ಕನ್ನಡ ಸಾಹಿತ್ಯ ಸವೆಸಿದ ಹಾದಿ..




ಕಲಿಗಣನಾಥ ಗುಡದೂರು - ವೃತ್ತಿಯಿಂದ ಮೇಷ್ಟ್ರು, ಪ್ರವೃತ್ತಿಯಿಂದ ಲೇಖಕ. ಉತ್ತರ ಕರ್ನಾಟಕದ ಇತ್ತೀಚಿನ ಸತ್ವಯುತ ಲೇಖಕರಲ್ಲೊಬ್ಬರು. ಅವರೂ ಸಹ ಕನ್ನಡ ಬ್ಲೋಗಲೋಕದ ಸಹಜೀವಿಗಳು. ಗುಡದೂರು ಎಂಬ ಬ್ಲೋಗಲೋಕದ ಊರು ಅವರದು. ಅವರು ಸಾಹಿತ್ಯ ಅಂದು - ಇಂದು ಎಂಬ ವಿಷಯವಾಗಿ ಚರ್ಚಿಸಿದ್ದಾರೆ. ಇಂದಿನ ಲೇಖಕರಾಗಿ ಅಂದಿನ ಸಾಹಿತ್ಯವನ್ನು, ಅವರು ಹೇಗೆ ನೋಡುತ್ತಾರೆ? ಇಂದು ಬರುತ್ತಿರುವ ಸಾಹಿತ್ಯದ ಕುರಿತು ಅವರ ಅಭಿಪ್ರಾಯವೇನು?


ಕನ್ನಡ ಸಾಹಿತ್ಯ ಸವೆಸಿದ ಹಾದಿ...

ಸಾಹಿತ್ಯ ಸೃಷ್ಟಿಯೇ ಅದ್ಭುತ. ಭಾವನಾ ಪ್ರಪಂಚದೊಂದಿಗೆ ಬೆಸೆದುಕೊಂಡಿರುವ ಸಾಹಿತ್ಯ ಮೂಡಿಸುತ್ತಿರುವ ಪರಿಣಾಮ ಅನನ್ಯ. ಭಾಷೆಯ ಪೂರ್ವದಲ್ಲಿ ಸಾಹಿತ್ಯ ರೂಪು ಪಡೆದಿರಬಹುದೆಂಬುದು ಸೋಜಿಗ. ಮೌನ, ಸಂಕೇತ ಮತ್ತು ಸಂಜ್ಞೆಗಳ ಮೂಲಕವೂ ಸಾಹಿತ್ಯ ಅರಳಿದೆ ಎಂಬುದನ್ನೂ ತಳ್ಳಿಹಾಕುವಂತಿಲ್ಲ. ಸಾಹಿತ್ಯದ ಉಳಿವಿಗೆ ಮತ್ತು ಬೆಳವಣಿಗೆಗೆ ಭಾಷೆ ಹೆಚ್ಚುಗಾರಿಕೆ ನೀಡಿದೆ ಎಂಬುದು ಸತ್ಯ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಇಂಡಿಯಾದಲ್ಲಷ್ಟೆ ಅಲ್ಲ; ವಿಶ್ವಮಟ್ಟದಲ್ಲೂ ವಿಶೇಷ ಮನ್ನಣೆ ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಶತಮಾನದಿಂದೀಚೆಗೆ ವಿವಿಧ ಪ್ರಾಕಾರಗಳಲ್ಲಿ ಕನ್ನಡ ಸಾಹಿತ್ಯ ಕ್ರಾಂತಿ ಸ್ವರೂಪ ತಾಳಿದೆ. ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕನ್ನಡ ಸಾಹಿತ್ಯ ದೇಶದಲ್ಲೆ ಮುಂಚೂಣಿ ಸ್ಥಾನದಲ್ಲಿದೆ. ಕುವೆಂಪು, ಬೇಂದ್ರೆ, ಕಾರಂತ, ತೀನಂಶ್ರೀ, ಬಿ.ಎಂ.ಶ್ರೀ, ಗೋವಿಂದ ಪೈ, ಡಿ.ವಿ.ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ, ರಂಗನಾಥ ದಿವಾಕರ, ಸಾಲಿ ರಾಮಚಂದ್ರರಾಯರು, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ವಿ.ಸೀತಾರಾಮಯ್ಯ, ಪು.ತಿ.ನರಸಿಂಹಾಚಾರ್ಯ, ಜಿ.ಪಿ.ರಾಜರತ್ನಂ, ಕೆ.ಶಂಕರಭಟ್ಟ, ವಿ.ಕೃ.ಗೋಕಾಕ, ರಂ.ಶ್ರೀ.ಮುಗುಳಿ, ಈಶ್ವರ ಸಣಕಲ್ಲ, ಕೆ.ಎಸ್.ನರಸಿಂಹಸ್ವಾಮಿ, ಡಿ.ಎಸ್.ಕರ್ಕಿ, ಗೋಪಾಲಕೃಷ್ಣ ಅಡಿಗ, ಚೆನ್ನವೀರ ಕಣವಿ, ಜಿ.ಎಸ್.ಶಿವರುದ್ರಪ್ಪ, ಚದುರಂಗ, ತ್ರಿವೇಣಿ, ಅನಂತಮೂರ್ತಿ, ಗಿರೀಶ್ ಕಾರ್ನಾಡ, ಚಂದ್ರಶೇಖರ ಕಂಬಾರ, ಶಾಂತರಸ, ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಚದುರಂಗ ಸೇರಿದಂತೆ ಹಲವು ಹಿರಿಯ ಲೇಖಕರು ತಮ್ಮ ಬರೆವಣಿಗೆ ಮೂಲಕ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಿಗೆ ಜೀವ ತುಂಬಿದ್ದಾರೆ.


ಕುವೆಂಪು ಕನ್ನಡದ ಮಟ್ಟಿಗೆ ಮಹಾನ್ ಶಕ್ತಿಶಾಲಿ ಲೇಖಕರು. ತಮ್ಮ ವಿಸ್ತೃತ ಬರೆವಣಿಗೆ ಮೂಲಕ ಕನ್ನಡ ಸಾಹಿತ್ಯದ ಕಂಪನ್ನು ವಿಶ್ವಮಟ್ಟಕ್ಕೂ ಹಬ್ಬಿಸಿದರು. ಶ್ರೀರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ಸೇರಿದಂತೆ ಅನೇಕ ಮಹಾನ್ ಕೃತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ವೈಚಾರಿಕತೆಯ ಪ್ರಭೆ ಹೊಮ್ಮಿಸಿದರು. ಅವರ ಕಥೆ, ಕಾದಂಬರಿಗಳಲ್ಲಿ ಚಿತ್ರಿತವಾದ ಮಲೆನಾಡಿನ ಚಿತ್ರಣಗಳು ಕೇವಲ ಅಲ್ಲಿನ ಜನ, ಜೀವನ ಚಿತ್ರಣ, ನಿರೂಪಣೆಯೆನಿಸದೆ ಇಡೀ ಜನಸಮುದಾಯ ಮತ್ತು ಪರಿಸರದ ಕಥೆಗಳಾಗಿ ರೂಪುತಳೆದಿರುವುದು ವಿಶೇಷ. ವೈಚಾರಿಕತೆ ಮತ್ತು ವಿಶ್ವ ಮಾನವ ಪ್ರಜ್ಞೆ ಬೆಳೆಸುವಲ್ಲಿ ಕುವೆಂಪು ತೋರಿದ ಆಸ್ಥೆ ಎಂದಿಗೂ ಮಾದರಿ. ಕೆ.ಎಸ್.ಎನ್. ಚಿತ್ರಿಸಿದ 'ಮೈಸೂರು ಮಲ್ಲಿಗೆ' ಕಾವ್ಯ ಕೇವಲ ದಾಂಪತ್ಯಗೀತವೆನಿಸದೆ ಮಾದರಿ ಕಾವ್ಯದ ಹೆಗ್ಗುರುತಾಗಿದೆ. ಮಲ್ಲಿಗೆ ಕಾವ್ಯದಲ್ಲಿ ನವುರಾದ ಪ್ರಣಯದ ರಸಾನುಭವಗಳಿವೆ. ಸಂಯಮ ಮತ್ತು ಸಹಜವಿನೋದ ಕಾವ್ಯಕ್ಕೆ ಶೃಂಗಾರ ಕಳೆ ತಂದಿವೆ. ಆಡುಮಾತಿನ ಸರಸ, ನಯ, ಲಯ, ಗೇಯತೆ ವ್ಯಕ್ತವಾಗಿವೆ. ಸಣ್ಣ ಸಂಗತಿಗಳಲ್ಲಿ ಸೌಂದರ್ಯದ ಶೋಧವಿದೆ. ಶಿವರಾಮ ಕಾರಂತ ನಡೆದಾಡುವ ವಿಶ್ವಕೋಶದಂತೆ ಭಾವಪ್ರಪಂಚಕ್ಕೆ ವೈಜ್ಞಾನಿಕ, ವೈಚಾರಿಕೆ ಸ್ವರೂಪ ನೀಡಿದರು. ಬೇಂದ್ರೆ ಸರಳ ಸುಂದರ ಕಾವ್ಯಕ್ಕೆ ಆಧ್ಯಾತ್ಮ ಮತ್ತು ಗೇಯತೆಯ ಬಣ್ಣ ತೊಡಿಸಿದರು. ನೂರಾರು ಕಥೆಗಳನ್ನು ಬರೆದ ಮಾಸ್ತಿ ಕನ್ನಡ ಕಥಾ ಪರಂಪರೆಯ ಹಂದರ ವಿಸ್ತರಿಸಿದರು.


ಪ್ರಗತಿಶೀಲ, ನವ್ಯ, ನವ್ಯೋತ್ತರ, ನವೋದಯ, ದಲಿತ, ಬಂಡಾಯ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳು ವಿಶೇಷ ಕೆಚ್ಚು, ಹೆಚ್ಚುಗಾರಿಕೆ ಮೈಗೂಡಿಸಿಕೊಂಡವು. ಸಿದ್ಧಮಾದರಿಯಿಂದ ದೂರ ಸರಿದು ಕನ್ನಡ ಸಾಹಿತ್ಯದ ಲಯ, ಗತಿಯನ್ನೇ ಬದಲಿಸಿದ ಕೀರ್ತಿ ದಲಿತ, ಬಂಡಾಯಕ್ಕೆ ಸಲ್ಲುತ್ತದೆ. ಚೆನ್ನಣ್ಣ ವಾಲೀಕಾರ, ಬರಗೂರ ರಾಮಚಂದ್ರಪ್ಪ, ದೇವನೂರು ಮಹಾದೇವ, ಕೃಷ್ಣ ಆಲನಹಳ್ಳಿ, ಗೀತಾ ನಾಗಭೂಷಣ, ವೀಣಾ ಶಾಂತೇಶ್ವರ, ವೈದೇಹಿ, ಕುಂ.ವೀರಭದ್ರಪ್ಪ, ಚಂದ್ರಶೇಖರ ಪಾಟೀಲ್, ಡಾ.ಸಿದ್ದಲಿಂಗಯ್ಯ, ಸತ್ಯಾನಂದ ಪಾತ್ರೋಟ, ಮೂಡ್ನಾಕೂಡು ಚಿನ್ನಾಸ್ವಾಮಿ, ಜಂಬಣ್ಣ ಅಮರಚಿಂತ, ಕಾ.ತ.ಚಿಕ್ಕಣ್ಣ, ಕೃಷ್ಣಮೂರ್ತಿ ಹನೂರು, ಸವಿತಾ ನಾಗಭೂಷಣ, ರಾಜಶೇಖರ ನೀರಮಾನ್ವಿ, ವೀರಭದ್ರ, ಚಿತ್ರಶೇಖರ ಕಂಠಿ, ಡಾ.ಎಲ್.ಬಸವರಾಜು ಎರಡನೇ ಹಂತದ ಸಾಹಿತ್ಯ ಘಟ್ಟದಲ್ಲಿ ಬಲು ಉತ್ಸಾಹದಿಂದ ಬರೆದು ಕನ್ನಡ ಸಾಹಿತ್ಯಕ್ಕೆ ಹೊಸ ಚೈತನ್ಯ ನೀಡಿದ್ದಾರೆ. 1970-80ರ ಕಾಲಘಟ್ಟವನ್ನು ಚಳವಳಿಗಳ ಕಾಲಘಟ್ಟವೆಂದು ಗುರುತಿಸಲಾಗುತ್ತದೆ. ಚಳವಳಿಗಳ ದೆಸೆಯಿಂದಲೆ ಅಂದು ಹುಟ್ಟಿದ ಸಾಹಿತ್ಯಕ್ಕೆ ಬಹು ಮೌಲ್ಯ ಪ್ರಾಪ್ತವಾಯಿತು. ಸದ್ಯ ಬರೆಯುತ್ತಿರುವ ಲೇಖಕರ ಸುತ್ತ ಯಾವುದೇ ಚಳವಳಿಗಳಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈಗ ದಲಿತ, ಬಂಡಾಯ, ಮಹಿಳಾ ಮತ್ತು ಮುಸ್ಲೀಂ ಸಂವೇದನೆಗಳ ನಂತರ ಹೊಸತನದೊಂದಿಗೆ ಸಾಹಿತ್ಯ ರಚನೆ ನಡೆದಿದೆ. ಚಳವಳಿಗಳ ಸ್ವರೂಪ ಢಾಳಾಗಿ ಗೋಚರಿಸದಿದ್ದರೂ ನಿತ್ಯವೂ ಒಂದಿಲ್ಲೊಂದು ಸಂಕಷ್ಟ, ನೋವಿಗೆ ಎದುರುಗೊಳ್ಳುವ ಬದುಕು ಇಂದಿನದಾಗಿದೆ.


ಚಳವಳಿಗಳ ಕಾಲಘಟ್ಟಕ್ಕಿಂತಲೂ ಇಂದು ಜನತೆಯ ಬದುಕು ರಾಜ್ಯ, ದೇಶಗಳನ್ನೂ ಮೀರಿ ತೀರಾ ಶೋಚನೀಯ ಸ್ಥಿತಿ ತಲುಪಿದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ವಿಶೇಷ ಆರ್ಥಿಕ ವಲಯ ಬದುಕಿನ ಲಯ ಮತ್ತು ಗತಿಯನ್ನೇ ಬದಲಿಸಿ, ಮನುಷ್ಯನ ಭಾವನೆಗಳ ಮೇಲೆಯೇ ಸವಾರಿ ನಡೆಸಿವೆ. ಆಧುನಿಕತೆಯ ಹೆಸರಲ್ಲಿ ಬದುಕು ಬರಡಾಗುತ್ತಿದೆ. ಸದ್ಯದ ತೀರಾ ಸಂಕಷ್ಟದ ಕಾಲಘಟ್ಟವೇ ಬರೆಹಗಾರರಿಗೆ ಹೇಳಿಮಾಡಿಸಿದ ಕಾಲಘಟ್ಟವಾಗಿದೆ. ಇಂದು ಪ್ರತಿ ಲೇಖಕ ಹೆಚ್ಚು ಜವಾಬ್ದಾರಿಯಿಂದ ಜನರ ಸಂಕಷ್ಟಗಳ ಪರಿಹಾರಕ್ಕೆ ಅಕ್ಷರ ರೂಪದ ಹೋರಾಟ ನಡೆಸಬೇಕಿದೆ. ಸಾಹಿತ್ಯ ರಚನೆಗೆ ಚಳವಳಿಗಳು ಹೊಸ ದಿಕ್ಕು ದೆಸೆ ತೋರಿಸುತ್ತವೆಯೆನ್ನುವುದೂ ನಿಜ. ಪ್ರಜಾಪ್ರಭುತ್ವ ವ್ಯವಸ್ಥೆ ಕಳೆದ ಅರವತ್ತು ವರ್ಷಗಳಲ್ಲಿ ಜನಸಾಮಾನ್ಯರ ಪಾಲಿಗೆ ಬರೀ ನಿರಾಶೆಯ ಮೂಟೆಯನ್ನೇ ಹೊತ್ತು ತಂದಿದೆ. ರಾಜಕಾರಣಿಗಳು, ಅಧಿಕಾರಿವರ್ಗ, ಪ್ರಭಾವಿಗಳು, ಬಂಡವಾಳಶಾಹಿಗಳ ಹಿಡಿತದಲ್ಲಿ ದೇಶ ಮತ್ತು ರಾಜ್ಯಗಳ ಆಡಳಿತ ವ್ಯವಸ್ಥೆಗಳು ನರಳುತ್ತಿವೆ. ಎಸ್ಇಝಡ್ ಹೆಸರಲ್ಲಿ ದೇಶದ ಬೆನ್ನೆಲುಬಾದ ರೈತರಿಂದ ಸಹಸ್ರಾರು ಎಕರೆ ಜಮೀನನ್ನು ಸರ್ಕಾರವೇ ಭೂಸ್ವಾಧೀನಮಾಡಿಕೊಂಡು ಪುಡಿಗಾಸಿನ ತೆರಿಗೆ ಆಸೆಗೆ ಎಂ.ಎನ್.ಸಿ.ಗಳಿಗೆ ಮಾರಾಟ ಮಾಡುವ ಕುತಂತ್ರ ನಡೆಸುತ್ತಿದೆ. ರೈತರ, ಕಾರ್ಮಿಕರ, ಕೂಲಿಗಳ, ದುಡಿಯುವ ವರ್ಗ ಒಂದಿಲ್ಲೊಂದು ಕಾರಣಕ್ಕೆ ದಿನದ ಬಹುತೇಕ ಅವಧಿ ತಮ್ಮ ಹಕ್ಕುಗಳ ರಕ್ಷಣೆಗೆ ಮತ್ತು ಸಂವಿಧಾನಬದ್ಧ ಸೌಲಭ್ಯಗಳನ್ನು ಪಡೆಯಲು ಬೀದಿಗಿಳಿದು ಹೋರಾಟ ನಡೆಸಬೇಕಾದ ಸಂದರ್ಭ ಒದಗಿರುವುದು ಇದು ಕೇವಲ ಆರ್ಥಿಕ, ಸಾಮಾಜಿಕ ಸಮಸ್ಯೆಯೆಂದು ಸಾಹಿತ್ಯ ವಲಯ ಕೈಕಟ್ಟಿಕೂಡುವಂತಿಲ್ಲ. ಇದೇ ನೈಜ ಚಳವಳಿಗಳು ದೇಶದೆಲ್ಲೆಡೆ ವಿವಿಧ ಸ್ವರೂಪಗಳಲ್ಲಿ ನಡೆಯುತ್ತಿರುವ ಕಾಲಘಟ್ಟವಿದು. ಹಾಗಾಗಿ ಸದ್ಯ ಬರೆಯುವ ಲೇಖಕರಿಗೆ ವಿಫುಲ ವಿಷಯಗಳು ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ರೂಪು ತಳೆಯಲು ಕಾತರದಿಂದ ಕಾಯುತ್ತಿವೆ.


ಕಥೆ, ಕಾವ್ಯ, ಕಾದಂಬರಿ, ನಾಟಕ, ಹನಿಗವನ, ಪ್ರವಾಸಕಥನ, ಪ್ರಬಂಧ, ಲೇಖನವೆಂಬ ಪ್ರಾಕಾರಗಳಲ್ಲೆ ರಚನೆಯಾಗುತ್ತಿದ್ದ ಸಾಹಿತ್ಯದ ಸ್ವರೂಪ ಆಧುನಿಕತೆಯೊಂದಿಗೆ ಹೊಸ ಮಜಲು ಪಡೆಯುತ್ತಿದೆ. ಆತ್ಮಕಥೆಯ ರೂಪದ ಚಿತ್ರಣಗಳು, ಸಣ್ಣ ಸಣ್ಣ ಸಂಗತಿಗಳು, ತೀರಾ ನಿರ್ಲಕ್ಷ್ಯಕ್ಕೊಳಗಾದ ವ್ಯಕ್ತಿಗಳ ಚಿತ್ರಣಗಳು, ಇತಿಹಾಸದ ಪುನವಿಮರ್ಶೆ, ಮರುನಿರೂಪಣೆ, ಕಥೆಯೂ ಅಲ್ಲದ ಕಾವ್ಯವೂ ಅಲ್ಲದ ತೀರಾ ಗೇಯತೆಯೊಂದಿಗೆ ಬರೆಯುವ ಆಪ್ತ ಬರೆಹಗಳು ಇತ್ತೀಚೆಗೆ ಹೆಚ್ಚು ಇಷ್ಟವಾಗುತ್ತಿವೆ. ಉಳಿದೆಲ್ಲಾ ಸಾಹಿತ್ಯ ಪ್ರಾಕಾರಗಳಿಗಿಂತ ಹೆಚ್ಚು ಚರ್ಚಿತವಾಗುವ ಓದಿಸಲ್ಪಡುವ ಸಾಹಿತ್ಯ ಪ್ರಾಕಾರವಾಗಿ ಕಥಾ ಸಾಹಿತ್ಯ ಹಿರಿಮೆ ಹೊಂದಿದೆ. ಸದ್ಯ ಬರೆಯುತ್ತಿರುವ ನೂರಾರು ಲೇಖಕರ ಪಾಲಿಗೆ, ಹಿರಿಯರು ಭಾವಿಸುವ ಹಾಗೆ, ಕನ್ನಡ ಸಾಹಿತ್ಯದಲ್ಲಿ ಈಗ ಶೂನ್ಯ ಆವರಿಸಿಲ್ಲ. ನಿತ್ಯವೂ ಹೊಸ ಕಲ್ಪನೆಗಳೊಂದಿಗೆ ಇದುವರೆಗೆ ಚಿತ್ರಿತವಾಗದ ಮತ್ತೊಂದು ಹೊಸ ಭಾವನಾ ಪ್ರಪಂಚ ನಮ್ಮ ಮುಂದೆ ಮೈದೆಳೆಯುತ್ತಿದೆ. ಸದ್ಯ ಬರೆಯುತ್ತಿರುವ ಮೊಗಳ್ಳಿ ಗಣೇಶ, ಅಮರೇಶ ನುಗಡೋಣಿ, ಅಬ್ಬಾಸ್ ಮೇಲಿನಮನಿ, ವಿವೇಕ ಶಾನಭಾಗ, ನಟರಾಜ ಹುಳಿಯಾರ, ಬಾಳಾಸಾಹೇಬ್ ಲೋಕಾಪುರ, ಚನ್ನಪ್ಪ ಕಟ್ಟಿ, ಎನ್.ಕೆ.ಹನುಮಂತಯ್ಯ, ಚಂದ್ರು ತುರುವೀಹಾಳ, ಅರುಣ್ ಜೋಳದ ಕೂಡ್ಲಿಗಿ, ಆರೀಫ್ ರಾಜಾ, ಚಿದಾನಂದ ಸಾಲಿ, ಮಂಜುನಾಥ ಲತಾ, ವಿ.ಎಂ.ಮಂಜುನಾಥ, ವಿ.ಆರ್.ಕಾಪೆಂಟರ್, ಛಾಯಾ ಭಗವತಿ, ಜೋಗಿ, ಡಿ.ಎಸ್.ರಾಮಸ್ವಾಮಿ, ಎಂ.ಡಿ.ವಕ್ಕುಂದಾ, ಪ್ರಹ್ಲಾದ ಅಗಸನಕಟ್ಟೆ, ರಾಘವೇಂದ್ರ ಪಾಟೀಲ್, ಸಬಿಹಾ ಭೂಮಿಗೌಡ, ದೀಪಾ ಹಿರೇಗುತ್ತಿ, ವಿನಯಾ ವಕ್ಕುಂದಾ, ಮಲ್ಲಿಕಾಜರ್ುನಗೌಡ ತೂಲಹಳ್ಳಿ, ಮಹಾಂತೇಶ ನವಲಕಲ್, ಆನಂದ ಋಗ್ವೇದಿ, ಪೀರ್ಭಾಷಾ, ಟಿ.ಎಸ್.ಗೊರವರ್, ವೀರಣ್ಣ ಮಡಿವಾಳರ, ಚ.ಹ.ರಘುನಾಥ, ಸಂದೀಪ್ ನಾಯಕ, ವಸುಧೇಂದ್ರ, ದೇವು ಪತ್ತಾರ, ದಸ್ತಗೀರಸಾಬ್ ದಿನ್ನಿ, ಶಿವರಾಜ ಬೆಟ್ಟದೂರು, ವಿ.ಹರಿನಾಥ ಬಾಬು, ಜಹಾಂಗೀರ, ಕನ್ನಾಡಿಗ ನಾರಾಯಣ, ಕೆ.ಪಿ.ಸುರೇಶ, ಲಕ್ಷ್ಮಣ ಬಾದಾಮಿ, ಎಲ್.ಸಿ.ಸುಮಿತ್ರಾ, ನಾಗಣ್ಣ ಕಿಲಾರಿ, ನಾಗತಿಹಳ್ಳಿ ರಮೇಶ, ಸಜರ್ಾಶಂಕರ ಹರಳಿಮಠ, ಸಿದ್ದರಾಮ ಹೊನಕಲ್, ಸಿದ್ದು ಯಾಪಲಪವರ್ಿ ನಾಗರಾಜ ವಸ್ತಾರೆ, ನಾಗಮಂಗಲ ಕೃಷ್ಣಮೂತರ್ಿ, ರೂಪಾ ಹಾಸನ್, ಸುನಂದಾ ಪ್ರಕಾಶ ಕಡಮೆ, ವಿಜಯಕಾಂತ ಪಾಟೀಲ್, ಕಲ್ಲೇಶ ಕುಂಬಾರ, ವಿಶ್ವನಾಥ ಪಾಟೀಲ್, ವೀರೇಶ ಸೌದ್ರಿ ಹೀಗೇ ಲಿಸ್ಟ್ ಬೆಳೆಯುತ್ತಲೇ ಹೋಗುತ್ತದೆ. ಇವರು ಸೇರಿದಂತೆ ಇನ್ನೂ ಹಲವರು 21ನೇ ಶತಮಾನದ ಆರಂಭದಿಂದ ಇನ್ನಿಲ್ಲದ ಕಸುವಿನಿಂದ ಬರೆಯುತ್ತಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ಆಶಾದಾಯಕವೆನಿಸಿದೆ.


ಐತಿಹಾಸಿಕ ಹಾಗೂ ಸಾಹಿತ್ಯಿಕವಾಗಿಯೂ ಬಲು ಮುಖ್ಯವಾದ ಗದಗ ನಗರದಲ್ಲಿ ನಡೆಯಲಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ದಲಿತಪರ ಲೇಖಕಿ ಗೀತಾ ನಾಗಭೂಷಣ ಆಯ್ಕೆಯಾಗಿರುವುದು ಇಡೀ ನಾಡಿನ ಸಮಸ್ತ ದಲಿತ ಸಮುದಾಯಕ್ಕೆ ಸಂದ ಗೌರವವಾಗಿದೆ. ಹಿಂದಿನ ಸಮ್ಮೇಳನಗಳಲ್ಲಿ ಘೋಷಣೆಯಾದ ಅನೇಕ ಹಕ್ಕೊತ್ತಾಯಗಳು ಇಂದಿಗೂ ಜಾರಿಯಾಗದೇ ಇರುವಾಗ ಮತ್ತೊಂದು ಸಾಹಿತ್ಯ ಸಮ್ಮೇಳನ ಫೆ.28ರಂದು ಎದುರಾಗಲಿದೆ. ಸಾಹಿತ್ಯ ಸಮ್ಮೇಳನವೆಂಬುದು ರಾಷ್ಟ್ರೀಯ ಹಬ್ಬಗಳ ಆಚರಣೆಯ ಕಾಟಾಚಾರವನ್ನೇ ಪಡೆದುಕೊಂಡಿರುವುದು ದುರ್ದೈವದ ಸಂಗತಿ. ಸಾಹಿತ್ಯ ಸಮ್ಮೇಳನ ಸಮಸ್ತ ಕನ್ನಡ ಜನರ ನಾಡಹಬ್ಬದ ಸ್ವರೂಪ ಪಡೆಯಬೇಕಿದೆ. ಪ್ರತಿ ಕನ್ನಡಗಿನ ಹೆಮ್ಮೆಯ ಆಚರಣೆ ಎನಿಸಬೇಕಿದೆ. ಕನ್ನಡ ನೆಲದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಮತ್ತು ವಿರೋಧ ಪಕ್ಷದ ಸ್ಥಾನದಲ್ಲಿರುವ ಪಕ್ಷಗಳು ಕನ್ನಡಿಗರ ಹಕ್ಕೊತ್ತಾಯಗಳಿಗೆ ಕಾಲಮಿತಿ ಹೇರಿಕೊಂಡು ತಪ್ಪದೇ ಮನ್ನಣೆ ನೀಡಿ, ಜಾರಿಗೊಳಿಸುವ ಮೂಲಕ ಕನ್ನಡತನ ಮೆರೆಯಬೇಕಿದೆ. ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಮಹಿಳೆಯೊಬ್ಬರು ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸ್ಥಾನದಲ್ಲಿ ಕಾಣಿಸಿಕೊಂಡಿರುವುದೇ ಹೆಗ್ಗಳಿಕೆಯ ಸಂಕೇತವಾಗದೆ, ಮಹಿಳಾಪರ ಸಾಹಿತ್ಯಕ್ಕೆ ಉತ್ತೇಜನ ಸಿಗಬೇಕಿದೆ. ಕನ್ನಡ ಭಾಷೆಗೆ ಕರ್ನಾಟಕದಲ್ಲಿ ಅಗ್ರಸ್ಥಾನ ದೊರೆಯಬೇಕಿದೆ. ಇದನ್ನು ನೀಡಬೇಕೆಂಬುದು ಕೇವಲ ಒತ್ತಾಸೆಯಲ್ಲ; ಕನ್ನಡ ಸರ್ಕಾರದ ಆದ್ಯ ಕರ್ತವ್ಯವಾಗಬೇಕಿದೆ. ಎಲ್ಲಾ ವಲಯ, ರಂಗಗಳಲ್ಲೂ ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕು ಅವರ ಬದುಕು ಬಂಗಾರವಾಗಬೇಕಿದೆ. ಕನ್ನಡದಲ್ಲಿ ಮಾತನಾಡುವುದು, ಕರ್ನಾಟಕದಲ್ಲಿ ಬದುಕುವುದು, ಕನ್ನಡ ಭಾಷೆಯಲ್ಲಿ ಅಭ್ಯಾಸ ಮಾಡುವುದು, ಕರ್ನಾಟಕದಲ್ಲೇ ಉದ್ಯೋಗ ಪಡೆಯುವುದು ಕೇವಲ ಅಭಿಮಾನವೆನಿಸದೆ, ಪ್ರತಿ ಕನ್ನಡಿಗ ಹೊಂದಲೇಬೇಕಾದ ಹಕ್ಕಾಗಿದೆ. ಕನ್ನಡ ನಮ್ಮ ಹಕ್ಕಾಗಬೇಕಿದೆ, ಬದುಕಾಗಬೇಕಿದೆ, ಬವಣೆ ನೀಗಿಸುವ ಅಸ್ತ್ರವಾಗಬೇಕಿದೆ. ಈ ನಿಟ್ಟಿನಲ್ಲಿ ಸಾಹಿತ್ಯದ ವಿವಿಧ ಪ್ರಾಕಾರಗಳು ರೂಪು ತಳೆದು ಕನ್ನಡಕ್ಕೆ ಮತ್ತಷ್ಟು ಕಸುವು, ಕಿಮ್ಮತ್ತು ನೀಡಿ, ಎಂದಿನ ವಿಶ್ವಮನ್ನಣೆ ಕಾಪಾಡಿಕೊಳ್ಳಬೇಕಿದೆ.

ಬನ್ನಿ ಕನ್ನಡಿಗರೆಲ್ಲರೂ... ಕನ್ನಡದ ತೇರನೆಳೆಯಲು ವೀರನಾರಾಯಣನ ಗದಗಿಗೆ... ನಮ್ಮದೇ ನಾಡಹಬ್ಬದಿ ನೆಮ್ಮದಿಯಿಂದ ಸೇರೋಣ... ಕನ್ನಡತನ ಮೆರೆಯೋಣ... ಕನ್ನಡದ ಬದುಕಿಗೆ ಹೋರಾಡೋಣ.... ಕನ್ನಡಕ್ಕೇ ಕೈ ಎತ್ತೋಣ... ಕನ್ನಡದಿಂದಲೇ ತಲೆ ಎತ್ತಿ ನಡೆಯೋಣ....


ಪ್ರಾದೇಶಿಕ ಆಡುನುಡಿ ಬಗ್ಗೆ ಏಕೆ ಈ ಅಲಕ್ಷ ಮನೋಭಾವ?

ಶರತ್ ಕಲ್ಕೋಡ್ - ಸದ್ಯ ಓ ಮನಸೇ ಪಾಕ್ಷಿಕದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಪತ್ರಿಕೋದ್ಯಮದ ಹಿರಿಯರು. ಕನ್ನಡದ ಆಡುನುಡಿಗಳನ್ನು ಮಾಧ್ಯಮಗಳಲ್ಲಿ ಅಪಹಾಸ್ಯ ಮಾಡುತ್ತಿರುವ ಪರಿಯನ್ನು ಕಂಡು ನೊಂದವರು. ಅದೇ ಅವರ ಲೇಖನಿಯಿಂದ ಹೊರ ಬಂದಿದೆ.

ಪ್ರಾದೇಶಿಕ ಆಡುನುಡಿ ಬಗ್ಗೆ ಏಕೆ ಈ ಅಲಕ್ಷ ಮನೋಭಾವ?

ಎಲ್ಲಾ ಭಾಷೆಗಳಲ್ಲೂ ಇರುವಂತೆ ಕನ್ನಡದಲ್ಲೂ ಪ್ರಾದೇಶಿಕ ಆಡು ನುಡಿಗಳಿವೆ. ಉದಾಹರಣೆಗೆ: ಧಾರವಾಡದ ಕನ್ನಡ, ಮಂಗಳೂರು ಕನ್ನಡ, ಗುಲ್ಬರ್ಗ ಕನ್ನಡ, ಇತ್ಯಾದಿ. ಆಯಾಯ ಪ್ರಾದೇಶಿಕ ಜೀವನ ಶೈಲಿ, ಉಡುಗೆ ತೊಡುಗೆಗಳಂತೆ ಭಾಷೆಯಲ್ಲೂ ವೈವಿಧ್ಯವಿರುವುದು ಸಹಜ. ಆದರೆ ಈ ಪ್ರಾದೇಶಿಕ ವೈವಿಧ್ಯವೇ ನಮ್ಮಲ್ಲಿ ತಮಾಷೆಯ ವಸ್ತುವಾಗುವುದು ಮಾತ್ರ ವಿಪರ್ಯಾಸದ ಸಂಗತಿ.

ಮಂಗಳೂರು (ದಕ್ಷಿಣ ಕನ್ನಡ) ಕನ್ನಡ ಬಹಳ ಪರಿಶುದ್ಧವೆಂದು ಅವರ ಭಾವನೆ. ದಕ್ಷಿಣ ಕನ್ನಡಿಗರ ಹೆಚ್ಚಿನವರ ಮಾತ್ರ ಭಾಷೆ ತುಳು, ಕೊಂಕಣಿ ಹಾಗೂ ಇನ್ನಿತರ ಭಾಷೆಗಳಾಗಿರುವುದು. ಅವರ ಕನ್ನಡದ ಸ್ಪಷ್ಟ ಬಳಕೆ ಕಾರಣವಾಗಿರಬಹುದು. ಆದರೆ ದಕ್ಷಿಣ ಕನ್ನಡದಲ್ಲೇ ಕುಂದಾಪುರ ಕನ್ನಡ, ಹವ್ಯಕ ಕನ್ನಡ ಪರಿಭೇದಗಳುಂಟು. ಕುಂದಾಪುರ ಕನ್ನಡದಲ್ಲಿ 'ಹೋಯ್ಕು', 'ಬರ್ಕು' ಪದಗಳ ಪ್ರಯೋಗ ಹೊಸಬರಿಗೆ ಬೇರೆ ಭಾಷೆಯಾಗಿ ಕಂಡರೆ ಆಶ್ಚರ್ಯದ ಮಾತಲ್ಲ. ಹಾಗೇ ಧಾರವಾಡದಲ್ಲಿ ಬಳಕೆಯಾಗುವ ಕನ್ನಡ ಭಾಷೆಯ ಉಚ್ಛಾರವೆ ಬೇರೆ. ಅಷ್ಟೇ ಅಲ್ಲ, ಅಲ್ಲಿ ಬಳಸುವ ಪದಗಳು ಮೈಸೂರಿನಲ್ಲಿ ಬಳಕೆಯಾಗುವ ಪದಗಳಿಗಿಂತ ಭಿನ್ನವಾದ ಅರ್ಥವನ್ನು ಕೊಡುತ್ತದೆ. ಕೆಲವೊಮ್ಮೆ ಅಪಾರ್ಥವನ್ನೂ ಎಡೆಮಾಡಿಕೊಡುತ್ತದೆ. ಆದರೆ ನಾನು ಇಲ್ಲಿ ವಿಶ್ಲೇಷಿಸಲು ಹೊರಟಿರುವುದು ಪ್ರಾದೇಶಿಕ ಭಾಷೆಯ ಶಬ್ಧ ಬಳಕೆ, ಶೈಲಿಗಳ ಕುರಿತು ಅಲ್ಲ. ಈ ಪ್ರಾದೇಶಿಕ ಭಾಷಾ ವೈವಿಧ್ಯವನ್ನು ನಮ್ಮ ದೃಶ್ಯ ಮಾಧ್ಯಮದವರು, ಹೇಗೆ ದುರುಪಯೋಗ ಪಡಿಸಿಕೊಂಡು ತಮಾಷೆಯ ವಸ್ತುವನ್ನಾಗಿ ಮಾಡಿ, ಆ ಮೂಲಕ ಆ ಪ್ರದೇಶದ ಜನರನ್ನು ಗೇಲಿ ವಸ್ತುವನ್ನಾಗಿ ಮಾಡಿದ್ದಾರೆ. ಹೀಗೆ ಮಾಡುವುದು ಸರಿಯೇ ಎನ್ನುವುದರ ಬಗ್ಗೆ.

ಸಿನಿಮಾ, ನಾಟಕ, ಟಿವಿ ಸಿರೀಯಲ್ಗಳಲ್ಲಿ, ಅಷ್ಟೇ ಏಕೆ ಕೆಲವೊಮ್ಮೆ ಬರಹಗಳಲ್ಲೂ ಕೂಡ, ಪ್ರಾದೇಶಿಕ ಭಾಷೆಯನ್ನು, ಅದರ ಸೊಗಡನ್ನು ತಮಾಷೆಯಾಗಿ ಬಳಸುವ, ಪ್ರಯೋಗಿಸುವ ವೈಖರಿಯನ್ನು ನೀವು ಈಗಾಗಲೇ ಗಮನಿಸಿರುತ್ತೀರಿ. ಇದಕ್ಕೆ ಹಲವು ದಶಕಗಳ ಇತಿಹಾಸವೇ ಇದೆ. ಅಡುಗೆ ಭಟ್ಟನ ಪಾತ್ರಕ್ಕೆ ಮಂಗಳೂರು ಕನ್ನಡ ಬಳಸುವುದು, ಪೊಲೀಸ್ನ ಪಾತ್ರಕ್ಕೆ ಉತ್ತರ ಕರ್ನಾಟಕ ಭಾಷೆ ಬಳಸುವುದು ಬಹಳ ಮಾಮೂಲಿಯಾದ ಹವ್ಯಾಸ. ಈ ರೀತಿಯ ಪ್ರಯೋಗಗಳ ಫಲವಾಗಿ ಆ ಪ್ರದೇಶದ ಜನರು ಹಾಗೂ ಅವರಾಡುವ ಭಾಷೆ, ಅವಹೇಳನಕ್ಕೆ, ತಮಾಷೆಗೆ ಗುರಿಯಾಗುತ್ತಾರೆ ಎಂಬ ಕಲ್ಪನೆಯ ಇಲ್ಲದೆ ಇದನ್ನು ಮಾಧ್ಯಮದವರು, ತಮ್ಮ ಅವಶ್ಯಕತೆಗೆ, ಅನುಕೂಲಕ್ಕೆ ತಕ್ಕಂತೆ ಬಳಸಿ ಕೊಳ್ಳುತ್ತಾರೆ. ಕೆಲವೊಮ್ಮೆ ಅದನ್ನು ಸಹಜವಾಗಿ ಕೂಡ ಬಳಸುವುದಿಲ್ಲ. ಅಶ್ಲೀಲವಾಗಿ, ಶೇಷಾರ್ಥ ಬರುವಂತೆ ಬಳಸುತ್ತಾರೆ. ಹೀಗೆ ಮಾಡುವುದು ಸರಿಯೆ?

ಇದು ಸರಿಯಾದ ಕ್ರಮವಲ್ಲ ಎಂಬುದು ಪ್ರಜ್ಞಾವಂತರೆಲ್ಲರ ಅನಿಸಿಕೆ. ಹೀಗೆ ಭಾಷೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಹಾಗೆ ಮಾಡುವುದರಿಂದ ಆಯಾಯ ಪ್ರದೇಶದ ಜನರನ್ನು ಅವಹೇಳನ ಮಾಡಿದಂತಾಗುತ್ತದೆ. ಭಾಷೆಗೂ ಹಾನಿ ಮಾಡಿದಂತೆ ಆಗುತ್ತದೆ ಎಂಬ ಎಚ್ಚರದ ಮಾತನ್ನು, ತಿಳುವಳಿಕೆ ನುಡಿಯನ್ನು ಮಾಧ್ಯಮದವರಿಗೆ ಯಾರೂ ಹೇಳಿದಂತಿಲ್ಲ. ಹೇಳಿದರೂ ಆ ಮಾತುಗಳನ್ನು ಅಲಕ್ಷಿಸುವ ಮಾಧ್ಯಮ ಮಂದಿಯೇ ಹೆಚ್ಚು.

ದೃಶ್ಯ ಮಾಧ್ಯಮದಲ್ಲಿ ಜಾತಿ ಬಗ್ಗೆ ನಿಂದನೆಯಾದರೆ, ಆಯಾಯ ಜಾತಿಯ ಜನ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಸೆನ್ಸಾರ್ ಮಂಡಲಿ ಎಚ್ಚರ ವಹಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಸರ್ಕಾರವೂ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಆದರೆ ಭಾಷೆ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಯಾಕೆಂದರೆ ಇಲ್ಲಿ ಜಾತಿ- ವರ್ಗದ ಪ್ರಶ್ನೆ ಏಳುವುದಿಲ್ಲ. ಭಾಷೆ ಆ ಪ್ರದೇಶದ ಸಮುದಾಯಕ್ಕೆ ಸೇರಿದ್ದು. ಹಾಗಾಗಿ ಪ್ರತಿಭಟಿಸುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಹೀಗೆ ಪ್ರಾದೇಶಿಕ ಆಡುನುಡಿಗಳನ್ನು ದೃಶ್ಯ ಮಾಧ್ಯಮಗಳು ಕಳೆದ ಹಲವು ದಶಕಗಳಿಂದಲೂ ದುರುಪಯೋಗ ಪಡಿಸಿಕೊಳ್ಳುತ್ತಲೇ ಬಂದಿದ್ದಾವೆ ಎಂಬುದು ನನ್ನ ವಾದವಲ್ಲ. ಅದಕ್ಕಿಂತ ಭಿನ್ನವಾಗಿ, ಪ್ರಾದೇಶಿಕ ಭಾಷೆಯ ಸೊಗಡನ್ನು, ಅದರ ಆಳ-ಅಗಲದ ವಿಸ್ತಾರವನ್ನು ಬಳಸಿಕೊಳ್ಳುವ ಮೂಲಕ, ಅದರ ಪ್ರತಿಷ್ಠೆ- ಶೋಭೆ ಹೆಚ್ಚಿಸಿದವರೂ ಇದ್ದಾರೆ ಎಂಬುದು ನಮ್ಮ ನಾಡ- ನುಡಿಯ ಪುಣ್ಯ. ಉದಾಹರಣೆಗೆ ಗಿರೀಶ ಕಾಸರವಳ್ಳಿಯವರ ಸಿನಿಮಾ- 'ತಾಯಿ ಸಾಹೇಬ', 'ದ್ವೀಪ', 'ಗುಲಾಬಿ ಟಾಕೀಸ್'- ಹೀಗೆ ಅವರ ಯಾವುದೇ ಸಿನಿಮಾ ನೋಡಿ, ಕಥೆ, ಸಂಭಾಷಣೆ, ವಸ್ತು, ತಂತ್ರಗಳ ಬಗ್ಗೆ ಎಚ್ಚರವಹಿಸುವಂತೆ, ಭಾಷೆಯ ಬಗ್ಗೆಯೂ ಕಾಸರವಳ್ಳಿ ಅವರು ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತಾರೆಂಬುದು ಗಮನಾರ್ಹ. ಹೆಮ್ಮೆಯ-ಸಂತೋಷದ ಅಂಶ ಕೂಡ. 'ಗುಲಾಬಿ ಟಾಕೀಸ್' ನಲ್ಲಂತೂ ಕುಂದಾಪುರ ಕನ್ನಡದ ಗಟ್ಟಿತನ, ಹಾಸ್ಯ- ವ್ಯಂಗ್ಯ, ದುಃಖ ದುಮ್ಮಾನ ಸಂತೋಷಗಳನ್ನು ಅಭಿವ್ಯಕ್ತಿಸಲು ಹೇಗೆ ಸಶಕ್ತವಾಗಿದೆ ಎಂಬುದನ್ನು ಚಿತ್ರದ ಉದ್ದಕ್ಕೂ ಗಮನಿಸಿ. ಪಾತ್ರ ಹಾಗೂ ದೃಶ್ಯಗಳ ಜೊತೆಜೊತೆಗೆ ಕುಂದಾಪುರದ ಭಾಷೆಯೂ ತನ್ನತನದ ಛಾಪು ಮೂಡಿಸುತ್ತದೆ. 'ಗುಲಾಬಿ ಟಾಕೀಸ್' ಕೇವಲ ದೃಶ್ಯ ಮಾಧ್ಯಮವಾಗಿ ಮಾತ್ರವಲ್ಲ; ಭಾಷಾ ಮಾಧ್ಯಮವಾಗಿ ಎಷ್ಟು ಅರ್ಥಪೂರ್ಣವಾಗಿ ಹೊರಹೊಮ್ಮಿದೆ ಎಂಬುದನ್ನು ಚಿತ್ರದುದ್ದಕ್ಕೂ ನೀವು ಸಂಭಾಷಣೆಯನ್ನು ಎಚ್ಚರದಿಂದಲೇ ಗಮನಿಸಬೇಕಾಗುತ್ತದೆ. ಅಂದರೆ ಪ್ರಾದೇಶಿಕವಾದ 'ಕುಂದಾಪುರದ ಕನ್ನಡ' ಅಭಿವ್ಯಕ್ತಿಯ ಭಾಷೆಯಾಗಿ ಪ್ರೇಕ್ಷಕನಿಗೆ ಎಲ್ಲೂ ಅಡ್ಡಿ-ಆತಂಕಗಳನ್ನು ಒಡ್ಡುವುದೇ ಇಲ್ಲ. ಬದಲಾಗಿ 'ಕುಂದಾಪುರದ ಕನ್ನಡ'ದ ಬಗ್ಗೆ ಪ್ರೇಕ್ಷಕರಿಗೆ ಹೊಸ ಅರಿವು ಮೂಡಿಸುವಲ್ಲಿ ಹೊಸ ಅನುಭವ ಕಟ್ಟಿಕೊಡುವಲ್ಲಿ ಸಫಲವಾಗುತ್ತದೆ. ದೃಶ್ಯ ಮಾಧ್ಯವನ್ನು ಸೃಷ್ಟಿಸಲು ಹೊರಟ ಮಂದಿಯ ಜವಾಬ್ದಾರಿ ಇರುವುದು ಇಲ್ಲೇ.

ಯಾವುದೇ ಘೋಷಣೆಗಳಿಲ್ಲದೆ ಪ್ರಾದೇಶಿಕ ಆಡುಭಾಷೆಗೂ ಹೊಸ ಆಯಾಮ ನೀಡುವಲ್ಲಿ ಸದ್ದು-ಗದ್ದಲ ಮಾಡದೇ ಗೆದ್ದಿರುತ್ತಾನೆ. ಆ ಮೂಲಕ ಆ ಪ್ರದೇಶಗಳ ಭಾಷೆಗೂ ಹೊಸತನ, ಮೌಲ್ಯ, ಘನತೆ, ಗಾಂಭೀರ್ಯ, ಒದಗಿಸಿಕೊಡುವ ಆಯುಧ. ಆ ಆಡು ನುಡಿಯ ಜನರ ಪ್ರೀತಿ-ವಿಶ್ವಾಸಗಳಿಸುವ ಮೂಲಕ ಅವರ ಹೃದಯದಲ್ಲಿ ವಿಶಿಷ್ಟವಾದ-ಸ್ಥಾನಮಾನ ಪಡೆಯುತ್ತಾನೆ. ಈ ರೀತಿ ಮಾಡುವುದು ಮಾಧ್ಯಮದ ಮಂದಿಗೆ ಒಂದು ರೀತಿಯ ಅಗ್ಗಳಿಕೆ ಅಲ್ಲವೇ? ಪ್ರಾದೇಶಿಕ ಭಾಷೆಗೆ ಹೊಸ ಮೆರಗೂ ನೀಡಿದಂತಾಗುತ್ತದೆ. ಇದು ಖಂಡಿತಾ ಸಾಮಾನ್ಯವಾದ ಸಾಧನೆಯೇನಲ್ಲ. ಕನ್ನಡದ ಪ್ರಾದೇಶಿಕತನವನ್ನೂ ಎಚ್ಚರದಿಂದ ಬಳಸುವಂತೆ ಪ್ರಜ್ಞಾವಂತ ಮಾಧ್ಯಮದ ಮಂದಿ ಕಾರ್ಯೋನ್ಮುಖರಾಗಲು ಇದು ಸಕಾಲಿಕ ಅಲ್ಲವೇ!?

ಹೊಸ ಬಗೆಯ ಕ್ವಿಜ್ ಶುರು! - ಇದಾರ ಕೆತ್ತನೆ?

ಇವತ್ತಿನಿಂದ ಅವಧಿ-ಆಲೆಮನೆ-ನುದಿನಮನದಲ್ಲಿ ಹೊಸ ಬಗೆಯ ಕ್ವಿಜ್ ಶುರು!

ಇಂದಿನಿಂದ ದಿನಕ್ಕೊಂದು ಪ್ರಶ್ನೆ! ತುಂಬಾನೇ ಸುಲಭ ನಾವು ಒಬ್ಬರ ಕೈ ಬರವಣಿಗೆ ಅಥವಾ ಸಹಿಯನ್ನು ಹಾಕುತ್ತೇವೆ, ಅದು ಬರೆದ ಕೈಗಳಾರವು ಎಂದು ನೀವು ಊಹಿಸಬೇಕಷ್ಟೆ!
ಸರಿ ಹಾಗಾದರೆ ತಯಾರಾ? ಇಗೋ ಬರುತ್ತಿದೆ ನೋಡಿ ಮೊದಲ ಪ್ರಶ್ನೆ -

ಇದಾರದೆಂದು ಗುರುತಿಸಲು ನಿಮಗೆ ನಾಳೆ ಬೆಳ್ಳಿಗ್ಗೆಯವರೆಗೂ ಸಮಯಾವಕಾಶ! ತಲೆ ಕೆರದುಕೊಳ್ಳಬೇಡಿಸ್ವಾಮಿ ಸ್ವಲ್ಪ ಗಮನವಿಟ್ಟು ನೋಡಿ ಥಟ್ ಅಂತ ಹೇಳಿಬಿಡಬಹುದು...

ಕನ್ನಡ ಸಾಹಿತ್ಯ ಮತ್ತು ರಂಗಭೂಮಿ



ಕನ್ನಡದ ರಂಗಭೂಮಿಗೆ ಅತ್ಯಂತ ಶ್ರೀಮಂತ ಇತಿಹಾಸವಿದೆ. ಇಂದು ಕೂಡ ಬೇರೆ ಇತರತ್ರ ಭಾಷೆಗಳಿಗಿಂತ ಕನ್ನಡದ ರಂಗಭೂಮಿ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿದೆ.
ಈ ಕ್ರಿಯಾಶೀಲ ಶ್ರೀಮಂತಿಕೆಗೂ ಕನ್ನಡ ಸಾಹಿತ್ಯಕ್ಕೂ ನಡುವಿನ ಸೂಕ್ಷ್ಮ ಸಂಬಂಧದ ಕುರಿತು ಸದ್ಯ ಮೈಸೂರಿನ ರಂಗಾಯಣದ ನಿರ್ದೇಶಕರಾಗಿರುವ ಲಿಂಗದೇವರು ಹಳೆಮನೆ ಚರ್ಚಿಸಿದ್ದಾರೆ.


ಕನ್ನಡ ಸಾಹಿತ್ಯ ಮತ್ತು ರಂಗಭೂಮಿ

ಸಾಹಿತ್ಯದ ಪ್ರಕಾರಗಳಲ್ಲಿ ನಾಟಕಕ್ಕೆ ವಿಶಿಷ್ಟವಾದ ಸ್ಥಾನ ಇದೆ. ಹಿಂದೆ ನಾಟಕವನ್ನು ಕಾವ್ಯ ಎಂದೇ ಪರಿಗಣಿಸಲಾಗುತ್ತಿತ್ತು. 'ಕಾವ್ಯೇಷು ನಾಟಕಂ ರಮ್ಯಂ' ಎಂಬುದು ಪ್ರಸಿದ್ಧವಾದ ಹೇಳಿಕೆ. ಹಾಗಾಗಿ ಕನ್ನಡ ಸಾಹಿತ್ಯದಲ್ಲೂ ಬಹಳ ದೀರ್ಘಕಾಲ ನಾಟಕವನ್ನು ಓದುವ ಕೃತಿಯಾಗಿಯೇ ಪರಿಭಾವಿತವಾಗಿತ್ತು. ಕನ್ನಡದ ಮೊದಲ ನಾಟಕ ಗೀತಗೋವಿಂದವನ್ನು ತಿರುಮಲಾರ್ಯ ಬರೆದ ಸಂದರ್ಭದಲ್ಲಿ ಅದನ್ನು ಪ್ರದರ್ಶಿಸಿದರು ಎಂಬುದಕ್ಕೆ ದಾಖಲೆಗಳಂತೂ ಸಿಕ್ಕಿಲ್ಲ.

ಆಧುನಿಕ ಕಾಲದಲ್ಲಿ ಪ್ರಾರಂಭದ ಹಂತದಲ್ಲಿ ಓದುವ ನಾಟಕಗಳನ್ನು ಬರೆದವರೇ ಹೆಚ್ಚು. ಡಿ.ವಿ. ಗುಂಡಪ್ಪರವರಂತೂ ತಮ್ಮ ನಾಟಕಗಳನ್ನು ಓದುವ ನಾಟಕಗಳು ಎಂದೇ ಹೇಳಿಕೊಂಡರು. ಕುವೆಂಪು ಅವರು ತಮ್ಮ ನಾಟಕಗಳು ರಂಗಮಂದಿರದಲ್ಲಿ ಪ್ರದರ್ಶಿಸಲು ಸಾಧ್ಯ ಇಲ್ಲ. ಅವುಗಳನ್ನು ಮನೋ ರಂಗಮಂದಿರದಲ್ಲಿ ಕಲ್ಪಿಸಿಕೊಳ್ಳಬೇಕು ಎಂದರು. ಸಂಸ್ಕೃತದಿಂದ, ಇಂಗ್ಲಿಷಿನಿಂದ, ಗ್ರೀಕ್ನಿಂದ ನಾಟಕಗಳನ್ನು ಅನುವಾದಿಸಿದ, ರೂಪಾಂತರಿಸಿದ ಬಸವಪ್ಪಶಾಸ್ತ್ರಿಗಳು, ಶ್ರೀಕಂಠೇಶಗೌಡರು ಮತ್ತು ಕ.ವೆ. ರಾಘವಾಚಾರ್ಯರು ನಾಟಕವನ್ನು ಪ್ರದರ್ಶಿಸುವುದಕ್ಕೆ ಅನುಕೂಲವಾಗುವಂತೆ ಅನುವಾದಿಸಲಿಲ್ಲ, ರೂಪಾಂತರಿಸಲಿಲ್ಲ. ಅವು ಓದುವುದಕ್ಕೆ ಮಾತ್ರ ಸೂಕ್ತವಾಗಿದ್ದವು.

ನಾಟಕ ಇರುವುದು ಓದುವುದಕ್ಕಲ್ಲ, ರಂಗದ ಮೇಲೆ ಪ್ರದರ್ಶಿಸುವುದಕ್ಕೆ ಎಂದು ಮೊದಲು ಪ್ರತಿಪಾದಿಸಿದವರು ಶಿವರಾಮ ಕಾರಂತರು. ಅವರು ತಮ್ಮ 'ಗೀತನಾಟಕ'ಗಳಿಗೆ ಬರೆದ ಮುನ್ನುಡಿಯಲ್ಲಿ ಈ ಮಾತನ್ನು ಹೇಳಿದ್ದಾರೆ. ಆಡುವ ನಾಟಕಗಳನ್ನು ದೊಡ್ಡ ಪ್ರಮಾಣದಲ್ಲಿ ಬರೆದವರು ಕೈಲಾಸಂ ಮತ್ತು ಶ್ರೀರಂಗರು. ವಾಸ್ತವವಾದಿ ನಾಟಕಗಳನ್ನು ಬರೆದ ಈ ಇಬ್ಬರು ನಾಟಕಕಾರರು ಪ್ರಥಮತಃ ರಂಗ ಭಾಷೆಯನ್ನು ಅತ್ಯಂತ ಶಕ್ತಿಯುತವಾಗಿ ಬಳಸಿದರು. ಆದರೆ ಕೈಲಾಸಂ ಜೊತೆ-ಜೊತೆಗೇ ನಾಟಕಗಳನ್ನು ಬರೆದ ಪಂಪ ಅವರು ತಮ್ಮ ನಾಟಕಗಳನ್ನು ರಂಗ ಪ್ರದರ್ಶನಕ್ಕೆ ಅನುಕೂಲವಾಗುವಂತೆ ರಚಿಸಿದರೂ ಭಾಷೆಯ ವಿಷಯದಲ್ಲಿ ಮಾತ್ರ ಜಿಗುಟು ನಿಲುವನ್ನೇ ತಳೆದರು. ಓದುವ ನಾಟಕಗಳನ್ನು ಬರೆದವರು ನಿರ್ಮಿತ ಭಾಷೆಯನ್ನು ಹೆಚ್ಚಾಗಿ ಬಳಸಿಕೊಂಡರು ಎಂಬುದನ್ನು ನೆನಪಿನಲ್ಲಿಡಬೇಕು.

ಕಳೆದ ಶತಮಾನದ 60ರ ದಶಕದ ಹೊತ್ತಿಗೆ ನಾಟಕವನ್ನು ಲಿಖಿತ ಕೃತಿ ಎಂದೂ ರಂಗ ಪ್ರದರ್ಶನವನ್ನು 'ರಂಗಕೃತಿ' ಎಂದೂ ಪರಿಭಾವಿಸುವ ಪರಿಪಾಠ ಆರಂಭವಾಯಿತು. ರಂಗಭೂಮಿಯನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದಕ್ಕೆ ರಂಗಶಾಖೆಗಳು ಆರಂಭಗೊಂಡವು. ದೆಹಲಿ ರಾಷ್ಟ್ರೀಯ ನಾಟಕ ಶಾಲೆ ಈ ನಿಟ್ಟಿನಲ್ಲಿ ರಂಗಶಿಕ್ಷಣ ನೀಡಲು ಆರಂಭಿಸಿತು. ರಾಜ್ಯದಲ್ಲಿ ರಂಗಕಾರ್ಯಗಳು ನಡೆದು ಅನೇಕ ತಜ್ಞರು ಈ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಯಾವ ಉತ್ಸಾಹಿ ರಂಗಕರ್ಮಿಗಳಿಗೆ ತರಬೇತಿ ನಡೆಸಿದರು. ಹಾಗಾಗಿ ನಿರ್ದೇಶಕರು, ನಟರು, ರಂಗವಿನ್ಯಾಸಕಾರರು, ಬೆಳಕಿನ ವಿನ್ಯಾಸಕಾರರು ದೊಡ್ಡ ಸಂಖ್ಯೆಯಲ್ಲಿ ಹೊರಬರತೊಡಗಿದರು. ಈ ಪ್ರಯತ್ನಗಳಿಂದಾಗಿ ನಿರ್ದೇಶಕ ಹವ್ಯಾಸಿ ರಂಗಭೂಮಿಯ ಕೇಂದ್ರಸ್ಥಾನದಲ್ಲಿ ಪ್ರತಿಷ್ಠಾಪಿತವಾದ.

ನಾಟಕಕಾರರು ರಂಗಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡೇ ನಾಟಕ ರಚಿಸಲು ಆರಂಭಿಸಿದರು. ಗಿರೀಶ್ ಕಾರ್ನಾಡ್, ಚಂದ್ರ ಶೇಖರ ಕಂಬಾರ, ಲಂಕೇಶ್, ಪ್ರಸನ್ನ, ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದವರು ನಾಟಕವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡರು.
ಒಂದು ಕಡೆ ನಾಟಕಗಳು ರಚನೆಯಾಗುತ್ತಿದ್ದರೆ ಅವುಗಳನ್ನು ಪ್ರದರ್ಶನಕ್ಕೆ ಎತ್ತಿಕೊಳ್ಳುವುದರ ಜೊತೆಗೆ ಕನ್ನಡ ಸಾಹಿತ್ಯದ ಅತ್ಯತ್ತಮ ಕತೆಗಳನ್ನು, ಕವನಗಳನ್ನು ಮತ್ತು ಕಾದಂಬರಿಗಳನ್ನು ರಂಗಕ್ಕೆ ಅಳವಡಿಸುವ ಪ್ರಯತ್ನಗಳೂ ನಡೆದವು. ಪೂರ್ಣಚಂದ್ರ ತೇಜಸ್ವಿಯವರ ಅನೇಕ ಕತೆಗಳು, ಕಾದಂಬರಿಗಳು ರಂಗಕೃತಿಗಳಾಗಿ ಪರಿವರ್ತನೆ ಹೊಂದಿದವು. ಅವರ 'ಕುಬಿ ಮತ್ತು ಇಯಾಲ', 'ತಬರನಕತೆ', 'ಕೃಷ್ಣೇಗೌಡನ ಆನೆ', 'ಕರ್ವಾಲೋ', `ಜುಗಾರಿಕ್ರಾಸ್' ಮುಂತಾದವು ಯಶಸ್ವೀ ನಾಟಕಗಳಾಗಿ ಪ್ರದರ್ಶನಗೊಂಡವು. ದೇವನೂರ ಮಹಾದೇವ ಅವರ ಕತೆಗಳು, ಕಿರುಕಾದಂಬರಿಗಳಾದ 'ಒಡಲಾಳ' ಮತ್ತು 'ಕುಸುಮ ಬಾಲೆ' ಯಶಸ್ವೀ ಪ್ರದರ್ಶನ ಕಂಡವು. 'ಒಡಲಾಳ' ನಾಟಕವಂತೂ ಆಧುನಿಕ ಕನ್ನಡ ರಂಗಭೂಮಿಯಲ್ಲಿ ತನ್ನ ವಾಸ್ತವವಾದಿ ಪ್ರದರ್ಶನದಿಂದಾಗಿ ಹೊಸ ಸಂಚಲನವನ್ನೇ ಸೃಷ್ಟಿಸಿತು.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಈ ಕತೆ ಕಾದಂಬರಿಗಳನ್ನು ಕೆಲವರು ನಾಟಕದ ರೂಪದಲ್ಲಿ ರಚಿಸಿ ಪ್ರದರ್ಶಿಸಿದರೆ, ಇನ್ನು ಕೆಲವು ಕತೆ ಕಾದಂಬರಿಗಳನ್ನು ನಾಟಕದ ರೂಪದಲ್ಲಿ ಪುನಾರಚಿಸದೆ ಹಾಗೆಯೇ ಪ್ರದರ್ಶಿಸುವ ಪ್ರಯತ್ನಗಳೂ ನಡೆದವು. 80ರ ದಶಕದಲ್ಲಿಯೇ ದೆಹಲಿಯ ದೇವರಾಜ ಅಂಕುರ್ ಅವರು ಬೆಂಗಳೂರಿಗೆ ಬಂದು ಯು.ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿಯನ್ನು ಕಾದಂಬರಿಯ ರೂಪದಲ್ಲಿಯೇ ರಂಗದಲ್ಲಿ ಪ್ರದರ್ಶಿಸಿದರು. ಇದನ್ನು ಅವರು 'ಕಥಾಮಂಜ್' ಎಂದು ಕರೆದರು. ಈ ಪ್ರಯತ್ನ ಯಶಸ್ವಿಯಾದ್ದರಿಂದ ಮುಂದೆ ನಟರಾಜ ಹೊನ್ನವಳ್ಳಿ ಮಾಸ್ತಿಯವರ ಕತೆಗಳನ್ನು ಅದೇ ರೂಪದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಕ್ಕೆ ಅಳವಡಿಸಿದರು. ವೈಕುಂಠರಾಜು ಅವರ ಉದ್ಭವ, ಶಿವರಾಮ ಕಾರಂತರ ಕೆಲವು ಕಾದಂಬರಿಗಳು, ಕುವೆಂಪು ಅವರ ಕತೆಗಳು ಹೀಗೆ ಕನ್ನಡ ಸಾಹಿತ್ಯದ ಅತ್ಯಂತ ಸತ್ಯಯುತ ಕತೆ, ಕಾದಂಬರಿಗಳು ರಂಗಭೂಮಿಯಲ್ಲಿ ಅತ್ಯಂತ ಯಶಸ್ವೀ ಪ್ರದರ್ಶನಗಳನ್ನು ಕಂಡವು.

90 ರ ದಶಕದಲ್ಲಿ ಕನ್ನಡದಲ್ಲಿ ಸತ್ವಯುತ ನಾಟಕಗಳು ಬರುತ್ತಿಲ್ಲ ಎಂಬ ಮಾತು ಕೇಳಿ ಬರತೊಡಗಿತು. ಕೆಲವು ರಂಗನಿರ್ದೇಶಕರು ರಂಗಪ್ರದರ್ಶನಕ್ಕೆ ನಾಟಕವೇ ಏಕೆ ಬೇಕು? ಕತೆ, ಕವನ, ಕಾದಂಬರಿ ಹಾಗೂ ಪತ್ರಿಕಾ ಬರಹಗಳೂ ಕೂಡಾ ರಂಗ ಪ್ರದರ್ಶನಕ್ಕೆ ಬೇಕಾದ ಸತ್ವಯುತ ವಸ್ತುಗಳನ್ನು ಒದಗಿಸಬಲ್ಲವು ಎಂಬ ನಿರ್ಧಾರಕ್ಕೆ ಬಂದರು. ಹಾಗಾಗಿ ಕುವೆಂಪು ಅವರ, ಅಡಿಗರ, ಶಿವಪ್ರಕಾಶರ, ಸಿದ್ಧಲಿಂಗಯ್ಯನವರ ಪದ್ಯಗಳು ರಂಗ ಪ್ರದರ್ಶನಕ್ಕೆ ಸಿದ್ಧವಾದವು. ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು ಕೂಡಾ.

ಈಗ ನಾಟಕಗಳೇನೋ ನಿರೀಕ್ಷಿತ ಮಟ್ಟದಲ್ಲಿ, ಸಂಖ್ಯೆಯಲ್ಲಿ ಹೊರಬರುತ್ತಿಲ್ಲ. ಆದರೆ ರಂಗತಂಡಗಳಾಗಲಿ, ರಂಗನಿರ್ದೇಶಕರಾಗಲಿ ಆ ಕೊರತೆಯನ್ನು ದೊಡ್ಡದಾಗಿ ಪರಿಗಣಿಸಿಲ್ಲ. ಯಾಕೆಂದರೆ ಸತ್ವಯುತವಾದ ವಸ್ತು ನಾಟಕದ ರೂಪದಲ್ಲೇ ಪ್ರಕಟವಾಗಬೇಕಿಲ್ಲ. ಅದು ಬರವಣಿಗೆಯ ಯಾವುದೇ ರೂಪದಲ್ಲಿರಲಿ ಅದನ್ನು ರಂಗಕ್ಕೆ ಅಳವಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಿರ್ದೇಶಕರಿಗಿದೆ. ಹಾಗಾಗಿ ನಾಟಕ ಪ್ರಕಾರವಲ್ಲದೆ ಸಾಹಿತ್ಯದ ಬೇರೆ ಪ್ರಕಾರಗಳು ರಂಗಭೂಮಿಗೆ ದೊಡ್ಡ ನಿಧಿಯಾಗಿ ಪರಿಣಮಿಸಿದೆ.

ತೌಡು ಕುಟ್ಟುವ ಕೆಲಸ: ಮುಖ್ಯಮಂತ್ರಿಗೆ ಸೊಗಸಾ?

ಕರ್ನಾಟಕದಲ್ಲಿ ಕನ್ನಡಕ್ಕೊಂದು ಅಭಿವೃದ್ಧಿ ಪ್ರಾಧಿಕಾರ ಇರುವುದು ಕನ್ನಡದ ನೈಜ ಸ್ಥಿತಿಗತಿಯನ್ನು ತೋರಿಸುತ್ತದೆ. ಇರಲಿ . ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಗಿರಬೇಕೆನ್ನುವುದು ಉಸಿರಾಟದಷ್ಟೇ ಸಹಜ. ಆದರೆ ಕರ್ನಾಟಕ ಏಕೀಕರಣಗೊಂಡ ಈ ೫೩ ವರ್ಷಗಳಲ್ಲಿ ನೂರಾರು ಸರಕಾರೀ ಜಿಓಗಳು ಈ ವಿಷಯವಾಗಿ ಹೊರಡಿಸಲ್ಪತ್ತಿದ್ದರೂ ಮೊನ್ನೆ ಕೂಡ ಮುಖ್ಯಮಂತ್ರಿಗಳು ಈ ವಿಷಯವಾಗಿ ಗುಡುಗಬೆಕಾಯಿತು. ಈ ಎಲ್ಲ ಹಿನ್ನಲೆಯಲ್ಲಿ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡಿರುವ ಹಿರಿಯರು ಎಂ. ಕೆ. ಭಾಸ್ಕರ್ ರಾವ್ ಅವರು ತಮ್ಮ ಜ್ಹುಳುಪಾದ ಲೇಖನಿ ಪ್ರಯೋಗಿಸಿದ್ದಾರೆ


ತೌಡು ಕುಟ್ಟುವ ಕೆಲಸ: ಮುಖ್ಯಮಂತ್ರಿಗೆ ಸೊಗಸಾ?
ನೆಲದ ಭಾಷೆಯ ಅಭಿವೃದ್ಧಿಗಾಗಿ, ಅದನ್ನು ಬಳಕೆ ದೃಷ್ಟಿಯಿಂದ ಉತ್ತೇಜಿಸುವುದಕ್ಕಾಗಿ ಸಮಿತಿ, ಪ್ರಾಧಿಕಾರದಂಥ ವ್ಯವಸ್ಥೆಯನ್ನು ಸ್ಥಾಪಿಸಿರುವ ಭಾರತದ ಏಕಮೇವ ರಾಜ್ಯ ನಮ್ಮದು. 1980ರ ದಶಕದಲ್ಲಿ ಕನ್ನಡ ಕಾವಲು ಸಮಿತಿಯಾಗಿ ಜನ್ಮ ತಾಳಿದ ಇದು ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿದೆ. ಸಮಿತಿಯಾಗಲೀ, ಪ್ರಾಧಿಕಾರವಾಗಲೀ ಅದರ ಆಶಯ ಒಂದೇ. ದಿನದಿಂದ ದಿನಕ್ಕೆ ಅಧೋಗತಿಗೆ ಇಳಿಯುತ್ತಿರುವ ಕನ್ನಡ ಭಾಷೆಗೆ ಎಲ್ಲ ಹಂತದಲ್ಲೂ ಕಾಯಕಲ್ಪ ನಡಿ ಅದಕ್ಕೆ ಸಹಜವಾಗಿ ಸಲ್ಲಬೇಕಾದ ಸಾರ್ವಭೌಮ ಪಟ್ಟ ಕಟ್ಟುವುದು.
ದೇಶದ ಇನ್ಯಾವುದೇ ರಾಜ್ಯದಲ್ಲೂ ಆಯಾ ನೆಲದ ಭಾಷೆಯ ಅಭಿವೃದ್ಧಿಗೆ ಸರಕಾರೀ ವ್ಯವಸ್ಥೆಯೊಂದರ ಅಗತ್ಯ ಬಿದ್ದಿಲ್ಲ. ತಮಿಳುನಾಡು, ಆಂಧ್ರ ಪ್ರದೇಶ, ಕೇರಳ... ಹೀಗೆ ಯಾವುದೇ ರಾಜ್ಯವನ್ನು ನೋಡಿದರೂ ಅಲ್ಲೆಲ್ಲ ಸ್ಥಳೀಯರೇ ತಮ್ಮ ಭಾಷೆಯನ್ನು ಬೆಳೆಸುವ ಸಂಕಲ್ಪತೊಟ್ಟು ಯಶಸ್ವಿಯೂ ಆಗಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಸರ್ಕಾರ ಮನಸ್ಸು ಮಾಡಿದರೆ ಕನ್ನಡ ಉಂಟು ಇಲ್ಲವಾದರೆ ಇಲ್ಲ ಎಂಬಂಥ ದಯನಯ ಸ್ಥಿತಿ ನಿರ್ಮಾಣವಾಗಿದೆ.

ಮನವರಿಕೆಯಾಗದ ಮಾತು
ಕರ್ನಾಟಕ
ದಲ್ಲಿ ಕನ್ನಡವೇ ಆಡಳಿತ ಭಾಷೆ ಎನ್ನುವುದು ಸರ್ಕಾರದ ಘೋಷಿತ ನೀತಿ. ಆಡಳಿತದಲ್ಲಿ ಇದನ್ನು ಅಮಲಿಗೆ ತರಬೇಕಾಗಿರುವ ನಮ್ಮ ಅಧಿಕಾರಶಾಹಿಗೆ ಇದು ಇನ್ನೂ ಮನವರಿಕೆಯಾಗಿಲ್ಲ. ಈ ಕೆಲಸ ಮಾಡುವಲ್ಲಿ ಇದುವರೆಗೆ ಬಂದಿರುವ ಯಾವುದೇ ಸರ್ಕಾರವೂ ಯಶಸ್ಸು ಕಂಡಿಲ್ಲ. ಕನ್ನಡದ ವಿಚಾರದಲ್ಲಿ ತಾತ್ಸಾರ ಭಾವದಲ್ಲೇ ಇರುವ ಹಿರಿಯ ಮತ್ತು ಉನ್ನತ ಸ್ಥಾನಗಳಲ್ಲಿರುವ ಅಧಿಕಾರಿಗಳ ದಂಡೇ ನಮ್ಮಲ್ಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬಳಿಯಲ್ಲಿ ಇಂಥ ಅಧಿಕಾರಿಗಳ ಪಟ್ಟಿಯೇ ಇದೆ. ಕೆಲವು ಸಂದರ್ಭಗಳಲ್ಲಿ ಅಂಥವರ ಹೆಸರನ್ನು ಖುದ್ದಾಗಿ ಬಹಿರಂಗಪಡಿಸಿದ್ದೂ ಇದೆ. ಪರಿಣಾಮ ಏನು....?

ಸರ್ಕಾರದ ಮುಖ್ಯಸ್ಥರಿಗೆ ಕಾಲಕಾಲಕ್ಕೆ ತಾವು ಸಲ್ಲಿಸುವ ವರದಿಯಲ್ಲಿ ಈ ಹೆಸರುಗಳನ್ನು ಅವರು ಪಟ್ಟಿ ಮಾಡುತ್ತಲೇ ಇರುತ್ತಾರೆ. ರಾಜ್ಯದ ದುರ್ದೈವವೋ, ಕನ್ನಡದ ದುರವಸ್ಥೆಯೋ ಈ ಪಟ್ಟಿ ಬೆಳೆಯುತ್ತಲೇ ಇದೆಯೇ ಹೊರತೂ ಕಡಿಮೆ ಆಗಿಲ್ಲ. ಆ ಲಕ್ಷಣವೂ ತೋರುತ್ತಿಲ್ಲ. ಕರ್ನಾಟಕ
ಪರಭಾಷಾ ಐಎಎಸ್, ಐಪಿಎಸ್ ಅಧಿಕಾರಿಗಳಿಂದ ತುಂಬಿ ಹೋಗಿರುವ ರಾಜ್ಯ. ಆಂಧ್ರ, ಕೇರಳ, ತಮಿಳು ನಾಡಿನಲ್ಲಿ ಆಯಾ ರಾಜ್ಯದ ಭಾಷೆ, ಸಂಸ್ಕೃತಿ ಬಲ್ಲವರನ್ನು ಹೇಗೋ ತಂದು ಕೂರಿಸುವ ರಾಜಕೀಯ ಒಳ ಕೆಲಸ ಮಾಡುತ್ತದೆ. ಇಲ್ಲಿ ಮಾತ್ರ ಹಾಗೆ ಆಗುವುದೇ ಇಲ್ಲ. ಅದಕ್ಕೆ ಎರಡು ಕಾರಣ: ಒಂದನೆಯದಾಗಿ ಕನ್ನಡಿಗರು ತಮ್ಮ ಮಕ್ಕಳನ್ನು ಎಂಜಿನಯರ್, ಡಾಕ್ಟರ್ ಮಾಡುವುದಕ್ಕೆ ಆದ್ಯತೆ ಕೊಡುತ್ತಾರೆಯೇ ಹೊರತೂ ಅಖಿಲ ಭಾರತ ಸೇವಾ ವ್ಯವಸ್ಥೆಗೆ ಹೋಗುವುದನ್ನು ಕನಸಿನಲ್ಲಿಯೂ ಬಯಸುವುದಿಲ್ಲ. ಹಾಗಾಗಿ ಆಲ್ ಇಂಡಿಯಾ ಸರ್ವೀಸಸ್ ಕೇಡರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ. ಇರುವಷ್ಟನ್ನಾದರೂ ಕರ್ನಾಟಕಕ್ಕೇ ಕಳಿಸಬಹುದಲ್ಲ ಎಂದು ಕೇಳಲು ಅವಕಾಶವಿಲ್ಲ. ನಯಮಾವಳಿ ರೀತ್ಯ ಹೊರ ರಾಜ್ಯಗಳ ಸೇವೆಗೂ ಅವರು ಹೋಗುವುದು ಅನವಾರ್ಯ.


ರಾಜಕೀಯ ಬಲದ ಕೊರತೆ
ನೆರೆಯ ರಾಜ್ಯಗಳಲ್ಲಿ ಆಯಾ ರಾಜ್ಯದ ಐಎಎಸ್. ಐಪಿಎಸ್ಗಳೇ ಆಯಕಟ್ಟಿನ ತಾಣಗಳಲ್ಲಿರಲು ಕಾರಣ, ಆಯಾ ರಾಜ್ಯಗಳಿಗಿರುವ ರಾಜಕೀಯ ಬಲ. ತಮಿಳುನಾಡು, ಆಂಧ್ರ ಅಥವಾ ಕೇರಳ ರಾಜ್ಯಗಳ ರಾಜಕೀಯಕ್ಕೆ ಆ ಬಲವಿದೆ. ಇಂಥಿಂಥವರೇ ಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿ, ಅದಾಗದಿದ್ದರೆ ಬೆದರಿಸಿ ನಯೋಜನೆ ಮೇರೆಗೆ ತಮ್ಮ ರಾಜ್ಯಕ್ಕೆ ಹಾಕಿಸಿಕೊಳ್ಳುವ ತಾಕತ್ತು ಆ ರಾಜ್ಯಗಳ ರಾಜಕಾರಣಿಗಳಿಗೆ ಇರುವಂತೆ ಕರ್ನಾಟಕದ ರಾಜಕಾರಣಿಗಳಿಗೆ ಇಲ್ಲ. ಅಲ್ಲೆಲ್ಲ ವಿರೋಧಿ ರಾಜಕೀಯ ಮಾಡುವ ಕೆಲಸವನ್ನು ಕರ್ನಾಟಕದ ಪಾರಂಪರಿಕ ಭಜನಾ ರಾಜಕೀಯ ಮಾಡುವುದಿಲ್ಲ.
ಇನ್ನು ಪರಭಾಷೆಯಿಂದ ಆ ರಾಜ್ಯಗಳ ಕೇಡರಿಗೆ ಬರುವ ಅಧಿಕಾರಿಗಳು ಆಯಾ ರಾಜ್ಯಭಾಷೆಯನ್ನು ನಯಮಿತ ಅವಧಿಯಲ್ಲೇ ಕಲಿಯುತ್ತಾರೆ. ಅನವಾರ್ಯವೆನಸುವ ಒಂದು ಬಗೆಯ ಒತ್ತಡ ಅಲ್ಲೆಲ್ಲ ಕೆಲಸ ಮಾಡುತ್ತದೆ. ಇಲ್ಲಿ
ಕರ್ನಾಟಕ
ಕ್ಕೆ ಹೊರಗಿನಂದ ಬರುವ ಅಧಿಕಾರಿಗಳಿಗೆ ಕನ್ನಡದ ಮೇಲೆ ಪ್ರೀತಿ ಹುಟ್ಟುವುದೇ ಇಲ್ಲ. ಕಲಿತರೂ ಆಯಿತು, ಬಿಟ್ಟರೂ ಆಯಿತೆಂಬ ಧೋರಣೆಯಲ್ಲಿ ಅವರು ಸೇವೆಯಲ್ಲಿದ್ದು ನವೃತ್ತರಾಗುತ್ತಾರೆ. ಕನ್ನಡ ಕಲಿಯಲೇ ಬೇಕು, ಇಲ್ಲವಾದರೆ ಉಳಿಗಾಲವಿಲ್ಲ ಎಂಬ ಒತ್ತಡ ಇಲ್ಲಂತೂ ಇದುವರೆಗೂ ನಿರ್ಮಾಣವಾಗಿಲ್ಲ. ಆ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಯನ್ನು ಎಲ್ಲೆಲ್ಲಿಂದಲೋ ಬಂದ ಅಧಿಕಾರಿಗಳು ಕಲಿಯಬಹುದಾದರೆ ಇಲ್ಲೇಕೆ ಆಗುವುದಿಲ್ಲ? ಸರ್ಕಾರ ನಡೆಸುವವರು ಇದಕ್ಕೆಲ್ಲ ಉತ್ತರ ಹೇಳಬೇಕು.

ಚಿರಂಜೀವಿ ನಿದರ್ಶನ
ರಾಜ್ಯದ ಅಡಿಷನಲ್ ಚೀಫ್ ಸೆಕ್ರೆಟರಿಯಾಗಿ ನವೃತ್ತರಾಗಿರುವ ಹಿರಿಯ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರ ತೌರು ಪಂಜಾಬ್. ಸೇವೆಯ ಆರಂಭಿಕ ದಿನಗಳಲ್ಲಿ ಅವರನ್ನು
ಕರ್ನಾಟಕ
ಕೇಡರಿಗೆ ಹಾಕಲಾಯಿತು. ಗೊಣಗದೆ ಬಂದ ಅವರು ಮೊದಲು ಮಾಡಿದ ಕೆಲಸವೆಂದರೆ ಕನ್ನಡ ಕಲಿತಿದ್ದು; ಸಿದ್ಧ, ಪ್ರಸಿದ್ಧ ಕನ್ನಡ ಬರಹಗಾರರ ಕೃತಿ- ಕಾವ್ಯಗಳನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟು ಬೆಳೆದಿದ್ದು; ಕನ್ನಡ ಭಾಷೆ ಮತ್ತು
ಕರ್ನಾಟಕ
ದ ಸಂಸ್ಕೃತಿಯೊಂದಿಗೆ ತಮ್ಮನ್ನು ಅಭಿಮಾನಪೂರ್ವಕವಾಗಿ ಗುರುತಿಸಿಕೊಂಡಿದ್ದು... ಏನೆಲ್ಲ ಅವರ ಸಾಧನೆ.
ವಾರ್ತಾ ಇಲಾಖೆಗೆ ಅವರು ನಿರ್ದೇಶಕರಾಗಿದ್ದಾಗ ಉತ್ತರ ಭಾರತದ ರಾಜ್ಯವೊಂದರಿಂದ ಅವರಿಗೆ ಹಿಂದಿಯಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪತ್ರ ಬರುತ್ತದೆ. ಚಿರಂಜೀವಿ, ಆ ಪತ್ರಕ್ಕೆ ಕನ್ನಡದಲ್ಲಿ ಉತ್ತರ ಬರೆಯುವ ಮೂಲಕ ಹಿಂದಿಯ ಜಾಗವನ್ನು ತೋರಿಸುತ್ತಾರೆ. ಅವರು ತಮ್ಮ ಆಡಳಿತ ಭಾಷೆಯಲ್ಲಿ ಪತ್ರ ಬರೆಯಬಹುದಾದರೆ ನಾವೇಕೆ ಬರೆಯಬಾರದು ಎಂಬ ಅವರ ನಲುವು ಇಂದಿಗೂ ನಮ್ಮ ಬಹುತೇಕ ಅಧಿಕಾರಿಗಳಿಗೆ ಅನುಸರಿಲು ಆಗದ ಮಾದರಿಯಾಗೇ ಉಳಿದಿದೆ.
ಕನ್ನಡದಲ್ಲಿ ಮಾತಾಡುವುದಷ್ಟೇ ಅಲ್ಲದೆ ಓದಿ ಬರೆಯುವುದು ಈ ಸರ್ದಾರ್ಜಿಗೆ ಸಾಧ್ಯವಾಗುತ್ತದಾದರೆ ಉಳಿದವರಿಗೆ ಏಕೆ ಆಗುವುದಿಲ್ಲ. ಮನಸ್ಸಿದ್ದರೆ ಮಹಾದೇವ. ನಮ್ಮ ಅಧಿಕಾರಿಗಳಿಗೆ ಮನಸ್ಸಿಲ್ಲ ಎನ್ನುವುದು ಒಂದು ಮುಖ. ಕನ್ನಡದ ವಿಚಾರದಲ್ಲಿ ಆಫ್ಟರ್ ಆಲ್ ಕನ್ನಡ ಎಂಬ ತಾತ್ಸಾರ ಭಾವವಿರುವುದು ಇನ್ನೊಂದು ಮುಖ. ಈ ತಾತ್ಸಾರಕ್ಕೆ ಮದ್ದರೆಯುವ ಕೆಲಸವನ್ನು ಯಾವ ಮುಖ್ಯಮಂತ್ರಿಯೂ ಮಾಡಲಿಲ್ಲ.

ನಾಯಿಯನ್ನೇ ಆಡಿಸುವ ಬಾಲ
ಯಾವುದೇ ಪಕ್ಷವಿರಲಿ, ಅಧಿಕಾರಿಗಳ ಮರ್ಜಿಯಲ್ಲಿ ಮಂತ್ರಿ, ಮುಖ್ಯಮಂತ್ರಿ ಇರುತ್ತಾರೆ. ಹಾಗಾಗಿ ಕ್ರಮ ಕೈಗೊಳ್ಳುವುದು ಆಗದ ಮಾತು. ನಾಯಿ ಬಾಲ ಅಲ್ಲಾಡಿಸುವ ಬದಲಿಗೆ ಬಾಲವೇ ನಾಯಿಯನ್ನು ಆಡಿಸುವ ಈ ಅವ್ಯವಸ್ಥೆ ಕಾರಣವಾಗಿ ಆಡಳಿತದಲ್ಲಿ ಕನ್ನಡ ಸಂಪೂರ್ಣ ಅನುಷ್ಠಾನ ಇನ್ನೂ ಗಗನಕುಸುಮವೇ ಆಗಿದೆ. ಸರ್ಕಾರ
ನಡೆಸುವ ಜನ ಆಗೀಗ ಹೇಳುವ ಮಾತನ್ನು ನಂಬಬಹುದಾದರೆ ವಿಧಾನ ಸೌಧ, ವಿಕಾಸ ಸೌಧ, ಬಹುಮಹಡಿ ಕಟ್ಟಡಗಳ ಹೊರತಾಗಿ ಇತರೆಲ್ಲಡೆ ಕನ್ನಡವೇ ಆಡಳಿತ ಭಾಷೆಯಾಗಿ ಸಮರ್ಪಕ ರೀತಿಯಲ್ಲಿ ಜಾರಿಯಾಗಿದೆ. ಅದು ಹೌದೇ ಆಗಿದ್ದರೆ ಈ ಮೂರು ಜಾಗದಲ್ಲೇಕೆ ಇನ್ನೂ ಆಗಿಲ್ಲ...? ಏನು ಅಡ್ಡಿ, ತೊಂದರೆ...? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಸರ್ಕಾರಕ್ಕೆ ಕಷ್ಟ ಆಗಬಾರದು.

ಕನ್ನಡ ಅನುಷ್ಠಾನಕ್ಕೆ ಅಡ್ಡಿಯಾಗಿರುವ ಅಧಿಕಾರಿಗಳನ್ನು ವಿಧಾನ, ವಿಕಾಸ ಸೌಧ, ಬಹುಮಹಡಿ ಕಟ್ಟಡಗಳಿಂದ ಕಿತ್ತು ಹೊರಗೆಸೆಯಬೇಕು. ಆಡಳಿತ ಭಾಷೆಯ ಅನುಷ್ಠಾನಕ್ಕೆ ಅನುವರ್ತಿಯಾಗುವ ಅಧಿಕಾರಿಗಳನ್ನು ತಂದು ಕೂರಿಸಬೇಕು. ಯಾವುದೇ ಮುಲಾಜಿಗೂ ಒಲಿಯದ ಈ ಕೆಲಸ ಮಾಡುವುದಕ್ಕೆ ಗಂಡೆದೆ ಬೇಕು. ಕನ್ನಡ ಅನುಷ್ಠಾನದಲ್ಲಿ ನರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮದ ಬೆದರಿಕೆ ಹಾಕಿರುವ ಯಡಿಯೂರಪ್ಪ ಗಂಡೆದೆ ತಮಗಿದೆ ಎನ್ನುವುದನ್ನು ತೋರಿಯಾರೆ...? ಯಕ್ಷ ಪ್ರಶ್ನೆ.
ಕರ್ನಾಟಕ
ದಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಸಾರಿದ ಸರ್ಕಾರಿ ಆದೇಶ, ಸೂಚನೆ, ಸುತ್ತೋಲೆಗಳ ಸಂಖ್ಯೆ ಸಾವಿರದ ಆಜೂಬಾಜಿನಲ್ಲಿದೆ. ಸರ್ಕಾರದ ಆದೇಶ ಪಾಲನೆ ಕಡ್ಡಾಯ. ಅದಕ್ಕೆ ವ್ಯತಿರಿಕ್ತವಾಗಿ ನಡೆಯುವುದು ಶಿಕ್ಷಾರ್ಹ ಅಪರಾಧ. ಆದೇಶ, ಸುತ್ತೋಲೆಗಳನ್ನು ಪಾಲಿಸದವರು ಸಾಮಾನ್ಯ ಜನರಾ ಇಲ್ಲವೇ ಸರ್ಕಾರಿ ಅಧಿಕಾರಿಗಳಾ? ಅನುಮಾನ ಬೇಡ.
ಸರ್ಕಾರಿ
ಅಧಿಕಾರಿಗಳೇ ಅದರಲ್ಲೂ ಐಎಎಸ್, ಐಪಿಎಸ್ ಅಧಿಕಾರಿಗಳೇ ಆರೋಪಿಗಳು.
ಸರ್ಕಾರಿ
ಆದೇಶ ಪಾಲಿಸದ ತಪ್ಪಿಗೆ ಏನಾದರೂ ಶಿಕ್ಷೆ ಕೊಡುವುದಿದ್ದರೆ ಮೊದಲು ಅದನ್ನು ಜಾರಿ ಮಾಡಿಬೇಕಿರುವುದು ಈ ಅಧಿಕಾರಿಗಳ ವಿರುದ್ಧ. ಎಷ್ಟು ಜನ ಕನ್ನಡ ವಿರೋಧಿ ಅಧಿಕಾರಿಗಳಿಗೆ ಶಿಸ್ತಿನ ಕ್ರಮದ ರುಚಿ ತೋರಿಸಲಾಗಿದೆ...?
ಸರ್ಕಾರ
ತನ್ನ ಬಳಿ ಇರುವ ವಿವರವನ್ನು ಸಾರ್ವಜನಕಗೊಳಿಸುವುದಕ್ಕೂ ಇದು ಸಕಾಲ.

ಏನು ಕ್ರಮ ಜರುಗಿಸುತ್ತೀರಿ?
ಯಡಿಯೂರಪ್ಪನವರೇ ಹೇಳಿರುವಂತೆ ಇದುವರೆಗೆ ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಅಂಥ ಕಟ್ಟುನಟ್ಟಿನ ಕ್ರಮಗಳನ್ನೇನೂ ಈವರೆಗಿನ
ಸರ್ಕಾರ
ಗಳು ತೆಗೆದುಕೊಂಡಿಲ್ಲ. ಅದರ ಬೆನ್ನಲ್ಲೇ ಅವರು ಹೇಳಿರುವ ಮತ್ತೊಂದು ಮಾತು ನಮ್ಮ
ಸರ್ಕಾರ
ಯಾವುದೇ ಕಾರಣಕ್ಕೂ ಸುಮ್ಮನರುವುದಿಲ್ಲ ಹೌದು ಏನದು ಅವರು ತೆಗೆದುಕೊಳ್ಳಲಿರುವ ಉಗ್ರ ಕ್ರಮ? ಅದನ್ನೇನೂ ಮುಖ್ಯಮಂತ್ರಿ ಬಹಿರಂಗಪಡಿಸಿಲ್ಲ. ಆದರೆ ಅಂಥ ಅಧಿಕಾರಿಗಳ ಸೇವಾ ದಾಖಲೆಯಲ್ಲಿ ಕನ್ನಡ ವಿರೋಧಿ ನಲುವಿನ ಉಲ್ಲೇಖ ಸೇರಿಸಲಾಗುವುದು ಎಂದಿದ್ದಾರೆ. ಇದರಿಂದ ಏನಾಗುತ್ತದೆ...? ಆ ಅಧಿಕಾರಿಗಳ ಸೇವಾ ಹಿರಿತನಕ್ಕೆ ಅದು ಅಡ್ಡಿಯಾಗುತ್ತದೆಯೇ...? ವೇತನ ಬಡ್ತಿ ಸ್ಥಗಿತಗೊಳ್ಳುತ್ತದೆಯೇ...? ಸೇವಾ ಬಡ್ತಿಗೆ ಹಿನ್ನಡೆ ಆಗುತ್ತದೆಯೇ....? ಊಹುಂ ಇಲ್ಲ ಏನೂ ಆಗುವುದಿಲ್ಲ.
ಈ ವಿವರ ಮುಖ್ಯಮಂತ್ರಿಗಿಂತ ಅಧಿಕಾರಿಗಳಿಗೇ ಚೆನ್ನಾಗಿ ಗೊತ್ತಿರುತ್ತದೆ. ಮುಖ್ಯಮಂತ್ರಿಯಾಡುವ ಇಂಥ ಬೆದರಿಕೆ ಮಾತುಗಳನ್ನೆಲ್ಲ ಹೇಗೆ ಮ್ಯಾನೇಜ್ ಮಾಡಬೇಕು ಎನ್ನುವುದೂ ಅವರಿಗೆ ಗೊತ್ತಿರುತ್ತದೆ. ಎಂದೇ ಯಡಿಯೂರಪ್ಪ ವೀರಾವೇಷದಿಂದ ಮಾತಾಡುವಾಗೆಲ್ಲ ಈ ಅಧಿಕಾರಿಗಳು ಮೀಸೆಯಡಿಯಲ್ಲೇ ಮುಸಿಮುಸಿ ನಗುತ್ತಿರುತ್ತಾರೆ. ಆ ಸಂದರ್ಭಗಳಲ್ಲೆಲ್ಲ ಅವರಿಗೆ ಮುಖ್ಯಮಂತ್ರಿ ಬೆದರುಬೊಂಬೆಯಂತೆ ಕಾಣಿಸಿದರೆ ಆಶ್ಚರ್ಯವೇನೂ ಇಲ್ಲ.
ಕರ್ನಾಟಕದ ಇತಿಹಾಸದಲ್ಲೇ ಇದುವರೆಗೆ ಯಾರೇ ಒಬ್ಬ ಐಎಎಸ್, ಐಪಿಎಸ್ ಅಧಿಕಾರಿ ವಿರುದ್ಧ ಕೈ ಎತ್ತುವುದು
ಸರ್ಕಾರ
ಕ್ಕೆ ಸಾಧ್ಯವಾಗಿಲ್ಲ. ಎಂಥ ಸಂದರ್ಭಗಳಲ್ಲೂ ತಮ್ಮವರನ್ನು ಕಾಪಾಡಿಕೊಳ್ಳುವಷ್ಟರಮಟ್ಟಿಗೆ ಈ ಲಾಬಿ ಪ್ರಬಲವಾಗಿದೆ. ಈ ಲಾಬಿಯನ್ನು ಎದುರು ಹಾಕಿಕೊಂಡು ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಯಡಿಯೂರಪ್ಪ ಕ್ರಮ ಜರುಗಿಸಿದ್ದೇ ಹೌದಾದರೆ ಅವರು ಹೊಸ ಅಧ್ಯಾಯವೊಂದನ್ನು ಈ ಇತಿಹಾಸಕ್ಕೆ ಸೇರಿಸಿದಂತಾಗುತ್ತದೆ.

ಕನ್ನಡ ಭಾಷೆಯನ್ನು ಕಲಿಯಬೇಕೆಂದು ಕರ್ನಾಟಕಕ್ಕೆ ಬಂದು ನೆಲೆಸಿರುವ ಇತರ ಭಾಷಿಕ ಜನರಲ್ಲಿ ಆಸೆ ಹುಟ್ಟಿಸುವ ಪರಿಸರವೇ ಇನ್ನೂ ನಮ್ಮಲ್ಲಿ ಮೂಡಿಲ್ಲ. ಇದಕ್ಕೆ ಕಾರಣ ಸಾಮಾಜಿಕ ವ್ಯವಸ್ಥೆಯಲ್ಲ, ಬದಲಿಗೆ ರಾಜಕೀಯ ಇಚ್ಚಾಶಕ್ತಿಯ ಕೊರತೆ.
ಕರ್ನಾಟಕ
ದಲ್ಲಿ ಆಡಳಿತ ನಡೆಸಿದ ಯಾರೊಬ್ಬರಿಗೂ ಕನ್ನಡಕ್ಕೆ ಉತ್ತೇಜನ ನೀಡುವ ಮನಸ್ಸಿರಲಿಲ್ಲ.

ಆರ್. ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ಈ ಮಾತಿಗೆ ಭಿನ್ನವಾದ ಪ್ರಯೋಗವೊಂದನ್ನು ಮಾಡುವ ಯತ್ನ ನಡೆದಿತ್ತು.
ಕರ್ನಾಟಕ
ದಲ್ಲಿರುವವರಿಗೇ ಉದ್ಯೋಗಾವಕಾಶ ಆದ್ಯತೆ ಮೇಲೆ ದೊರೆಯಲೆಂಬ ಆಶಯದಿಂದ ಅವರು ಮಾಡಿದ ಮಣ್ಣಿನ ಮಕ್ಕಳಿಗೇ ಉದ್ಯೋಗ ಹೇಳಿಕೆಗೆ ಸ್ವಾಗತ ದೊರೆಯಬೇಕಾದ ನಾಡಿನಲ್ಲಿ ಟೀಕೆ ಎದುರಾಯಿತು.
ಕಮ್ಯೂನಸ್ಟ್ ಪಕ್ಷಗಳಂತೂ ಇದನ್ನು ಸಂಕುಚಿತ ಮನೋಭಾವ ಎಂದು ಜರಿದು ಬೀದಿಗೇ ಇಳಿದವು. ರಾಜಕೀಯ ಮಾಡಲು ಏನಾದರೂ ಒಂದು ನೆಪ ಬೇಕು, ರಾವ್ ಹೇಳಿಕೆ ಅವುಗಳಿಗೆ ವರವಾಯಿತು ಎಂದಿಟ್ಟುಕೊಳ್ಳೋಣ. ಆದರೆ ಬುದ್ಧಿಜೀವಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವ ತಥಾಕಥಿತ ವರ್ಗವೂ ಕನ್ನಡದ,
ಕರ್ನಾಟಕದ
ಹಿತಕ್ಕೆ ಬೆನ್ನು ಹಾಕಿ ನಂತಿತೆನ್ನುವುದು ವಿಚಿತ್ರ ಹಾಗೂ ವಿಪರ್ಯಾಸ. ಇಂಥ ಗೊಂದಲ ಪ್ರವೃತ್ತಿಯನ್ನು
ಕರ್ನಾಟಕದ
ಗಡಿಯಾಚೆ ಕಾಣಲು ಸಾಧ್ಯವೇ ಇಲ್ಲ. ಹಾಗಾಗಿ ಅಲ್ಲೆಲ್ಲ ಆಯಾ ರಾಜ್ಯ ಭಾಷೆ ಹುಲುಸಾಗಿ ಬೆಳೆಯುತ್ತದೆ. ಈಗ ಕರ್ನಾಟಕದಲ್ಲಿ ಪರಿಸ್ಥಿತಿ ತಿರುವುಮುರುವಾಗಿದೆ. ಕಮ್ಯೂನಸ್ಟರೂ ಸೇರಿದಂತೆ ಅಂದು ವಿರೋಧಿ ಪಾಳಯದಲ್ಲಿದ್ದವರೆಲ್ಲರೂ ಮಣ್ಣಿನ ಮಕ್ಕಳಿಗೆ ಉದ್ಯೋಗದ ಜಪ ಮಾಡುತ್ತಿರುವ ಬದಲಾವಣೆಯನ್ನು ನೋಡಬಹುದು. ಆದರೆ ಅದನ್ನು ನೋಡಲು ಗುಂಡೂರಾಯರಿಲ್ಲ.

ಈಗ ಯಡಿಯೂರಪ್ಪ ಮಾತಿನಾಚೆಗೆ ಜಿಗಿಯಬೇಕು. ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದ್ದು ಬಹಿರಂಗ ಸುದ್ದಿಯಾಗಬೇಕು. ಹಾಗೆ ಅವರು ಮಾಡಿದ್ದೇ ಹೌದಾದಲ್ಲಿ ರಾಜ್ಯದ ಉದ್ದಗಲಕ್ಕೆ ಆ ಸುದ್ದಿ ಸ್ಪಷ್ಟ ಸಂದೇಶವನ್ನೂ ರವಾನಸುತ್ತದೆ, ಅಧಿಕಾರಿ ವಲಯದಲ್ಲಿ ಸಂಚಲನಕ್ಕೂ ಕಾರಣವಾಗುತ್ತದೆ. ಹಾಗೆ ಮಾಡದೇ ಮಾತಿಗಷ್ಟೇ ಈ ಪೌರುಷ ಸೀಮಿತವಾದರೆ ಅದು ಗಾಳಿಯನ್ನು ಗುದ್ದಿದಂತೆ; ತೌಡು ಕುಟ್ಟಿದಂತೆ!
(ಈ ಭಾನುವಾರ ವಾರಪತ್ರಿಕೆಯಲ್ಲಿ ಪ್ರಕಟಿತ)

ನುಡಿನಮನದಲ್ಲಿ ನಾಳೆ ಬಿಸಿ ಬಿಸಿ..




ಕನ್ನಡದ ರಂಗಭೂಮಿಗೆ ಅತ್ಯಂತ ಶ್ರೀಮಂತ ಇತಿಹಾಸವಿದೆ. ಇಂದು ಕೂಡ ಬೇರೆ ಇತರತ್ರ ಭಾಷೆಗಳಿಗಿಂತ ಕನ್ನಡದ ರಂಗಭೂಮಿ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿದೆ.
ಈ ಕ್ರಿಯಾಶೀಲ ಶ್ರೀಮಂತಿಕೆಗೂ ಕನ್ನಡ ಸಾಹಿತ್ಯಕ್ಕೂ ನಡುವಿನ ಸೂಕ್ಷ್ಮ ಸಂಬಂಧದ ಕುರಿತು ಸದ್ಯ ಮೈಸೂರಿನ ರಂಗಾಯಣದ ನಿರ್ದೇಶಕರಾಗಿರುವ ಲಿಂಗದೇವರು ಹಳೆಮನೆ ಚರ್ಚಿಸಿದ್ದಾರೆ.

ನಿರೀಕ್ಷಿಸಿ ನಾಳೆ...
ಕರ್ನಾಟಕದಲ್ಲಿ ಕನ್ನಡಕ್ಕೊಂದು ಅಭಿವೃದ್ಧಿ ಪ್ರಾಧಿಕಾರ ಇರುವುದು ಕನ್ನಡದ ನೈಜ ಸ್ಥಿತಿಗತಿಯನ್ನು ತೋರಿಸುತ್ತದೆ. ಇರಲಿ . ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಗಿರಬೇಕೆನ್ನುವುದು ಉಸಿರಾಟದಷ್ಟೇ ಸಹಜ. ಆದರೆ ಕರ್ನಾಟಕ ಏಕೀಕರಣಗೊಂಡ ಈ ೫೩ ವರ್ಷಗಳಲ್ಲಿ ನೂರಾರು ಸರಕಾರೀ ಜಿಓಗಳು ಈ ವಿಷಯವಾಗಿ ಹೊರಡಿಸಲ್ಪತ್ತಿದ್ದರೂ ಮೊನ್ನೆ ಕೂಡ ಮುಖ್ಯಮಂತ್ರಿಗಳು ಈ ವಿಷಯವಾಗಿ ಗುಡುಗಬೆಕಾಯಿತು. ಈ ಎಲ್ಲ ಹಿನ್ನಲೆಯಲ್ಲಿ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡಿರುವ ಹಿರಿಯರು ಎಂ. ಕೆ. ಭಾಸ್ಕರ್ ರಾವ್ ಅವರು ತಮ್ಮ ಜ್ಹುಳುಪಾದ ಲೇಖನಿ ಪ್ರಯೋಗಿಸಿದ್ದಾರೆ. ನಾಳೆ ನಿರೀಕ್ಷಿಸಿ........

ಸಾಹಿತಿಗಳು ಅನ್ಯಗ್ರಹ ಜೀವಿಗಳಲ್ಲ!



ಉಷಾ ಕಟ್ಟೆಮನೆ ಕನ್ನಡದ ಪತಿಕೊದ್ಯಮದ ಮೂಸೆಯಲ್ಲಿ ಪಳಗಿದವರು. ಈಗ ಅದೆಲ್ಲವನ್ನೂ ಬಿಟ್ಟು ಹಸಿರು ಅರಸಿ ಊರ ದಾರಿ ಹಿಡಿದಿರುವವರು. ಆದರೆ ಬರವಣಿಗೆ ಅಷ್ಟು ಸುಲಭವಾಗಿ ಬಿದುವಂಥದಲ್ಲವಲ್ಲ - ಮೌನ ಕಣಿವೆ ಎಂಬ ಬ್ಲಾಗ್ನ ಮೂಲಕ ಓದುಗರನ್ನು ತಲುಪುತ್ತಿದ್ದಾರೆ. ಸದ್ಯ ಸಾಹಿತಿಗಳು, ಅದರಲ್ಲೂ ಮಹಿಳಾ ಸಾಹಿತಿಗಳು ಅನ್ಯಗ್ರಹ ಜೀವಿಗಳಲ್ಲ ಎಂದು ಸಾರಿದ್ದಾರೆ. ಕಸಾಪ, ಸಮ್ಮೇಳನ ಹಿಡಿಯಬೇಕಾದ ದಾರಿಯ ಕುರಿತು ಚರ್ಚಿಸಿದ್ದಾರೆ
ಬರವಣಿಗೆಯೆನ್ನುವುದೊಂದು ಬಿಡುಗಡೆಯ ಭಾವ. ಒಳಗಿನ ಒತ್ತಡವನ್ನು ಹೊರ ಹಾಕಲೊಂದು ರಹದಾರಿ. ಅದಕ್ಕೆ ಲಿಂಗಬೇಧವಿಲ್ಲ. ಅನಕ್ಷರಸ್ತರಾಗಿದ್ದರೂ ಕಥೆ- ಕಾವ್ಯ ಕಟ್ಟಿ ಮನದಿಂಗಿತವನ್ನು ಬಿಚ್ಚಿಡುತ್ತಿದ್ದ ಜಾನಪದ ಸಾಹಿತ್ಯ ಲೋಕವನ್ನು ಒಮ್ಮೆ ಹೊಕ್ಕರೆ ಸಾಕು, ಸೃಜನಶೀಲ ಮಹಿಳಾ ಲೋಕವೊಂದು ಅನಾವರಣಗೊಳ್ಳುವ ಪರಿಗೆ ಬೆರಗುಗೊಳ್ಳುವ ಸರದಿ ನಮ್ಮದು. ಕುಟ್ಟುವುದು, ಬೀಸುವುದು, ಉಳುವುದು, ನೇಜಿ ನೇಡುವುದು,ಕೊಯ್ಯುವುದು; ತಮಗಿರುವ ಸೀಮಿತ ಅವಕಾಶದಲ್ಲೇ ಸಾಹಿತ್ಯ ಚಿಗುಗುರೊಡೆದ ಪರಿಯಿದು.

ಇಂದಿನ ಆಧುನಿಕ ಮಹಿಳೆ ಅದೇ ಜನಪದ ಮಹಿಳೆಯೇ. ಆಕೆಯ ಹೊರಜಗತ್ತಿನಲ್ಲಾಗಲಿ, ಒಳಪ್ರಪಂಚದಲ್ಲಾಗಲಿ ಅಂತಹ ದೊಡ್ಡ ವ್ಯತ್ಯಾಸವೇನೂ ಆದ ಹಾಗಿಲ್ಲ. ಅಂದು ಆಕೆ ತನ್ನ ದುಃಖ ದುಮ್ಮಾನಗಳನ್ನು, ಸುಖ-ಸಂತೋಷವನ್ನು ದೇವರೊಡನೆ ಅಥವಾ ಪ್ರಕೃತಿಯೊಡನೆ ತೋಡಿಕೊಳ್ಳುತ್ತಿದ್ದಳು; ಸಖಿಯರೊಡನೆ ಹಂಚಿಕೊಳ್ಳುತ್ತಿದ್ದಳು. ಆಕೆಯದು ಪುಟ್ಟ ಕ್ಯಾನ್ವಾಸ್. ಆದರೆ ಆಧುನಿಕ ಮಹಿಳೆಯ ಜಗತ್ತು ವಿಸ್ತಾರವಾದುದು. ಲಿಂಗಬೇಧವಿಲ್ಲದ ಜಗತ್ತೊಂದನ್ನು ಕಟ್ಟಿಕೊಳ್ಳುವ, ಸೃಷ್ಟಿಸಿಕೊಳ್ಳುವ ಎಲ್ಲ ಅವಕಾಶಗಳು ಆಕೆಗಿದೆ. ಆದರೂ ಆಕೆ ಒಂಟಿಯೇ. ಆಕಾಶದತ್ತ ಮುಖ ಮಾಡಿದವಳೇ. ಹಾಗಾಗಿ ಒಳಜಗತ್ತಿನಲ್ಲಿ ಇಬ್ಬರ ಭಾವವೂ ಒಂದೇ.

ಮೇಲಿನ ಇಬ್ಬರು ಮಹಿಳೆಯರ ಮಧ್ಯೆ ಉಲ್ಕೆಯಂತೆ ಜ್ವಾಜಲ್ಯಮಯವಾಗಿ ಉರಿದ ಮಹಿಳಾ ಗುಚ್ಛವೊಂದು ೧೨ನೇ ಶತಮಾನದಲ್ಲಿ ನಮಗೆ ಕಾಣಸಿಗುತ್ತದೆ. ಮಹಿಳೆಯರ ಅಂತರಂಗದ ಸ್ಫೋಟಕ್ಕೆ ಆ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆ, ಲಿಂಗತಾರತಮ್ಯವೇ ಕಾರಣ. ಅವರು ನುಡಿದುದೆಲ್ಲವೂ ’ವಚನ’ಗಳಾಗಿ ಅನ್ಯರಿಗೆ ದಾರಿದೀಪಗಳಾದವು. ಅಂದು ಸಮಾಜದೆದುರು ಮಹಿಳೆಯರು ಮುಕ್ತವಾಗಿ ತೆರೆದುಕೊಂಡ ಪರಿ ನಮಗಿಂದು ಅಚ್ಚರಿ ಹುಟ್ಟಿಸುತ್ತದೆ. ಅವರು ಅಭಿವ್ಯಕ್ತಿಗಾಗಿ ಹೆದರಲಿಲ್ಲ; ತಿಣುಕಾಡಲಿಲ್ಲ. ಅನ್ನಿಸಿದ್ದನ್ನು ಹೇಳಿದರು. ಹೇಳಿದಂತೆ ಬದುಕಿದರು. ಆದರವರು ಉಲ್ಕೆಯಂತೆ ಉರಿದು ಮಾಯವಾದರು. ಅನಂತರ ತಮಗನ್ನಿಸಿದ್ದನ್ನು ನೇರವಾಗಿ, ಮುಕ್ತವಾಗಿ ಹೇಳಬಲ್ಲ ಮಹಿಳೆಯರಿಗಾಗಿ ನಾವು ೧೯ನೇ ಶತಮಾನದವರೆಗೂ ಕಾಯಬೇಕಾಯ್ತು. ಆದರೂ ವಚನಕಾರ್ತಿಯರ ನಿರ್ಭಿಡೆಯ ಅಭಿವ್ಯಕ್ತಿ ಅಧುನಿಕ ಮಹಿಳೆಯರಲ್ಲಿ ಇದ್ದಂತಿಲ್ಲ. ಅಥವಾ ಬಸವಣ್ಣನಂಥ ಸಹಚಾರಿಗಳು ಇವರಿಗೆ ಒತ್ತಾಸೆಯಾಗಿ ನಿಂತಿಲ್ಲವೆನಿಸುತ್ತದೆ.

೧೯ನೇ ಶತಮಾನದ ನಂತರದಲ್ಲಿ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸಾಹಿತ್ಯವೂ ಸಾಥ್ ನೀಡಿತು. ಪುರುಷ ಜಗತ್ತಿಗೆ ತೀರಾ ಭಿನ್ನವಾದ ಮಹಿಳಾ ಆಂತರಿಕ ಜಗತ್ತೊಂದು ಅನಾವರಣಗೊಳ್ಳತೊಡಗಿತು. ಅದರ ಸಣ್ಣ ಸಣ್ಣ ವಿವರಗಳು ಮಹಿಳೆಯರ ಬರವಣಿಗೆಯಲ್ಲಿ ದಾಖಲಾಗತೊಡಗಿದವು. ಬರವಣಿಗೆಗೆ ಸಾಮಾಜಿಕ ಆಯಾಮ ದೊರಕತೊಡಗಿತು. ಅದನ್ನು ಸ್ತ್ರೀವಾದಿ ಸಾಹಿತ್ಯವೆಂಬ ಪ್ರತ್ಯೇಕ ನೆಲೆಯಲ್ಲಿ ಸಾಹಿತ್ಯ ಜಗತ್ತು ಗುರುತಿಸತೊಡಗಿತು. ಸ್ತ್ರೀವಾದಿ ವಿಮರ್ಶೆ ಕೂಡಾ ಸ್ಪಷ್ಟ ರೂಪ ಪಡೆಯತೊಡಗಿತು. ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳಲ್ಲಿ ’ಮಹಿಳಾ ಅಧ್ಯಯನ’ ಈಗ ಆಸಕ್ತಿಯ ಜ್ನಾನಶಾಖೆ.

ಕೇರಳದ ಮಾಧವಿ ಕುಟ್ಟಿ ಅಂತರಂಗದ ಹುಡುಕಾಟದಲ್ಲೇ ಕಮಲಾದಾಸಳಾಗಿ, ಮತ್ತೆ ಸುರೈಯಳಾಗಿ ತೀವ್ರ ವ್ಯಾಮೋಹಿಯಾಗಿ ಬದುಕಿದವರು. ಪ್ರೋತಿಮಾ ಬೇಡಿ, ಅಮೃತ ಪ್ರೀತಂ, ಮರಾಠಿಯ ಮಾಧವಿ ದೇಸಾಯಿ, ಕನ್ನಡದ ಪ್ರತಿಭಾ ನಂದಕುಮಾರ್ ಸೇರಿದಂತೆ ಎಲ್ಲಾ ಬರಹಗಾರ್ತಿಯರೂ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಡಿ ನರಳಿದವರೇ. ಹಾಗಿದ್ದರೂ ಪುರುಷನಿಲ್ಲದ ಸ್ತ್ರೀಯ ಬಾಳು ಅಪೂರ್ಣ ಎಂಬುದನ್ನು ಮನಗಂಡವರು. ಸ್ತ್ರೀಯ ಅನನ್ಯತೆಯನ್ನು ಗುರುತಿಸಿಕೊಂಡು ಪುರುಷನನ್ನು ಅನುಸರಿಸದೆ, ಅವರಂತಾಗಲು ಬಯಸದೆ ಪ್ರಕೃತಿಧರ್ಮವನ್ನು ಅರಿತುಕೊಂಡು ಅವನಲ್ಲೇ ಆತ್ಮಬಂಧುವನ್ನು ಹುಡುಕಿದವರು.

ಇಂತಹದೊಂದು ಸ್ತ್ರೀ ಬಳಗ ಸಮಾಜದಲ್ಲಿ ಒಳಗಿಂದೊಳಗೆ ಸೃಷ್ಟಿಯಾಗುತ್ತಿದೆ. ಅವರು ವಿದ್ಯಾವಂತರು. ಸ್ವತಂತ್ರ ಚಿಂತನೆ ಹೊಂದಿದವರು. ಹೀಗೆಯೇ ಬದುಕಬೇಕೆಂದು ನಿರ್ಧರಿಸಿಕೊಂಡವರು. ಆರ್ಥಿಕವಾಗಿ ಸಬಲರು. ನೆಮ್ಮದಿಯ ಬದುಕಿಗೆ ಮದುವೆ ಅನಿವಾರ್ಯ ಅಲ್ಲ ಎಂದು ತಿಳಿದುಕೊಂಡವರು. ಇಂತಹ ಟ್ರೆಂಡ್ ಬಗ್ಗೆ ಸಾಹಿತ್ಯ ವಲಯದಲ್ಲಿ ಚರ್ಚೆಯಾಗಬೇಕು. ಯಾಕೆಂದರೆ ಭಾರತೀಯ ಸಮಾಜ ನಿಂತಿರುವುದೇ ಕುಟುಂಬ ವ್ಯವಸ್ಥೆಯ ಮೇಲೆ. ಮಹಿಳೆ ಅದರ ಆಧಾರ ಸ್ತಂಭ. ಈ ವ್ಯವಸ್ಥೆಯೇ ಅಲ್ಲಾಡತೊಡಗಿದರೆ ಸ್ವಸ್ಥ ಸಮಾಜ ರೂಪುಗೊಳ್ಳಲಾರದು. ಮಹಿಳೆಯರಂತೆ ಮಕ್ಕಳು ಮತ್ತು ವೃದ್ಧರ ಮನಸ್ಥಿತಿಯ ಬಗ್ಗೆ ಕೂಡ ಗಂಭೀರವಾಗಿ ಚಿಂತಿಸಬೇಕಾದ ಕಾಲಘಟ್ಟವಿದು.

ಈಗ ಸಾಹಿತ್ಯ ವಲಯದಲ್ಲಿ ಇದರ ಬಗ್ಗೆ ಚಿಂತನೆ ನಡೆಯುತ್ತಿಲ್ಲವೆಂದಲ್ಲ. ಅದು ಅಕಾಡಮಿಕ್ ಮಟ್ಟದಲ್ಲಾಗುತ್ತಿದೆ. ಅದು ಮಾತೃ ದೃಷ್ಟಿಕೋನದಿಂದ ಆಗಬೇಕು. ಸಾಹಿತ್ಯ ಮತ್ತು ಜನಸಾಮಾನ್ಯರ ನಡುವೆ ಬಹುದೊಡ್ಡ ಕಂದಕವಿದೆ. ಚಿಂತಕರು ಜನ ಸಾಮಾನ್ಯರತ್ತ ಇಳಿದು ಬರಬೇಕು. ಅರ್ಥವಾಗುವ ಸರಳ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಗಬೇಕು. ಭಾಷೆ ಉಳಿದರೆ ತಾನೆ ಸಾಹಿತ್ಯ ಸೃಷ್ಟಿ? ಅವರ ಕಣ್ಣಮುಂದೆ ಕನ್ನಡವನ್ನು ನಿಜವಾಗಿ ಪ್ರೀತಿಸುವ ಐಟಿ,ಬಿಟಿ ಯುವ ಮನಸ್ಸುಗಳಿರಬೇಕು. ನವಸಾಕ್ಷರರಿರಬೇಕು. ದೇಸಿಸಂಸ್ಕೃತಿಯನ್ನು ರೂಢಿಸಿಕೊಂಡಿರುವ ಗ್ರಾಮೀಣ ಜನರಿರಬೇಕು. ರೈತ ಸಮುದಾಯವಿರಬೇಕು. ಜನಪರ ಚಳುವಳಿಗಳಿರಬೇಕು. ಅವರೆಲ್ಲರಿಗೂ ಸಾಹಿತಿ ಕಿವಿಯಾಗಬೇಕು; ಧ್ವನಿಯಾಗಬೇಕು. ಆದರೆ ಆಗುತ್ತಿರುವುದೇನು? ಸಾಹಿತ್ಯ ನಗರಕೇಂದ್ರಿತವಾಗುತ್ತಿದೆ. ಸಾಹಿತಿಗಳು ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ಅಕ್ಷರ ಬಲ್ಲವರೆಲ್ಲಾ ಸಾಹಿತಿಗಳಾಗುತ್ತಿದ್ದಾರೆ.

ಸಾಹಿತ್ಯ ಸಮ್ಮೇಳನವೆಂಬುದೊಂದು ಜಾತ್ರೆ. ಜಾತ್ರೆಯಲ್ಲಿ ಸಡಗರವಿರುತ್ತದೆ. ಸಂಭ್ರಮವಿರುತ್ತದೆ. ಅಲ್ಲಿ ಗಂಭೀರ ಚಿಂತನೆ ನಡೆಯದು. ಆದರೆ ಚಿಂತನೆಯ ಝಳಕು ತೋರಿಸಲು ಅವಕಾಶವಿದೆ. ಸುದ್ದಿಯನ್ನೂ ಮಸಾಲೆ ಸೇರಿಸಿ ಉಣಬಡಿಸುವ ಕಾಲವಿದು. ಹಳೆ ಮುತ್ತೈದೆಯ ಹಾಗಿರುವ ಸಾಹಿತ್ಯ ಪರಿಷತ್ತು ಬದಲಾಗಬೇಕು. ಸಮ್ಮೇಳನದ ರೂಪುರೇಷೆ ಬದಲಾಗಬೇಕು.

ಬರವಣಿಗೆಯೆನ್ನುವುದು ಸ್ವಗತದಂತೆ; ಅಂತರಂಗದ ಪಿಸುಮಾತಿನಂತೆ; ಆಪ್ತ. ಆದರೂ ಅದರೊಳಗೇ ಪ್ರತಿಭಟನೆ ಹುದುಗಿರುತ್ತದೆ. ಅದು ಜನರ ಆಲೋಚನಾ ಕ್ರಮವನ್ನು, ಮೌಲ್ಯಗಳ ಕುಸಿತವನ್ನು, ಸಾಂಸ್ಕೃತಿಕ ಪಲ್ಲಟವನ್ನು ಹಿಡಿದಿಡುತ್ತದೆ. ಗಡಿಸಮಸ್ಯೆ, ಭಾಷಾ ಸಮಸ್ಯೆ, ನದಿನೀರು ಹಂಚಿಕೆ ಇವೆಲ್ಲಾ ಭಾವಾನಾತ್ಮಕ ಸಮಸ್ಯೆಗಳು. ಶಾಸನ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು. ಅವುಗಳ ಪರಿಹಾರಕ್ಕೆ ರಾಜಕೀಯ ವೇದಿಕೆ ಬೇಕು. ಅವುಗಳನ್ನು ವೇದಿಕೆಯತ್ತ ತರುವ ಚಳುವಳಿಗಳು ಬೇಕು. ಅದನ್ನು ಸಾಹಿತ್ಯ ಮುನ್ನಡೆಸುತ್ತಿರಬೇಕು. ಸಾಹಿತಿಗಳು, ಸಾಹಿತ್ಯ ಪರಿಷತ್ತು ಇದನ್ನೆಲ್ಲಾ ಮಾಡುತ್ತಿದೆಯೇ ಎಂಬುದು ಈಗಿರುವ ಬಹುಮುಖ್ಯ ಪ್ರಶ್ನೆ.


ನಿಷ್ಕ್ರಿಯ ಕನ್ನಡಿಗರ ಮೇಲೆ - ಕ್ರಿಯಾಶೀಲ ಕನ್ನಡೇತರರ ಸವಾರಿ

ಮಹಾದೇವ ಪ್ರಕಾಶ - `ಈ ಭಾನುವಾರ' ವಾರಪತ್ರಿಕೆಯ ಸಂಪಾದಕರು. ಕನ್ನಡಿಗರ ಮೇಲೆ ಕನ್ನಡೇತರರ ದಬ್ಬಾಳಿಕೆಯ ಬಗ್ಗೆ ಸುದೀರ್ಘ ಚರ್ಚಾತ್ಮಕ ಲೇಖನ ಬರೆದಿದ್ದಾರೆ., ಕನ್ನಡಿಗರು ನಿಷ್ಕ್ರಿಯರಾಗಿರುವುದರಿಂದಲೇ ಕ್ರಿಯಾಶೀಲ ಕನ್ನಡೇತರರು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬ ಅವರ ವಿಶ್ಲೇಷಣೆ ಒಪ್ಪತ್ತದಕ್ಕೆ! ಅಂದು ಏಕೀಕರಣ, ಇಂದು ನಡೆಯಬೇಕಿರುವುದು ಕನ್ನಡೀಕರಣ - ಹೌದಲ್ಲವೇ ಎಷ್ಟು ಸತ್ಯ ?
ಅಖಂಡ ಕರ್ನಾಟಕಕ್ಕೆ ಈಗ ಐವತ್ತಮೂರು ವರ್ಷ. ಶೈಶವಾವಸ್ಥೆ, ಬಾಲ್ಯಾವಸ್ಥೆ, ಯೌವನಾವಸ್ಥೆಯನ್ನು ದಾಟಿ ಸಂಪೂರ್ಣ ಪರಿಪಕ್ವಗೊಂಡ ವಯಸ್ಸಿನಲ್ಲಿ ಕರ್ನಾಟಕ ಅಡಿಯಿಡುತ್ತಿದೆ. ಕರ್ನಾಟಕಕ್ಕೇನೋ ಈಗ ಪರಿಪಕ್ವ ವಯಸ್ಸು. ಆದರೆ, ಈ ಪರಿಪಕ್ವ ಕರ್ನಾಟಕದಲ್ಲಿ ಕನ್ನಡದ ಸ್ಥಿತಿಗತಿ ಏನು? ಕನ್ನಡ ಮಾತನಾಡುವ ಜನರ ಜೀವನಮಟ್ಟ ಎಷ್ಟರ ಮಟ್ಟಿಗೆ ಉತ್ತಮಗೊಂಡಿದೆ? ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ, ಪ್ರತ್ಯೇಕ ರಾಜ್ಯ ಬೇಕು ಎಂದು ಬೊಬ್ಬೆಯಿಡುತ್ತಿರುವ ಕೊಡಗು, ಪ್ರಾದೇಶಿಕ ಅಸಮತೋಲನದಿಂದ ಅನ್ಯಾಯವಾಗಿದೆ ಎಂದು ಬಂಡಾಯದ ಬಾವುಟ ಹಾರಿಸಿರುವ ಹೈದರಾಬಾದ್ ಕರ್ನಾಟಕದ ಬಳ್ಳಾರಿ, ರಾಯಚೂರಿನಲ್ಲಿ ಕನ್ನಡಿಗರ, ಕನ್ನಡದ ಸ್ಥಿತಿಗತಿಯ ಸೂಕ್ಷ್ಮ ಅಧ್ಯಯನ ಮಾಡಿದಾಗ ಕರ್ನಾಟಕ, ಕನ್ನಡದ ಸ್ಥಾನ ಮತ್ತು ಮಾನ ಏನಾಗಿದೆ? ಎಲ್ಲಿದೆ? ಎನ್ನುವುದರ ಮನವರಿಕೆಯಾಗುತ್ತದೆ.

ಇದನ್ನು ಕರಾರುವಾಕ್ಕಾದ ಅಂಕಿ-ಅಂಶಗಳಿಂದ ವಿಶ್ಲೇಷಿಸುವುದು ಸಾಧ್ಯವಾಗದೆ ಹೋದರೂ, ಮೇಲ್ನೋಟಕ್ಕೆ ಕಂಡುಬರುವ ವಾಸ್ತವ ಸತ್ಯದ ನೆಲೆಯಲ್ಲಿ ನೋಡಿದಾಗ ಕನ್ನಡಿಗರು ತಮ್ಮ `ಆರ್ಥಿಕ ಪ್ರಭುತ್ವ'ದ ಮೇಲಣ ಹಿಡಿತವನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿದ್ದಾರೆ. ಜೀವನ ನಡೆಸಲು ಕರ್ನಾಟಕದ ನೆಲ ಜಲವನ್ನು ಆಶ್ರಯಿಸಿ ಬಂದ ಕನ್ನಡೇತರರು ಕೃಷಿಯೂ ಸೇರಿದಂತೆ, ವ್ಯಾಪಾರ, ಉದ್ಯಮ, ವಾಣಿಜ್ಯ ಹಾಗೂ ಶೈಕ್ಷಣಿಕ ಮತ್ತಿತರ ಕ್ಷೇತ್ರಗಳಲ್ಲಿ ಕನ್ನಡಿಗರ ಮೇಲೆ ಸವಾರಿ ಮಾಡಲಾರಂಭಿಸಿದ್ದಾರೆ. ಕನ್ನಡಿಗರು, ಕನಿಷ್ಠ ಕುದುರೆಯಾಗುವು ದಿರಲಿ, ಕನ್ನಡೇತರರ ಕತ್ತೆಯಾಗುತ್ತಿದ್ದಾರೆ. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಪರಿಸ್ಥಿತಿಯತ್ತ ಕ್ಷ-ಕಿರಣ ಬೀರಿದಾಗ ಬೆಂಗಳೂರು ಈಗ ಸಂಪೂರ್ಣ ಕನ್ನಡೇತರರ ಪಾಲಾಗಿದೆ. ಸಣ್ಣಪುಟ್ಟ ಟೀಸ್ಟಾಲ್ಗಳಿಂದ ಹಿಡಿದು, ಬೃಹತ್ ಉದ್ದಿಮೆಗಳವರೆಗೆ ಎಲ್ಲ ರೀತಿಯ ವ್ಯಾಪಾರ, ವ್ಯವಹಾರ, ಉದ್ದಿಮೆಗಳೂ ಕನ್ನಡೇತರರ ಹಿಡಿತದಲ್ಲಿದೆ. ಕನ್ನಡದ ನೆಲ ಜಲದ ಲಾಭವನ್ನು ಪಡೆದುಕೊಂಡು ಸಮೃದ್ಧ ಜೀವನವನ್ನು ನಡೆಸುತ್ತಿರುವವರು ಕನ್ನಡೇತರರು. ಆಶ್ಚರ್ಯವಾಗಬಹುದು. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ರಾಜಕೀಯ ಚಟುವಟಿಕೆಗಳೂ ಕನ್ನಡೇತರರ ನಿಯಂತ್ರಣದಲ್ಲಿದೆ. ಬೆಂಗಳೂರಿನ ಒಟ್ಟು 24 ಶಾಸಕರಲ್ಲಿ ಅಚ್ಚಕನ್ನಡದ ಶಾಸಕರು ಕೇವಲ ಆರೇಳು ಮಂದಿ, ಹಾಗೆಯೇ ಬೆಂಗಳೂರು ಮಹಾನಗರ ಪಾಲಿಕೆಯ ಕ್ಷೇತ್ರ ಪುನರ್ವಿಂಗಡನೆಯ 198 ವಾರ್ಡ್ಗಳಲ್ಲಿ ಅರ್ಧದಷ್ಟು ವಾರ್ಡ್ಗಳಲ್ಲಿ ಅಚ್ಚ ಕನ್ನಡಿಗರು ಜಯ ಗಳಿಸುವುದು ಕನಸಿನ ಮಾತು. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಉತ್ತರಭಾರತದಿಂದ ಬಂದವರೇ ದರ್ಬಾರು ನಡೆಸುವುದು ಗ್ಯಾರಂಟಿ. ಇದರ ಜೊತೆಗೆ ನೆರೆಹೊರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದ ವಲಸೆ ಬಂದವರಲ್ಲದೆ, ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ನೆಲೆಯೂರುವವರೆಲ್ಲರೂ ಸಂಪೂರ್ಣವಾಗಿ ಬೆಂಗಳೂರಿನಲ್ಲಿ ಆರ್ಥಿಕ ಹಾಗು ಔದ್ಯಮಿಕ ಪ್ರಭುತ್ವವನ್ನು ಸಾಧಿಸಿದ್ದಾರೆ.

ಸರಾಸರಿ ವಾರ್ಷಿಕ ತಲಾದಾಯದಲ್ಲಿ ಬೆಂಗಳೂರು ನಗರ ಜಿಲ್ಲೆ (25,740 ರೂಪಾಯಿ)ಯನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಕೊಡಗು (ರೂಪಾಯಿ 24, 623) ಈಗ ಸಂಪೂರ್ಣವಾಗಿ ಮಲೆಯಾಳಿಮಯವಾಗಿದೆ. ಸಾವಿರಾರು ಎಕರೆ ಕಾಫಿ ಪ್ಲಾಂಟೇಶನ್ಗಳು ಮಲೆಯಾಳಿಗಳ ಪಾಲಾಗಿದೆ. ಸಣ್ಣಪುಟ್ಟ ಕಾಫಿ ತೋಟಗಳನ್ನು ಹೊಂದಿದ್ದ ಕನ್ನಡಿಗರು ಇವುಗಳನ್ನು ಮಲೆಯಾಳಿಗಳಿಗೆ ಮಾರಿ, ಅವರಲ್ಲಿಯೇ ಕೆಲಸಗಾರರಾಗಿ ಸೇರಿಕೊಂಡಿದ್ದಾರೆ. ಇಲ್ಲವೆ, ಮಾರಾಟದಿಂದ ಬಂದ ಹಣವನ್ನು ತೆಗೆದುಕೊಂಡು ಬೇರೆ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಹೀಗಾಗಿ ನಿಸರ್ಗ ಸಮೃದ್ಧ ನೆಲೆಯಲ್ಲಿ ಮಲೆಯಾಳಿಗಳು ಬೇರು ಬಿಡಲಾರಂಭಿಸಿದ್ದಾರೆ. ಈ ವಾಸ್ತವ ಸತ್ಯವನ್ನು ಅರಿಯದ ಕೊಡಗಿನ ಮೂಲದ ಕನ್ನಡಿಗರು ಪ್ರತ್ಯೇಕ ಕೊಡಗು ರಾಜ್ಯಕ್ಕಾಗಿ ಆಂದೋಳನ ನಡೆಸುತ್ತಲೇ ಇದ್ದಾರೆ. ಪ್ರತ್ಯೇಕ ಕರ್ನಾಟಕಕ್ಕಾಗಿ ಕೂಗೆದ್ದಿರುವ ಹೈದರಾಬಾದ್ ಕರ್ನಾಟಕ ಪ್ರದೇಶದ ರಾಯಚೂರಿನಲ್ಲಿಯೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಕರ್ನಾಟಕದಲ್ಲಿ ಅತ್ಯಧಿಕ ನೀರಾವರಿಗೆ ಒಳಪಟ್ಟಿರುವ ಶಿವಮೊಗ್ಗ (ಶೇಕಡ 50.8), ಮಂಡ್ಯ (ಶೇ.47.1), ದಕ್ಷಿಣ ಕನ್ನಡ (ಶೇ.43.6) ಜಿಲ್ಲೆಗಳನ್ನುಳಿದಂತೆ ಹೆಚ್ಚು ನೀರಾವರಿ ಪ್ರದೇಶ ಅಂದರೆ ಶೇಕಡ 37.8ರಷ್ಟು ನೀರಾವರಿಗೊಳಪಟ್ಟಿರುವ ಭೂಪ್ರದೇಶವನ್ನು ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಈಗ ಸಂಪೂರ್ಣ ಆಂಧ್ರಪ್ರದೇಶದ ರೆಡ್ಡಿಗಳು, ಕಮ್ಮ ಕಾಪು ಜನಗಳದ್ದೇ ಮೇಲುಗೈ. ಕೃಷ್ಣ ಮೇಲ್ದಂಡೆ ನೀರಾವರಿ ಯೋಜನೆಗಳ ಸಿಂಹಪಾಲು ಲಾಭವನ್ನು ಪಡೆದುಕೊಳ್ಳುತ್ತಿರುವ ರಾಯಚೂರಿನಲ್ಲಿ ಮೂಲ ಕನ್ನಡಿಗರು ನಿರಾಶ್ರಿತರಾಗಿದ್ದಾರೆ; ನೆಲೆ ಕಳೆದುಕೊಂಡು ಪರದಾಡುತ್ತಿದ್ದಾರೆ.

ಇಲ್ಲಿ ನಾನು ಪ್ರಸ್ತಾಪ ಮಾಡಿರುವುದು ಮೂರು ಗಂಭೀರ ನಿದರ್ಶನಗಳು ಮಾತ್ರ. ವಾಸ್ತವವಾಗಿ ನಶಿಸಿ ಹೋಗುತ್ತಿರುವ ಕನ್ನಡ, ಕನ್ನಡಿಗರ ಪ್ರಾಬಲ್ಯ, ದಿನದಿಂದ ದಿನಕ್ಕೆ ವೃದ್ಧಿಗೊಳ್ಳುತ್ತಿರುವ ಕನ್ನಡೇತರರ ಪ್ರಭುತ್ವಕ್ಕೆ ಇಡೀ ಕರ್ನಾಟಕವನ್ನೇ ನಿದರ್ಶನವಾಗಿಟ್ಟುಕೊಳ್ಳುವಂತಹ ದಯನೀಯ ಪರಿಸ್ಥಿತಿಯಲ್ಲಿ ಕನ್ನಡ-ಕನ್ನಡಿಗರಿದ್ದಾರೆ. ನಿಜವಾಗಿ ಹೇಳಬೇಕೆಂದರೆ, ವರ್ಷದಿಂದ ವರ್ಷಕ್ಕೆ, ದಶಕದಿಂದ ದಶಕಕ್ಕೆ ಕರ್ನಾಟಕ ಒಂದು ಪುಟ್ಟ ದ್ವೀಪವಾಗುತ್ತಿದೆ. ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ವಿಜೃಂಭಿಸುತ್ತಿರುವ ಬೆಂಗಳೂರು ಮುಂದೊಂದು ದಿನ ಕನ್ನಡಿಗರ ಕೈತಪ್ಪಿ ಹೋಗಿ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆಗೊಂಡರೆ ಕರ್ನಾಟಕದ ಜನರು ಆಶ್ಚರ್ಯಪಡಬೇಕಿಲ್ಲ. ವಾಸ್ತವವಾಗಿ ಕನ್ನಡಿಗರ ಔದಾಸೀನ್ಯದ ಪರಿಣಾಮವಾಗಿ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಳ್ಳುವ ಸರ್ವರೀತಿಯ ಅರ್ಹತೆಗಳನ್ನು ಈಗ ಮೈಗೂಡಿಸಿಕೊಳ್ಳುತ್ತಿದೆ. ಕನ್ನಡಿಗರು ಎಚ್ಚರಗೊಳ್ಳದಿದ್ದರೆ, ಘಟಿಸಬಹುದಾದ ಅಪಾಯವನ್ನು ತಪ್ಪಿಸಲು ಸಾಧ್ಯವೇ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.

ಇಂತಹ ಆತಂಕಕಾರಿ ಪರಿಸ್ಥಿತಿಗೆ ಕಾರಣವಾದರೂ ಏನು? ಕರ್ನಾಟಕದಲ್ಲಿ ಕನ್ನಡಿಗರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಎದೆ ಎತ್ತಿ ನಿಲ್ಲಲು ಸಾಧ್ಯವಾಗದಿರುವುದಕ್ಕೆ ಕಾರಣವಾದರೂ ಏನು? ಹಿಮಾಲಯದೆತ್ತರದ ಅಖಂಡ ಕರ್ನಾಟಕದ ಪರಿಕಲ್ಪನೆ, ಕನ್ನಡಿಗರ ಅಸಂಘಟಿತ ಧೋರಣೆಯಿಂದ ಹಿಮದಂತೆ ಕರಗಿ ಹೋಗುತ್ತಿದೆಯೆ? ಹೌದು. ಕನ್ನಡ-ಕರ್ನಾಟಕವನ್ನು "ಕನ್ನಡ ಚಿಂತನೆ"ಯ ನೆಲಗಟ್ಟಿನಲ್ಲಿ ಮುನ್ನಡೆಸುವ ಅಖಂಡ ಕನ್ನಡ ರಾಜಕೀಯ ಶಕ್ತಿಯ ಕೊರತೆಯ ಕಾರಣದಿಂದಾಗಿ ಕನ್ನಡದ ಹಿತ ಸಂಪೂರ್ಣ ಸೊರಗಲಾರಂಭಿಸಿದೆ. "ವೈವಿಧ್ಯತೆಯ ನಡುವೆ ಅಖಂಡತೆ" ಎನ್ನುವ ಅಡಿಪಾಯದ ಭಾರತೀಯ ಸಂಸದೀಯ ಪ್ರಜಾಸತ್ತೆ, ಪ್ರಾಂತೀಯವಾರು ಮತ್ತು ಭಾಷಾವಾರು ಪ್ರದೇಶಗಳು ಅಸ್ತಿತ್ವವನ್ನು ಮಾನ್ಯ ಮಾಡಿದೆ. ಹೀಗಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ, ನಿರ್ದಿಷ್ಟ ಭಾಷೆಯನ್ನು ಮಾತನಾಡುವ ಜನರು, ಆ ಪ್ರದೇಶಕ್ಕೇ ಸೀಮಿತಗೊಂಡ ಹಾಗೆ ಪ್ರಾದೇಶಿಕ ಪಕ್ಷವೊಂದನ್ನು ರಚಿಸಿಕೊಂಡು, ಅಲ್ಲಿನ ಭಾಷೆ, ಸಂಸ್ಕೃತಿಯ ಹಿತವನ್ನು ಕಾಪಾಡಿಕೊಂಡು, ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಮುಂದುವರಿಯುವುದಕ್ಕೆ ಸಂವಿಧಾನಾತ್ಮಕವಾಗಿ ಯಾವುದೇ ಎಡರು ತೊಡರುಗಳೇನು ಇಲ್ಲ.

ಇದರ ಪರಿಣಾಮವಾಗಿ, ಪ್ರಾಯಶಃ ಇಡೀ ಭರತಖಂಡದಲ್ಲಿಯೇ ಮೊತ್ತಮೊದಲ ಬಾರಿಗೆ, ಭಾಷೆ ಮತ್ತು ಪ್ರಾದೇಶಿಕ ಹಿತವನ್ನು ಕಾಪಾಡುವ ಕಾರ್ಯಕ್ರಮದನ್ವಯ, ತಮಿಳುನಾಡಿನ ಮಹಾನ್ ಚಿಂತಕ ಇ.ವಿ.ರಾಮಸ್ವಾಮಿ ನಾಯ್ಕರ್ ಅವರ ಚಿಂತನೆಯ ಮೂಸೆಯಲ್ಲಿ ಅರಳಿ ರೂಪುಗೊಂಡ ಜನಾಂದೋಲನ ಹಾಗೂ ಜನಸಂಘಟನೆಯೇ ದ್ರಾವಿಡ ಕಜಗಂ. ಈ ದ್ರಾವಿಡ ಕಜಗಂ ಕೇವಲ ನಗರ ಪ್ರದೇಶಗಳಲ್ಲಿ ಚಿತ್ರಮಂದಿರಗಳಿಗೆ ಕಲ್ಲು ಹೊಡೆಯುವ, ಹಣವಿದ್ದವರನ್ನು ಬೆದರಿಸಿ, ಹಣ ಕೀಳುವ ಕೆಳಮಟ್ಟದ ಚಳವಳಿಯಾಗದೆ, ಇಡೀ ಜನಸಮುದಾಯದ ಸಮಗ್ರ ಹಿತರಕ್ಷಣೆಯ ಆಂದೋಳನವಾಗಿ ತಮಿಳುನಾಡಿನಾದ್ಯಂತ ಬೇರುಬಿಡಲಾರಂಭಿಸಿತು. ಜನಪರ ಹಾಗು ಶೋಷಿತ ಸಮುದಾಯದ ಪರ ತನ್ನ ನಿಲುವು-ಆಶಯಗಳನ್ನು ಪ್ರತಿಪಾದಿಸಿದ ದ್ರಾವಿಡ ಕಜಗಂ, ಒಂದು ವೈಚಾರಿಕ ಹಾಗು ಪ್ರಜ್ಞಾವಂತ ಜನಪರ ಸಂಘಟನೆಯಾಗಿ ರೂಪುಗೊಳ್ಳಲಾರಂಭಿಸಿತು. ಮೇಲ್ವರ್ಗಗಳ ಶೋಷಣೆಗೆ ಗುರಿಯಾಗಿದ್ದ ತಮಿಳು ಜನಸಮುದಾಯದ ಅಂತರಂಗದ ಸುಪ್ತ ಭಾವನೆಗಳಿಗೆ ದನಿಯಾಗಲಾರಂಭಿಸಿತು. ರಾಷ್ಟ್ರೀಯ ಮುಖ್ಯವಾಹಿನಿಯ ಪಕ್ಷಗಳಿಂದ ಸಾಧ್ಯವಾಗದ ಭಾಷಾವಾರು ಮತ್ತು ಪ್ರದೇಶವಾರು ಹಿತರಕ್ಷಣೆ ದ್ರಾವಿಡ ಕಜಗಂನಂತಹ ಪ್ರಾದೇಶಿಕ ಜನ ಸಂಘಟನೆಯಿಂದ ಸಾಧ್ಯ ಎನ್ನುವ ಅಂಶ ಜನರಿಗೆ ಮನವರಿಕೆಯಾಗತೊಡಗಿತು.

ಜನಹಿತದ ಪರಮೋಚ್ಛ ಗುರಿಯನ್ನು ಹೊಂದಿದ್ದ ದ್ರಾವಿಡ ಕಜಗಂ ತನ್ನ ಸ್ಪಷ್ಟ ಸೈದ್ಧಾಂತಿಕ ಚೌಕಟ್ಟು, ಜನಪರ ಆಶಯಗಳಿಂದ ತಮಿಳುನಾಡಿನ ಬಹುಜನರ ಮನೆಯ ಮಾತಾಯಿತು. ಆರಂಭದ ದಿನಗಳಲ್ಲಿ ರಾಜಕೀಯೇತರ ಸಂಘಟನೆಯಾಗಿದ್ದ ದ್ರಾವಿಡ ಕಜಗಂ, ಹೊಸದೊಂದು ರಾಜಕೀಯ ಸಿದ್ಧಾಂತ ಹಾಗೂ ಶಕ್ತಿಯ ಜನನಕ್ಕೆ ಕಾರಣವಾಯಿತು. ದ್ರಾವಿಡ ಕಜಗಂ ಪ್ರತಿಪಾದಿಸಿದ ತತ್ತ್ವಸಿದ್ಧಾಂತಗಳಿಂದ ಪ್ರಭಾವಿತರಾದ ಅನೇಕ ಮಂದಿ ದ್ರಾವಿಡ ಮುನ್ನೇತ್ರ ಕಜಗಂ ಎನ್ನುವ ರಾಜಕೀಯ ಸಂಘಟನೆಯನ್ನು ರೂಪಿಸಿ, 1967ರಿಂದ ಅವಿಚ್ಛಿನ್ನವಾಗಿ ತಮಿಳುನಾಡಿನ ಅಧಿಕಾರಸೂತ್ರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅನೇಕ ಓರೆಕೋರೆಗಳ ನಡುವೆಯೂ ತಮಿಳುನಾಡಿನ ಜನತೆಗೆ ದ್ರಾವಿಡ ಮುನ್ನೇತ್ರ ಕಜಗಂ ಮತ್ತು ಅಣ್ಣಾ ದ್ರಾವಿಡ ಮುನ್ನೇತ್ರ ಕಜಗಂ ಪಕ್ಷಗಳೇ ಇಂದಿಗೂ ಮಾನ್ಯವಾಗಿವೆ. ಈ ಪಕ್ಷಗಳು ಪ್ರಾದೇಶಿಕ ಹಿತವೇ ಪರಮೋಚ್ಛ ಎಂದು ನಂಬಿ ಅಡಿಯಿಡುತ್ತಿರುವುದರಿಂದ ತಮಿಳುನಾಡಿನಲ್ಲಿ ಅಭಿವೃದ್ಧಿಯ ಚಕ್ರ ಯಶಸ್ವಿಯಾಗಿ ಸುತ್ತುತ್ತಿದೆ.

ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷದ ಯಶಸ್ಸಿನ ಕತೆ ಇದಾದರೆ, ನೆರೆಯ ಮತ್ತೊಂದು ರಾಜ್ಯ ಮಹಾರಾಷ್ಟ್ರದಲ್ಲಿ "ಶಿವಸೇನೆ' ಮರಾಠಿಯೇತರ ಜನಸಮುದಾಯಕ್ಕೆ ಸಿಂಹಸ್ವಪ್ನವಾಗಿದೆ. 1967ರ ಆಸುಪಾಸಿನಲ್ಲಿ ಶಿವಾಜಿ ಮಹಾರಾಜರ ಪರಂಪರೆಯಲ್ಲಿ ಸ್ಥಾಪನೆಗೊಂಡ ಶಿವಸೇನೆ ಹಂತಹಂತವಾಗಿ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿತು. ಮರಾಠಿ ಮಾತನಾಡುವ ಜನಸಮುದಾಯದ ಸಾರ್ವಭೌಮ ರಾಜಕೀಯ ಸಂಘಟನೆಯಾಗಿ ರೂಪುಗೊಂಡಿತು. ಶಿವಸೇನೆಯ ಬಳುವಳಿಯಾದ ಪ್ರತಿಯೊಬ್ಬ ಶಿವಸೈನಿಕ "ಹೌದು ಶಿವಸೇನೆ ಕೋಮುವಾದಿ ರಾಜಕೀಯ ಸಂಘಟನೆಯೆ, ಮುಸ್ಲಿಮರ ದಾಳಿಯಿಂದ ತತ್ತರಿಸಿ ಹೋಗಿದ್ದ ಹಿಂದೂ ಸಾಮ್ರಾಜ್ಯವನ್ನು ಸಂರಕ್ಷಿಸುವ ದೃಷ್ಟಿಯಿಂದ ಛತ್ರಪತಿ ಶಿವಾಜಿ ನಡೆಸಿದ ಹೋರಾಟವನ್ನು ಹಸಿರಾಗಿರಿಸುವುದೇ ಶಿವಸೇನೆಯ ಗುರಿ" ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಶಿವಸೇನೆಯ ಪರಮೋಚ್ಛ ನಾಯಕ ಬಾಳಠಾಕ್ರೆ ಮಹಾನ್ ಕೋಮುವಾದಿಯಂತೆ ಕಂಡುಬಂದರೂ, ಮರಾಠರ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಲ್ಲಿ ಶಿವಸೇನೆಯನ್ನು ಶಿಸ್ತುಬದ್ಧ ಸಂಘಟನೆಯನ್ನಾಗಿ ರೂಪಿಸಿದ ಹೆಗ್ಗಳಿಕೆಗೆ ಪಾತ್ರನಾದ ನಾಯಕ. ಸ್ವಯಂ ವ್ಯಂಗ್ಯಚಿತ್ರಕಾರ ಹಾಗೂ ಪತ್ರಕರ್ತನಾದ ಬಾಳಠಾಕ್ರೆಗೆ ಮಹಾನ್ ದೂರದೃಷ್ಟಿ. ನಿರ್ದಿಷ್ಟ ಕಾರ್ಯಕ್ರಮ ಹಾಗೂ ತನ್ನದೇ ಆದ ತತ್ತ್ವಸಿದ್ಧಾಂತವನ್ನು ಮೈಗೂಡಿಸಿಕೊಂಡು ಶಿವಸೇನೆ ಮಹಾರಾಷ್ಟ್ರದಲ್ಲಿ ಶಿಸ್ತುಬದ್ಧ ಸಂಘಟನೆಯಾಗಿ ರೂಪುಗೊಳ್ಳಲು ಈ ಬಾಳಠಾಕ್ರೆ ನೀಡಿದ ಕೊಡುಗೆ ಅಪಾರ. ಇದರ ಪರಿಣಾಮವಾಗಿ ಶಿವಸೇನೆ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಮುಖ್ಯವಾಹಿನಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಭಾರತೀಯ ಜನತಾಪಕ್ಷಕ್ಕೆ ಸರಿಸಾಟಿಯಾಗಿ ಬೆಳೆದು ಮಹಾರಾಷ್ಟ್ರದ ಅಧಿಕಾರಸೂತ್ರ ಹಿಡಿಯುವಷ್ಟು ಜನಮನ್ನಣೆ ಗಳಿಸಿತು. ಒಂದು ಶಕ್ತ ಜನಸಂಘಟನೆಯಾಗಿ ರೂಪುಗೊಂಡಿತು.

ಇನ್ನು ಕರ್ನಾಟಕದ ಗಡಿಯಲ್ಲಿರುವ ಮತ್ತೊಂದು ರಾಜ್ಯ ಆಂಧ್ರಪ್ರದೇಶ, ತೆಲುಗರ ಸ್ವಾಭಿಮಾನವನ್ನು ಎತ್ತಿಹಿಡಿಯುವ ಘೋಷಣೆಯೊಡನೆ ಜನ್ಮತಾಳಿದ ತೆಲುಗು ದೇಶಂ ಪಕ್ಷ, ಆಂಧ್ರಪ್ರದೇಶದಲ್ಲಿ ಬಿರುಗಾಳಿಯಾಯಿತು. ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ಪ್ರಭುತ್ವವನ್ನು ಧೂಳಿಪಟ ಮಾಡಿತು. ದಿವಂಗತ ಎನ್.ಟಿ.ರಾಮರಾವ್ ಹೊತ್ತಿಸಿದ ಸೊಡರು ಆಂಧ್ರಪ್ರದೇಶದಾದ್ಯಂತ ಪ್ರಜ್ವಲಿಸಿತು. ತೆಲುಗು ಭಾಷೆಯನ್ನೆ ಮಾತನಾಡುವ ಪ್ರಾದೇಶಿಕ ಹಿತದ ಪರಮೋಚ್ಛ ಗುರಿ ಹೊಂದಿರುವ ತೆಲುಗುದೇಶಂ ಆಂಧ್ರ ಪ್ರದೇಶದಲ್ಲಿ ಎರಡು-ಮೂರು ಬಾರಿ ಅಧಿಕಾರಸೂತ್ರ ಹಿಡಿದದ್ದು ಮಾತ್ರವಲ್ಲದೆ, ಸದ್ಯ ಆಂಧ್ರ ರಾಜಕಾರಣದ ಪ್ರಬಲ ರಾಜಕೀಯ ಶಕ್ತಿಯಾಗಿದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರಾದೇಶಿಕ ಹಿತರಕ್ಷಣೆ ಮಾಡುವ, ಆ ನಿದರ್ಿಷ್ಟ ಪ್ರದೇಶದ ಭಾಷೆ, ನೆಲ, ಜನದ ಸಮಸ್ಯೆಗಳಿಗೆ ಸಮರ್ಥ ಉತ್ತರ ನೀಡುವ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿ ನೆಲೆಯೂರುವುದು ಸಾಧ್ಯವಾಗುವು ದಾದರೆ, ಕನರ್ಾಟಕದಲ್ಲಿ ಅಂತಹ ಪ್ರಾದೇಶಿಕ ಪಕ್ಷ ಈವರೆಗೆ ಸಾಧ್ಯವಾಗದಿರುವುದಾದರೂ ಏಕೆ?

ಕರ್ನಾಟಕ ಏಕೀಕರಣವಾಗಿ ಸುಮಾರು ಐವತ್ತಮೂರು ವರ್ಷಗಳು ಮುಗಿದಿದೆ. ಈ ನಾಲ್ಕೂವರೆ ದಶಕಗಳ ಅವಧಿಯಲ್ಲಿ ಕನ್ನಡದ ಹಿತ ಸಂರಕ್ಷಿಸುವ ಒಂದು ವ್ಯವಸ್ಥಿತ ಸಂಘಟನೆ ಈವರೆಗೂ ರೂಪುಗೊಳ್ಳುವುದು ಸಾಧ್ಯವೇ ಆಗಿಲ್ಲ. ಕಾದಂಬರಿ ಸಾರ್ವಭೌಮ ಅ.ನ.ಕೃಷ್ಣರಾವ್, ಮ.ರಾಮಮೂರ್ತಿ, ಕೋಣಂದೂರು ಲಿಂಗಪ್ಪ ಅವರುಗಳು ಪ್ರಾರಂಭಮಾಡಿದ ಕನ್ನಡ ಚಳವಳಿ ಕ್ರಮೇಣದ ದಿನಗಳಲ್ಲಿ ಒಂದು ರಾಜಕೀಯ ಸಂಘಟನೆಯಾಗಿ ರೂಪುಗೊಳ್ಳುವಷ್ಟರ ಮಟ್ಟಿಗೆ ಪರಿಪಕ್ವತೆ ಹಾಗೂ ಪ್ರಬುದ್ಧತೆಯನ್ನು ಪಡೆದುಕೊಳ್ಳಲಿಲ್ಲ. ಕೆಲವು ಸ್ವಾರ್ಥಸಾಧಕರು, ಕಿಡಿಗೇಡಿಗಳ ಕೈಗೆ ಸಿಕ್ಕ ಕನ್ನಡ ಚಳವಳಿಗೆ ಸೈದ್ಧಾಂತಿಕ ಸ್ಪರ್ಶ ದೊರೆಯುವುದು ಸಾಧ್ಯವೇ ಆಗಲಿಲ್ಲ. ಕನ್ನಡ ಚಳವಳಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವುದು, ಅದಕ್ಕಾಗಿ ಹಣ ಸಂಗ್ರಹಿಸುವುದು, ಪ್ರಚಾರ ಬೇಕು ಎಂದಾಗ ಇಂಗ್ಲಿಷ್ ನಾಮಫಲಕಗಳಿಗೆ ಟಾರ್ ಬಳಿಯುವುದು, ಕತ್ತೆಗೆ ಸನ್ಮಾನ ಮಾಡುವುದು, ಕೋಡಂಗಿಯಂತೆ ಕುಣಿಯುವುದರಿಂದಲೇ ಕನ್ನಡದ ಸಮಗ್ರ ಹಿತರಕ್ಷಣೆ ಎಂದು ಈ ಕಿಡಿಗೇಡಿಗಳು ಭಾವಿಸಿದರು. ಆದರೆ ಗೋಕಾಕ್ ಚಳವಳಿಯ ನಂತರ, ಕನ್ನಡದ ಹಿತರಕ್ಷಣೆಯ ಪ್ರಾದೇಶಿಕ ಪಕ್ಷ ರೂಪುಗೊಳ್ಳುವ ಆಶಾಕಿರಣ ಮೂಡಿತು. ವಾಸ್ತವವಾಗಿ ಕ್ರಾಂತಿರಂಗ ಮತ್ತು ಜನತಾ ಪಕ್ಷಗಳಿಗೆ ಕರ್ನಾಟಕದ ಜನತೆ "ಪ್ರಾದೇಶಿಕ ಪಕ್ಷ" ಎನ್ನುವ ಗುಂಗಿನಲ್ಲಿಯೇ ಮತ ನೀಡಿದರು. ಆದರೆ, ಈ ಪಕ್ಷಗಳು ನಂತರದ ದಿನಗಳಲ್ಲಿ ನಡೆದುಕೊಂಡ ರೀತಿ, ಕಾಂಗ್ರೆಸ್ಗಿಂತ ಭಿನ್ನವಾಗೇನೂ ಇರಲಿಲ್ಲ.

ಖ್ಯಾತ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಹರಿದು ಹಂಚಿಹೋಗುತ್ತಿದ್ದ ಕನ್ನಡ ಶಕ್ತಿಯನ್ನು ಒಂದೇ ನೆಲೆಯಲ್ಲಿ ಸಂಘಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಈ ಕನ್ನಡ ಶಕ್ತಿಗೊಂದು ನಿರ್ದಿಷ್ಟ ಕಾರ್ಯಕ್ರಮ, ಸೈದ್ಧಾಂತಿಕ ಸ್ಪರ್ಶ ನೀಡುವ ಪ್ರಯತ್ನ ಮಾಡಿದರು. ಇದರ ಪರಿಣಾಮವಾಗಿ ಕನ್ನಡ ಶಕ್ತಿ ಕೇಂದ್ರ ಸ್ಥಾಪನೆಗೊಂಡು ರಾಜ್ಯದಾದ್ಯಂತ ವ್ಯಾಪಿಸಿತು. ಆದರೆ, ಕನ್ನಡ ಶಕ್ತಿ ಕೇಂದ್ರ ಈಗ ಕನ್ನಡ ನಿಶ್ಶಕ್ತಿ ಕೇಂದ್ರವಾಯಿತು. ಡಾ.ಚಿದಾನಂದ ಮೂರ್ತಿಯವರಿಗೆ ಮುಪ್ಪಡರಿದ ಹಾಗೆ ಕನ್ನಡ ಶಕ್ತಿ ಕೇಂದ್ರವೂ ಸೊರಗಿತು. ಇನ್ನು ಕನ್ನಡದ ಹಿತದ ಬಗ್ಗೆ ಮಾತನಾಡುವ ಕಾಸಿಗೊಂದು, ಕೊಸರಿಗೊಂದು ಕನ್ನಡ ಸಂಘಟನೆಗಳಿವೆ. ಈ ಯಾವುದೇ ಕನ್ನಡ ಸಂಘಟನೆಗೆ ನಿದರ್ಿಷ್ಟ ಕಾರ್ಯಕ್ರಮವಿಲ್ಲ. ಎಲ್ಲವೂ ಭಾವಾವೇಶದ ಪಟಾಕಿಗಳು. ಈ ಹಿನ್ನೆಲೆಯಲ್ಲಿ ಕರ್ನಾಟಕ, ಕನ್ನಡ, ಕಾವೇರಿ, ಕೃಷ್ಣೆ, ಬೆಳಗಾವಿಯ ರಕ್ಷಣೆಯ ಜೊತೆಗೆ ಈ ನೆಲದಲ್ಲಿ ಬದುಕುವ ಜನರ ಜೀವನಮಟ್ಟ ಸುಧಾರಣೆ ಮಾಡುವ, ಅವರ ಬಡತನ ದಾರಿದ್ರ್ಯ ನಿವಾರಣೆ ಮಾಡುವ ಶೋಷಿತ ಸಮುದಾಯದ ಪರವಾಗಿ ದನಿ ಎತ್ತುವ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎನ್ನುವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳುವ ಕಾರ್ಯಕ್ರಮಾಧಾರಿತ, ಶಿಸ್ತುಬದ್ಧ "ಕನ್ನಡ ಜನಪರ ಸಂಘಟನೆ" ಈಗ ಅಗತ್ಯವಿದೆ.

ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಗೊಂಡು ಪ್ರಾರಂಭದ ದಿನದಿಂದಲೂ ಕನ್ನಡ ಸಾಹಿತ್ಯ, ಕನ್ನಡಿಗ, ಕರ್ನಾಟಕದ ಬಗ್ಗೆ ಜನಾಭಿಪ್ರಾಯವನ್ನು ಪರಿಣಾಮಕಾರಿಯಾಗಿ ಮೂಡಿಸುತ್ತಲೇ ಬಂದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ನಡೆಸುವ ಸಾಹಿತ್ಯ ಸಮ್ಮೇಳನ ಒಂದು ಜಾತ್ರೆಯಾಗಿದೆಯೇ ಹೊರತು ಕನ್ನಡದ ಜನಮನಸವನ್ನು ಬಡಿದೆಚ್ಚರಿಸುವ ಯಾವುದೇ ರೀತಿಯ ರಚನಾತ್ಮಕ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳಿಂದ ಸಾಕಾರಗೊಳ್ಳುತ್ತಿಲ್ಲ. ನಿಜ ಹೇಳಬೇಕೆಂದರೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕದ ನೆಲ, ಜಲ, ಭಾಷೆಯ ಸಂರಕ್ಷಣೆಗೆ ಅತ್ಯಂತ ಸಂಘಟನಾತ್ಮಕ ಕಾರ್ಯಕ್ರಮವನ್ನು ರೂಪಿಸಬೇಕು. ಇದರ ಜೊತೆಗೆ ಇತ್ತೀಚಿನ ದಶಕಗಳಲ್ಲಂತೂ ನೆರೆ ರಾಜ್ಯಗಳಿಂದ ಕರ್ನಾಟಕದ ಮೇಲೆ ದಾಳಿಯಿಡುತ್ತಿರುವ ಕನ್ನಡೇತರರ ಉಪಟಳ ಸಹಿಸಲಸಾಧ್ಯವಾಗುತ್ತಿದೆ.

"ಮಣ್ಣಿನ ಮಕ್ಕಳಿಗೆ ಉದ್ಯೋಗ" ಎನ್ನುವ ನೀತಿಗೆ ಅಧಿಕಾರಕ್ಕೆ ಬರುವ ಯಾವುದೇ ಸಕರ್ಾರ ಬದ್ಧವಾಗಬೇಕು ಎನ್ನುವ ಸಿದ್ಧಾಂತವನ್ನು ಸಾಹಿತ್ಯ ಪರಿಷತ್ತು ಎತ್ತಿ ಹಿಡಿಯಬೇಕು. ಕರ್ನಾಟಕದ ನೆಲೆದಲ್ಲಿ ಬದುಕುವ ಯಾವುದೇ ವ್ಯಕ್ತಿ ಕನ್ನಡೀಕರಣಗೊಳ್ಳಬೇಕು, ಕನ್ನಡಿಗನಾಗಿ ಬದುಕಬೇಕು ಎನ್ನುವುದಕ್ಕೆ ಗಂಭೀರವಾದ ಒತ್ತು ನೀಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ದಿಸೆಯಲ್ಲಿ ಕನ್ನಡ ಸಾಹಿತ್ಯಪರಿಷತ್ತು ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಕಾಲಕಳೆಯುವುದರಲ್ಲೇ ನಿರತವಾಗಬಾರದು. ಸದ್ಯಕ್ಕಂತೂ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ಇದೇ ಕೆಲಸ. ಇದಕ್ಕೆ ಕಾರಣ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾತ್ಮಕ ಸ್ವರೂಪ. ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾಗುವ ಅಧ್ಯಕ್ಷ ಕೇವಲ ಒಂದೇ ಅವಧಿಗೆ ಅಧ್ಯಕ್ಷನಾಗಿ ಆಯ್ಕೆಯಾಗಬೇಕು. ಈ ಅವಧಿ ಕೇವಲ ಮೂರೇ ವರ್ಷ ಎಂದು ಸಾಹಿತ್ಯ ಪರಿಷತ್ತಿನ ಸಂವಿಧಾನಕ್ಕೆ ತಿದ್ದುಪಡಿ ತಂದಿರುವುದು ಆಯ್ಕೆಗೊಳ್ಳುವ ಯಾವುದೇ ಪರಿಷತ್ ಅಧ್ಯಕ್ಷ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ರೂಪಿಸಲು ನಿಜವಾದ ಅಡ್ಡಿಯಾಗಿದೆ. ಈ ದಿಸೆಯಲ್ಲಿ ಪರಿಷತ್ತಿನ ಸಂವಿಧಾನಕ್ಕೆ ತಿದ್ದುಪಡಿಯನ್ನು ತರುವುದು ಅತ್ಯಂತ ಅಗತ್ಯವಾದ ಕೆಲಸ ಆಗಿದೆ. ಎರಡನೇ ಅವಧಿಗೆ ಅದೇ ವ್ಯಕ್ತಿ ಸಾಹಿತ್ಯ ಪರಿಷತ್ ಅಧ್ಯಕ್ಷತೆಗೆ ಸ್ಪರ್ಧಿಸಬಾರದು ಎನ್ನುವ ನಿಷೇಧವೇನೋ ಸರಿ. ಆದರೆ, ಆಯ್ಕೆಗೊಳ್ಳುವ ಪರಿಷತ್ನ ಅಧ್ಯಕ್ಷರ ಅವಧಿಯನ್ನು ಕನಿಷ್ಠ ಐದು ವರ್ಷಗಳಿಗೆ ವಿಸ್ತರಿಸಿದಾಗ ಮಾತ್ರ ಅಂತಹ ವ್ಯಕ್ತಿಯಿಂದ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಬಹುದು.

ಸಧ್ಯ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಇಂತಹದ್ದೊಂದು ಚಿಂತನೆಗೆ ಚಾಲನೆ ದೊರೆತರೆ ಕನ್ನಡ ಸಾಹಿತ್ಯ ಪರಿಷತ್ ನಿಜವಾಗಿಯೂ ಕನ್ನಡದ ಕೈಂಕರ್ಯದಲ್ಲಿ ಅರ್ಥಪೂರ್ಣವಾಗಿ ತೊಡಗಬಹುದು. ಆಗ ಮಾತ್ರ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಪ್ರಾತಿನಿಧಿಕ ಸಂಸ್ಥೆ ಎನ್ನುವ ಹೆಸರು ಅನ್ವರ್ಥಪೂರ್ಣವಾಗುತ್ತದೆ.

೭೭ನೇ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ
































































































































































































ಬೆಂಗಳೂರಿನಲ್ಲಿ ಪ್ರಾರಂಭವಗುತ್ತಿರುವ 77ನೇಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ - ನಿಮ್ಮ ನುಡಿನಮನದಲ್ಲಿ! ಯಾವ ಯಾವ ಘೋಷ್ಟಿಗ್ಲುಂಟು ಈ ಬಾರಿ? ಸಂಮಾನಗಳಾರಾರಿಗೆ? ಅದರಲ್ಲಿ ಒಂದನ್ನ ಪರಿಚಿತ ಮುಖವಿದೆಯೇ? ಅದು ಸರಿ ಯಾರ್ಯಾರು ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಸ್ಟೇಜ್ ಹತ್ತುತ್ತಿದ್ದಾರೆ? ಯಾವ ವಿಷಯ? ಏನು ಮಾತು? ಈ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಕ್ಲಿಕ್ಕಿಸಿ ಆಹ್ವಾನ ಪತ್ರಿಕೆಯನ್ನು ಪಡೆಯಿರಿ















































ಕಸಾಪ ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್ - ವಿಶೇಷ ಸಂದರ್ಶನ.


ನುಡಿ-ನಮನ, ಆಲೆಮನೆ ಬಳಗಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್ ಅವರು ಕೊಟ್ಟ ವಿಶೇಷ ಸಂದರ್ಶನ.
ಸಂದರ್ಶಿಸಿದವರು -ಡಾ.ಹೆಚ್.ವಿ.ವೇಣುಗೋಪಾಲ್



1. ನಲ್ಲೂರು ಪ್ರಸಾದ್ ಅವರೆ, ಇದು ನಿಮ್ಮ ನಾಯಕತ್ವದಲ್ಲಿ ಎರಡನೆಯ ಸಮ್ಮೇಳನ, ಕಳೆದ ಬಾರಿ ಚಿತ್ರದುರ್ಗದಲ್ಲಿ ಸಮ್ಮೇಳನವನ್ನು ಆಯೋಜಿಸಿದ್ದೀರಿ. ಸಾಹಿತ್ಯ ಪರಿಷತ್ತಿನ ಇದುವರೆವಿಗಿನ ಸಮ್ಮೇಳನಕ್ಕಿಂತ ಈ ಸಮ್ಮೇಳನ ಹೇಗೆ ಭಿನ್ನ?


- ಇದುವರೆಗೆ 75 ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸಿಕೊಂಡು ಬಂದಿದೆ. ಈ ಎಲ್ಲ 75 ಸಮ್ಮೇಳದಲ್ಲಿಯೂ ಕೂಡ ವೈಶಿಷ್ಟ್ಯತೆ ಅಂದರೆ ನಾಡಿನ ಮತ್ತು ನುಡಿಯ ಬಗೆಗೆ ಹಲವಾರು ಸಮಸ್ಯೆಗಳನ್ನು ಕುರಿತು ಆಯಾಕಾಲದ ವೇದಿಕೆ ಚರ್ಚಿಸಿದೆ. ಕನ್ನಡ ನಾಡಿನ ಒಂದು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವಂತಹ ರೀತಿಯಲ್ಲಿ ಈ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ನಾಡಿನಾದ್ಯಂತ ಇರುವಂತಹ ವಿದ್ವಾಂಸರನ್ನು ಕರೆಸಿ, ಅವರ ವಿಚಾರವನ್ನು ಇಲ್ಲಿ ಮಂಡಿಸುವಂತಹ ಕೆಲಸವನ್ನು ಈ ಪರಿಷತ್ತು ಮಾಡುತ್ತಿದೆ. ಕಾಲದಿಂದ ಕಾಲಕ್ಕೆ ಸಮ್ಮೇಳನದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಆಗಿದೆ. ಮೊದಲು ಸಮ್ಮೇಳನ ಅಂದರೆ ಹೆಚ್ಚು ಜನಾಕರ್ಷಣೆ ಇಲ್ಲದಿದ್ದಂತಹ ಕಾಲ ಇತ್ತು. ಆಗ ಸುಮಾರು ಸಾವಿರದ ಲೆಕ್ಕದಲ್ಲಿ ಜನ ಬರುತ್ತಿದ್ದರು. ಈಗ ಅದರ ಪ್ರಮಾಣ ಸಾಕಷ್ಟು ದೊಡ್ಡದಾಗಿದೆ. ಲಕ್ಷಗಟ್ಟಲೆ ಆಗಿದೆ. ಕಳೆದ ಬಾರಿ ನಮಗೆ 3.5ರಿಂದ 4 ಲಕ್ಷ ಜನ ಬಂದಿದ್ದರು ಎಂದು ಒಂದು ಅಂದಾಜು ಸಿಕ್ಕಿದೆ. ಇಲ್ಲಿಗೆ ಬರುವ ಜನರ ಆಸಕ್ತಿಯೂ ಕೂಡ ವಿಭಿನ್ನವಾಗಿರುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಸಾಹಿತ್ಯದ ಸಂಗತಿಗಳನ್ನು ಕುರಿತು ಚರ್ಚಿಸುವುದು ಅಷ್ಟೇ ಅಲ್ಲ, ಬದಲಾಗಿ ಒಟ್ಟು ಕನ್ನಡಿಗರ ಹಿತಚಿಂತನೆಗಳನ್ನು ಕುರಿತು ಚರ್ಚಿಸುವ ಒಂದು ವೇದಿಕೆ ಎಂಬ ನೆಲೆಯ ಮೇಲೆ ಈಗ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವಲ್ಲಿಗೆ ನಾವು ತಲುಪಿದ್ದೇವೆ.

ಕಳೆದವರ್ಷ ನಾನು ಅಧಿಕಾರ ಸ್ವೀಕಾರ ಮಾಡಿದ ಹೊಸ್ತಿಲಲ್ಲೇ ಚಿತ್ರದುರ್ಗದಲ್ಲಿ 75ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಾಡಬೇಕಾದ ಒಂದು ಅನಿವಾರ್ಯ ಸ್ಥಿತಿ ಬಂತು. ಕಳೆದ ಬಾರಿಯೂ ಅದೇ ರಿತಿಯ ಒಂದು ಬದಲಾವಣೆಗಳನ್ನು ನಾನು ಮಾಡಿಕೊಂಡಿದ್ದೆ. ಈ ಬಾರಿ ಕೂಡ ಅದೇ ರೀತಿಯಾದಂತಹ, ಒಂದಷ್ಟು ಹೆಚ್ಚು ಜನರನ್ನು ತಲುಪುವ ನೆಲೆಯೊಳಗೆ ಕೆಲವು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಎಲ್ಲಾ ಜನರಿಗೂ ಬೇಕಾಗಿರುವಂತಹ ನುಡಿ, ಭಾಷೆ, ಚಿಂತನೆಗಳಿಗೆ ಸಂಬಂಧಿಸಿದಂತಹ ಸಾಹಿತ್ಯದ ಸ್ವರೂಪ, ಅದರ ಬದಲಾವಣೆ, ಬೆಳವಣಿಗೆಗಳನ್ನು ಕುರಿತಾದಂತಹ ವಿಚಾರಗಳು ಆಗಿದೆ. ಅದರ ಜೊತೆಗೆ ನಾಡಿನ ಜನರ ಸಮಸ್ಯೆಗಳಾದಂತಹ ಹಲವು ಸಂಗತಿಗಳನ್ನು ಅಲ್ಲಿ ಪ್ರಸ್ತಾಪ ಮಾಡಿದ್ದೇವೆ. ಅದರಲ್ಲಿ ಮುಖ್ಯವಾದಂತಹದ್ದು ಅಂತ ನಾನು ಭಾವಿಸಿಕೊಂಡಂತದ್ದು, ಬೇಸಾಯ ಮತ್ತು ಬದುಕು. ಪ್ರಸ್ತುತ ಸಂದರ್ಭದಲ್ಲಿ ರೈತನ ಬದುಕು ಒಂದು ಶೋಚನೀಯ ಸ್ಥಿತಿಯನ್ನು ತಲುಪಿದೆ ಆ ಎಲ್ಲಾ ಸಮಸ್ಯೆಗಳಿಗೆ, ಪರಿಷತ್ತು ಬಾಯಾಗಬೇಕಿದೆ. ಮೌನವಾಗಿ ಕುಳಿತುಕೊಳ್ಳುವಂತಹದ್ದು ನಾವು ಮಾಡುವಂತಹ ಅಪರಾಧ. ಯಾಕೆಂದರೆ, 'ಅನ್ನ ದೇವರುಗಳಿಗಿಂತ ಇನ್ನು ದೇವರುಗಳಿಲ್ಲ' ಅನ್ನೋ ಮಾತಾಗಲೀ 'ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು' ಅನ್ನೋ ಮಾತಾಗಲಿ ಈಗ ಹೆಚ್ಚು ಅರ್ಥಪೂರ್ಣವಾಗಿದೆ.

ಹೀಗಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವಂಥಹ ರೈತನ ಬಗೆಗೆ ನಾವಿಲ್ಲಿ ಕುರಿತು ಮಾತಾಡಬೇಕಾಗಿದೆ. ಆ ಕ್ಷೇತ್ರದಲ್ಲಿ ಪರಿಣತರಾದಂತ ಜನರನ್ನು ಕರೆಸಿ, ಹಲವಾರು ವಿಚಾರಗಳನ್ನು ನಾವು ಮಾತಾಡುತ್ತಿದ್ದರೆ, ಜಾಗತೀಕರಣ ಮತ್ತು ರೈತ ಹೋರಾಟ, ಹಸಿವು ದುಡಿಮೆ ಮತ್ತು ಲಾಭಕೋರತನ, ಬೇಸಾಯ ಮತ್ತು ಮಹಿಳೆ, ಹಾಗು ರೈತ ಕೂಲೀ ಕಾರ್ಮಿಕರು. ಈ ರೀತಿಯ ವಿಷಯಗಳನ್ನು ಕುರಿತು ಒಂದು ದೊಡ್ಡ ಪ್ರಮಾಣದ ಚರ್ಚೆಯನ್ನು ನಡೆಸುವಂತಹ ಕೆಲಸವನ್ನು ಇಲ್ಲಿ ಮಾಡುತ್ತಿದ್ದೇವೆ. ಅದರಲ್ಲಿ ಕಡಿದಾಳು ಶಾಮಣ್ಣನಂಥವರು, ಈರಯ್ಯ ಕಿಲ್ಲೆದಾರ್, ಕೋಡಿಹಳ್ಳಿ ಚಂದ್ರಶೇಖರ್, ಟಿ.ಆರ್.ಚಂದ್ರಶೇಖರ್ ಅವರುಗಳು, ಬೇಸಾಯ ಮತ್ತು ಮಹಿಳೆ ಎಂಬುದರ ಬಗೆಗೆ ಶ್ರೀಮತಿ. ಬಿ.ಅನಸೂಯಮ್ಮ, ರೈತ ಕೂಲಿ ಕಾಮರ್ಿಕರಿಗೆ ಸಂಬಂಧಿಸಿದಂತೆ ಎಸ್.ಎನ್.ಮಂಜುನಾಥ್ ದತ್ತ ಮುಂತಾದವರೆಲ್ಲರೂ ಇದ್ದಾರೆ. ಇವರೆಲ್ಲರೂ ಕೂಡ ಆಯಾ ಕ್ಷೇತ್ರದಲ್ಲಿ ಅಪಾರವಾಗಿ ಕೆಲಸ ಮಾಡಿದಂಥವರು. ರತ ಸಂಘಟನೆಯೊಳಗೆ ತಮ್ಮನ್ನು ತೊಡಗಿಸಿಕೊಂಡಂಥವರು. ಈ ಹಿನ್ನೆಲೆಯ ಒಳಗೆ ಇಂತಹ ಒಂದು ಅಪರೂಪದ ವ್ಯವಸ್ಥೆಯನ್ನು ಕೂಡ ಮಾಡಿದ್ದೇವೆ.

2. ಸಾರ್, ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ತಿರುವು ಪಡೆದುಕೊಂಡಿರುವ ಇಂತಹ ಸಾಹಿತ್ಯಿಕ ಜಾತ್ರೆಗಳು ಕಾಲ ಕಳೆದಂತೆ ವಿದ್ವಾಂಸರನ್ನು ಆಕರ್ಷಿಸುವುದರಲ್ಲಿ ಕಡಿಮೆಯಾಗಿ ರಾಜಕಾರಣಗಳನ್ನು ಅಪ್ಪಿಕೊಳುತ್ತಿದೆ ಎಂಬ ಪುಕಾರು ಕಾಲದಿಂದ ಇರುವುದರ ಬಗ್ಗೆ ತಾವು ಏನೆನ್ನುತ್ತೀರಿ. ಮತ್ತು ಈ ಪುಕಾರಿಗೆ ಈ ವರ್ಷದ ಸಮ್ಮೇಳನ ಹೇಗೆ ಉತ್ತರಿಸುತ್ತದೆ?

- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಬರುವ ಮುನ್ನ, ಹಾಗು ಬಂದ ನಂತರದಲ್ಲಿ ಒಳಗೆ ಕುಳಿತು ವಿವರಗಳನ್ನು ತಿಳಿದು ನಾನು ಕೆಲವು ನಿಲುವನ್ನು ತಾಳಿದ್ದೇನೆ. ಪರಿಷತ್ತಿನ ಹಾಗು ನಾಡು-ನುಡಿಯ ಬೆಳವಣಿಗೆಯ ದೃಷ್ಟಿಯಿಂದ ಯಾವುದನ್ನೂ ನಾನು ನಿರಾಕರಿಸಿರಲಿಲ್ಲ. ರಾಜಕಾರಣವನ್ನೂ, ಧರ್ಮವನ್ನೂ, ಎಲ್ಲವನ್ನೂ ನಿರಾಕರಿಸಿದ್ದಲ್ಲ. ಆದರೆ ಸಕಾರಾತ್ಮಕವಾಗಿ ಬಂದರೆ ಮಾತ್ರ ಧರ್ಮ, ರಾಜಕೀಯ ಇತ್ಯಾದಿ ಯಾವುದೇ ವಿಚಾರವನ್ನು ಸ್ವೀಕರಿಸುತ್ತೇನೆ, ನಕಾರಾತ್ಮಕವಾದ ರೀತಿಯಲ್ಲಿ ಬಂದರೆ ನಾನು ಸ್ವೀಕರಿಸುವುದಿಲ್ಲ, ಬದಲಾಗಿ ಅದರಿಂದ ದೂರ ಇರುತ್ತೇನೆ. ಆದ್ದರಿಂದ ನಾನು ಬಹಳ ಬಾರಿ ಹೇಳಿದ್ದೇನೆ, ಗಾಂಧೀಗಿಂತ ದೊಡ್ಡ ರಾಜಕಾರಣಿ, ಗುರು ಯಾರು? ಅವರಿಗಿಂತ ಜನಪರವಾಗಿ ಸಮಾಜಕ್ಕೆಂದು ಚಿಂತೆ ಮಾಡಿದ ದೊಡ್ದವರಾರು? ಹಾಗಾಗಿ ನಾವು ಆ ನಿಟ್ಟಿನಲ್ಲಿ ಎಲ್ಲವನ್ನೂ ಕನ್ನಡ ಸಾಹಿತ್ಯಕ್ಕೆ ಬಳಸಿಕೊಳ್ಳುತ್ತಿದ್ದೇವೆ. ರಾಜಕಾರಣವನ್ನು ನಾನು ಹೇಗೆ ಬಳಕೆ ಮಾಡಿಕೊಳ್ಳುತ್ತೇನೆ ಅಂದರೆ, ಒಂದು ಇನ್ಫ್ರಾಸ್ಟ್ರಕ್ಚರ್ಗೆ-ಸಂಪನ್ಮೂಲ ಕ್ರೋಢೀಕರಣಕ್ಕೆ. ಸಮ್ಮೇಳನದಂತಹ ಬೃಹತ್ ವ್ಯವಸ್ಥೆಯನ್ನು ಮಾಡೊ ಸಂದರ್ಭದಲ್ಲಿ ಅದರ ಅಗತ್ಯವೂ ಇದೆ ನಮಗೆ. ಅದು ಬಿಟ್ಟರೆ ನಾನು ಗೋಷ್ಠಿಯಲ್ಲಿ ಬೇರೊಂದು ಕಡೆ ಎಲ್ಲಿಯೂ ಕೂಡ ಅವರನ್ನು ಬಳಕೆ ಮಾಡಿಕೊಂಡಿಲ್ಲ ಅನ್ನೋದನ್ನು ತಾವು ಗಮನಿಸಬಹುದು.

ಈ 76ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಇರಬಹುದು, ಅಥವಾ 75ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಇರಬಹುದು, ಹೀಗೆ ಸಂಬಂಧ ಪಡದೇ ಇರುವಂತಹ ವಿಚಾರಗಳಲ್ಲಿ ಅವುಗಳನ್ನು ಎಲ್ಲಿಯೂ ಬಳಕೆ ಮಾಡಿಕೊಳ್ಳುವುದಿಲ್ಲ. ರಾಜಕಾರಣದಲ್ಲೂ ಕೂಡ ಸಾಹಿತ್ಯಾಸಕ್ತರು, ರಂಗಭೂಮಿ ಆಸಕ್ತರು, ಸುಮಾರು ಜನ ಇದ್ದಾರೆ. ಹಾಗೆಯೇ ಸಾಹಿತ್ಯಾಸಕ್ತ ಮಠಮಾನ್ಯಗಳಿದ್ದಾವೆ. ಇವೆಲ್ಲವನ್ನೂ ದೂರ ಮಾಡಿ ಸಮ್ಮೇಳನವನ್ನು ಮಾಡಬೇಕೆನ್ನುವುದನ್ನೂ ನಾನು ಒಪ್ಪುವುದಿಲ್ಲ. ಧರ್ಮಗುರುಗಳಿಗೂ ರಾಜಕಾರಿಣಿಗಳಿಗೂ ದೊರೆತ ಜಾಗಕ್ಕೆ ಸಮನಾಗಿ ಒಬ್ಬ ಜನಸಾಮಾನ್ಯನಿಗೂ ಅಲ್ಲಿ ದೊರೆಯಬೇಕು ಅಂತ ನನ್ನ ವಾದ ಇದೆ.
ಇನ್ನು ವಿದ್ವಾಂಸರಿಗೆ ಸ್ಥಾನ ಕಡಿಮೆಯಾಗಿದೆ ಎಂಬ ಮಾತಿನ ಬಗ್ಗೆ ಹೇಳುವುದಾದರೆ, ಪೂರ್ಣ ಅಕೆಡೆಮಿಕ್ ಆದಂತಹ, ಉನ್ನತ ಮಟ್ಟದಲ್ಲಿರುವಂತಹ ವಿದ್ವಾಂಸರು ಅಲ್ಲಿಗೆ ಆಗಮಿಸಬೇಕೆಂದು ನನ್ನ ಆಶಯ. ವೈವಿಧ್ಯಮಯವಾದ ವಿಷಯಗಳನ್ನು ಅಲ್ಲಿ ಪ್ರಸ್ತಾಪ ಮಾಡುವುದು, ಎಲ್ಲ ಜನಗಳಿಗೂ ವಿಚಾರಗಳನ್ನು ತಲುಪಿಸುವಂತಹ ಕೆಲಸ ಮಾಡುವುದು ನನ್ನ ಉದ್ದೇಶ. ಹಿಂದೆ ಒಮ್ಮೆ ನಾಡು ನುಡಿ ಚಿಂತನೆ ಬಗೆಗೆ, ತೀವ್ರತರವಾದಂತಹ ಕೆಲಸಗಳನ್ನು ಮಾಡುತ್ತಿರುವಂಥವರನ್ನು ಕರೆಯಿಸಿದಾಗ, ತೀವ್ರವಾದೀ ಬೆಂಬಲಿಗರಿಗೆ ಜಾಗ ಕೊಟ್ಟಿದ್ದೀರಿ ಎಂಬ ವಿವಾದ ಕೂಡಾ ಹುಟ್ಟಿಕೊಂಡಿತ್ತು. ಆದರೆ ಈ ಬಗೆಗೆ ನನ್ನ ಮುಖ್ಯವಾದ ಉದ್ದೇಶವೇ ಬೇರೆ. ಸಮ್ಮೇಳನದಲ್ಲಿ ಹಲವಾರು ಚಿಂತನೆಗಳು, ಹಲವಾರು ಸೈದ್ಧಾಂತಿಕ ಸಂಗತಿಗಳು ನಮ್ಮೆಲ್ಲರನ್ನೂ ಕೂಡ ಬೇರೆ ಬೇರೆ ಆಗಿಸುತ್ತವೆ. ನಾನೆಲ್ಲರೂ ಒಂದೊಂದು ನೆಲೆಯೊಳಗಿರುತ್ತೀವಿ. ನಾನು ಒಂದು ನೆಲೆಯಲ್ಲಿ, ಇನ್ನೊಬ್ಬ ಸಾಹಿತಿ ಒಂದು ನೆಲೆಯಲ್ಲಿ, ನನಗೊಂದು ರಾಜಕೀಯ ಚಿಂತನೆಗಳಿರುತ್ತದೆ, ಹಾಗೆಯೇ ಇನ್ನೊಬ್ಬನಿಗೆ ಇನ್ನೊಂದು ತರಹದ ರಾಜಕೀಯ ಚಿಂತನೆಗಳಿರುತ್ತದೆ. ಅದು ಅಭಿಪ್ರಾಯ ಭೇದವೇ ವಿನಾ ಶತ್ರುತ್ವವಲ್ಲ. ಅಭಿಪ್ರಾಯ ಭೇದಗಳೂ ಕೂಡಾ, ಕನ್ನಡ ನಾಡಿನ ಒಳಿತಿಗೆ ಆಗುವುದಾದರೆ ಒಂದು ಚರ್ಚೆಯ ಮೂಲಕ ಒಂದು ತೀರ್ಮಾನಕ್ಕೆ ಬರುವುದಾದರೆ, ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎನ್ನುವುದು ನನ್ನ ವಾದ.

3. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ- ಇಂದಿನ ಪರಿಸ್ಥಿತಿ ಏನು, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಸಂಬಂಧಪಟ್ಟಂತೆ ಬಂದ ಸಂಗತಿಯ ಸಂದರ್ಭದೊಳಗಡೆ ನಾನು ಹೇಳಿದಂತಹ ಸಂಗತಿಯೊಳಗಡೆ, ಇಲ್ಲಿ ಹತ್ತಾರು ಪಕ್ಷಗಳು ಇರಬಹುದು, ನೂರಾರು ರಾಜಕಾರಣಿಗಳಿರಬಹುದು, ಆದರೆ ನೀವು ರಾಜಕಾರಣವನ್ನು ಮರೆತು, ಪಕ್ಷವನ್ನು ಮರೆತು ಇಲ್ಲಿ ಕನ್ನಡದ ವಿಚಾರಕ್ಕಷ್ಟೇ ನೀವು ತೊಡಗಿಸಿಕೊಳ್ಳತಕ್ಕಂತಹ ಅನಿವಾರ್ಯತೆಯನ್ನು ಗಮನಿಸಿ ಈ ಮಾತನ್ನು ಹೇಳಿದ್ದೇನೆ. ಶಾಸ್ತ್ರೀಯ ಭಾಷೆ ಬರುವುದಕ್ಕಿಂತ ಮುಂಚೆ ನಡೆದ ಒಂದು ಹೋರಾಟದ ಸಂದರ್ಭದೊಳಗೆ ಇದನ್ನು ಪ್ರಸ್ತಾಪ ಮಾಡಿದ್ದೆ. ಎಲ್ಲಾ ಪಕ್ಷದವರಿಗೂ ಈ ಮಾತನ್ನು ಹೇಳಿದ್ದೆ. ಇವತ್ತೂ ಕೂಡ ನಾನು ಆ ಮಾತನ್ನು ಹೇಳುತ್ತಿದ್ದೀನಿ. ಇತ್ತೀಚೆಗೆ ನಡೆದ ಮಡಿಕೇರಿ ಸಾಹಿತ್ಯ ಸಮ್ಮೇಳನದೊಳಗೆ ಕೂಡ ಈ ಮಾತನ್ನು ಹೇಳಿದೆ. ಅನ್ಯ ರಾಜ್ಯದವರು ರಾಜಕಾರಣ ಮಾಡುವ ಸಂದರ್ಭದಲ್ಲಷ್ಟೇ ಪಕ್ಷದ ಬಗ್ಗೆ ಮಾತನಾಡುತ್ತಾರೆ.

ಆದರೆ ಭಾಷೆಯ ವಿಚಾರ ಬಂದಾಗ, ನಾಡಿನ ವಿಚಾರ ಬಂದಾಗ, ನೆಲದ ವಿಚಾರ ಬಂದಾಗ, ಅವರೆಲ್ಲ ಒಗ್ಗೂಡುವಂತಹ ಒಂದು ಒಳ್ಳೆಯ ಗುಣವನ್ನು ತೋರಿಸುತ್ತಾರೆ. ಇದು ಸರಿಯಾದರೀತಿ ಎಂಬುದು ನನ್ನ ವಾದ. ನಮ್ಮಲ್ಲೂ ಅಂಥದೇ ಭಾವನೆಗಳು ಕನ್ನಡವನ್ನು ಕಟ್ಟುವ ಕೆಲಸ ಮಾಡುತ್ತಿವೆ. ಇದು ಒಳ್ಳೆಯ ಬೆಳವಣಿಗೆ. ಗಾಂಧಿ ಅನ್ನುವವರು ಒಬ್ಬರು ಅದನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಸಕರ್ಾರ ಮತ್ತು ನಾನು ಕೂತು ಮಾತನಾಡಿದ್ದೇವೆ. ನಾನು 2-3 ಸಭೆಗಳಿಗೆ ಹೋಗಿ ಮಾತನಾಡಿದ್ದೆ. ಆ ಸಂದರ್ಭದಲ್ಲಿ ನಾನು ಸರ್ಕಾರವನ್ನು ಕೇಳಿದ್ದು ಏನೆಂದರೆ, ನೀವು ಪ್ರತಿವಾದಿಯಾಗಿ ಹೋಗಲಿಕ್ಕೆ ಇಷ್ಟವಿಲ್ಲವಾದರೆ ಕನ್ನಡ ಸಾಹಿತ್ಯ ಪರಿಷತ್ತು ಆ ಕೆಲಸವನ್ನು ಮಾಡುತ್ತದೆ. ಅದಕ್ಕೆ ಅವಕಾಶ ಕಲ್ಪಿಸಿಕೊಡಿ ಅನ್ನೊ ಮಾತನ್ನು ಹೇಳಿದೆ. ಆಗ ಸರ್ಕಾರದ ಪರವಾಗಿ ಬಂದಂತಹ ಮುಖ್ಯಮಂತ್ರಿ ಚಂದ್ರು ಅವರು-ಇಲ್ಲ, ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಅದಕ್ಕೆ ಕಂಕಣಬದ್ಧವಾಗಿದೆ ಅನ್ನೋ ಮಾತನ್ನು ಹೇಳಿದರು.

4. ಈಗ ಕನ್ನಡ ಹಾಗು ಶಾಸ್ತ್ರೀಯ ಸ್ಥಾನಮಾನ ವಿಷಯದ ಚರ್ಚೆ ನಾವು ಮಾಡುತ್ತಿರುವುದರಿಂದ ಇನ್ನೊಂದು ಬಹಳ ಮುಖ್ಯವಾಗಿ ಚರ್ಚಿಸಬೇಕು ಅಂತ ಅನ್ನಿಸುತ್ತದೆ. ಕಳೆದ 2-3 ವರ್ಷಗಳಲ್ಲಿ ಬಹಳ ಚರ್ಚಿತವಾದಂತಹ ಸಂಗತಿ ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಭಾಷಾ ಕಲಿಕೆ. ಈ ಸಮ್ಮೇಳನದ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯವೇನು?

ಒಂದು ನಿಲುವನ್ನು ನಾವು ಗಟ್ಟಿಯಾಗಿ ತಿಳಿದುಕೊಳ್ಳಬೇಕು. ಭಾಷಾ ನೀತಿ ಏನಿದೆ, ಅದು ಪ್ರಾಥಮಿಕ ಹಂತದ ಒಳಗಡೆ ದೇಶಭಾಷೆಯಲ್ಲೇ ಕಲಿಸಬೇಕು. ನಾನು ಇಲ್ಲಿ ಮಾತೃಭಾಷೆಯನ್ನು ದೇಶಭಾಷೆಯೆಂದೇ ಕರೆಯುತ್ತೇನೆ. ಯಾಕೆಂದರೆ, ಮಾತೃಭಾಷೆ ಎಂದ ತಕ್ಷಣ ಅದರಲ್ಲಿ ಅಪಾಯ ಏನಿದೆ ಅಂದರೆ, ಒಬ್ಬನಿಗೆ ತನ್ನ ಮಾತೃಭಾಷೆ ತಮಿಳು ಆಗಿದ್ದು - 'ಈಗ ಬೆಂಗಳೂರಿನಲ್ಲಿದ್ದೇನೆ, ಆದರೂ ನಾನು ನನ್ನ ಮಾತೃಭಾಷೆ ತಮಿಳಲ್ಲಿ ಕಲಿಯುತ್ತೀನಿ' ಅನ್ನುವುದು ತಪ್ಪು. ಯಾವ ದೇಶದಲ್ಲಿ ಅಥವಾ ಯಾವ ರಾಜ್ಯದಲ್ಲಿ ನಾವು ವಾಸ ಮಾಡುತ್ತಿದ್ದೇವೆಯೋ ಆ ನೆಲದ ಭಾಷೆ ನಮ್ಮ ಭಾಷೆಯಾಗಬೇಕಾಗಿದೆ . ಈ ಹಿನ್ನೆಲೆಯೊಳಗೆ ನಮಗೆ ಪ್ರಾಥಮಿಕ ಹಂತದೊಳಗಡೆ, ದೇಶಭಾಷೆಯನ್ನು ಕಲಿಸಬೇಕಾದಂತಹ ಅನಿವಾರ್ಯವಾಗಿಬಿಟ್ಟಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನಾನು, ಅನಂತಮೂರ್ತಿಯವರು, ಪಂಡಿತಾರಾಧ್ಯ ಮುಂತಾದವರೆಲ್ಲಾ ಸೇರಿ ಒಂದು ಕೇಸ್ ಹಾಕಿದ್ದೀವಿ. ಇದರಲ್ಲಿ ಪ್ರಾಥಮಿಕ ಹಂತದೊಳಗೆ ಕನ್ನಡಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಅನ್ನೊ ವಿಚಾರವನ್ನೂ ಕೂಡ ಪ್ರಸ್ತಾಪ ಮಾಡಿದ್ದೇವೆ.

5. ಧರ್ಮದ ಬಗ್ಗೆ ಹಾಗು ರಾಜಕಾರಣದ ಬಗ್ಗೆ ಮಾತನಾಡಿದ್ದೀವಿ, ಇಂಥ ಒಂದು ಸಂದರ್ಭಗಳಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಪಾಲ್ಗೊಳ್ಳುವ ಕಾರಣ ಧರ್ಮರಾಜಕಾರಣ ತನ್ನ ಹಿತಾಸಕ್ತಿಯಲ್ಲಿ ಕೆಲಸ ಮಾಡುವುದರ ಬಗ್ಗೆ ಏನು ಹೇಳುತ್ತೀರ?

ಸಾಹಿತ್ಯ ಸಮ್ಮೇಳನದಲ್ಲಿ ಆ ರೀತಿಯಾದಂತವುಗಳಿಗೆ ಅವಕಾಶವಿಲ್ಲ. ಧರ್ಮ ಮತ್ತು ರಾಜಕಾರಣ ಅದು ಸಾಹಿತ್ಯವಾಗಿ ಬಂದರೆ ಮಾತ್ರ ಸ್ವಾಗತ. ಅದು ಬಿಟ್ಟು ಅದು ತನ್ನ ಐಡೆಂಟಿಟಿಯನ್ನು ಉಳಿಸಿಕೊಂಡು ಇಲ್ಲಿಗೆ ಬಂದರೆ ಅದಕ್ಕೆ ಇಲ್ಲಿ ಜಾಗವಿಲ್ಲ. ಇದಕ್ಕೆ ಅದು ತನ್ನನ್ನ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಸ್ಥಿತಿಯೊಳಗೆ ಬಂದರೆ ಮಾತ್ರ ಸ್ವಾಗತ.

6. ಇದು ರೈತಪರ ಸಮ್ಮೇಳನ ಎಂದು ಹೇಳಿದಿರಿ. ಆದರೆ ಮಠಮಾನ್ಯಗಳಿಗೆ ರೈತರ ಹಸಿವಿನ ಬಗೆಗೆ, ಬವಣೆಯ ಬಗೆಗೆ ಮಾತನಾಡುವ ಅಭ್ಯಾಸವಿಲ್ಲ, ಸರ್ಕಾರ ಕೂಡ ಎಷ್ಟೋ ಕಾಲ ರೈತರ ಹಸಿವಿನ ಬಗ್ಗೆ ಮಾತನಾಡುವುದಿಲ್ಲ. ಒಮ್ಮೆ ಹಸಿವನ್ನು ಕುರಿತು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹೇಳಿ ನಂತರ ಕಾರ್ಯಕ್ರಮಗಳಲ್ಲಿ ಅದು ಕಾಣೆಯಾಗುವಂತಹ ಬಹಳ ಉದಾಹರಣೆಗಳು ಇಂದು ಕಾಣುತ್ತಿದೆ. ಹಾಗಾಗಿ ಹೆಚ್ಚಿನ ಮಟ್ಟಿಗೆ ಧರ್ಮ ಹಾಗು ರಾಜಕಾರಣಗಳು ತಮ್ಮನ್ನು ವೈಭವೀಕರಿಸಿಕೊಳ್ಳೋದಿಕ್ಕೆ ಇಂತಹ ಜಾಗಳನ್ನೂ ಆಕ್ರಮಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯದ ಬಗ್ಗೆ ನೀವು ಏನು ಹೇಳುತ್ತೀರಿ?

ಅಂಥಾ ಆಲೋಚನೆಗಳಿಗೆ ಇಲ್ಲಿ ಎಡೆ ಇಲ್ಲ. ಇದನ್ನು ಅತ್ಯಂತ ಸ್ಪಷ್ಟವಾಗಿ ನಾನು ನಿಮಗೆ ಹೇಳುತ್ತಿದ್ದೇನೆ. ಭವಿಷ್ಯತ್ತಿನ ಒಟ್ಟು ಆಶಯಗಳಿಗೆ ಅವರು ಧ್ವನಿಯಾಗಿ ಅವರು ಬರಬೇಕೆ ವಿನಹ ಅವರದ್ದೇ ಆದಂತಹ ಧ್ವನಿ ಅಲ್ಲಿ ಇರುವುದಿಲ್ಲ. ರೈತರ ವಿಚಾರ ಇರಬಹುದು, ಹೋರಾಟದ ವಿಚಾರ ಇರಬಹುದು, ಜನಸಾಮಾನ್ಯರ ವಿಚಾರ ಇರಬಹುದು, ಭಾಷೆಯ ವಿಚಾರ ಇರಬಹುದು, ಇದು ಬಹುಜನರಿಗೆ ಅನುಕೂಲ ಆಗುವಂತಹದ್ದು. ಆನಸಾಮಾನ್ಯರಿಗೆ ಅನುಕೂಲ ಆಗುವಂತಹ ನೆಲೆಯೊಳಗೆ ಆಲೋಚನೆ ಮಾಡುವವರು ಬರಬೇಕೆ ವಿನಹ ಅದನ್ನು ಬಿಟ್ಟು ನಾವು ಮಾತನಾಡುತ್ತೇವೆ ಅನ್ನುವವರು ಸಾಧ್ಯ ಇಲ್ಲ. ಪರಿಷತ್ತು ಇಲ್ಲಿರುವಂತಹ ಕವಿಗೋಷ್ಠಿ ಮುಂತಾದವುಗಳಿಗೂ ಒಂದು ಸ್ವರೂಪಗಳನ್ನು ಕೊಟ್ಟಿರುವಂತಹುದು ಪರಿಷತ್ತೇ ವಿನಹ ಬೇರೆ ಯಾರನ್ನೂ ಕೂಡ ಇಲ್ಲಿ ಪ್ರವೇಶ ಮಾಡುವುದಕ್ಕೆ ನಾನು ಬಿಡುವುದಿಲ್ಲ.

7. ಹೊಸ ತಂತ್ರಜ್ಞಾನ ಇಂದು ದಾಪುಗಾಲು ಇಡುತ್ತಿರುವಂತಹ ಒಂದು ಸಂದರ್ಭದಲ್ಲಿ, ಈ ನಿಟ್ಟಿನಲ್ಲಿ ಪರಿಷತ್ತಿನಿಂದ ಒಂದು ಹೊಸ ವೆಬ್ಸೈಟ್ ತಯಾರಾಗುತ್ತಿದೆ ಎಂಬ - ನೀವು ಹೇಳಿದ ವಿವರದ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ.

ಈ ವಿಚಾರಗೋಷ್ಠಿಯಲ್ಲೂ ಕೂಡ ಒಂದು ವಿಷಯ ಇದೆ, 'ಈ ಜಗತ್ತಿನಲ್ಲಿ ಇ-ಕನ್ನಡ'. ವಾಸ್ತವವಾಗಿ ನಾನು ಆಧುನಿಕ ತಂತ್ರಜ್ಞಾನದ ತಿಳುವಳಿಕೆ ಇಲ್ಲದವನು. ಆದರೆ ಕನ್ನಡ ಭಾಷೆ ಆಧುನಿಕ ಜಗತ್ತಿನೊಳಗೆ ತನ್ನನ್ನು ತೆರೆದುಕೊಳ್ಳಬೇಕು ಅನ್ನುವ ಆಸೆ ಇಟ್ಟುಕೊಡಿರುವವ ನಾನು. ಪ್ರಪಂಚದಲ್ಲಿ ಇರುವಂತಹ ಹಲವು ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬೇಕಾದಂತಹದ್ದು ಕನ್ನಡ ಭಾಷೆ. ಹಳೇ ಕಾಲದ ಹಾಗೆ ಯೋಚನೆ ಮಾಡಿ, ಒಂದು ಸೀಮಿತವಾದಂತಹ ಸ್ವರೂಪದೊಳಗಡೆಯೇ ಪುಸ್ತಕ ಮುದ್ರಣ ಹಾಗು ವಿಮರ್ಶೆ ಮಾತ್ರಗಳು ಈಗ ಸಾಧ್ಯವಿಲ್ಲ. ಜಗತ್ತಿಗೆ ನಮ್ಮನ್ನು ತೆರೆದು ತೋರಿಸಬೇಕಾಗಿದೆ. ಇವತ್ತು ಇಲ್ಲಿ ಕುಳಿತು ಮಾತನಾಡುತ್ತಿರುವಂತಹದ್ದು, ಅಮೇರಿಕಾದ ಮೂಲೆಯಲ್ಲಿ ಹೇಳುತ್ತಿದ್ದೇನೆ ಅನ್ನೋದು ನನಗೆ ಬಹಳ ಸಂತೋಷ ಹಾಗು ಆಶ್ಚರ್ಯ ಕೂಡ ಹೌದು. ಈ ಆಸೆಗಳಿಂದ ನಾನು ಬಂದ ಕ್ಷಣದಿಂದಲೂ ಕೂಡ ಯೋಚನೆ ಮಾಡುತ್ತಾ ಇದ್ದೆ. ನನಗೆ ಅದರ ತಿಳುವಳಿಕೆ ಇಲ್ಲದ್ದಿದ್ದರೂ ಈ ದಿಕ್ಕಿನೊಳಗೆ ಪರಿಷತ್ತನ್ನು ನಡೆಸಬೇಕೆನ್ನುವಂತಹ ಯೋಚನೆ ನನಗಿದೆ.

ಆ ಕಾರಣಕ್ಕಾಗಿ ಈಗ, ವೆಬ್ಸೈಟ್ ಒಂದನ್ನು ಶೀಘ್ರದಲ್ಲೇ ಪ್ರಾರಂಭಿಸುತ್ತಿದ್ದೇವೆ. ಅದರಲ್ಲಿ ಪರಿಪೂರ್ಣವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾದ ದಿನದಿಂದ ಇಲ್ಲಿಯವರೆಗೆ ಏನೇನು ನಡೆದಿದೆ ಅನ್ನುವಂತಹದ್ದು, ಅಲ್ಲಿಂದ ನಡೆದಂಥ ಸಾಹಿತ್ಯ ಸಮ್ಮೇಳನಗಳೆಷ್ಟು? ಪರಿಷತ್ತಿನ ಅಧ್ಯಕ್ಷರು ಯಾರು? ನಡೆದಂತಹ ಕೆಲಸಗಳೇನು? ಪ್ರಕಟನೆಗಳು ಯಾವುವು? ದತ್ತಿನಿಧಿ ಎಷ್ಟು? ನಡೆದಂತಹ ವಿಚಾರಗೋಷ್ಠಿ ಏನೇನು? ಈ ರೀತಿಯಾಗಿರುವಂತಹ ಸರ್ವ ವಿಚಾರಗಳನ್ನು ದಾಖಲಿಸುವ ಕೆಲಸವನ್ನು ಮಾಡಬೇಕೆಂದು ಆಸೆ ಇಟ್ಟುಕೊಂಡಿದ್ದೇನೆ. ಇದಲ್ಲದೆ ಒಂದು ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿದ್ದೇನೆ. ಸರ್ಕಾರದ ನೆರವಿನಿಂದ ಒಂದು ಕೋಟಿ ಹಣವನ್ನು ಪಡೆದು ಮಾಡಿದ ಈ ಅಧ್ಯಯನ ಕೇಂದ್ರದ ಉದ್ಘಾಟನೆಯೂ ಆಗಿದೆ. ಕನ್ನಡದ ಸಮಸ್ತ ಸಂಗತಿಗಳೂ, ಸಾಹಿತ್ಯಕ್ಕೆ ಸಂಬಂಧ ಪಟ್ಟ ವಿಚಾರಗಳು ಬೆರಳ ತುದಿಯಲ್ಲಿ ದೊರಕಬೇಕೆಂಬಂತಹ ಆಸೆಯಿದೆ. ಹಾಗಾಗಿ ತಂತ್ರಜ್ಞರ ಜೊತೆ ಕುಳಿತು ವಿಚಾರಣೆ ಮಾಡಿ ಈ ಯೋಜನೆಗೆಂದೇ ರೂಪಿಸಲಾದ ಕಂಪ್ಯೂಟರ್ಗಳನ್ನು ತರಿಸಿದ್ದೇವೆ.

ಈ ವಿಚಾರಗಳನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಪರಿಣತರನ್ನು ಈಗಾಗಲೇ ಅದಕ್ಕೆ ನಿಯೋಜಿಸುವಂತಹ ಯೋಚನೆಯನ್ನು ಮಾಡಿದ್ದೇನೆ. ಶೀಘ್ರದಲ್ಲೇ ಈ ಎಲ್ಲಾ ವಿಷಯಗಳನ್ನೊಳಗೊಂಡ ನಮ್ಮ ವೆಬ್ಸೈಟ್ ಪ್ರಾರಂಭವಾಗುತ್ತಿದೆ. ನಾವು ಸಮ್ಮೇಳನಗಳ ನಿರ್ಣಯವನ್ನು ಮಾಡಿರುತ್ತೇವೆ. 76 ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳಿವೆ. ಬಹಳಷ್ಟು ಜನ ಪತ್ರಕರ್ತರು ನಿರ್ಣಯಗಳನ್ನು ಏನು ಮಾಡಿದ್ದೀರಿ ಎಂದು ಕೇಳುತ್ತಾರೆ. ಅದನ್ನು ಎಲ್ಲರಿಗೂ ತಲುಪಿಸಲು ಆಗುವುದಿಲ್ಲ. ಹೀಗಾಗಿ ಅವರೆಲ್ಲಾ ಅಂತರ್ಜಾಲದ ಮುಖಾಂತರ ಅದನ್ನು ಪಡೆದುಕೊಳ್ಳಬಹುದು. ಉದಾಹರಣೆಗೆ ಅಧ್ಯಕ್ಷರ ಭಾಷಣ. ಎಲ್ಲರೂ ಭಾಷಣದ ಪ್ರತಿಗಳು ಕೊಡಿ ಎಂದು ಕೇಳುತ್ತಾರೆ. ಬದಲಾಗಿ ಅದನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು. ಸಮ್ಮೇಳನಾಧ್ಯಕ್ಷರ ಭಾಷಣ ಆಗಬಹುದು, ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಸಿಕ ಪತ್ರಿಕೆಯಾದ 'ಕನ್ನಡ ನುಡಿ' ಮುಂತಾದವುಗಳಾಗಬಹುದು, ಎಲ್ಲವನ್ನೂ ಅಂತರ್ಜಾಲದದಿಂದ ಪಡೆಯಬಹುದು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡವನ್ನು ಇನ್ನೂ ಹೆಚ್ಚು ಜನಕ್ಕೆ ತಲುಪಿಸುವಂತಹ ಕೆಲಸವನ್ನು ಪರಿಷತ್ತು ಮಾಡಬೇಕು ಅಂತ ಆಲೋಚನೆ ಮಾಡಿದ್ದೇನೆ. ಆ ದಿಕ್ಕಿನಲ್ಲಿ ಈಗಾಗಲೇ ಹೆಜ್ಜೆ ಇಟ್ಟಿದ್ದೇನೆ.

8. ಈಗ ಸಮ್ಮೇಳನ ಗದಗದಲ್ಲಿ ನಡೆಯುತ್ತಿದೆ. ಗದಗದಲ್ಲಿ ನಡಿಯಬೇಕು ಅಂತ ಹಿಂದಿನ ಸಮ್ಮೇಳನದಲ್ಲಿ ತೀರ್ಮಾನ ಆಗಿರುತ್ತದೆ ಆದರೆ ಇವತ್ತಿನ ಪ್ರಸಂಗದಲ್ಲಿ ಉತ್ತರ ಕರ್ನಾಟಕ ದಲ್ಲಿ ನೆರೆ ಸಂತ್ರಸ್ತರು ಇರುವಾಗ, ಹಸಿವು ವಸತಿ ಸಮಸ್ಯೆಯಿಂದ ತತ್ತರಿಸಿರುವ ಸಾವಿರಾರು ಜನಗಳ ಎದುರು ಇತ್ತೀಚೆಗೆ ಕೋಟ್ಯಾಂತರ ಹಣ ಖರ್ಚು ಮಾಡಿ ಒಂದು ಹಬ್ಬ ಆಗಿದೆ. ಈಗ ಇನ್ನೊಂದು ಹಣದ ಖರ್ಚಿನ ಹಬ್ಬ. ಪರಿಷತ್ತಿನ ಸಮ್ಮೇಳನ ಇಂದು-ನಿನ್ನೆಯದಲ್ಲ. ಇದು ನಿರಂತರ ಆಗುತ್ತಿರಬೇಕೆಂಬುದು ಇಡೀ ಕನ್ನಡ ಜನತೆಯ ಆಶಯ ಆದರೂ ಕೂಡ ಸಂದರ್ಭದ ಹಿನ್ನೆಲೆಯಲ್ಲಿ ನಿಮ್ಮ ಆಲೋಚನೆಗಳು, ನಿಮ್ಮ ಉಪಾಯಗಳು ಏನಿವೆ?

ವಾಸ್ತವವಾಗಿ ನಾನು 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗದಗದಲ್ಲಿ ನಡೆಸಬೇಕೆಂದು ಚಿತ್ರದುರ್ಗ ಸಮ್ಮೇಳನ ಮುಗಿಸಿ ಬಂದ ನಂತರ ತೀರ್ಮಾನ ತೆಗೆದುಕೊಂಡೆವು. ಅದಕ್ಕಾಗಿ ಒಂದು ಪರಿಶೀಲನಾ ಸಮಿತಿಯನ್ನೂ ಕೂಡ ರಚಿಸಿದ್ದೆವು. ಚಂಪಾ ಅವರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿ ಅವರಿಗೆ ಯಾರು ಯಾರು ಸಮ್ಮೇಳನವನ್ನು ಕೇಳುತ್ತಿದ್ದಾರೆಂದು ನೋಡಿಕೊಂಡು ಬರಲು ಹೇಳಿದ್ದೆವು. ಸಮಿತಿ ಶಿಫಾರಸ್ಸು ಮಾಡಿತು ಮತ್ತು ಎಲ್ಲಾ ಕಾರ್ಯಕಾರಿ ಸಮಿತಿ ಒಪ್ಪಿಗೆ ಕೊಟ್ಟಿತು, ಹೀಗೆ ಗದಗದಲ್ಲಿ ಮಾಡಬೇಕೆಂಬ ತೀಮರ್ಾನವನ್ನು ಕೈಗೊಂಡಿದ್ದೆವು. ಸಾಹಿತ್ಯ ಸಮ್ಮೇಳನ ಯಾವಾಗ ಎಂದು ಬಹಳಷ್ಟು ಜನ ಕೇಳುತ್ತಿರುತ್ತಾರೆ. ಹಾಗಾಗಬಾರದು, ಕನ್ನಡ ಸಾಹಿತ್ಯ ಸಮ್ಮೆಳನ ನವೆಂಬರ್ ತಿಂಗಳ ಕಡೆಯ ವಾರದಲ್ಲಿ ನಡೆಯಬೇಕೆಂಬತಹ ನಿಯಮವನ್ನು ರೂಪಿಸಿದ್ದೇನೆ. ಆದರೆ ಪ್ರಕೃತಿ ವಿಕೋಪದ ಕಾರಣದಿಂದ ಆಗ ನಡೆಸಲಾಗಲಿಲ್ಲ. ಅಲ್ಲಿದ್ದ ಜನ ನೆರೆ ಹಾವಳಿಯಿಂದ ತತ್ತರಿಸಿ ಹೋದಾಗ ನಾನೇ ಖುದ್ದಾಗಿ ಅಲ್ಲಿಗೆ ಹೋಗಿ, ಈ ಸಂದರ್ಭದಲ್ಲಿ ಸಮ್ಮೇಳನ ಮಾಡುವುದು ಸೂಕ್ತವಲ್ಲ ಎಂಬ ನಿರ್ಣಯವನ್ನು ನಾನೇ ಕೈಗೊಂಡೆ. ಆನಂತರದಲ್ಲಿ ವಾತಾವರಣ ತಿಳಿಯಾದ ಕಾರಣ ಅಲ್ಲಿರುವಂತಹ ಜನಪ್ರತಿನಿಧಿಗಳು, ಸಾಹಿತಿಗಳು ಮತ್ತು ಆಸಕ್ತರೆಲ್ಲರೂ ಕೂಡ, ಈ ತಿಂಗಳಲ್ಲಿ ನಡೆಸೊಣ ಎಂದು ಹೇಳಿದಾಗ (ಫೆಬ್ರವರಿ 19,20,21ನೇ ತಾರೀಖಿನಂದು) ಇಡೀ ಜನ ನೊಂದು ನಿಂತಿರೊ ಸಂದರ್ಭದೊಳಗೆ ನಮ್ಮ ಸಂಭ್ರಮದ ಆಚರಣೆ ಸಲ್ಲದು ಅನ್ನುವುದೇ ನನ್ನ ಆಶಯ. ಹಾಗಾಗಿ ಅತೀ ಅದ್ದೂರಿಯ ವಾತಾವರಣದಲ್ಲಿ ಸಮ್ಮೇಳನ ಇರಬಾರದು ಅನ್ನುವುದನ್ನು ಅಲ್ಲಿಯ ಸ್ವಾಗತ ಸಮಿತಿಗೆ ಮತ್ತು ಇಲ್ಲಿಯವರೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.

ಈ ವಿಚಾರದಲ್ಲಿ ನನಗೆ ಒಂದಷ್ಟು ಕಾಳಜಿ ಇದೆ. ಅದರಲ್ಲಿ ಮೊದಲನೆಯದಾಗಿ ಅದ್ದೂರಿಯ ಮೆರವಣಿಗೆಗೆ ವಿದಾಯ ಹೇಳಿದ್ದೇನೆ. ಊಟೋಪಚಾರದಲ್ಲೂ ಕೂಡ ಹೀಗೆಯೇ ಇರಬೇಕೆಂದು ಹೇಳಿದ್ದೇನೆ. ಬಂದವರೆಲ್ಲರಿಗೂ ಊಟ ಕೊಡಬೇಕು ಹಾಗು ಎಲ್ಲರಿಗೂ ಒಂದೇ ತರಹದ ಊಟದ ವ್ಯವಸ್ಥೆ ಆಗಬೇಕು. ಭೂರೀ ಭೋಜನದ ಅಗತ್ಯ ಇಲ್ಲ. ಜನಸಾಮಾನ್ಯರಿಗೆ ಶುಚಿ-ರುಚಿಯಾದ ಊಟವನ್ನು ನೀಡಬೇಕೆಂದು ಸ್ವಾಗತ ಸಮಿತಿಯವರೆಗೆ ಮೊದಲೇ ಹೇಳಿದ್ದೇನೆ. ಅದನ್ನು ಅವರೆಲ್ಲರೂ ಒಪ್ಪಿದ್ದಾರೆ. ಈ ರೀತಿಯ ವಾತಾವರಣವನ್ನು ನೋಡಿದಾಗ, ಎಲ್ಲಾ ಕಡೆಯು ನಾವು ಸಾಕಷ್ಟು ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಿದ್ದೇನೆ. ಕಡೆಯ ದಿನದ ವಿಚಾರ ಗೋಷ್ಠಿಯಲ್ಲಿ ಇದರ ಬಗ್ಗೆಯೂ ಒಂದು ವಿಷಯ ಇದೆ. ರಹಮದ್ ತರಿಕೆರೆ ಅವರು ಈ ವಿಚಾರವನ್ನು ಕುರಿತು ಮಾತನಾಡುತ್ತಿದ್ದಾರೆ. ದುರ್ಗದಲ್ಲಿ ನಡೆದ ಸಮ್ಮೇಳನಕ್ಕೆ ನಾನು 'ಶ್ರೀ ಸಾಮಾನ್ಯರ ಸಾಹಿತ್ಯ ಸಮ್ಮೇಳನ' ಅಂತ ಕರೆದಿದ್ದೆ. ಈ ಸಮ್ಮೇಳನ ಒಂದು ರೀತಿಯಲ್ಲಿ ನೊಂದ ಜನರ ನಡುವೆ ನಿಂತು, ಅವರ ಹೆಗಲ ಮೇಲೆ ಕೈ ಇಟ್ಟು ನೊಂದಿದ್ದೀರಿ, ಭಯಪಡಬೇಡಿ, ನಿಮ್ಮ ಜೊತೆ ನಾವಿದ್ದೇವೆ ಅಂತ ಹೇಳುವಂತಹ 'ಸಾಂತ್ವಾನ ಸಾಹಿತ್ಯ ಸಮ್ಮೇಳನ' ಅಂತ ಕರೆಯುವುದಕ್ಕೆ ನಾನು ಇಷ್ಟ ಪಡುತ್ತೇನೆ.

9. ಗೀತಾ ನಾಗಭೂಷಣ ಅವರು ಅಧ್ಯಕ್ಷರಾಗಿದ್ದಾರೆ. ಅವರ ಬಗ್ಗೆ ಒಂದೆರಡು ಮಾತು.

ನನಗಂತೂ ಗೀತಾ ನಾಗಭೂಷಣರ ಆಯ್ಕೆ ಬಗ್ಗೆ ಸಂಪೂರ್ಣ ತೃಪ್ತಿ, ಸಮಾಧಾನ ಮತ್ತು ಸಂತೋಷ ಇದೆ. ಎಲ್ಲಕ್ಕಿಂತ ಬಹುಮುಖ್ಯವಾಗಿ ನನಗನ್ನಿಸುವುದೇನೆಂದರೆ, ಅತ್ಯಂತ ಕೆಳವರ್ಗದಿಂದ ಬಂದಂತಹ ಒಬ್ಬ ಮಹಿಳೆ, ನೋವನ್ನೇ ಉಂಡು, ನೋವನ್ನೇ ಹಾಸಿ ಮಲಗಿಕೊಂಡು, ಆ ಎಲ್ಲಾ ತನ್ನ ಬದುಕಿನ ವಿಚಾರಗಳನ್ನು ಅಕ್ಷರ ರೂಪ ಕೊಟ್ಟು ಸಾಹಿತ್ಯ ಲೋಕದಲ್ಲಿ ಮೇಲೆದ್ದ ಸ್ವರೂಪ ಇದೆಯಲ್ಲಾ, ಅದು, ಮಣ್ಣೊಳಗೆ ಬೀಜ ನೆಟ್ಟು, ಅದು ಮೊಳೆತು, ಚಿಗುರಿ, ಮರವಾಗಿ ಹೂವಾಗಿ ಫಲಿತವಾಗುವಂತಹ ಪ್ರಕ್ರಿಯೆ ಇದೆಯಲ್ಲಾ, ಅಂತಹಾ ಒಂದು ಗಟ್ಟಿತನವನ್ನು ತೋರಿದಂತಹ ದಿಟ್ಟ ಮಹಿಳೆ ಆಕೆ. ಜೊತೆಗೆ ಸಾಹಿತ್ಯಲೋಕದಲ್ಲಿ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಪ್ರಶಸ್ತಿ, ಸಾಹಿತ್ಯ ಅಕ್ಯಾಡೆಮಿಯ ಪ್ರಶಸ್ತಿ, ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ, ಅದಕ್ಕಿಂತ ಹೆಚ್ಚಿನದು ಎಂದರೆ, ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಬಂಡಾಯದ ದನಿ ಅವರು. ಆ ಎಲ್ಲಾ ಹಿನ್ನೆಲೆಯನ್ನು ಗಮನಿಸಿ ಅವರನ್ನು ಈ ಬಾರಿಗೆ ಆಯ್ಕೆ ಮಾಡಿದ್ದೇವೆ. ಇಡೀ ನಾಡಿನ ಜನ ಕನ್ನಡ ಸಾಹಿತ್ಯ ಪರಿಷತ್ತನ್ನು ಹೊಗಳುತ್ತಿದ್ದಾರೆ ಒಳ್ಳೆ ಆಯ್ಕೆ ಎಂದು. ಯಾರನ್ನು ಕೇಳಿದರೂ ಇಂದು ಒಡಕು ಧ್ವನಿ ಬರಲಿಲ್ಲ ಅಂದರೆ ಪರಿಷತ್ತು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ ಇಡುತ್ತಿದೆ ಅನ್ನೊ ನಂಬಿಕೆ ನನಗೆ.

ಧನ್ಯವಾದಗಲು ಸಾರ್, ಸಮ್ಮೇಳನಕ್ಕೆ ನಮ್ಮ ಬಳಗ ಯಶಸ್ಸನ್ನು ಹಾರೈಸುತ್ತದೆ.