ಗದುಗಿನಲ್ಲಿ ಅವಧಿ-ಆಲೆಮನೆ-ನುಡಿನಮನ

ಕನ್ನಡ ಸಾಹಿತ್ಯ ಲೋಕಕ್ಕೆ’ ಅ’ ಮತ್ತು ‘ಆ’ ಪ್ರವೇಶಿಸಿದೆ. ಗದಗದಲ್ಲಿ ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ಲಾಗ್ ಲೋಕದ ಬಾಗಿನ ನೀಡಬೇಕೆಂದು ನಿರ್ಧರಿಸಿದಾಗ ಕೈಗೂಡಿಸಿದ್ದು ಈ ‘ಅ’ ಮತ್ತು ‘ಆ’- ಅವಧಿ ಮತ್ತು ಆಲೆಮನೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ..ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಒಂದು ಮೊದಲ ನುಡಿ ಬರೆಯಲು ಈ ಅಕ್ಷರಗಳು ಸಜ್ಜಾಗಿವೆ.

ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’ ಎಂಬ ಹೊಸ ಬ್ಲಾಗ್ .
ಕನ್ನಡ ಸಾಹಿತ್ಯ ಸಮ್ಮೇಳನವೆನ್ನುವುದು ಸಾಹಿತ್ಯ ಜಾತ್ರೆಯೋ? ಜನ ಜಾತ್ರೆಯೋ? ಎಂಬ ಪ್ರಶ್ನೆಗಳಿವೆಯಾದರೂ ಕನ್ನಡ ಜಾತ್ರೆ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ. ಕೆಲವರಿಗಿದು ಸೆಮಿನಾರು-ಘೋಷ್ಠಿಗಳ ಗಂಭೀರ ಚಿಂತನವಾದರೆ, ಮತ್ತೆ ಕೆಲವರಿಗಿದು ಮಿತ್ರಮಂಡಳಿ, ಇನ್ನೂ ಕೆಲವರಿಗಿದು ಪುಸ್ತಕ ಸಂತೆ, ಇನ್ನುಳಿದವರಿಗೆ ಪ್ರವಾಸದ ಮೋಜು! ಇನ್ನೂ ಕೆಲವರಿರುತ್ತಾರೆ ಅವರಿಗಿದು ಭರ್ಜರಿ ವ್ಯಾಪಾರ, ಮತ್ತೊಂದು ವಿಶೇಷ ವರ್ಗವಿದೆ ಅವರಿಗಿದು ಉರವಣಿಗೆಯ ವೇದಿಕೆ. ಹೀಗೆ ಅವರವರ ಭಾವಕ್ಕೆ ಅವರ ಭಕುತಿಗೆ ಎಂಬಂತೆ ನಡೆದುಕೊಂಡು ಬಂದಿರುವ ಸಾಹಿತ್ಯ ಸಮ್ಮೇಳನದ ಫುಲ್ ಸಚಿತ್ರ ಕ್ಷಣ ಕ್ಷಣದ ವರದಿ ನಿಮ್ಮ ಮುಂದೆ, ನಾಳೆಯಿಂದ....

‘ಅವಧಿ’ ಚಿತ್ರದುರ್ಗದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿಮ್ಮ ಮುಂದಿಟ್ಟ ರೀತಿ ನಿಮಗೆಲ್ಲರಿಗೂ ಗೊತ್ತಿದೆ. ಪ್ರತೀ ಘಂಟೆ ‘ಅವಧಿ’ ತನ್ನ ಬ್ಲಾಗ್ ಅನ್ನು ಅಪ್ಡೇಟ್ ಮಾಡಿತ್ತು. ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಪ್ರಕಟಿಸಿತ್ತು. ಆ ಧೂಳು, ಆ ಗೋಳು, ಆ ಜ್ಹಳ , ಆ ಜಗಳ ಎಲ್ಲವೂ ನಿಮ್ಮ ಕಣ್ಣಿಗೆ ಸಿಕ್ಕಿತು. ಈಗ ಇಲ್ಲಿ ಇದ್ದರಲ್ಲಾ ಎನ್ನುವಷ್ಟರ ವೇಳೆಯಲ್ಲಿ ‘ಅವಧಿ’ ತಂಡ ತನ್ನದೇ ಮೇಫ್ಲವರ್ ಮೀಡಿಯಾ ಹೌಸ್ ಸ್ಟಾಲ್ ನಿಂದ ಆಗಲೇ ಜಗತ್ತಿಗೆ ಸಮ್ಮೇಳನದ ಸುದ್ದಿ ಅಪ್ಲೋಡ್ ಮಾಡಿ ಮುಗಿಸುತ್ತಿತ್ತು.

ಈ ಬಾರಿ ಇನ್ನಷ್ಟು ರುಚಿಕರವಾಗಿ ಸಮ್ಮೇಳನವನ್ನು ಬಡಿಸಲು ‘ಅವಧಿ - ಆಲೆಮನೆ’ ಸಜ್ಜಾಗಿದೆ. ಹೀಗಾಗಿ ಈ ಬಾರಿಯ ಸಮ್ಮೇಳನ ಅವಧಿ- ಆಲೆಮನೆ ನುಡಿನಮನ ಅಂತ ಹೆಸರಿಟ್ಟುಕೊಂಡಿದೆ. ಇಂದು ರಾತ್ರಿಯೇ ನಮ್ಮ ನಾಲ್ಕು ಜನರ ತಂದ ಗದಗಕ್ಕೆ ಹೊರಟು ನಿಂತಿದೆ. ನಾಳೆ ಬೆಳಗಿನ ಜಾವಕ್ಕೆಲ್ಲ ಈ ತಂಡ ಗದುಗಿನ ಗಡಿ ಮುಟ್ಟಿರುತ್ತದೆ. ತಗೊಳ್ಳಿ ಇನ್ನು ಶುರು...

ಸತತ ನಾಲ್ಕು ದಿನಗಳ ಕಾಲ ಈ ಕನ್ನಡ ಹಬ್ಬದ ಎಲ್ಲ ಸವಿಯೂಟವನ್ನು ಅದರ ಎಲ್ಲ ರಸಗಳೊಂದಿಗೆ ನಿಮಗೆ ಉಣಬಡಿಸುತ್ತೇವೆ. ತಯಾರಾಗಿರಿ, ನಾಳೆ ಬೆಳಿಗ್ಗೆಯಿಂದಲೇ ನೇರ ವರದಿಗಾರಿಕೆ ಶುರು...