ಸುಘೋಷ್ .ಎಸ್. ನಿಗಳೆ ನಮ್ಮ ಆಲೆಮನೆ ಬಳಗದಲ್ಲಿ ಒಬ್ಬರು. ನಮ್ಮ ತಲೆಯಲ್ಲಿ ಗುಂಗಿ ಹುಳ ಬಿಟ್ಟು ಕೊರೆಸುವವರೂ ಇವರೇ, ನಂತರ ಅದರ ಸಾಧನೆಗಾಗಿ ಗೈಡ್ ಮಾಡುವವರೂ ಇವರೇ. ಒಂಥರಾ ಗುರು, ಒಂಥರಾ ಹಿರಿಯ ಮಿತ್ರ. ಅವರು ಇದುವರೆಗಿನ ಕನ್ನಡ ಸಾಹಿತ್ಯ ಸಮ್ಮೇಳನಗಳು ಮತ್ತು ಬ್ಲಾಗುಗಳ ಕುರಿತು ಬರೆದು ನಮ್ಮನ್ನು ಪ್ರೋತ್ಸಾಹಿಸಿದ್ದಾರೆ.



ಸಾಹಿತ್ಯ ಸಮ್ಮೇಳನಕ್ಕೆ ವಿದ್ಯಾರ್ಥಿಗಳಿಂದ ಬ್ಲಾಗಿನ........

ನಾವು ಸಣ್ಣವರಿದ್ದಾಗ ಒಂದು ಆಟವಾಡುತ್ತಿದ್ದೆವು. ಆಟ ಇಷ್ಟೇ. ಯಾವ ಊರಿನ ಹೆಸರುಗನ್ನು ತಿರುಗುಮುರುಗು ಬರೆದರೂ ಅದೇ ಊರಿನ ಹೆಸರನ್ನು ಬರೆಯಬಹುದೋ ಅಂತಹ ಊರುಗಳನ್ನು ಹೇಳುತ್ತ ಹೋಗಬೇಕು. ಆಗ ಮೊದಲ ಗುಂಪಿನ ಮೊದಲ ಹುಡುಗ ಮೊದಲು ಹೇಳುತ್ತಿದ್ದ ಹೆಸರೇ ಗದಗ. ಅಂತಹ ಗದಗದಲ್ಲಿ ಈ ಬಾರಿ ಸಮ್ ಸಾಹಿತ್ಯ ಮೇಳ. ತಿರುಗುಮುರುಗು ಬರೆದರೂ ಸರಿಯಾಗಿ ಉಚ್ಚರಿಸಲ್ಪಡುವ ಗದಗದಲ್ಲಿ ಕಸಾಪ, ಸಾಹಿತ್ಯ ಸಮ್ಮೇಳನದ ದಿನಾಂಕಗಳನ್ನು ತಿರುಗುಮುರುಗು ಮಾಡದಿದ್ದರೆ ಸಾಕು ಅನ್ನುತ್ತಿದ್ದಾರೆ ಬೆಂಗಳೂರು ವಿವಿಯ ವಿದ್ಯಾರ್ಥಿ ಸಿಂಹದ ಮರಿ ಜರ್ನಲಿಸ್ಟ್ ಗಳು. ಅದೇನೆ ಇರಲಿ, ಈ ವಿದ್ಯಾರ್ಥಿ ತಂಡಕ್ಕೊಂದು ಶುಭ ಹೇಳಿ, ಇವರು ನೀಡಿರುವ ಜವಬ್ದಾರಿಯನ್ನು ನಿರ್ವಹಿಸುವಂತಹವನಾಗುತ್ತೇನೆ.

ಸಮ್ಮೇಳನ ಮತ್ತು ಬ್ಲಾಗ್ ಗಳು -

ಕನ್ನಡದಲ್ಲಿ ಸುಮಾರು 900 ಬ್ಲಾಗ್ ಗಳಿವೆ ಎಂದುಕೊಂಡರೂ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಕ್ಷರಶಃ ಬೆರಳೆಣಿಕೆಯಷ್ಟು ಬ್ಲಾಗ್ ಗಳು ಮಾತ್ರ ಸಮ್ಮೇಳನದ ವರದಿ, ಅದರ ಚರ್ಚೆ, ಅದಕ್ಕೆ ಸಂಬಂಧಿಸಿದ ಸುದ್ದಿ, ಚಿತ್ರ ಪ್ರಕಟಿಸುತ್ತವೆ. ಇದು ಆಕ್ಷೇಪಣೆ ಅಥವಾ ಆಗ್ರಹ ಖಂಡಿತ ಅಲ್ಲ. ಫ್ಯಾಕ್ಟ್ ಅಷ್ಟೇ.

ಆದರೆ ಕಳೆದ ಬಾರಿ ಚಿತ್ರದುರ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಮೃತ ಮಹೋತ್ಸವವನ್ನು ಕೆಲವು ಬ್ಲಾಗ್ ಗಳು ಭೇಷ್ ಅನ್ನುವಂತೆ ಕವರ್ ಮಾಡಿದವು. ಕನ್ನಡದ ಟಾಪ್ ಬ್ಲಾಗ್ ‘ಅವಧಿ’ (www.avadhi.wordpress.com) ಸಮ್ಮೇಳನದುದ್ದಕ್ಕೂ ಫೋಟೋ ಹಾಗೂ ಸುದ್ದಿಯ ರಸದೌತಣವನ್ನೇ ಬಡಿಸಿತು. ಕೇವಲ ಸಮ್ಮೇಳನ ಅಷ್ಟೇ ಅಲ್ಲ, ಅದಕ್ಕೆ ಪ್ಯಾರಲಲ್ ಆಗಿ ಚಿತ್ರದುರ್ಗದಲ್ಲಿ ನಡೆದ ಚಟುವಟಿಕೆಗಳ ಬಗ್ಗೆಯೂ ಉತ್ತಮ ನೋಟವನ್ನು ನೀಡಿತು. ಹೊರನಾಡ ಕನ್ನಡಿಗರು ಅವಧಿಯ ಮೂಲಕವೇ ಸಮ್ಮೇಳನ ಅಟೆಂಡ್ ಮಾಡಿದರು.

‘ಕೆಂಡಸಂಪಿಗೆ’ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂಪೂರ್ಣ ಭಾಷವಣವನ್ನು ಪ್ರಕಟಿಸಿ, ಸಾಹಿತ್ಯ ಸಮ್ಮೇಳನವನ್ನು ಯಾಕೆ ಅಟೆಂಡ್ ಮಾಡಬೇಕು ಮತ್ತು ಯಾಕೆ ಮಾಡಬಾರದು ಎಂಬ ಲೇಖನಗಳನ್ನು ಲೇಖಕರಿಂದ ಬರೆಸಿತು.

ಸಾಹಿತ್ಯ ಸಮ್ಮೇಳನದ ಕುರಿತು ‘ಬೇದ್ರೆಬ್ರೈನ್ಸ್’ (http://bedrebrains.blogspot.com) ಕೂಡ ಉತ್ತಮ ಮಾಹಿತಿ ನೀಡಿತು. ಕಳೆದ ಬಾರಿಯ ವಿಶೇಷವೆಂದರೆ ಸಾಹಿತ್ಯ ಸಮ್ಮೇಳನಕ್ಕೆ ಒಂದು ಎಕ್ಸ್ ಕ್ಲೂಸಿವ್ ಬ್ಲಾಗ್ ಆಗಿದ್ದು. ಚಿತ್ರದುರ್ಗದಲ್ಲಿ ಮುಂದಿನ ಸಮ್ಮೇಳನ ಅನ್ನುವ ಘೋಷಣೆ ಹೊರಬೀಳುತ್ತಿದ್ದಂತೆ ಅಲ್ಲಿನ ಹುಡುಗರು ಧುತ್ ಅಂತ ಸಿದ್ಧರಾದರು. ಬ್ಲಾಗ್ ಆರಂಭಿಸಿದರು. ಅದರ ಹೆಸರು ಹೀಗಿತ್ತು - www.ka16kss75.blogspot.com.

ಇದೀಗ ಗದಗ ಸಾಹಿತ್ಯ ಸಮ್ಮೇಳನಕ್ಕೆಂದೇ ಮತ್ತೆ ಒಂದಷ್ಟು ಹುಡುಗರು ಸೇರಿ ಬ್ಲಾಗ್ ಆರಂಭಿಸಿದ್ದಾರೆ. ಅದು ನಿಮ್ಮ ಮುಂದಿದೆ. ಸಮ್ಮೇಳನವನ್ನು ಕವರ್ ಮಾಡಲೆಂದು ಈ ಹುಡುಗರು ಖಡ್ಗ, ಗುರಾಣಿ, ಬಾಕು, ಭಲ್ಲೆ ಎಲ್ಲವನ್ನೂ ಸಿದ್ಧವಾಗಿಟ್ಟುಕೊಂಡಿದ್ದಾರೆ. ಈ ಪ್ರಯತ್ನಕ್ಕೆ ನಿಮ್ಮ ಪ್ರೀತಿಯ ಹಾರೈಕೆಗಳು ಕಮೆಂಟ್ ರೂಪದಲ್ಲಿ ಬರಲಿ ಎಂದು ವಿದ್ಯಾರ್ಥಿಗಳು ಆ(ದೇ)ಶಿಸುತ್ತಿದ್ದಾರೆ.