ನಿಶ್ಶಬ್ದದ ಭೀತಿ


ಏನ್.ಎಸ. ಶಂಕರ್ - ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ, ಇನ್ನೂ ಏನೇನೋ .........
ನಮ್ಮ ಇಂದಿನ ಸಮಾಜದಲ್ಲಿ ಬೃಹದಾಕಾರವಾಗಿ ಎದ್ದಿರುವ ಮೌನದ ಗೋಡೆಗಳ ಕುರಿತು ಬರೆದಿದ್ದಾರೆ. ಚರ್ಚೆ, ಸಂವಾದಗಳಿಗೆ ತಾವೇ ಇಲ್ಲದಂತಹ ನಿಶಬ್ಧವೊಂದು ಇಂದು ಸಮಾಜದಲ್ಲಿ ಮನೆ ಮಾಡಿದೆ. ಒಬ್ಬ ಸೃಜನಶೀಲ ಏನನ್ನಾದರೂ ಬರೆದರೆ ಅದರ ಕುರಿತು ಚರ್ಚೆಯಾಗಲಿ ಎಂದು ಅಪೇಕ್ಷಿಸುವುದು ಸಹಜ. ಆದರೆ ಒಂದು ದಿವ್ಯ ನಿರ್ಲಕ್ಷ್ಯ ಅವರನ್ನು ಎದುರುಗೊಂಡಾಗ ಬರವಣಿಗೆ ಸಾರ್ಥಕವಲ್ಲ ಎನಿಸಿಬಿಡುತ್ತದೆ. ನಾವಿಂದು ಈ ಹಂತ ತಲುಪಿಬಿಟ್ಟಿರುವುದು ಮಹಾದುರಂತವೆ ಸರಿ. ಈ ಕುರಿತು ಏನ್. ಎಸ. ಶಂಕರ್ ಬರೆದ ಮಹತ್ವದ ಲೇಖನ.



ನಿಶ್ಶಬ್ದದ ಭೀತಿ

ಚೀನೀಯರು ತೊಟ್ಟು ನೀರಿನ ಶಿಕ್ಷೆ ಕಂಡು ಹಿಡಿದರೆ ಫ್ರೆಂಚರು ನಿಶ್ಶಬ್ದ ಕಂಡು ಹಿಡಿದರು ಎಂದು ಬರೆಯುತ್ತಾನೆ ಪ್ಯಾಪಿಲಾನ್.
ಪ್ರಾಚೀನ ಚೀನಾದಲ್ಲಿ ಅಪರಾಧಿಗಳಿಗೆ, ಮುಖ್ಯವಾಗಿ ಯುದ್ಧ ಕೈದಿಗಳಿಗೆ, ತಲೆ ಬೋಳಿಸಿ ಕೈ ಕಾಲು ಕಟ್ಟಿ ಕುರ್ಚಿ ಮೇಲೆ ಕೂರಿಸುವುದು; ಮೇಲಿನಿಂದ ಬೋಳು ತಲೆ ಮೇಲೆ ಒಂದೊಂದೇ ಹನಿ ನೀರು. ನಿರಂತರವಾಗಿ, ಅವ್ಯಾಹತವಾಗಿ ಗಂಟೆಗಟ್ಟಲೆ, ದಿನಗಟ್ಟಲೆ.... ಆ ಕೈದಿ ಕ್ರಮೇಣ ತಲೆ ಮೇಲೆ ಸುತ್ತಿಗೆ ಪ್ರಹಾರವಾದಂತೆ, ಬಿದ್ದ ಹನಿಗಿಂತ ಬೀಳುವ ಮುಂದಿನ ಹನಿಯ ಘೋರ ನಿರೀಕ್ಷೆಯಲ್ಲೇ ವಿಹ್ವಲನಾಗುತ್ತ ಮತಿಭ್ರಮಣೆಯ ಹಂತ ತಲುಪುತ್ತಾನೆ.

ಇದಕ್ಕಿಂತಲೂ ಭಯಾನಕವಾದದ್ದು ಫ್ರೆಂಚರ ನಿಶ್ಶಬ್ದ ಶಿಕ್ಷೆಯಂತೆ.
ತಾನು ಮಾಡದ ಕೊಲೆಯ ಆಪಾದನೆ ಹೊತ್ತು ಜೀವಾವಧಿ ಶಿಕ್ಷೆಗೆ ಗುರಿಯಾಗಿ ಭಯಾನಕ ಅಪರಾಧಿಗಳ ನಡುವೆ ಎರಡು ದಶಕಕ್ಕೂ ಹೆಚ್ಚು ಕಾಲ ಹಲವಾರು ನರಕಸದೃಶ ಜೈಲುಗಳಲ್ಲಿ ಕಳೆದು ಅನೇಕ ಬಾರಿ ತಪ್ಪಿಸಿಕೊಂಡು ಕಡೆಗೂ ಸ್ವತಂತ್ರನಾದ ಹೆನ್ರಿ ಚಾರೇರೆ ಉರುಫ್ ಪ್ಯಾಪಿಲಾನನ ಸಾಹಸ- ಆಧುನಿಕ ನಾಗರಿಕತೆಯ ಜಾನಪದ ಕತೆಯಂತಿದೆ.

ಆತನಿದ್ದ ಜೈಲುಗಳಲ್ಲಿ ಶಿಸ್ತು ಉಲ್ಲಂಘಿಸಿದವರಿಗೆ ಏಕಾಂತವಾಸದ ಶಿಕ್ಷೆ. ಆರು ತಿಂಗಳಿಂದ ಕೆಲವು ಬಾರಿ ಎರಡು ವರ್ಷಗಳವರೆಗೆ. ಅಥವಾ ಇನ್ನೂ ದೀರ್ಘಾವಧಿ . ಅಷ್ಟೂ ಕಾಲ ಒಂದು ಸಣ್ಣ ಸದ್ದೂ ಅವರ ಕಿವಿ ತಲುಪುವುದಿಲ್ಲ. ಮನುಷ್ಯ, ಪ್ರಾಣಿ, ಪಕ್ಷಿ, ಹುಳು ಹುಪ್ಪಟೆಯ ಚಹರೆಯೂ ಕಾಣುವುದಿಲ್ಲ. ಕಡೆಗೆ ಗಸ್ತು ತಿರುಗುವವರ ಹೆಜ್ಜೆ ಸಪ್ಪಳವೂ ಇಲ್ಲ. ಆಹಾರ ಕೂಡ ಅವರ ಕೋಣೆಯ ಬಾಗಿಲಿನ ಕೆಳಗಿನಿಂದ ಬರುವುದು. ಇರುವ ಒಂದೇ ಕೋಣೆಯಲ್ಲೇ ಉಚ್ಚೆ ಕಕ್ಕಸ್ಸು ಎಲ್ಲ. ಶಾಶ್ವತ ಕತ್ತಲು. ಎಲ್ಲಕ್ಕಿಂತ ಘೋರವಾದದ್ದು ಅ ಮೌನ ಎನ್ನುತ್ತಾನೆ ಪ್ಯಾಪಿಲಾನ್. ಜೀವಜಗತ್ತಿನಿಂದಲೇ ಬಹಿಷ್ಕಾರಗೊಂಡಂತೆ ಶುದ್ಧಾಂಗ ಮೌನ. ಕೆಲವೇ ತಿಂಗಳುಗಳಲ್ಲಿ ಕೈದಿ ಸತ್ತೇ ಹೋಗುತ್ತಾನೆ; ಅಥವಾ ಹುಚ್ಚು ಹಿಡಿದು ಈ ಕೊನೆಗಾಣದ ಮೌನದ ದಮನದಿಂದ ಪಾರಾಗಬೇಕು....

ನಮ್ಮ ಕಾಲದ ಭೀಕರ ದುಃಸ್ವಪ್ನವೆಂದರೆ- ಇಂಥದೇ ಮೌನ ನಮಗೆ ಎದುರಾಗಬಹುದಾದ ದಿಗಿಲು.
ಶಂಬಾ ಜೋಷಿಯವರಿಗೆ ಹೀಗೇ ಆಯಿತು. 'ಪ್ರವಾಹ ಪತಿತರ ಕರ್ಮ, ಹಿಂದೂ ಎಂಬ ಧರ್ಮ' ಎಂಬ ವ್ಯಾಖ್ಯಾನದೊಂದಿಗೆ ಹಿಂದೂ ಸಂಸ್ಕೃತಿಯ ಬೇರಿಗೆ ಕೈಯಿಟ್ಟ ಅದ್ವಿತೀಯ ಸಂಶೋಧಕ ಶಂಬಾ, ಪ್ರಾಚೀನ ಪಠ್ಯಗಳನ್ನು ಶೋಧಿಸುತ್ತ ಸಂಪ್ರದಾಯಶೀಲರು ತತ್ತರಿಸುವಂಥ ಸ್ಫೋಟಕ ಗೂಢಾರ್ಥಗಳನ್ನು ಬಿಡಿಸಿ ಹೇಳತೊಡಗಿದ ಕೂಡಲೇ ಅವರಿಗೆದುರಾದದ್ದು ವಿಮರ್ಶೆಯಲ್ಲ, ಛೀಮಾರಿಯಲ್ಲ, ಜಗಳವೂ ಅಲ್ಲ, ಎಂಥದೂ ಅಲ್ಲ. ಅವರ ಶೋಧನೆಯನ್ನು ಜೀರ್ಣಿಸಿಕೊಳ್ಳಲಾಗದ ಸಂಪ್ರದಾಯದ ಕೋಟೆ, ಶಂಬಾರನ್ನು ಸಂಪೂರ್ಣ ನಿರ್ಲಕ್ಷಿಸಿ ಮೌನದ ಮಹಾಗೋಡೆಯನ್ನೇ ಅವರೆದುರು ನಿಲ್ಲಿಸಿಬಿಟ್ಟಿತು. ಗಾಢ ಕತ್ತಲಿನಂಥ ಮೌನ. ಪರಿಣಾಮ, ತನ್ನೊಂದಿಗೆ ಮಾತಾಡುವವರೇ ಸಿಕ್ಕದ ಶಂಬಾರಿಗೆ, ಪ್ರತಿವಾದದ ಎದುರು ತನ್ನ ನೋಟವನ್ನು ಸ್ಫುಟಗೊಳಿಸಿಕೊಳ್ಳುವ, ಹರಿತಗೊಳಿಸಿಕೊಳ್ಳುವ ಅವಕಾಶವೇ ದೊರೆಯದಾಯಿತು. ಕ್ರಮೇಣ ಅವರ ಪಾಲಿಗೆ ಪಾಂಡಿತ್ಯವೇ ಪಂಜರವಾಗಿಹೋಯಿತು. ಬರಬರುತ್ತ ಶಂಬಾ ಬರವಣಿಗೆ ಬೀಜಗಣಿತದಂತೆ, ಅಭೇದ್ಯ ಕಗ್ಗದಂತೆ ಕ್ಲಿಷ್ಟವಾಯಿತು. ವಾಗ್ವಾದದಿಂದ ಪ್ರಜ್ವಲಿಸಬಹುದಿದ್ದ ಅವರ ತಿಳಿವಿನ ಜ್ಯೋತಿ ಹಾಗೇ ನಂದಿಹೋಯಿತು.

ಇಂಥ 'ಮೌನ ಪಿತೂರಿ' ನಮ್ಮಲ್ಲಿ ಎಂಥೆಂಥ ದೈತ್ಯಪ್ರತಿಭೆಗಳನ್ನೇ ನುಂಗಿಹಾಕಿದೆ ಎನ್ನಲು ಅಂಬೇಡ್ಕರ್ಗಿಂತ ಉದಾಹರಣೆ ಬೇಕಿಲ್ಲ. ಹಿಂದೂ ಸಮಾಜದ ಅಂತರಾಳವನ್ನು ಅಂಬೇಡ್ಕರರಷ್ಟು ಆಳವಾಗಿ, ಸಮಗ್ರವಾಗಿ, ವಿದ್ವತ್ಪೂರ್ಣವಾಗಿ ಸೋಸಿ ಬಯಲಿಗೆಳೆದ ಮತ್ತೊಬ್ಬರಿಲ್ಲ. ಆದರೆ ಅವರನ್ನು ದಲಿತ ನಾಯಕ ಮಾತ್ರರಾಗಿ ಕಂಡ ಭಾರತೀಯ ಚರಿತ್ರೆ, ಆ ಮೂಲಕ ಅಂಬೇಡ್ಕರ್ ಎತ್ತಿದ ಜೀವನ್ಮರಣದ ಪ್ರಶ್ನೆಗಳ ಮುಜುಗರದಿಂದ ಪಾರಾಗಿಬಿಟ್ಟಿತು. ಈಗಲೂ ಸಂವಿಧಾನ ಕರ್ತೃ, ದಲಿತ ನಾಯಕ ಎಂಬ ವಿಶೇಷಣಗಳಾಚೆ ಅಂಬೇಡ್ಕರರನ್ನು ಸ್ವೀಕರಿಸುವ ಆತ್ಮವೇ ಈ ಭವ್ಯ ದೇಶಕ್ಕಿಲ್ಲ. ನಮ್ಮ ದಲಿತರಿಗೆ ಅವರ ಫೋಟೋ ಸಾಕು, ಮಿಕ್ಕವರಿಗೆ ಅದೂ ಬೇಕಿಲ್ಲ....! ಇನ್ನು ಲೋಹಿಯಾ? ಗಾಂಧಿ, ಅಂಬೇಡ್ಕರ್ ನಂತರ ನಮ್ಮ ನಾಡು ಕಂಡ ಮಹಾನ್ ಚಿಂತಕ ಮತ್ತು ಯುಗ ಪ್ರವರ್ತಕ ರಾಮಮನೋಹರ ಲೋಹಿಯಾರ ಹೆಸರೇ ಈಗಿನ ತಲೆಮಾರಿಗೆ ಅಪರಿಚಿತ.....!

ಈ ಬಗೆಯ ಹಂತಕ ಮೌನ ಯಾವ ದೇಶದ ಚರಿತ್ರೆಯಲ್ಲೂ ಅಪರೂಪವಲ್ಲವೆಂದು ನನಗೆ ಗೊತ್ತು. ಎಲ್ಲೇ ಆದರೂ ಇಡೀ ಸಮಾಜ ಒಂದು ದಿಕ್ಕಿನಲ್ಲಿ ಮೈ ಮರೆತು ತಲೆದೂಗುವಾಗ ಬೇರೊಂದು ರಾಗ ತೆಗೆಯುವವನ ದನಿ ಅಪಸ್ವರವಾಗಿ ಮಾತ್ರ ಕೇಳಲು ಸಾಧ್ಯ. ಸ್ವತಃ ಲೋಹಿಯಾ ತಲೆ ರೋಸಿ ನನ್ನನ್ನು ಈಗ ಹುಚ್ಚನೆಂದು ನೋಡುತ್ತಿರುವವರಿಗೆ, ನಾನು ಸತ್ತ ಮೇಲೆ ನನ್ನ ಚಿಂತನೆಯ ಮಹತ್ವ ತಿಳಿಯಬಹುದು ಎಂದು ಉದ್ಗರಿಸಿದ್ದರು. ಅಂಥ ಪ್ರಖರ ಚಿಂತಕ ಮತ್ತು ಸತ್ಯವಂತನನ್ನು ವಿದೂಷಕನಾಗಿ ಕಂಡ ಅಂದಿನ ಮಾಧ್ಯಮಗಳಿಗೆ ಯಾವ ರೋಗ ಬಡಿದಿತ್ತು ಎಂದು ಅನೇಕ ಬಾರಿ ಸೋಜಿಗದಿಂದ ಕೇಳಿಕೊಂಡಿದ್ದೇನೆ.

ಆದರೆ ನಾನು ಈ ಪ್ರಶ್ನೆ ಕೇಳಿಕೊಳ್ಳಲು ಸಾಧ್ಯವಾಗಿದ್ದೇ ದೇವರಾಜ ಅರಸು ತಂದ ಆಡಳಿತಾತ್ಮಕ ಕ್ರಾಂತಿಯ ನಂತರದ ದಿನಗಳಲ್ಲಿ ಎಂಬುದನ್ನು ಮರೆಯುವಂತಿಲ್ಲ. ಆ ವೇಳೆಗಾಗಲೇ ಕರ್ನಾಟಕದಲ್ಲಿ ಬೂಸಾ ಚಳವಳಿ, ಸಮಾಜವಾದಿ ಯುವಜನ ಸಭಾ, ಬರಹಗಾರರ ಒಕ್ಕೂಟ, ಮುಂದಕ್ಕೆ ರೈತ, ದಲಿತ, ಭಾಷಾ ಚಳವಳಿಗಳ ಮಹಾನ್ ಸಂಚಲನದ ಪರ್ವವೇ ಆರಂಭವಾಗಿತ್ತು. ನನ್ನ ಸೋಜಿಗದ ಪ್ರಶ್ನೆ ಉದ್ಭವವಾಗಲು ಸಾಧ್ಯವಿದ್ದಿದ್ದೇ ಆಗ. ಆದರೆ ಲೋಹಿಯಾ ಸಾರ್ವಜನಿಕ ರಂಗಸ್ಥಳದಲ್ಲಿದ್ದ ಸಂದರ್ಭದಲ್ಲಿ ಇಡೀ ದೇಶವೇ ನೆಹರೂ ಸುತ್ತ ಸೃಷ್ಟಿಯಾಗಿದ್ದ ರಾಷ್ಟ್ರ ನಿರ್ಮಾಣದ ಭ್ರಮೆಯಲ್ಲಿ ಓಲಾಡುತ್ತಿತ್ತು ಎಂಬುದನ್ನು ನೆನೆಸಿಕೊಂಡಾಗ ಲೋಹಿಯಾ ಎದುರಿಸಿದ ದುರ್ಗಮ ಮೌನದ ತಥ್ಯ ತಿಳಿಯಬಹುದೇನೋ.

ಭಾರತೀಯರು ಒಂದು ದೇಶವಾಗಿ ಅದೇ ತಾನೇ ಸ್ವಾತಂತ್ರ್ಯ ಹೋರಾಟದ ಆಯಾಸ ಕಳೆದು ಸ್ವರಾಜ್ಯಕ್ಕೆ ಸಜ್ಜಾಗುತ್ತಿದ್ದರು. ಈ ಹೊಸ ಸ್ವಾತಂತ್ರ್ಯ ಎಲ್ಲ ಕನಸುಗಳನ್ನೂ ನನಸು ಮಾಡಬಹುದೆಂಬ ನಿರೀಕ್ಷೆ, ಭರವಸೆಗಳಿದ್ದವು. ಗಾಂಧೀಜಿ ಶಿಷ್ಯನೂ, ಉತ್ತರಾಧಿಕಾರಿಯೂ ಆದ ನೆಹರೂ- ಬಡತನ, ಹಸಿವು, ತಾರತಮ್ಯ, ನಿರುದ್ಯೋಗ ಎಲ್ಲ ಸಮಸ್ಯೆಗಳನ್ನೂ ಕ್ಷಣಮಾತ್ರದಲ್ಲಿ ಪರಿಹರಿಸಬಲ್ಲರೆಂದು ಜನ ಕಣ್ಣು ಮುಚ್ಚಿ ನಂಬಿ ಕಾಯುತ್ತಿದ್ದರು. ಅಂಥ 'ನವೋದಯ'ದ ಆಶೋತ್ತರಗಳನ್ನು ದೇಶ ಮೈದುಂಬಿಕೊಂಡಿದ್ದ ಗಳಿಗೆಯಲ್ಲಿ ಲೋಹಿಯಾರ ಕಣ್ಣು ತೆರೆಸುವ ವಿರೋಧಿ ರಾಜಕಾರಣವನ್ನು ಸಹಾನುಭೂತಿಯಿಂದ ಪರಿಶೀಲಿಸುವುದು ಊಹಾತೀತವಾಗಿತ್ತು. ನೆಹರೂ ಅತ್ತ ತಮ್ಮ ಕೋಟಿನಲ್ಲಿ ಗುಲಾಬಿ ಸಿಕ್ಕಿಸಿಕೊಂಡು ರಾಷ್ಟ್ರದ ಕನಸು ಬಿತ್ತುತ್ತಿದ್ದರೆ, ಇತ್ತ ಲೋಹಿಯಾ ಸಮಾಜದ ಕರುಳು ಬಗೆದು ನೋಡುತ್ತಿದ್ದರು. ಹಾಗಾಗಿ ದೇಶದ ಕಣ್ಣಿಗೆ ಕಿರಿಕಿರಿಯ ತಂಟೆಕೋರನಾಗಿ ಮಾತ್ರ ಕಂಡರು. ಅಂಥ ಲೋಹಿಯಾ ಹೊಸ ತಿಳಿವಿನ ಹರಿಕಾರನಾಗಿ ಕಾಣಬೇಕಾದರೆ, ದೇಶದಲ್ಲಿ ನೆಹರೂ ಯುಗದ ಭ್ರಮೆಗಳೇ ತುರ್ತುಸ್ಥಿತಿಯ ಕರಾಳ ದುಃಸ್ವಪ್ನಕ್ಕೆ ದಾರಿಯಾಗಿ ದೇಶಾದ್ಯಂತ ಪ್ರತಿಭಟನೆಯ 'ಮೂಡ್' ಸೃಷ್ಟಿಯಾಗಬೇಕಾಯಿತು....!

ಈ ಮೂಡ್- ಸಾಮಾಜಿಕ ಹವೆ- ಎಂಥ ಮಾಯಕಾರ ಪದಾರ್ಥವೆಂಬುದು ಈಚೀಚೆಗೆ ನನ್ನನ್ನು ದಂಗು ಬಡಿಸುವ ಸಂಗತಿಯಾಗಿದೆ. ಉದ್ದಕ್ಕೂ ನಾವು ಸಸಿ ಹುಟ್ಟಿ, ಆ ಸಸಿ ಮರವಾಗಿ ಫಲ ನೀಡಿದ್ದನ್ನು ಮಾತ್ರ ನೋಡುತ್ತ ಬಂದಿದ್ದೇವೆಯೇ ಹೊರತು, ಆ ಸಸಿಗೆ ಜನ್ಮ ಕೊಟ್ಟ ಹದಮಣ್ಣನ್ನು ಲೆಕ್ಕಿಸಿಯೇ ಇಲ್ಲವೇನೋ ಎಂಬ ಅನುಮಾನ ನನಗೆ.

ನನ್ನ ತಲೆಮಾರಿಗೆ ಕಣ್ಣು ಕಿವಿ ಕೊಟ್ಟ 70- 80ರ ದಶಕಗಳನ್ನೇ ನೋಡಿ. ಆ ಕಾಲಘಟ್ಟದಲ್ಲಿ ನಂಜುಂಡಸ್ವಾಮಿ, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ದೇವನೂರ ಮಹಾದೇವ, ಸಿದ್ದಲಿಂಗಯ್ಯ... ಎಲ್ಲ ಕಣ್ಣು ಕೋರೈಸುವ ತಾರೆಯರೇ. ಅವರಿಗೆ ದಕ್ಕಿದ ತಾರಾಪಟ್ಟವನ್ನು ನೋಡುತ್ತ ಆನಂದಿಸಿದೆವು. ಅವರೆಲ್ಲರಿಂದ ಕಲಿತೆವು. ಅವರನ್ನು ಹೀರೋಗಳಂತೆ ಕಂಡು ಆರಾಧಿಸಿದೆವು. ಗುಂಡೂರಾಯರ ಅಂದಾದುಂದಿ ಸರ್ಕಾರ ಧೂಳೀಪಟವಾದಾಗ ಅದರ ಯಶಸ್ಸನ್ನು ಲಂಕೇಶ್ ಮತ್ತು ಅವರ ಪತ್ರಿಕೆಗೆ ಕಟ್ಟಿ ಸಂಭ್ರಮಿಸಿದೆವು. ಕಬ್ಬನ್ ಪಾರ್ಕಿನಲ್ಲಿ ಐದು ಲಕ್ಷ ಜನ ರೈತರು ಸೇರಿದಾಗ ನಂಜುಂಡಸ್ವಾಮಿಯವರ ವರ್ಚಸ್ಸನ್ನು ಬಿಡುಗಣ್ಣಾಗಿ ಕಂಡು ಕುಣಿದಾಡಿದೆವು. ಸಿದ್ದಲಿಂಗಯ್ಯನವರ ಕ್ರಾಂತಿಗೀತೆ ಕೇಳಿ ನಮ್ಮ ರೋಮಗಳೆಲ್ಲ ನಿಮಿರಿ ನಿಂತವು. ಒಟ್ಟು ಹೇಳುವುದೇನು? ಇವರ ನುಡಿಗಳಲ್ಲಿ ಈ ಸಮಾಜದ ಕದಲಿಕೆಯೇ ಸಾಕಾರಗೊಂಡಂತೆ ಭಾಸವಾಯಿತು.

ಇವರೆಲ್ಲರೂ ಹೀರೋಗಳೇ ನಿಜ. ಆದರೆ ಈ ಹೀರೋಗಿರಿಯಲ್ಲಿ ಆ ಸಮಾಜದ, ಆ ಕಾಲಘಟ್ಟದ 'ಮೂಡ್' ಎಷ್ಟು ಕಾರಣವಾಗಿತ್ತು ಎಂಬುದನ್ನು ನಾವು ಕೇಳಿಕೊಳ್ಳಲೇ ಇಲ್ಲ. ಅದಕ್ಕೇ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗುತ್ತಿದ್ದ ಹಾಗೆಯೇ ಈ ಎಲ್ಲ ಚಳವಳಿಗಳೂ ಯಾಕೆ ಕಳೆಗುಂದತೊಡಗಿದವು ಎಂದು ಕೇಳಿದರೆ, ನಾವು ಇಂದಿಗೂ ಹೆಗಡೆಯವರ ಚಾಣಾಕ್ಷತೆ- ಒಡೆದಾಳುವ ಕುಟಿಲತೆಯತ್ತ ಬೊಟ್ಟು ಮಾಡುತ್ತೇವೆ! ಆದರೆ ನಮ್ಮ ರಾಜ್ಯದಲ್ಲಿ ಮೊಟ್ಟಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಸೌಜನ್ಯದ ನುಡಿಗಟ್ಟಿನಲ್ಲಿ ವ್ಯವಹರಿಸತೊಡಗಿದ ಹೆಗಡೆ ಶೈಲಿಯನ್ನು ಜನ ಮನಸಾ ಅಪ್ಪಿಕೊಂಡ ಪರಿಯನ್ನು ಮರೆಯುತ್ತೇವೆ. ದಶಕಗಳ ಕಾಲ ದಡ್ಡುಗಟ್ಟಿದ್ದ ಕಾಂಗ್ರೆಸ್ಸಿನ ಠೇಂಕಾರ, ಆಲಸ್ಯ ಕಂಡಿದ್ದ ಜನಕ್ಕೆ ಹೆಗಡೆ ಚೇತೋಹಾರಿ ಪಯರ್ಾಯವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನು? ಅದಕ್ಕೇ ಅಂದು ನೆಹರೂ ಎದುರು ಲೋಹಿಯಾ ಎದುರಿಸಿದ ಮೌನವನ್ನೇ ಈ ಚಳವಳಿಗಳು ಹೆಗಡೆ ಎದುರು ಅನುಭವಿಸಬೇಕಾಯಿತು. ಗಾಳಿ ಬೀಸುವ ದಿಕ್ಕು ಬದಲಾಗಿತ್ತು. ಈಗ ಯೋಚಿಸಿದರೆ, ಆ ಎಲ್ಲ ಚಳವಳಿಗಳ ಅಂತಿಮ ಧ್ಯೇಯವೇ ಹೆಗಡೆ ಪಟ್ಟಾಭಿಷೇಕವೇನೋ ಎಂಬ ಮಟ್ಟಿಗೆ ಪರ್ಯವಸಾನವಾಯಿತಲ್ಲ ಎಂಬ ತಬ್ಬಿಬ್ಬು! ಇದು ಇಷ್ಟೆಲ್ಲ ಸರಳವಲ್ಲ ಎಂದು ಗೊತ್ತಿದ್ದೂ...

ಸರಿ, ಇಲ್ಲಿ ಈ ಮಟ್ಟಿಗೆ ಯಾಕೆ ಹಳೇ ತುರುಬು ಮುಟ್ಟಿ ನೆನೆಸಿಕೊಳ್ಳುತ್ತಿದ್ದೇನೆ?
ಯಾಕೆಂದರೆ ಆಗ ನಮ್ಮಲ್ಲಿ ಉಂಟಾದ ಎಚ್ಚರ ನಮ್ಮನ್ನು ಯಾವುದೋ ಮಹಾಯಾನಕ್ಕೆ ಒಯ್ಯುತ್ತಿರುವಂತೆ ಭಾಸವಾಗಿತ್ತು. ಆದರೀಗ ಆ ಯಾನದ ನೌಕೆ ಒಡೆದು ಒಬ್ಬೊಬ್ಬರೂ ಕೈಗೆ ಸಿಕ್ಕಿದ ಹಲಗೆ ಚೂರು ಹಿಡಿದು ಯಾವಯಾವುದೋ ನಡುಗಡ್ಡೆಗಳನ್ನು ತಲುಪಿ ಉಸಿರು ಬಿಡುತ್ತಿರುವ ಹಾಗಿದೆ. ಅಭ್ಯಾಸಬಲದ ಮೇಲೆ ಈಗಲೂ ಅವವೇ ಕನಸಿನ ಮಾತಾಡುತ್ತೇವೆ. ಆದರೀಗ ಅದು ಖಾಲಿಡಬ್ಬದ ಸದ್ದಿನಂತೆ ಟೊಳ್ಳಾಗಿದೆ. ನಿದರ್ಶನ ಬೇಕೆನ್ನುವವರು, ನಮ್ಮ ಸುತ್ತ ಜರುಗುವ ಸೆಮಿನಾರುಗಳನ್ನು ಕಂಡರೆ ಸಾಕು: ಮಾತಾಡುವವರೂ ಅವರೇ, ಮಾತುಗಳೂ ಅವೇ, ಕೊನೆಗೆ ಕೇಳುಗರೂ ಅವರೇ! ನಿಂತುಹೋದ ಗಡಿಯಾರದಂತೆ- ಮುಳ್ಳುಗಳಿವೆ, ಜೀವವಿಲ್ಲ!

ಇಷ್ಟೇ ಆಗಿದ್ದರೆ, ಗಡಿಯಾರಕ್ಕೆ ಕೀ ಕೊಟ್ಟು ಮತ್ತೆ ಚಲನೆ ತರುವ ಆಸೆಯಾದರೂ ಇರುತ್ತಿತ್ತು. ಆದರೆ ಸಮಾಜದ 'ಮೂಡ್' ಮತ್ತು ಆಶಯಗಳೇ ಬದಲಾಗಿಹೋಗಿವೆಯಲ್ಲ? ಗಾಳಿ ಈಗ ಯಾವ ದಿಕ್ಕಿನಲ್ಲಿ ಬೀಸುತ್ತಿದೆ? ನಾವುಗಳೇ ಮೃದುವಾಗಿ, ಒಳಗಿಂದೊಳಗೇ ಖದೀಮರಾಗಿ ನುಣ್ಣಗಾಗಲು ನೋಡುತ್ತಿದ್ದೇವೆ. ಜಾತಿಮತಗಳು ಇನ್ನಷ್ಟು ಗಟ್ಟಿಯಾಗಿ ಹಿಂದಿದ್ದ ಅಳುಕು, ಲಜ್ಜೆಗಳೂ ಮಾಯವಾಗಿ....

ಇದೀಗ ಮಾತಾಡುವುದಾದರೂ ಯಾರೊಂದಿಗೆ? ಯಾರಿಗಾಗಿ? ಮಾತಾಡಲು ಶುರು ಮಾಡುತ್ತೇವೆ. ಆದರೆ ತುಸು ಹೊತ್ತಿನಲ್ಲೇ, ಸಿಪ್ಪೆಹೊಟ್ಟಿನಂಥ ಹಳೆ ಮಾತುಗಳೇ ಬಾಯಿಗೆ ಬಂದು, ಅದೇ ಹಳಬರ ಮುಂದೆಯೇ ಬೊಗಳುತ್ತಿರುವುದಕ್ಕೆ ತಲೆ ತಗ್ಗಿಸುವಂತಾಗಿ ಮಾತು ನಾಚುತ್ತದೆ. ನಾಚಿಕೆಯಾಗದಿದ್ದ ಪಕ್ಷದಲ್ಲಿ.... ಎರಡು ಖಚಿತ ಬಣಗಳು ಮೇಲೇಳುತ್ತವೆ- ಎರಡು ಶತ್ರು ದೇಶಗಳ ಹಾಗೆ. ಇಬ್ಬರೂ ಒಟ್ಟಿಗೇ ಬಾಯಿ ಮಾಡುತ್ತಾರೆ. ಸಂವಾದದ ಹಾಗಲ್ಲ, ಇನ್ನೊಬ್ಬರ ಮಾತಿಗೆ ಕಿವಿಗೊಡುವ ತಾಳ್ಮೆಯಿಲ್ಲದೆ ದನಿಯೇರಿಸಿ ಕಿರುಚಾಡುತ್ತಾರೆ. ಕಡೆಗೆ ಮಾತು ನಿಷ್ಪ್ರಯೋಜಕವಾಗಿ ಗದ್ದಲ ಏಳುತ್ತದೆ; ಕೈಗೆ ಕತ್ತಿ ತ್ರಿಶೂಲ ಬರುತ್ತವೆ....

ಎಲ್ಲವನ್ನೂ ಉತ್ಪ್ರೇಕ್ಷಿಸಿ ಬಣ್ಣ ಕೊಟ್ಟು ಹೇಳುತ್ತಿದ್ದೇನೆಯೇ? ಗೊತ್ತಿಲ್ಲ. ಆದರೆ ಇಂದು ಏನಾದರೂ ಮಾತಿಗೆ ತೊಡಗಬೇಕೆಂದರೆ ಹಿಂದೆಂದೂ ಇಲ್ಲದಿದ್ದ ಹಿಂಜರಿಕೆ. ಯಾಕೆಂದರೆ ಎದುರಿನವನು ಕೇಳಿಸಿಕೊಳ್ಳುತ್ತಾನೆಂಬ, ಆ ಮೂಲಕವೇ ಪ್ರತಿ ಮಾತು ಹುಟ್ಟಿ ಸಂವಾದ ಬೆಳೆದೀತೆಂಬ ನಂಬಿಕೆಯೇ ಇಲ್ಲದ ತಬ್ಬಲಿ ಮಾತುಗಳು. ಮಾತಿಗೆ ಮಾತು ಕೊಡದ ಈ ನಿಶ್ಶಬ್ದದ ಭೀತಿ ಪ್ಯಾಪಿಲಾನನ ಕತ್ತಲ ಏಕಾಂತವಾಸದ ಅನುಭವಕ್ಕಿಂತ ಬೇರೆಯಲ್ಲ! ಕೇಳುಗರೇ ಇಲ್ಲದ ಹಾಡುಗಾರ, ನೋಡುಗರೇ ಇಲ್ಲದ ಚಿತ್ರಕಾರನ ಸ್ಥಿತಿ. ನನ್ನದು, ನಮ್ಮೆಲ್ಲರದು. ಮುಂದೆ ಹೇಗೋ ಏನೋ, ಈವತ್ತಿಗಂತೂ ಹೀಗಿದೆ. ಇದಕ್ಕೆ ಜಾಗತೀಕರಣ, ಮಣ್ಣುಮಸಿ ವಿವರಣೆ ಹುಡುಕಹೊರಟ ಕೂಡಲೇ ಮತ್ತದೇ ಎರಡು ಶತ್ರು ಬಣಗಳ ಚಿತ್ರ ಕಣ್ಣ ಮುಂದೆ ಬರುತ್ತದೆ!.....
ಇಂಥ ಸ್ಥಿತಿಯಲ್ಲಿ 'ಬರಹಗಾರನ ತಲ್ಲಣಗಳು' ಎಂದು ಯೋಚಿಸಹೊರಟರೂ, ವ್ಯಕ್ತಿಯಾಗಿ ನನ್ನ ಪಾಡು ಬೇರೆ, ಬರಹಗಾರನಾಗಿ ಬೇರೆ ಅಂದುಕೊಳ್ಳುವ ಹುಂಬತನ ನನಗಿಲ್ಲ. ವ್ಯತ್ಯಾಸವೇನೆಂದರೆ, ಸುತ್ತಣ ಸಂಕಟ ತವಕಗಳಿಗೇ ಎದೆಯೊಡ್ಡಿ ಶಬ್ದದ ಆಕಾರ ಕೊಡುವುದು ಬರಹಗಾರನಿಗೆ ಅಂಟಿ ಬಂದ ಶಾಪವಲ್ಲವೇ?...

(ಕೃಪೆ: ಶೂದ್ರ-35 ವಿಶೇಷಾಂಕ)




ನಾವು ಸಹ ಇಂದು ಅದೇ ಹಂತ ತಲುಪಿದ್ದೇವೆ. ಅವಧಿ-ಆಲೆಮನೆ ನುಡಿನಮನ ಒಳ್ಳೆಯ ಪ್ರಯತ್ನ ಎಂದು ಹಲವರು ತಿಳಿಸಿದ್ದೀರಿ, ಧನ್ಯವಾದಗಳು. ನಾವು ಈ ತಾಣವನ್ನು ಕನ್ನಡದ ಅಖಾಡ ಎಂದು ಕರೆದಿದ್ದೇವೆ. ಇದೊಂದು ಚರ್ಚೆಯ ತಾಣವಾಗಬೇಕೆಂಬ ಸದಾಶಯದೊಂದಿಗೆ ನಾಡಿನ ಅತ್ಯುತ್ತಮ ಕನ್ನಡ ಮನಸ್ಸುಗಳಿಂದ ಲೇಖನ ಬರೆಸಿ ಚರ್ಚೆಗೆ ವೇದಿಕೆಯೋದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ......
ಆಲೆಮನೆಗೆ ಕಬ್ಬಿನ ಅಭಾವ! ಹೌದು ತಾವುಗಳು ಈ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು, ತಮ್ಮ ನೇರ ನಿಷ್ಟುರ ಪ್ರತಿಕ್ರಿಯೆ ತಿಳಿಸಬೇಕು, ಚರ್ಚೆಯನ್ನು initiate ಮಾಡುವುದಷ್ಟೇ ನಮ್ಮ ಕೈಲಿರುವುದು, ಅದನ್ನು ಮುಂದುವರಿಸಬೇಕಿರುವುದು ತಾವುಗಳು. ತಮ್ಮ ಪಾಲ್ಗೊಲ್ಲುವಿಕೆಯೇ ನಮ್ಮ ಆಲೆಮನೆಗೆ ಕಬ್ಬು! ದಯವಿಟ್ಟು ಪ್ರೀತಿ ಮತ್ತು ಒಂದು ಸದಾಶಯದಿಂದ ಕಟ್ಟಿದ ಈ ಆಲೆಮನೆಗೆ ಕಬ್ಬಿನ ಅಭಾವ ಬಾರದಿರಿಸಿ. ಆದ್ದರಿಂದ ಕುಟುಕು ಜನಮೇಜಯ ಕುಟುಕು.......
.

ನಾಳೆ ನಿರೀಕ್ಷಿಸಿ.....


ಏನ್.ಎಸ. ಶಂಕರ್ - ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ, ಇನ್ನೂ ಏನೇನೋ .........
ನಮ್ಮ ಇಂದಿನ ಸಮಾಜದಲ್ಲಿ ಬೃಹದಾಕಾರವಾಗಿ ಎದ್ದಿರುವ ಮೌನದ ಗೋಡೆಗಳ ಕುರಿತು ಬರೆದಿದ್ದಾರೆ. ಚರ್ಚೆ, ಸಂವಾದಗಳಿಗೆ ತಾವೇ ಇಲ್ಲದಂತಹ ನಿಶಬ್ಧವೊಂದು ಇಂದು ಸಮಾಜದಲ್ಲಿ ಮನೆ ಮಾಡಿದೆ. ಒಬ್ಬ ಸೃಜನಶೀಲ ಏನನ್ನಾದರೂ ಬರೆದರೆ ಅದರ ಕುರಿತು ಚರ್ಚೆಯಾಗಲಿ ಎಂದು ಅಪೇಕ್ಷಿಸುವುದು ಸಹಜ. ಆದರೆ ಒಂದು ದಿವ್ಯ ನಿರ್ಲಕ್ಷ್ಯ ಅವರನ್ನು ಎದುರುಗೊಂಡಾಗ ಬರವಣಿಗೆ ಸಾರ್ಥಕವಲ್ಲ ಎನಿಸಿಬಿಡುತ್ತದೆ. ನಾವಿಂದು ಈ ಹಂತ ತಲುಪಿಬಿಟ್ಟಿರುವುದು ಮಹಾದುರಂತವೆ ಸರಿ. ಈ ಕುರಿತು ಏನ್. ಎಸ. ಶಂಕರ್ ಬರೆದ ಮಹತ್ವದ ಲೇಖನ.

ನಾಳೆ ನಿರೀಕ್ಷಿಸಿ ....

ಕನ್ನಡದ ನೆಪದಲ್ಲೊಂದಿಷ್ಟು ಸ್ವಕೀಯ ಸ್ವಗತ

ನಾಗರಾಜ ವಸ್ತಾರೆ ವೃತ್ತಿಯಲ್ಲಿ ಆರ್ಕಿಟೆಕ್ಟ್. ನಿತ್ಯ ಬೆಂಗಳೂರಿನ ಎರಡು ತದ್ವಿರುದ್ಧ ಜಗತ್ತುಗಳಲ್ಲಿ ಹೊಯ್ದಾಡುವವರು, ನಮ್ಮಲ್ಲನೇಕರಂತೆ. ಒಂದು ಹೊರಜಗತ್ತಿನ ಇಂಗ್ಲೀಷ್ ಲೋಕವಾದರೆ ಮತ್ತೊಂದು ಒಳಮನೆಯ ಕನ್ನಡದ ಸವಿಲೋಕ. ಈ ಎರಡೂ ಲೋಕಗಳ sensibilities ಗಳನ್ನು ತಮ್ಮ ಸಾಹಿತ್ಯದ ಹೂರಣ ಮಾಡಿಕೊಳ್ಳುವುದರಿಂದ ವಸ್ತಾರೆ ನಮಗೆ ಹೆಚ್ಚು ಆಪ್ತರಾಗುತಾರೆ, ಪ್ರಸ್ತುತರಾಗುತ್ತಾರೆ.

ಇಂಗ್ಲೀಷ್ - ಕನ್ನಡ - ಬೆಂಗಳೂರಿನ ಕುರಿತು ನಾಗರಾಜ ವಸ್ತಾರೆಯವರ ಆಪ್ತ ಲೇಖನ,ಇಗೋ ಇಲ್ಲಿ ಒಪ್ಪಿಸಿಕೊಳ್ಳಿ


ಕನ್ನಡದ ನೆಪದಲ್ಲೊಂದಿಷ್ಟು ಸ್ವಕೀಯ ಸ್ವಗತ


ನಿಜ ಹೇಳುತ್ತೇನೆ, ನನಗೆ ಕನ್ನಡ ಎಷ್ಟು ಮುಖ್ಯ ಅನ್ನುವುದು ನನಗೇ ಗೊತ್ತಿಲ್ಲ! ಬರವಣಿಗೆ ಅಂತೊಂದು ಇರದಿದ್ದರೆ ಈ ಊರಿನಲ್ಲಿ ಖಂಡಿತ ಕನ್ನಡವಿಲ್ಲದೆಯೇ ಬದುಕುತ್ತಿದ್ದೆನೇನೋ. ಬರೆಯುವುದು ನಾನು ಕಟ್ಟುವುದರಷ್ಟೇ ಅನಿವಾರ್ಯ ಅನಿಸುವುದರಿಂದ ನನ್ನ ಮಟ್ಟಿಗೆ ಕನ್ನಡ ಉಳಿದುಕೊಂಡಿದೆ. ಇಷ್ಟಕ್ಕೂ ಕನ್ನಡದಲ್ಲಿ ಯಾಕೆ ಬರೆಯಬೇಕು ಅಂತಲೂ ನನ್ನನ್ನು ಆಗಾಗ ಕಾಡುತ್ತದೆ. ಇಂಗ್ಲಿಷು ಎಷ್ಟೇ ಮಟ್ಟಿಗೆ ಬಂದರೂ, ಕೆಲವು ವಿಷಯಗಳನ್ನು ಕನ್ನಡದ ಮೂಲಕವೇ ಹೆಚ್ಚು ಧ್ವನಿಸಬಹುದು ಅನಿಸುವುದರಿಂದ, ಕೆಲವು ವಿಷಯಗಳನ್ನು ಕನ್ನಡದಲ್ಲಷ್ಟೇ ಯೋಚಿಸಲಿಕ್ಕಾಗುವುದು ಅನಿಸುವುದರಿಂದ ಕನ್ನಡದಲ್ಲಿ ಬರೆಯುತ್ತೇನೆ. ಇದು ನನಗೆ ನಾನೇ ಕೊಟ್ಟುಕೊಳ್ಳುತ್ತಿರುವ ಸಮಜಾಯಿಷಿಯೇ ಇರಬಹುದು. ಆದರೆ ಎಷ್ಟೋ ವಿಷಯಗಳನ್ನು ಕನ್ನಡದಲ್ಲಿ ಯೋಚಿಸಲಾಗುವುದಿಲ್ಲ ಅನ್ನುವುದೂ ನನ್ನ ಮಟ್ಟಿಗೆ ಅಷ್ಟೇ ನೈಜ. ಇದನ್ನು ನೀವೂ ಒಪ್ಪಬೇಕಷ್ಟೆ.

ದಿನಂಪ್ರತಿ ಎದ್ದಾಗಿನಿಂದ ಮಲಗುವವರೆಗೆ, ಕನ್ನಡೇತರದಲ್ಲೇ ಬದುಕುವ ಮತ್ತು ಆಡುವ- ಈ ಮೇಜೆದುರಿಗಿನ ‘ವೃತ್ತಿಪರ’ ಮುಲಾಜುಗಳ ದೆಸೆಯಿಂದ ನನ್ನ ಆಡುಗನ್ನಡ ಸೊರಗಿರುವುದಂತೂ ಹೌದು. ಕನ್ನಡದಲ್ಲಿ ಕೈಬರಹವನ್ನು ಮಾಡದೆ ಜನ್ಮಾಂತರವೇ ಕಳೆದುಹೋಗಿದೆ. ಈ ಊರಿಗೆ ಬಂದು ಆರ್ಕಿಟೆಕ್ಚರೆಂಬ ಕನ್ನಡೇತರದ ಓದು ಮತ್ತು ಅಭ್ಯಾಸದಲ್ಲಿ ತೊಡಗಿಕೊಂಡಂದಿನಿಂದ, ಅಂದರೆ ಸರಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಪೆನ್ನು ಹಿಡಿದು ಕನ್ನಡವನ್ನು ಕಾಗುಣಿಸಿಲ್ಲ. ಈ ಮುಂದಕ್ಕೂ ಇಲ್ಲವೇನೋ. ಈಚೆಗೆ ಲ್ಯಾಪ್‍ಟಾಪಿನಲ್ಲಿ ಕೀಲಿಕೆಯನ್ನು ಕಲಿತಿರುವುದರಿಂದಷ್ಟೇ ಈಚೀಚೆಗೆ ಹೀಗೊಂದಿಷ್ಟು ಬರಹ. ರುಜುವೊಂದನ್ನು ಬಿಟ್ಟು ಇನ್ನೇನನ್ನೂ ನಾನು ಪೆನ್ನಿಸುವುದಿಲ್ಲ. ಹಾಗೆ ಬರೆಯುವುದು ಅತ್ಯನವಶ್ಯಕವೆಂಬ ಮನದಟ್ಟನ್ನೂ ಈಚೀಚೆಗೆ ಊರು ಕಟ್ಟಿಬಿಟ್ಟಿದೆ. ಹೀಗಿರುವಾಗ ಕನ್ನಡವನ್ನು ಕೈಯಾರೆ ಬರೆಯುವ ಮಾತೆಲ್ಲಿ? ಯಾರೇನೇ ಅನ್ನಲಿ, ನಾನೊಬ್ಬ ಲ್ಯಾಪ್‍ಟಾಪ್ ಸಾಹಿತಿ ಅನ್ನುವುದು ನನ್ನ ಮಟ್ಟಿಗಿನ ಹೆಮ್ಮೆಯೂ ಹೌದು, ಅಷ್ಟೇ ಖೇದವೂ ಹೌದು! ಇದು ನನ್ನ ಸ್ವಕೀಯ ಇತಿಮಿತಿಯೇ ಇರಬಹುದು. ನನ್ನ ಪೀಳಿಗೆಯ ಎಷ್ಟೋ ಮಂದಿಯ ಕಟ್ಟುಪಾಡೂ ಇದೇ ಇದ್ದೀತು.

ಒಮ್ಮೊಮ್ಮೆ ಈ ಮೇಜಿನಲ್ಲಿ ಅನಿಸುವುದಿದೆ. ಬೀಮು, ಲಿಂಟಲು, ಕಾಂಕ್ರೀಟು, ಫುಟಿಂಗು... ಮೊದಲಾದವುಗಳನ್ನು ಕನ್ನಡದಲ್ಲಿ ಹೇಳಿ, ಕನ್ನಡದಲ್ಲಿಯೇ ಯೋಚಿಸುವುದಕ್ಕೆ ಸಾಧ್ಯವಿಲ್ಲವೆ? ಅವುಗಳ ವಿನ್ಯಾಸಕ್ಕೆ ಬೇಕಾದ ಲೆಕ್ಕಾಚಾರಗಳನ್ನೂ, ಶಿಯರ‍್‍ಫೋರ್ಸ್, ಬೆಂಡಿಂಗ್ ಮೊಮೆಂಟ್, ಡಿಫ್ಲೆಕ್ಷನ್, ಡೆಕ್ಲಿನೇಷನ್... ಇತ್ಯಾದಿಗಳನ್ನೂ ಕನ್ನಡದಲ್ಲಿ ಯೋಚಿಸಲಿಕ್ಕಾಗುವುದಿಲ್ಲವೆ? ದಿನನಿತ್ಯದ ಡೆಡ್‍ಲೈನ್‍ಗಳು, ಪ್ರೆಸೆಂಟೇಷನುಗಳನ್ನು ಕನ್ನಡದಲ್ಲಿ ಮಾಡಲಿಕ್ಕಾಗುವುದಿಲ್ಲವೆ? ಈ ಡೆಡ್‍ಲೈನ್, ಪ್ರೆಸೆಂಟೇಷನುಗಳನ್ನು ಕನ್ನಡಿಸುವುದು ಹೇಗೆ? ಹಾಗೆ ಅನುವಾದಿಸಿದ ಕನ್ನಡದ ಮಾತು ಅಷ್ಟೇ ಗಾಢವಾಗಿ ಸ್ಫುರಿಸಬಹುದೆ? ಎಲ್ಲಾ ಇಫ್ಫು, ಬಟ್ಟುಗಳ ಮಾತು, ಬಿಡಿ!! ಇಂತದೇ ಇತಿಮಿತಿ ನನ್ನ ಇಂಗ್ಲಿಷಿಗೂ ಇದೆ. ಎರ‍ಡು, ನಾಕಾರು, ಎಂಟು ಹದಿನಾಲ್ಕು... ಎನ್ನುವ ಎಣಿಕೆಗಳನ್ನೂ, ಹದಿನೈದೆಂಟಲ ನೂರಿಪ್ಪತ್ತು ಎನ್ನುವ ಗುಣಿಕೆಗಳನ್ನೂ ಇಂಗ್ಲಿಷಿನಲ್ಲಿ ಮಾಡಲಿಕ್ಕೆ, ನಮ್ಮಪ್ಪನಾಣೆ, ಆಗದ ಮಾತು. ಹೀಗಿರುವಾಗ ಇಂಗ್ಲಿಷು ನನಗೆಷ್ಟು ಮುಖ್ಯ ಅಂತ ಕೇಳಿದರೆ ಅದಿಲ್ಲದೆ ‘ಫಿಷೌಟಾಫ್ ವಾಟರ್’ ಎನ್ನುವ ಮಟ್ಟಿಗೆ, ಕನ್ನಡ ಎಷ್ಟು ಅಮುಖ್ಯ ಅಂತ ಕೇಳಿದರೆ ನನ್ನ ಎಚ್ಚರ‍ ಮತ್ತು ಸುಪ್ತಿಗಳ ಬೇರೆಲ್ಲ ತಾಯ್ನುಡಿಯಲ್ಲಿ ನೆಟ್ಟುಕೊಂಡಿರುವುದರಿಂದ ‘ಹವ್ವೀಸಿಟ್ ನಾಟಿಂಪಾರ್ಟೆಂಟ್?!!’ ಎಂದು ಕೆರಳುವ ಮಟ್ಟಿಗೆ- ಎರಡೂ ಸಮ ಸಮ ಬೇಕು! ಬರೇ ಅಭಿಮಾನದ ಸಲುವಾಗಿ ವೈದ್ಯನೊಬ್ಬ ತನ್ನೆದುರಿಗಿನ ಜ್ಞಾನವನ್ನೆಲ್ಲ ಕನ್ನಡಿಸುತ್ತ ಹೋದರೆ, ಆಪರೇಷನ್ ಮೇಜಿನ ಮೇಲೆ ಮೈ ಕೊಯ್ಯಿಸಿಕೊಂಡ ಆತ್ಮಕ್ಕೆ ಕೊಟ್ಟ ಎಡೆ, ಗಡವು ಸಾಲದೆ ವಿಲವಿಲಿಸೀತು!! ಹಾಗಾದರೆ ನನಗೆ ಎಷ್ಟು ಕನ್ನಡ ಬೇಕು? ಮತ್ತೆಷ್ಟು ಇಂಗ್ಲೀಷು? ಈ ಊರನ್ನು ಕಟ್ಟುವ ಭರದಲ್ಲಿರುವ ನನಗೆ ಇದೊಂದು ಬಾಲಿಶಪ್ರಶ್ನೆಯೇ ಸರಿ. An absolutely stupid arguement! -ಎಂದು ನಕ್ಕು ಮರೆಯುವುದಿದೆ. ಆದರೆ ರಕ್ಷಣಾವೇದಿಕೆಯ ಮಂದಿ ಕನ್ನಡ, ಕನ್ನಡ ಅಂತ ಬಡಿದುಕೊಳ್ಳುವಾಗ ತಾತ್ಸಾರವೆನಿಸುವಷ್ಟೇ, ನನ್ನೆದುರು ಮೇಜಿನಾಚೆಗೆ ಕೂರುವ ಕನ್ನಡೇತರದವನೊಬ್ಬ ಕನ್ನಡವನ್ನು ಹೀಗಳೆದರೆ ರೊಚ್ಚೇಳುವಂತಾಗುತ್ತದೆ. ಈ ಎರಡೂ ವೈರುಧ್ಯಗಳ ನಡುವೆ ಒಂದಷ್ಟು ಓದು, ಬರಹ, ಬದುಕು ನಡೆಯುತ್ತಿದೆ.

ನಾನಿರುವ ಬೆಂಗಳೂರೂ ಸಹ ಇದೇ ವೈರುಧ್ಯವನ್ನು ಧ್ವನಿಸುತ್ತದೆ. ನಮ್ಮ ಇವತ್ತಿನ ಪಟ್ಟಣಗಳೆಲ್ಲ ವೃತ್ತಿಯೊಕ್ಕಲಿನ ಸಲುವಾಗಿ ಕಟ್ಟಿಕೊಳ್ಳುತ್ತಿರುವಾಗ, ಉದ್ಯೋಗದ ಪರಿವಿಡಿಗಳು ಕನ್ನಡದ್ದಲ್ಲದೆ ಇರುತ್ತಿರುವಾಗ- ಊರಿಗೆ ಊರೇ ಪರದೇಸಿಯೆನಿಸುವುದು ಸಹಜವೆ. Today's cities are conceived as an extension of the industrial WEST! ನಮ್ಮ ಇವೊತ್ತಿನ ಊರುಗಳು ಔದ್ಯೋಗಿಕ ‘ಪಶ್ಚಿಮ’ದ ಬಡಾವಣೆಯೇ ಹೌದು. ಹೀಗಿರುವಾಗ ನಾನು ನನ್ನೊಳಗಿನ ಒತ್ತಾಯಕ್ಕೆ ಮಣಿದು ಕನ್ನಡದೊಳಗೆ ಊರಿಕೊಳ್ಳಬೇಕೆಂದರೆ ನನ್ನ ಹೊರಗೆಲ್ಲ ಇಂಗ್ಲಿಷ್ ಊರು ಊರಿಕೊಳ್ಳುತ್ತಿದೆಯಲ್ಲ...! ಏನನ್ನುವುದು ಇದಕ್ಕೆ? ಇದು ವೈರುಧ್ಯವೇ ಇದ್ದಲ್ಲಿ ಇದೆಷ್ಟರ ಮಟ್ಟಿಗೆ ಅನಿವಾರ್ಯ?

ಮತ್ತೆ, ಎಷ್ಟು ಕನ್ನಡವೆನ್ನುವ ಪ್ರಶ್ನೆಗೆ ಬಂದರೆ ಸದ್ಯದ ಪರಿಸ್ಥಿತಿಯಲ್ಲಿ, ನಾನಿರುವ ವೃತ್ತಿಯಲ್ಲಿ ಒಂದಿಷ್ಟೂ ಇಲ್ಲ ಅಂತನ್ನುವುದು ಪ್ರಾಮಾಣಿಕ ಉತ್ತರವಾಗುತ್ತದೆ. ಅಭಿಮಾನದಿಂದ ಅಷ್ಟೋ, ಇಷ್ಟೋ ಎನ್ನುವುದು ಸೋಗೆನಿಸುತ್ತದೆ. ಹಾಗಾಗಿಯೇ ನನ್ನಂತವರಿಗೆ ಕನ್ನಡವನ್ನು ಉಳಿಸೋಣ, ಬೆಳೆಸೋಣ ಅನ್ನುವುದೆಲ್ಲ ವೇದಿಕೆಯ ಮೇಲಿನ ‘ಸೊಗದ ಮೊಳಗು’ಗಳಷ್ಟೇ. ರಂಗದ ಮೇಲಷ್ಟೇ ಚೆನ್ನ. ಆದರೆ ಹೀಗನ್ನಲಿಕ್ಕೆ ದುಗುಡವಿಲ್ಲವಂತೇನಿಲ್ಲ. ಕನ್ನಡವೆಂದರೆ ಬರೇ ಮಾತಲ್ಲ, ಅದು ನಮ್ಮ ಬಾಳಿನ ರೀತಿ ಅನ್ನುವ ಕಟ್ಟಾ ‘ಭಾಷೇತರ’ ಮನವರಿಕೆಯನ್ನು ನಾವು ಬೌದ್ಧಿಕ ನೆಲೆಯಲ್ಲಿ ಹುಟ್ಟಿಸಬೇಕೇನೋ. ಇದು ನಮ್ಮ ನಮ್ಮ ಕೆಲಸಗಳ ಬೇರಿನವರೆಗೆ ಇಳಿಯಬೇಕೇನೋ. ನೋಡಿ, ಮಾಡಿ, ಓದಿ, ಕಲಿಯುವವುಗಳಲ್ಲದೆ ಇನ್ನಿತರೆ ಸಾಮಾನ್ಯ ಅರಿವುಗಳೂ ಕನ್ನಡದೊಳಗಿನಿಂದ ಬರದಿದ್ದಲ್ಲಿ ಹೊರಗೆ ಕಟ್ಟಿಕೊಳ್ಳುತ್ತಿರುವ ಊರನ್ನು ಎಷ್ಟು ಹಳಿದರೇನು ಫಲ? ಪ್ರತಿಮೆಯೊಳಗಿನ ಮಣ್ಣು ಮತ್ತು ಆಶಯ ನಮ್ಮದಲ್ಲದಿದ್ದರೆ ಅದರ ಮೇಲೆ ಎಷ್ಟೇ ಕನ್ನಡ ಕೈಯಾಡಿಸಿದರೂ ಅದು ಬೇವಾರಸಿಯೇ ತಾನೆ?!

ಊರಿನ ಯಾವುದೇ ‘ಕೃತಿ’ಯ ಪರಿಕಲ್ಪನೆ- ಅದರ ಮೂಲ ಚಿಂತನೆಯಿಂದ ಮೊದಲುಗೊಂಡು ನಮ್ಮೊಳಮನೆಗಳ ಮಾತಿನಲ್ಲಿ ನಡೆಯದಿರುವಾಗ, ಅದು ಮೂರ್ತಯಿಸಿದ ಮೇಲೆ ಎಷ್ಟೇ ಕನ್ನಡಿಸಿದರೂ ಪರಕೀಯವೇ ಅನಿಸುತ್ತದೆ. ನಮ್ಮ ಬೀದಿಗಳನ್ನು ರಾಚುವ ಬಿಲ್‍ಬೋರ‍್ಡುಗಳು, ಜಾಹಿರಾತುಗಳು ಕನ್ನಡದಲ್ಲಿದ್ದರೂ ಅದು ಬರೇ ಕಪಟವೆನಿಸುತ್ತದೆ ಯಾಕೆ? ನಮ್ಮ ಕೈಗಳಲ್ಲಿ ಶೋಭಿಸುವ ನಾಕಿಯಾ, ಸ್ಯಾಮ್‍ಸಂಗುಗಳು ಎಷ್ಟು ನಮ್ಮವು? ಮಿಸ್ಸ್‍ಡ್‍ಕಾಲ್ ಎನ್ನುವ ನಮ್ಮ ಅನುದಿನದ ಮಾತನ್ನು ಪಟ್ಟು ಹಿಡಿದು ಕನ್ನಡದಲ್ಲಿ ಹೇಳುವುದು ಹೇಗೆ? ಫಾರ್ವರ್ಡ್-ರೀವೈಂಡ್‍ಗಳ ಭಾಷಾತೀತತೆಯನ್ನು ನಿವಾರಿಸಲಿಕ್ಕುಂಟೆ? ಹಾಗೆ ಹೇಳಿದರೆ ಹಾಸ್ಯಾಸ್ಪದವೆನಿಸುವುದೇಕೆ? ಹೀಗೆ ಕನ್ನಡಗೊಂಡ ಊರು ನನಗೆಷ್ಟು ಸಲ್ಲುತ್ತದೆ? ಊರು ನನಗೆ ಸಲ್ಲುವುದಕ್ಕಿಂತ, ನಾನು ಇಂತಹ ಊರಿಗೆ ಹೆಚ್ಚು ಸಲ್ಲುತ್ತೇನೇಕೆ? ‘ಫಿರ್ ಮಿಲೇ ಸುರ್ ಮೇರಾ ತುಮ್ಹಾರಾ’ದಲ್ಲಿ ಬರುವ ಕನ್ನಡದ ಸಾಲುಗಳನ್ನು ಹೇಳುವವರು ಕನ್ನಡದ ಮುಖದವರು ಅಂತ ಒಪ್ಪಿಕೊಳ್ಳುವುದೇಕೆ? ಎಫ್ಫೆಮ್ಮ್ ಕನ್ನಡಕ್ಕೆ ‘ಕಂಗ್ಲಿಷ್’ ಅಂತ ಹೊಸ ಮೊಹರು ಕೊಟ್ಟು ಉಡಾಫೆಗೆ ಅಣಕಿಸುವಾಗ, ಯಾರೋ ಎಲ್ಲವನ್ನೂ ಅಚ್ಚಗೊಳಿಸುತ್ತಲೇ ಸಾಕಷ್ಟು ಅರ್ಥವಾಗದೆ ಮಿಕಮಿಕವಾಗುತ್ತದೇಕೆ? ಆದರೂ ಕನ್ನಡದ ಪಡ್ಡೆ ಸಿನೆಮಾಗಳಲ್ಲಿನ ‘ಸೆಂಟಿಮೆಂಟು, ಫೀಲಿಂಗು’ಗಳ ಹರಕಲುಗಳಿಗೆ ಖೇದಿಸುತ್ತೇವೇಕೆ? ಕನ್ನಡದ ನಟನೊಬ್ಬ ಇಹದ ಯಾತ್ರೆ ಮುಗಿಸಿದರೆ ಊರಿಗೆ ಊರ‍ೇ ಮುಗ್ಗರಿಸುವುದೇಕೆ? ಇಂಗ್ಲಿಷ್ ಮೂಲಕ ಜರುಗುವ ನನ್ನ ಕಟ್ಟಡಗಳ ಕೃತ್ಯ ಕೊಡುವಷ್ಟು ಹಣವನ್ನು ನನ್ನ ಅಚ್ಚಗನ್ನಡದ ಕೆಲಸಗಳು ಎಂದಾದರೂ ತಂದಾವೆ?

ಹಾಗಾದರೆ ಬದಲಾವಣೆ ಆಗಬೇಕಾಗಿರುವುದು ಎಲ್ಲಿ? ಇಂತಹ ಊರುಗಳ ಹೊಣೆಗಾರಿಕೆ ಯಾರದು?

ಕನ್ನಡದ ಮುತ್ಸದ್ದಿಗಳು ಉತ್ತರಿಸಲಿ.

ನಮಸ್ಕಾರ.

ಕನ್ನಡ - ತಮಿಳು - ಒಂದು ಸಾಂಸ್ಕೃತಿಕ ರಾಜಕಾರಣ



ಡಿ. ಎಸ್. ನಾಗಭೂಷಣ ಕನ್ನಡದ ಸಮಾಜವಾದಿ ವಲಯದ ವಿಶಿಷ್ಟ ವಸ್ತುನಿಷ್ಠ ಚಿಂತಕ.
ಡಾ|| ಷ.ಶೆಟ್ಟರ್ ಅವರ `ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಪುಸ್ತಕದ ಹಿನ್ನಲೆಯಲ್ಲಿ, ಕನ್ನಡ ತಮಿಳಿನ ವಿಶಿಷ್ಟ ಸಂಬಂಧವನ್ನು ಕುರಿತು ವಿಶಿಷ್ಟ ಒಳನೋಟಗಳ ಮಹತ್ವದ ಲೇಖನ.


ತಮಿಳರಿಗೆ ಸಿಗುವುದೆಲ್ಲ ಕನ್ನಡಿಗರಿಗೂ ಸಿಗಬೇಕು. ಇದು ಕರ್ನಾಟಕ ಏಕೀಕರಣೋತ್ತರದಲ್ಲಿ ಕಂಡುಬರುತ್ತಿರುವ ಕನ್ನಡತನದ ಒಂದು ಸ್ಥಾಯೀಭಾವವಾಗಿಬಿಟ್ಟಿದೆ! ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡುವವರೆಗೂ ಕನ್ನಡಿಗರಿಗೆ ಶಾಸ್ತ್ರೀಯ ಭಾಷೆಯ ಕಲ್ಪನೆಯಾಗಲೀ, ಆ ಸ್ಥಾನಮಾನ ಕನ್ನಡಕ್ಕೆ ಒದಗಬೇಕೆಂಬ ಆಶಯವಾಗಲೀ ಇದ್ದುದು ಎಲ್ಲೂ ದಾಖಲಾದಂತಿಲ್ಲ. ತಮಿಳಿಗೆ ಆ ಸ್ಥಾನಮಾನ ದೊರೆತ ಮೇಲೇ ಕನ್ನಡಿಗರು, ಕನ್ನಡ ವಿದ್ವಾಂಸರು ಮತ್ತು ಸಂಶೋಧಕರು ಹಾಗೆಂದರೇನು ಎಂದು ತಿಳಿದುಕೊಳ್ಳಲು ಆಸಕ್ತಿ ವಹಿಸತೊಡಗಿದ್ದು. ತಮಿಳರು ಮತ್ತು ಕನ್ನಡಿಗರ ನಡುವೆ ಪದೇ ಪದೇ ಈ ತರಹದ ಘರ್ಷಣೆಗಳು ಏಕೆ ತಲೆದೋರುತ್ತವೆ? ಮತ್ತು ಕರ್ನಾಟಕ ಏಕೀಕರಣದ ನಂತರ ಕಟ್ಟಿಕೊಂಡ ಕನ್ನಡ ಚಳುವಳಿಗಳ ಪ್ರಚೋದಕ ಶಕ್ತಿ ಮುಖ್ಯವಾಗಿ ಏಕೆ ತಮಿಳು ವಿರೋಧವೇ ಆಗಿದೆ? ಎಂಬ ಪ್ರಶ್ನೆಗಳನ್ನೂ ನಾವು ಕೇಳಿಕೊಳ್ಳಬೇಕಿದೆ.

ಸಾಮಾನ್ಯವಾಗಿ ನಿರಭಿಮಾನಿಗಳೆಂದೇ ಹೆಸರಾಗಿರುವ, ಆದರೆ ಸ್ವಾಭಿಮಾನ ಪ್ರಕಟಿಸುವ ಸಂದರ್ಭ ಬಂದಾಗಲೆಲ್ಲ ಅದು ತಮಿಳು ವಿರೋಧಿಯಾಗಿಯೇ ಹೊರ ಹೊಮ್ಮುವಂತಿರುವ ಬೆಂಗಳೂರು ಹಾಗೂ ಅದರ ಸುತ್ತಮುತ್ತಲಿನ ಕನ್ನಡಿಗರ ಈ ವಿಚಿತ್ರ ನಡಾವಳಿಯ ಬಗ್ಗೆ ನನಗೊಂದು ಹೊಸ ಹೊಳಹು ಸಿಕ್ಕಿದ್ದು, ಇತ್ತೀಚೆಗೆ ಪ್ರಕಟವಾದ ಹಿರಿಯ ಇತಿಹಾಸಜ್ಞ ಷ. ಶೆಟ್ಟರ್ ಅವರ ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ (ಪ್ರ: ಅಭಿನವ, ಬೆಂಗಳೂರು) ಎಂಬ ಪುಸ್ತಕವನ್ನು ಓದಿದಾಗ.


ಇತ್ತೀಚೆಗೆ ಪ್ರಕಟಗೊಂಡ ಡಾ|| ಷ.ಶೆಟ್ಟರ್ ಅವರ ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ ಪುಸ್ತಕವು ಕನ್ನಡ ಭಾಷೆ ಹಾಗೂ ಸಂಸ್ಕೃತಿ ಚರಿತ್ರೆಯನ್ನು ಈವರೆಗೆ ನಮ್ಮ ಗಮನಕ್ಕೆ ಬಾರದಿದ್ದ ನೆಲೆಗಳ ಆಧಾರದ ಮೇಲೆ ಪುನಾರಚಿಸುವ ಅಗತ್ಯವನ್ನು ಮನಗಾಣಿಸುತ್ತದೆ. ಮುಖ್ಯವಾಗಿ ಈ ಪುಸ್ತಕ ಕನ್ನಡವನ್ನು ಕಟ್ಟಿದ್ದೆಂದು ಈವರೆಗೆ ನಾವು ಭಾವಿಸಿರುವ ಕನ್ನಡ-ಸಂಸ್ಕೃತ ಬಾಂಧವ್ಯಕ್ಕಿಂತ ಮೂಲಭೂತವಾದ ಹಾಗೂ ಅರ್ಥಪೂರ್ಣವಾದ ಕನ್ನಡ-ತಮಿಳು ಬಾಂಧವ್ಯವನ್ನು ನಮಗೆ ಎತ್ತಿ ತೋರಿಸುತ್ತದೆ. ಆದಿ ತಮಿಳಿನ ಮತ್ತು ತಮಿಳು ಪ್ರದೇಶದ(ತಮಿಳಗಂ) ಒಡನಾಟದಲ್ಲೇ ಒಡಮೂಡಿದ ಕನ್ನಡ ಮತ್ತು ಕನ್ನಡ ಸಮುದಾಯ, ತಮಿಳು ತನ್ನದೇ ಲಿಪಿಯನ್ನು ಪಡೆಯುವ ಸಾಕಷ್ಟು ಮುನ್ನವೇ ತನ್ನದೇ ಲಿಪಿಯನ್ನು ಪಡೆದುಕೊಂಡಿತು. ಇದರಿಂದಾಗಿ ಕನ್ನಡ ಇನ್ನೂ ತನ್ನದೇ ಲಿಪಿ ಪಡೆಯದ ತಮಿಳು ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನ್ನಲ್ಲದೆ ರಾಜಕಾರಣವನ್ನೂ ಪ್ರಭಾವಿಸುವಷ್ಟರ ಮಟ್ಟಿಗೆ ಒಂದು ಸಮಾನಾಂತರ ರಾಜಕೀಯ ಶಕ್ತಿಯಾಗಿಯೂ ಹೇಗೆ ಒಡಮೂಡಿತು ಎಂಬುದರ ಸೂಕ್ಷ್ಮ ವಿವರಗಳನ್ನು ಶೆಟ್ಟರ್ ಈ ಪುಸ್ತಕದಲ್ಲಿ ನೀಡುತ್ತಾರೆ. ಈ ರಾಜಕಾರಣ, ಸಂಸ್ಕೃತಿಯ ನೆಲೆಯಲ್ಲಿ ಇನ್ನಷ್ಟು ಸ್ಪಷ್ಟಗೊಳ್ಳುವುದು, ಈ ಎರಡು ಭಾಷೆಗಳು ಹೊರಗಿಂದ ಬಂದ ಸಂಸ್ಕೃತ ಶಬ್ದಗಳಿಗೆ ತೆರೆದುಕೊಳ್ಳಬೇಕಾದ ರೀತಿ ನೀತಿಗಳ ಬಗ್ಗೆ ಕವಿರಾಜ ಮಾರ್ಗ ಮತ್ತು ತೊಲ್ಕಾಪ್ಪಿಯಮ್ಗಳು ನಿರೂಪಿಸುವ ನಿಯಮಗಳ ವಿಭಿನ್ನ ಸ್ವರೂಪದಲ್ಲಿ. ಈ ಸಂಕೀರ್ಣ ರಾಜಕಾರಣವೇ ಕಾವೇರಿಯೆಂಬ ಒಂದೇ ನದಿಯ ಕಣಿವೆಗಳಲ್ಲಿ ಹುಟ್ಟಿದ ಭಾಷೆಗಳಾಗಿದ್ದ ತಮಿಳು ಮತ್ತು ಕನ್ನಡಗಳನ್ನು, ಕಾಲಾನಂತರದಲ್ಲಿ ವಿರುದ್ಧ ಸಾಂಸ್ಕೃತಿಕ ದಿಕ್ಕುಗಳೆಡೆಗೆ ಎಳೆದುಕೊಂಡು ಹೋದದ್ದು. ಕನ್ನಡದ ಮೂಲ ನೆಲೆಯಲ್ಲಿನ ಈ ಸಾಂಸ್ಕೃತಿಕ ಪಲ್ಲಟವೇ, ಕನ್ನಡಿಗರು ಮತ್ತು ತಮಿಳರ ನಡುವೆ ಇಂದಿಗೂ ಕಾಣುವ ಅಸಹಜ ಸಾಂಸ್ಕೃತಿಕ ಬಿಗುವನ್ನು ಸೃಷ್ಟಿಸಿರುವುದು.

ಆ ಮೂಲಕ ಪರೋಕ್ಷವಾಗಿ; ಕನ್ನಡ ಕುಲ ಮೂಲದ ನಿಜ ಚರಿತ್ರೆ ಹೀಗಿದ್ದರೂ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಚರಿತ್ರೆಯನ್ನು ಸಂಸ್ಕೃತದ ಒಡನಾಟದ ಆಧಾರದ ಮೇಲೇ ಕಟ್ಟಲಾಗಿರುವ ಸಾಂಸ್ಕೃತಿಕ ರಾಜಕಾರಣದ ಕಡೆ ಅವರು ನಮ್ಮ ಗಮನ ಸೆಳೆಯುತ್ತಾರೆ.

ತಮಿಳು ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿಗಳ ನಡುವೆ ಈ ಸಾಂಸ್ಕೃತಿಕ ರಾಜಕಾರಣ ಉಂಟು ಮಾಡಿದ ಬಿರುಕೇ ಈ ದಿನಗಳ ಕನ್ನಡ-ತಮಿಳರ ಘರ್ಷಣೆಗಳ ಹಿಂದೆ ಕೆಲಸ ಮಾಡುತ್ತಿರಬಹುದೇ ಎಂಬ ಅನುಮಾನ ನನ್ನದು. ಇದೊಂದೇ ಅಲ್ಲ. ಇನ್ನೂ ಒಂದು ಮುಖ್ಯ ಸಂಗತಿ ಇದರ ಹಿಂದೆ ಕೆಲಸ ಮಾಡುತ್ತಿರಬಹುದೇ ಎಂಬ ಅನುಮಾನವೂ ಇದೆ: ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ. ಇದರ ಪರಿಣಾಮವಾಗಿ ಬ್ರಿಟಿಷರು ಚಾರಿತ್ರಿಕ ಕನ್ನಡ ನಾಡಿನ ಕೊನೆಯ ರೂಪ ಎನ್ನಬಹುದಾದ ಮೈಸೂರು ಸಂಸ್ಥಾನವನ್ನು ಮೂರು ಭಾಗಗಳಾಗಿ ಛಿದ್ರ ಮಾಡಿದರು. ಒಂದು ಭಾಗ ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದಾಗ, ಬ್ರಿಟಿಷರು ಅಲ್ಲಿಂದ ತಮಿಳು-ತೆಲುಗರನ್ನು ಭಾರಿ ಪ್ರಮಾಣದಲ್ಲಿ ದುಡಿಮೆಗಾಗಿ ಇಲ್ಲಿಗೆ ಸಾಗಿಸಿದರು. ಈ ರಾಜಕೀಯ ದುರುದ್ದೇಶದ ಆಯೋಜಿತ ವಲಸೆ ಮೈಸೂರು ಕನ್ನಡಿಗರ ಮಧ್ಯೆ ಉಂಟು ಮಾಡಿದ ಸಾಂಸ್ಕೃತಿಕ ಆಘಾತದ ಸುಪ್ತ ನೆನಪುಗಳೂ ಇಲ್ಲಿ ಕೆಲಸ ಮಾಡುತ್ತಿರಬಹುದು. ಹಾಗಾಗಿಯೇ ಕನ್ನಡ ಚಳುವಳಿ ತಮಿಳರು ಗಣನೀಯ ಸಂಖ್ಯೆಯಲ್ಲಿರುವ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲೇ ತನ್ನನ್ನು ವಿವಿಧ ರೂಪಗಳಲ್ಲಿ ಕಟ್ಟಿಕೊಂಡು, ತಮಿಳರನ್ನು ತನ್ನ ದೃಷ್ಟಿಕೇಂದ್ರವನ್ನಾಗಿ ಮಾಡಿಕೊಂಡಿದೆ. ಕನ್ನಡ ಚಳುವಳಿಯ ಈ ತಮಿಳು ವ್ಯಸನದಿಂದಾಗಿ ಇತರ ಭಾಷಾ ಸಮುದಾಯಗಳು-ಉದಾ: ಮಲೆಯಾಳಿಗಳು, ಹಿಂದೀಯರು, ಇತ್ತೀಚೆಗೆ ರಾಜಸ್ಥಾನಿಗಳು ಮತ್ತು ಬಿಹಾರಿಗಳು-ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ವಲಸೆ ಬಂದು ನೆಲೆಗೊಂಡು ಇಲ್ಲಿನ ಜನ ಸಮುದಾಯದೊಂದಿಗೆ ಬೆರೆಯುವ ಪ್ರಕ್ರಿಯೆಯಲ್ಲಿ ತೊಡಗದೇ ಹೋಗಿರುವುದು ಯಾರ ಗಮನಕ್ಕೂ ಬಾರದೆ ಹೋಗಿ, ತಮಿಳರು ತಮಿಳರಾಗಿಯೇ ಉಳಿದಿರುವುದು ಮಾತ್ರ ಈ ಕನ್ನಡ ಚಳುವಳಿಕಾರರನ್ನು ಬಾಧಿಸುವ ದೊಡ್ಡ ಸಮಸ್ಯೆಯಾಗಿದೆ! ಕನ್ನಡ ಚಳುವಳಿಯ ಈ ದೃಷ್ಟಿದೋಷದಿಂದಾಗಿ ಕನ್ನಡದ ಪೂರ್ವ ಗಡಿ ಪೂತರ್ಾ ರಾಜಕೀಯವಾಗಿ(ಇದೇ ಅಂತಿಮ ಹಂತ ತಾನೇ?) ತೆಲುಗರ ವಶವಾಗುತ್ತಿರುವುದು ಯಾರಿಗೂ ದೊಡ್ಡ ಸಮಸ್ಯೆಯಾಗಿ ಕಾಣುತ್ತಿಲ್ಲ. ಇದು ಕನ್ನಡ ಚಳುವಳಿಯ ಇಂದಿನ ದುರಂತ.

ತಮ್ಮ ಭಾಷೆಯ ಸ್ಥಾನಮಾನವನ್ನು ತಮಿಳಿನ ಸ್ಥಾನಮಾನದೊಂದಿಗಷ್ಟೇ ಹೋಲಿಸಿಕೊಂಡು ಅದನ್ನು ಸಂರಕ್ಷಿಸಿಕೊಳ್ಳುವಷ್ಟು ಮಾನಧನರಾದ ಕನ್ನಡಿಗರು, ತಮ್ಮ ಭಾಷೆಯ ಬಗ್ಗೆ ನಿಜವಾಗಿ ಎಷ್ಟು ಆಳವಾದ ಅಭಿಮಾನವನ್ನು ಹೊಂದಿದ್ದಾರೆ ಎಂಬುದನ್ನು ಷ.ಶೆಟ್ಟರ್ ಅವರು ತಮ್ಮ ಪುಸ್ತಕದಲ್ಲಿ ಸೂಚಿಸಿರುವುದು ಹೀಗೆ: ತಮ್ಮ ಸಾಹಿತ್ಯವನ್ನು ಪರಭಾಷೀಯರಿಗೆ ಪರಿಚಯಿಸುವ ಕಾರ್ಯವನ್ನು ತಮಿಳು ಭಾಷಾ ಪಂಡಿತರು ಬಹುಶಃ ಉಳಿದೆಲ್ಲ ಭಾಷಾ ಪಂಡಿತರಿಗಿಂತಲೂ-ಖಂಡಿತವಾಗಿಯೂ ಕನ್ನಡ ಕೃತಿಗಳನ್ನು ಪರಿಚಯಿಸಲು ಮಾಡಿದ ನಮ್ಮ ಪರಿಶ್ರಮಕ್ಕಿಂತಲೂ ಸರಿ ಸುಮಾರು ನೂರು ಪಟ್ಟು-ಹೆಚ್ಚು ಶ್ರಮ ಮತ್ತು ಶ್ರದ್ಧೆಯಿಂದ ಪೂರೈಸಿಕೊಟ್ಟಿರುವರು.

ತಮಿಳರಂತೆ ತಮ್ಮ ಭಾಷೆಯ ಬಗ್ಗೆ ನಿಜವಾದ ಶ್ರದ್ಧೆಯನ್ನಾಗಲೀ, ಪರಿಶ್ರಮವನ್ನಾಗಲೀ ಪ್ರದರ್ಶಿಸದ ಕನ್ನಡಿಗರು ತಮ್ಮ ಭಾಷೆಗೆ ತಮ್ಮದೇ ಬದುಕಿನಲ್ಲಿ ತಾವು ಕೊಡಲಾಗದ ಮಾನ್ಯತೆಯನ್ನು ಇತರರು ಕೊಡಬೇಕೆಂದು ಬಯಸುವ ಹುಸಿ ಆತ್ಮಾಭಿಮಾನದ ರೋಗಕ್ಕೆ ತುತ್ತಾಗಿ ಬಳಲುತ್ತಿದ್ದಾರೆ. ಈ ರೋಗದಿಂದ ಮುಕ್ತರಾಗದ ಹೊರತು ಕನ್ನಡಿಗರಿಗೆ ಮತ್ತು ಕನ್ನಡಿಗರಿಗೆ ಮುಕ್ತಿಯಿಲ್ಲ. ಇದೇ ಶಂಗಂ ತಮಿಳಗಂ ಪುಸ್ತಕ ನೀಡುವ ಮುಖ್ಯ ಸಾಂಸ್ಕೃತಿಕ ಹೊಳಹು ಕೂಡಾ ಎಂದು ನಾನು ಭಾವಿಸಿದ್ದೇನೆ.