ಮಾಡಿದ್ದೇವೆ. ಇಡೀ ನಾಡಿನ ಜನ ಕನ್ನಡ ಸಾಹಿತ್ಯ ಪರಿಷತ್ತನ್ನು ಹೊಗಳುತ್ತಿದ್ದಾರೆ ಒಳ್ಳೆ ಆಯ್ಕೆ ಎಂದು. ಯಾರನ್ನು ಕೇಳಿದರೂ ಇಂದು ಒಡಕು ಧ್ವನಿ ಬರಲಿಲ್ಲ ಅಂದರೆ ಪರಿಷತ್ತು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ ಇಡುತ್ತಿದೆ ಅನ್ನೊ ನಂಬಿಕೆ ನನಗೆ.
ಧನ್ಯವಾದಗಲು ಸಾರ್, ಸಮ್ಮೇಳನಕ್ಕೆ ನಮ್ಮ ಬಳಗ ಯಶಸ್ಸನ್ನು ಹಾರೈಸುತ್ತದೆ.



