ಕರುನಾಡ ಹಿರೆಕ್ಕ ಗೀತಕ್ಕ




ಗೀತ ನಾಗಭೂಷಣ ಪ್ರಸ್ತುತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಈ ಆಯ್ಕೆಯ ಬಗೆಗೆ ಯಾವುದೇ ವಿವಾದಗಳಿಲ್ಲದಿರುವುದೇ ಅವರ ಜೀವನ - ಸಾಧನೆಯ ದ್ಯೋತಕ. ಗೀತಕ್ಕರ ಆತ್ಮೀಯ ಗೆಳತಿ ಗುಲ್ಬರ್ಗದ ಮತ್ತೊಬ್ಬ ಅಕ್ಕ ಡಾ. ಮೀನಾಕ್ಷಿ ಬಾಳಿಯವರು ನುಡಿನಮನಕ್ಕಾಗಿ ಗೀತಕ್ಕರ ಬದುಕ ಕುರಿತು ಆಪ್ತವಾಗಿ ಬರೆದಿದ್ದಾರೆ, ಅಷ್ಟೇ ಅಲ್ಲ ಗೀತಕ್ಕರನ್ನು ಮಾತಿಗೆಳೆದಿದ್ದಾರೆ,





ಟಿಪಿಕಲ್ ಮೊಘಲಾಯಿ ಏರಿಯಾದ ಪ್ರಮುಖ ಲೇಖಕಿ ಗೀತಾ. ಸಮಕಾಲೀನ ಕನ್ನಡ ಲೇಖಕರ ಪಂಕ್ತಿಯಲ್ಲಿ ಎದ್ದು ಕಾಣಿಸುವ ಅಪರೂಪದ ಸಾಹಿತ್ಯದ ನಡೆ. ಸದಾ ಹಸನ್ಮುಖಿ. ಅಂತೆಯೇ ಅಂತರ್ಮುಖಿಯೂ ಹೌದು. ಗೀತಾ ಬರೆದಿದು, ಬದುಕಿದ್ದು ಎಲ್ಲವೂ ಸಂಘರ್ಷಮಯವೇ ಹೌದು. ಏಕೆಂದರೆ ಗೀತಾ ಹುಟ್ಟಿದ್ದು ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಕಲಬುಗರ್ಿಯ ಪುಟ್ಟ ಹಳ್ಳಿಯಲ್ಲಿ. 1942ನೇ ಮಾರ್ಚಿ 25ನೇ ತಾರೀಖು. ಕಲಬುರ್ಗಿಯ ನೆರೆ ಹಳ್ಳಿ ಶಿವಲಿಂಗೇಶ್ವರನ ಸಾವಳಗಿ ಎಂಬುದು ಅವರ ಹುಟ್ಟೂರು. ತಂದೆ ಶಾಂತಪ್ಪ, ತಾಯಿ ಶರಣಮ್ಮ. ಇವರ ಮೊದಲಿನ ಹೆಸರು ಶಾಂತಾ ಎಂದಿತ್ತು. ಗಂಗಾಮತವೆಂದು ಶಿಷ್ಯರಿಂದ ಕರೆಸಿಕೊಳ್ಳುತ್ತಿರುವ ಇವರದು ಬಡಕುಟುಂಬವಾಗಿತ್ತು. ತುಂಬಾ ಕಷ್ಟಪಟ್ಟು ಪಟ್ಟಣ ಸೇರಿದ ಶಾಂತಪ್ಪ, ಕಲಬುರ್ಗಿಯ ಎಂ.ಎಸ್.ಕೆ ಮಿಲ್ನಲ್ಲಿ ಕೂಲೀ ಕಾರ್ಮಿಕನಾಗಿ ಸೇರಿದ್ದೇ ದೊಡ್ಡ ಸಾಧನೆ ಎಂಬಂತಾಗಿತ್ತು. ಷಹರದ ಆಧುನಿಕ ಗಾಳಿಯ ಪ್ರಭಾವದಿಂದಾಗಿ ಮಗಳು ಶಾಂತಾಳಿಗೆ ಶಾಲೆಗೆ ಕಳಿಸಲು ಮನಸ್ಸು ಮಾಡಿದ್ದು ಕೂಡಾ ಕನ್ನಡ ಸಾಹಿತ್ಯಕ್ಕೆ ಮಾಡಿದ ಉಪಕಾರವೆಂದೇ ಈಗ ಪರಿಗಣಿಸಬೇಕಾಗಿದೆ.

ಏಕೆಂದರೆ ಇಲ್ಲಿ 1347ರಲ್ಲಿ ಹಸನ್ಗಂಗೂಬಹುಮನಿಯಿಂದ ಪ್ರಾರಂಭವಾದ ಮೊಘಲರ ಆಳ್ವಿಕೆಯು 1948ರ ನಿಜಾಮಶಾಹಿಯವರೆಗೂ ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿತ್ತು. ಎಲ್ಲಾ ದೇಶೀಯ ಅರಸೊತ್ತಿಗೆಗಳಂತೆ ಇಲ್ಲಿಯೂ ಮಡಿವಂತ ಸಾಮಾಜಿಕ ವ್ಯವಸ್ಥೆಯೇ ಮನೆ ಮಾಡಿಕೊಂಡಿತ್ತು. ಬ್ರಿಟೀಷ್ ಸಾಮ್ರಾಜ್ಯಶಾಹಿಯ ಆಳ್ವಿಕೆಗೆ ಒಳಪಟ್ಟ ಭಾಗದಲ್ಲಿ ಆಧುನಿಕ ಗಾಳಿ ಸೋಕಿದಂತೆ, ನಿಜಾಮಶಾಹಿ ಇಲಾಖೆಯು ಆಧುನಿಕತೆಯಿಂದ ದೂರವೇ ಉಳಿದಿತ್ತು. ಹೀಗಾಗಿ ಸಾರ್ವಜನಿಕ ಶಿಕ್ಷಣದಂಥ ಗಂಭೀರ ಬದಲಾವಣೆಗೆ ಈ ಭಾಗ ಒಗ್ಗಿಕೊಂಡಿರಲಿಲ್ಲ. ತತ್ಪರಿಣಾಮವಾಗಿ ಈ ಭಾಗದಲ್ಲಿ ಪಾಳೇಗಾರಿ ಪದ್ಧತಿಯು ಅನೂಚಾನವಾಗಿ ಮುಂದುವರೆದುಕೊಂಡು ಬಂದಿತ್ತು. ಸಾಮಾನ್ಯ ವರ್ಗದ ಪುರುಷರಿಗೇ ಇಲ್ಲಿ ಶಿಕ್ಷಣ ಸಿಕ್ಕಿರಲಿಲ್ಲ. ಅಂಥಾ ಸಂದಿಗ್ಧ ವಾತಾವರಣದಲ್ಲಿ ಮಹಿಳೆಯರಿಗೆ ಶಿಕ್ಷಣ ಎಂಬುದು ದೂರದ ಮಾತೇ ಆಗಿತ್ತು. ಅದಾಗ್ಯೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಇದ್ದಂಥ ಒಂದೇ ಒಂದು ಶಾಲೆಯಲ್ಲಿ ಬೆರಳೆಣಿಕೆಯಷ್ಟು ಹೆಣ್ಣು ಮಕ್ಕಳು ಶಾಲೆಯ ಮುಖ ನೋಡುವುದಿತ್ತು. ಕೆಳವರ್ಗದ ಮಂದಿಗೆ ಶಾಲೆ, ಓದು ವಜ್ರ್ಯವೇ ಆಗಿತ್ತು. ಮೇಲ್ವರ್ಗದ ಮಹಿಳೆಯರೂ 7ನೇ ಇಯುತ್ತೆಯವರೆಗೆ ಶಾಲೆ ಕಲಿಯುವುದು. ನಂತರ 12-14ರ ಬಾಲ್ಯದಲ್ಲಿಯೇ ಅವರಿಗೆ ಮದುವೆ ಕಡ್ಡಾಯವಾಗಿತ್ತು. ಇಂಥ ಸಂದಿಗ್ಧ ವಾತಾವರಣದಲ್ಲಿ ಬೆಳೆದ ಗೀತಾ ಹಟ ತೊಟ್ಟು ಶಾಲೆ ಕಲಿತರು. 10ನೇ ಪಾಸಾದ ಕೆಳವರ್ಗದ ಮಹಿಳೆಯರ ಸಾಲಿನಲ್ಲಿ ಮೊದಲಿಗರಾಗಿ ನಿಂತರು. ಕಿತ್ತು ತಿನ್ನುವ ಬಡತನದ ಮಧ್ಯೆ ಶಾಲೆ ಕಲಿಸುವುದು ಅವರ ಅಪ್ಪನಿಗೆ ಹರಸಾಹಸವೇ ಆಗಿತ್ತು. ಉಳ್ಳವರ ಮನೆಯ ಮಕ್ಕಳು ಓದಿ ಬಿಟ್ಟ ಪುಸ್ತಕಗಳನ್ನು ಎತ್ತಿಕೊಂಡು ಅಭ್ಯಾಸ ಮಾಡಿದ್ದನ್ನು ಗೀತಾ ತುಂಬಾ ನೋವಿನಿಂದ ನೆನಪಿಸಿಕೊಳ್ಳುತ್ತಾರೆ. ಚಿಮಣಿ ಎಣ್ಣೆ ದೀಪದಲ್ಲಿ ಹಟ ತೊಟ್ಟು ಓದಿದ ಗೀತಾ ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿದ್ದು ಆ ಹೊತ್ತು ಜಾತಿ ಬಾಂಧವರ ಕಣ್ಣು ಕೆರಳಿಸುವಂತೆ ಮಾಡಿತಂತೆ. ಅವರ ತಾಯಿ ಗೀತಾರನ್ನು ಮುಂದೆ ಶಾಲೆ ಕಲಿಸಲು ಸರ್ವಥಾ ತಯಾರಿರಲಿಲ್ಲವಂತೆ. ಏಕೆಂದರೆ ತಳವಾರ ಜಾತ್ಯಾಗ ಗಂಡಸರಿಗೆ ಹೆಚ್ಚಿನ ವಿದ್ಯಾಭ್ಯಾಸವಿರಲಿಲ್ಲ. ಇನ್ನು ಹೆಣ್ಣುಮಕ್ಕಳು ಹೆಚ್ಚು ಓದಿಬಿಟ್ಟರೆ, ಕಲಿತವಳನ್ನು ಮದುವೆಯಾಗಲು ಯಾವ ಗಂಡಸರು ಇಷ್ಟಪಟ್ಟಾರು? ಎಂಬ ಹೆದರಿಕೆ ಅವರದ್ದು. ಅವ್ವನ ವಿರೋಧದ ನಡುವೆಯೂ ಅಪ್ಪನ ಒತ್ತಾಸೆಯಿಂದಾಗಿ ಗೀತಾ ಗುಲ್ಬರಗಾದ ಶ್ರೀ ಶರಣಬಸವೇಶ್ವರ ಕಾಲೇಜಿನ ಮೆಟ್ಟಿಲು ಏರಿಯೇಬಿಟ್ಟರು. ಬಾಲ್ಯದಿಂದಲೂ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಇವರಿಗೆ, ತಾವೂ ಬರೆಯಬೇಕೆಂಬ ಹಂಬಲ ಮೂಡಿತ್ತು. ಈ ಹಂಬಲವೇ ಅವರಿಂದ ಕಾಲೇಜು ದಿನಗಳಲ್ಲಿ ಚಿಕ್ಕ ಕಥೆ ಬರೆಯಲು ಹಚ್ಚಿತು.

ಅಬ್ಬಾ ಆ ಹುಡುಗ ಎಂಬ ವರ ಮೊದಲ ಕಥೆಯು ಕಾಲೇಜಿನ ಮ್ಯಾಗಝಿನ್ನಲ್ಲಿ ಪ್ರಕಟವಾಯ್ತು. ಓದಿದವರು ಹುಬ್ಬೇರಿಸಿದ್ದು ಇತ್ತು. ಈ ನಡುವೆ ಹಿರಿಯರ ಒತ್ತಾಸೆಯಂತೆ ಮದುವೆ ಏನೋ ಆಯ್ತು. ಮನಸ್ಸಿಗೊಪ್ಪದ ಪುರುಷನೊಂದಿಗೆ ಬಾಳಲು ಇಷ್ಟ ಪಡದೆ, ದಾಂಪತ್ಯದ ಹಂಗು ಹರಿದು ಬಂದಿದ್ದು ಆ ಹೊತ್ತಿಗೆ ಬಹು ದೊಡ್ಡ ಕ್ರಾಂತಿಕಾರಿ ನಡೆಯೇ ಆಗಿತ್ತು. ಪರ್ಯಾಯ ಕ್ಕಾಗಿ ತಡಕಾಡಿ ಮಗದೊದೆಡೆ ಸಾಂಸಾರಿಕ ಸಂಬಂಧಗಳನ್ನು ಏರ್ಪಡಿಸಿಕೊಂಡದ್ದಾಗಿತ್ತು. ಒಂದು ಗಂಡು, ಒಂದು ಹೆಣ್ಣು, ಹೀಗೆ ಎರಡು ಮಕ್ಕಳನ್ನು ಹೆತ್ತು ಏಗಲಾರದ ಸಂಗತಿಯೊಂದಿಗೆ ದಿನದೂಡುವಲ್ಲಿಯೇ ಗೀತಾ ಹೈರಾಣಾಗಿದ್ದರು. ಇಂಥಾ ಎಲ್ಲಾ ವಿಪರೀತ ಸಂದರ್ಭಗಳಲ್ಲಿಯೂ ಗೀತಾ ತುಂಬಾ ಆಪ್ತವಾಗಿ ಅಂಟಿಕೊಂಡದ್ದು ಓದಿಗೆ ಮತ್ತು ಬರಹಕ್ಕೆ ಮಾತ್ರ. ಎಂ.ಎ, ಬಿ.ಎಡ್ ಮುಗಿಸಿ ಕಾರಕೂನಿಕೆ ಬಿಟ್ತು, ಖಾಸಗೀ ಕಾಲೇಜೊಂದರಲ್ಲಿ ಪ್ರಾಚಾರ್ಯರಾಗಿ ದೀರ್ಘ ಸೇವೆ ಸಲ್ಲಿಸಿದರು.

ಗೀತಾ ತುಂಬಾ ಗಟ್ಟಿಗಿತ್ತಿ ಮಹಿಳೆ. ಪಾಳೇಗಾರಿ ನಂಬಿಕೆಗಳುಳ್ಳ ಮಡಿವಂತ ಸಮಾಜದ ಮಧ್ಯೆ ಬದುಕಿಯೂ ಸ್ವತಂತ್ರ ಆಲೋಚನಾ ಲಹರಿಗೆ ಒಡ್ಡಿಕೊಂಡಿದ್ದಾರೆ. ಹಲವು ಅಡ್ಡಿ ಆತಂಕದ ನಡುವೆಯೂ ಎದೆಗುಂದದೆ ಮುನ್ನುಗ್ಗಿದ ಒಂಟಿ ಸಲಗ. ಉದರ್ುಮಯ ವಾತಾವರಣದಲ್ಲಿ ಕನ್ನಡ ಓದುವುದು, ಬರೆಯುವುದು ತುಂಬಾ ಅಪರೂಪವಾಗಿದ್ದ ಸಂದರ್ಭದಲ್ಲಿ ಹಟ ತೊಟ್ಟು ಕನ್ನಡ ಕಲಿತಾಕೆ. ಕಲಿತದ್ದನ್ನು ಸಾರ್ಥಕಗೊಳಿಸಬೇಕೆಂಬ ವ್ರತತೊಟ್ಟಾಕೆ. ತಮ್ಮ ಓದಿಗೆ ಗೆಳತಿಯರೆಲ್ಲಾ ಮನೆಯ ಸಂಪ್ರದಾಯದಂತೆ ಅರ್ಧಕ್ಕೆ ಓದು ನಿಲ್ಲಿಸಿ ಹಿರಿಯರು ಮಾಡಿದ ಮದುವೆಗೆ ರಾಜಿಯಾಗಿ ಎಂಟು, ಹತ್ತು ಮಕ್ಕಳನ್ನು ಹೆತ್ತು ನೇಪಥ್ಯಕ್ಕೆ ಸೇರಿಹೋದರೆ, ಗೀತಾ ಆ ದಾರಿಯನ್ನು ಬಿಟ್ಟು ಭಿನ್ನ ದಾರಿಯನ್ನು ಆರಿಸಿಕೊಂಡು ನೌಕರಿಗೆ ಸೇರಿದರು. ಸಮಕಾಲೀನ ಮಡಿವಂತ ಸಮಾಜದ ಬೆರಳಚ್ಚುವಂತೆ ಮಾಡಿದಲ್ಲದೆ, ಇಂದು ಅವರು ಬೆಳೆದ ಎತ್ತರ-ಬಿತ್ತರವನ್ನು ಕಂಡು ಅವರೆಲ್ಲಾ ದಿಗ್ಮೂಢರಾಗುವಂತೆ ಮಾಡಿದ್ದು ಇದೆ. ಗೀತಾ ಬರೆಯುವಾಗ ಈ ಭಾಗದ ಬುದ್ಧಿಜೀವಿಗಳೆನಿಸಿಕೊಂಡವರು ಅವರನ್ನು ಗಂಬೀರವಾಗಿ ಪರಿಗಣಿಸಲೇ ಇಲ್ಲವಂತೆ. ಅದಾಗ್ಯೂ ಗೀತಾ ಯಾರ ಹಂಗೂ-ಪರಾಮರ್ಶೆಗೂ ಆತು ಬೀಳದೆ ತಮ್ಮ ಪಾಡಿಗೆ ತಾವು ಬರೆಯುತ್ತ ಇಂದು ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಅವರ ಕನ್ನಡ ಸಾಹಿತ್ಯಕ್ಕೆ ಕೊಡುಗೆ ಹಲವಾರು.

ಅಷ್ಟಕ್ಕು ತಮ್ಮ ಬರವಣಿಗೆಯ ವಿಶಿಷ್ಟ ಶೈಲಿ ಮತ್ತು ಆರಿಸಿಕೊಂಡ ವಸ್ತುವಿನಿಂದಾಗಿ ಕನ್ನಡದ ಸಮಕಾಲೀನ ಲೇಖಕ ಸಾಲಿನಲ್ಲಿ ಭಿನ್ನರಾಗಿ ನಿಂತಿದ್ದಾರೆ. ಕನ್ನಡಲ್ಲಿ ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಬಹುಮಾನ ಪಡೆದ ಪ್ರಥಮ ಮಹಿಳೆ ಎನಿಸಿಕೊಂದಿದ್ದಾರೆ. ಅಂತೆಯೇ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜಾ ಪ್ರಶಸ್ತಿ, ಗುಲ್ಬಗರ್ಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ, ಸಾಹಿತ್ಯ ಅಕೆಡೆಮಿಯ ಗೌರವ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಹೀಗೆ ಇವರು ತಮ್ಮ ಸಾಹಿತ್ಯ ಸಾಧನೆಗಾಗಿ ಪಡೆದ ಪ್ರಶಸ್ತಿಗಳ ಪಟ್ಟಿಯು ತುಂಬಾ ದೊಡ್ಡದಿದೆ. ಈ ಎಲ್ಲಾ ಪ್ರಶಸ್ತಿಗೆ ಕಿರೀಟಪ್ರಾಯವಾಗುವಂತೆ, ಅಖಿಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ-ಪದವಿಗೆ ಎಂದೆಂದೂ ಲಾಬಿ ಮಾಡದ ಗೀತಾರಿಗೆ ಅವೆಲ್ಲವೂ ತಾವಾಗಿಯೇ ಒಲಿದು ಬಂದು ಪ್ರಶಸ್ತಿಗಳು ತಮ್ಮ ಗೌರವವನ್ನು ಹೆಚ್ಚಿಸಿಕೊಂಡಿವೆ. ಗೀತಾರನ್ನು ಸನಿಹದಿಂದ ಬಲ್ಲ ಯಾರಾದರೂ ಈ ಮಾತನ್ನು ಅಲ್ಲಗೆಳೆಯರಾರರು. ತಮಗೆ ಯಾವುದೇ ಪ್ರಶಸ್ತಿ-ಗೌರವಗಳು ಬಂದಾಗಲೆಲ್ಲಾ, ಗೀತಾ ಆ ಖುಷಿಯನ್ನು ಕಲಬುರ್ಗಿಯ ಸಾಹಿತ್ಯ ಬಳಗದೊಂದಿಗೆ ತುಂಬಾ ಮುಕ್ತವಾಗಿ ಹೊಂಚಿಕೊಳ್ಳುವುದುಂಟು.

ಕಲಬುರ್ಗಿಯಲ್ಲಿ ಪ್ರಗತಿಪರವಾಗಿ ಆಲೋಚಿಸುವ ಮತ್ತು ಬರೆಯುವ ಸಾಹಿತ್ಯದ ಬಳಗವೊಂದಿದೆ. ಸಮಾನತೆಯ ತಳಹದಿಯ ಮೇಲೆ ಹೊಸ ಸಮಾಜವನ್ನು ಕಟ್ಟಬೇಕೆಂಬ ಸೈದ್ಧಾಂತಿಕ ಬದ್ಧತೆಗಳೊಂದಿಗೆ ಕ್ರಿಯಾಶೀಲವಾಗಿರುವ ಈ ಬಳಗಕ್ಕೆ ಗೀತ ಹಿರಿಯಕ್ಕನಂತಿದ್ದಾರೆ. ಕಲ್ಯಾಣದ ಬಸವಾದಿ ಶರಣರ ಕ್ರಾಂತಿ ಕನಸುಗಳು, ತತ್ವಪದಕಾರರ ಪಾಳೆಗಾರಿ ಪದ್ಧತಿ ವಿರುದ್ಧದ ಬಂಡಾಯದ ಭಾಷೆಯನ್ನು ಕನ್ನಡಕ್ಕೆ ವಿಶಿಷ್ಟವೆನ್ನಿಸುವ ಸೂಫಿ ಪರಂಪರೆಯನ್ನು ಅದಮ್ಯವಾಗಿ ಪ್ರೀತಿಸುವ ಈ ಬಳಗವು ಯಾವತ್ತೂ ಗೀತಾ ಅವರೊಂದಿಗೆ, ಅವರು ಸಾಗಿ ಬಂದ ದಾರಿ ಕುರಿತು ಚಚರ್ಿಸುತ್ತಲೇ ಇರುತ್ತದೆ. ಅವರ ಮನೆಯಲ್ಲಿ ಸಾಹಿತ್ಯದ ಚರ್ಚೆ, ಸಮಕಾಲೀನ ವಿದ್ಯಮಾನಗಳ ವಿಮರ್ಶೆ ನಡೆಯುತ್ತಲೇ ಇರುತ್ತದೆ. ಈ ತಂಡವನ್ನು ಸೈದ್ಧಾಂತಿಕ ಬದ್ಧತೆಯೊಂದಿಗೆ ಬೆಳೆಸಿದವರು ಕನ್ನಡದ ಗಜಲ್ ಕೃಷಿಕಾರ ಶಾಂತರಸರು. ಡಾ. ಕಾಶೀನಾಥ ಅಂಬಲಗಿ, ಡಾ. ಪ್ರಭು ಖಾನಾಪುರ. ಪ್ರೊ. ಆರ್.ಕೆ.ಹುಡಗಿ, ಕೆ.ನೀಲಾ, ಡಾ.ಶಾಂತಾ ಮಠ, ಡಾ.ಶಾಂತಾ ಅಷ್ಟಗಿ, ಡಾ.ಮೀನಾಕ್ಷಿ ಬಾಳಿ, ಡಾ.ಇಂದುಮತಿ ಪಾಟೀಲ್, ಡಾ.ಈಶ್ವರಯ್ಯ ಮಠ, ಮಸ್ತಾನ ಬಿರಾದಾರ, ಸಿದ್ಧರಾಮ ಹೊನ್ಕಲ್, ಪ್ರೊ. ಶಿವಶರಣ ಮಳೆಗಾಂವ, ಡಾ.ಅಮೃತಾ ಕಟ್ಟೆ, ಡಾ.ಸೂರ್ಯಕಾಂತ ಸುಜಾತ, ಡಾ.ಮಲ್ಲಿಕಾರ್ಜುನ ಆಮ್ಣೆ, ಮುಂತಾಗಿ ಇದೊಂದು ದೊಡ್ಡ ಬಳಗವೇ ಇದೆ.

ಕಲಬುರ್ಗಿಯಲ್ಲಿ ಸಾಹಿತ್ಯಾಸಕ್ತರ ನಡುವೆ ಕರುಳ ಬಳ್ಳಿಯ ಸಂಬಂಧವಿದೆ. ಪರಸ್ಪರ ಅನ್ಯೋನ್ಯತೆ, ಗೌರವಾದರಗಳು ಗಟ್ಟಿಗೊಂಡು ಅನೌಪಚಾರಿಕ ಸಲುಗೆ ಇದೆ. ಈ ಸಲುಗೆ-ಕಾಳಜಿ ದೆಸೆಯಿಂದಾಗಿಯೇ ವಯಸ್ಸಿನಲ್ಲಿ ಕಿರಿಯರಾದ ನಮಗೆ ಗೀತಾ ಅವರೊಂದಿಗೆ ಮುಕ್ತವಾಗಿ ಸಂವಾದಿಸಲು, ಅಭಿಪ್ರಾಯ ಹಂಚಿಕೊಳ್ಳಲು ಸಾಧವಾಗಿದೆ. ಹಲವಾರು ಸಂದರ್ಭಗಳಲ್ಲಿ ಅವರೊಂದಿಗೆ ಅನೌಪಚಾರಿಕವಾಗಿ ಮಾತಾಡುವಾಗ ವ್ಯಕ್ತವಾದ ಅಭಿಪ್ರಾಯವನ್ನು ನೆನಪಿನಾಳದಿಂದ ಹೆಕ್ಕಿ ತೆಗೆದು ಇಲ್ಲಿ ಸಂದರ್ಶನದ ಚೌಕಟ್ಟು ತರಲು ಪ್ರಯತ್ನಿಸಲಾಗಿದೆ. ಏಕೆಂದರೆ ಗೀತಾ ಅವರೊಂದಿಗೆ ಔಪಚಾರಿಕ ನೆಲೆಯಲ್ಲಿ ಸಂದರ್ಶಿಸಿದ ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪುಂಖಾನುಪುಂಖವಾಗು ಬೆಳಕು ಕಂಡಿವೆ. ಆದ್ದರಿಂದ ಈ ಎಲ್ಲಾ ಸಂದರ್ಶನಗಳಿಗಿಂತ ತುಸು ಭಿನ್ನವಾದ ಮತ್ತು ಅಷ್ಟೇ ಆಪ್ತವಾದ ಸಂಭಾಷಣೆಯೊಂದನ್ನು ಹೆಣೆಯುವ ಪ್ರಯೋಗ ಇಲ್ಲಿದೆ.


ಗೀತಕ್ಕ ಕಿರಿಯ ಸಮಕಾಲೀನರಾದ ನಮ್ಮೆಲ್ಲರಿಗೂ ಹೆಮ್ಮೆಯ ಗೆಳೆತಿಯೂ ಹೌದು. ಸಾಹಿತ್ಯಕ ಮಾರ್ಗದರ್ಶಕಿಯೂ ಹೌದು. ಈ ಆಪ್ತ ತಳಹದಿಯ ಮೇಲೆ ನಡೆಸಿದ ಸಂಭಾಷಣಾ ತುಣುಕುಗಳು ಇಲ್ಲಿವೆ.

1. ಗೀತಕ್ಕ ಅಂದು ಈ ಭಾಗದ ಮಹಿಳೆಯರ್ಯಾರೂ ಬೆಳವಣಿಗೆಯಂಥ ಗಂಭೀರ ಪ್ರವೃತ್ತಿಗೆ ಒಡ್ಡಿಕೊಂಡಿರಲೇ ಇಲ್ಲ. ಅಂಥಾ ಹೇಳಿಕೊಳ್ಳುವ ಸಾಹಿತ್ಯಕ ವಾತಾವರಣವು ಇಲ್ಲಿರಲಿಲ್ಲ. ಆದರೂ ನೀವು ಬರವಣಿಗೆಯಂಥ ವ್ಯವಸಾಯಕ್ಕೆ ಬಂದಿರಲ್ಲ. ಅದು ಹೇಗೆ ಸಾಧ್ಯವಾಯಿತು.

ಹೌದು. ಆಧುನಿಕ ಸಂದರ್ಭದ ಕರ್ನಾಟಕದ ಇತರ ಭಾಗಗಳಿಗೆ ಹೋಲಿಸಿದರೆ ಇಲ್ಲಿ ಪುರುಷರೆ ಕನ್ನಡದ ಬೆಳವಣಿಗೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡದ್ದು ತುಸು ಕಡಿಮೆಯೇ ಎನ್ನಬೇಕು. ಇಂಗ್ಲೀಷ್ ಪ್ರಭಾವದಿಂದ ಬಂದ ಹೊಸ ಗಾಳಿಯ ಸಂಪರ್ಕವು ಚಾರಿತ್ರಿಕ ಕಾರಣವಾಗಿ ತಡವಾಗಿ ಬಂತು. ಅಂದರೆ ನಾವು ಬ್ರಿಟೀಷ್ ಭಾರತದ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ನಿಜಾಮಶಾಹಿಯ ಆಡಳಿತದಲ್ಲಿ ನಮ್ಮ ಬದುಕಿನ ಆದ್ಯತೆಗಳೇ ಬೇರೆಯಾಗಿದ್ದವು. ನಿಜಾಮಶಾಹಿ ಪ್ರಭುತ್ವದಡಿಯಲ್ಲಿ ಸ್ಥಳೀಯವಾಗಿ ಪೋಲೀಸ್ಗೌಡ, ಮಾಲಿಗೌಡ, ಕುಲಕಣರ್ಿ, ದೇಶಮುಖ, ತಳವಾರ, ವಾಲಿಕಾರ ಇವರ ದರ್ಪ-ದರ್ಬಾರಗಳೇ ಪ್ರಧಾನವಾಗಿದ್ದವು. ಬ್ರಿಟಿಷ್ ಸುಧಾರಣಾವಾದಿಯ ಗಾಳಿಯನ್ನು ಒಳ ನುಸುಳಲು ಈ ಪಾಳೇಗಾರಿ ಪ್ರಭುಗಳು ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ತುಂಬಾ ತಡವಾಗಿ ನಮಗೆ ದಕ್ಕಿತು. ಹೀಗೆಂದು ನಮಗೆ ಸಾಹಿತ್ಯ ರಚನೆ ಇರಲೇ ಇಲ್ಲ ಎಂದಲ್ಲ. ನಮ್ಮ ಸಾಹಿತ್ಯಿಕ ಚಟುವಟಿಕೆಗಳೇ ಬೇರೆ ಬಗೆಯದಾಗಿದ್ದವು. ಕನರ್ಾಟಕ ಇತರೆಡೆ ಆಧುನಿಕ ಸಾಹಿತ್ಯದಲ್ಲಿ ನವೋದಯದ ಭರಾಟೆ ಇದ್ದಾಗ ನಮ್ಮಲ್ಲಿ ಪುರಾಣಗಳ ರಚನೆ ಮತ್ತು ಪಠನ, ಅಂದರೆ ಪುರಾಣ ಹಚ್ಚುವುದು, ತತ್ವಪದಗಳ ರಚನೆ, ಭಜನಾಗೋಷ್ಠಿಗಳು, ಸಣ್ಣಾಟ, ಡಪ್ಪಿನಾಟ, ಲಾವಣಿ, ಜನಪದ ತ್ರಿಪದಿಗಳ ರಚನೆ ಮುಂತಾಗಿ, ದೇಶೀ ನೆಲೆಯ ಚಟುವಟಿಕೆಗಳು ನಡೆದೇ ಇದ್ದವು.

ಶಿಕ್ಷಣದಲ್ಲಿ ಉರ್ದುವಿನ ಹಿಡಿತವಿತ್ತಾದರೂ ಸ್ಥಳೀಯ ಮಠ, ಗುಡಿ-ಗುಂಡಾರಗಳಲ್ಲಿ ಅನೌಪಚಾರಿಕ, ಮೌಖಿಕ ಸಾಹಿತ್ಯ ರಚನೆ ಅವ್ಯಾಹತವಾಗಿ ನಡೆದೇ ಇತ್ತು. ಆದರೆ ಭಾರತಕ್ಕೆ ಸ್ವಾತಂತ್ರ ಬಂದು ಭಾಷಾವಾರು ಪ್ರಾಂತ್ಯ ರಚನೆಯೊಂದಿಗೆ ಕನ್ನಡದಲ್ಲಿ ಅಕೆಡೆಮಿಕ್ ಚಟುವಟಿಕೆಗಳು ಬೆಂಗಳೂರು-ಮೈಸೂರು-ಮಂಗಳೂರುಗಳಲ್ಲಿ ಕೇಂದ್ರೀಕರಿತವಾದವು. ಪ್ರಾಚೀನ ಕನ್ನಡ ಸಾಹಿತ್ಯದ ಇತಿಹಾಸವನ್ನು ಕಟ್ಟಿಕೊಡುವಾಗ ಕರ್ನಾಟಕದ ದಕ್ಷಿಣಾತ್ಯ ವಿದ್ವಾಂಸರು ನಮ್ಮ ಸಾಹಿತ್ಯದ ಬೆಳೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಮ್ಮವರು ಅದನ್ನು ಶಿಸ್ತುಬದ್ಧವಾಗಿ ದಾಖಲಿಸಲಿಲ್ಲ. ತತ್ಕಾರಣವಾಗಿ ಆಧುನಿಕ ಕನ್ನಡ ಸಾಹಿತ್ಯವೆಂದರೆ ದಕ್ಷಿಣ ಕರ್ನಾಟಕದ ನವೋದಯ ಸಾಹಿತ್ಯ ಎಂಬಂತೆ ಬಿಂಬಿಸಲಾಯಿತು. ಶಾಂತರಸತರು ಹೇಳುತ್ತಿದ್ದಂತೆ, ನಾವು ಮಾತಾಡುತ್ತಿರುವುದು ಕನ್ನಡವೇ ಅಲ್ಲ. ನಮಗೆ ಕನ್ನಡವೇ ಬರುವುದಿಲ್ಲ ಎಂಬ ಭಾವನೆ ಅವರಿಗಿತ್ತು. ಅಷ್ಟಕ್ಕೂ ಪಕ್ಕಾ ಫ್ಯೂಡಲ್ ದೊರೆಗಳೆ ಇಲ್ಲಿ ರಾಜಕೀಯ ಚುಕ್ಕಾಣಿಯನ್ನು ಹಿಡಿದಿದ್ದರಾದ್ದರಿಂದ ಅವರು ಮಹಿಳೆಯರನ್ನು ಪರಂಪರಾಗತ ಜಾಡಿನಲ್ಲಿಯೇ ಇರುವಂತೆ ಬಯಸುತ್ತಿದ್ದರು.

ನಾನು ಶಾಲೆಗೆ ಹೋಗುತ್ತಿರುವ ಕಾಲದಲ್ಲಿ ಮೇಲ್ವರ್ಗದ ಮಹಿಳೆಯರೇ ತುಂಬಾ ಅಪರೂಪವೆಂಬಂತೆ ಶಾಲೆಗೆ ಬರುತ್ತಿದ್ದರು. ಗುಲ್ಬಗರ್ಾದಲ್ಲಿ ಒಂದೇ ಒಂದು ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಇತ್ತು. ದೊಡ್ಡ ದೊಡ್ಡ ಮನೆಯ ಹುಡುಗಿಯರು ಟಾಂಗಾದಲ್ಲಿ ಕುಳಿತು ಶಾಲೆಗೆ ಬರುತ್ತಿದ್ದರು. ಅದೂ ಟಾಂಗಾಕ್ಕೆ ಪರದಾ ಕಟ್ಟಲಾಗುತ್ತಿತ್ತು. ಅಂಥಾ ಹೊತ್ತಿನಲ್ಲಿ ನಾನು ಎಂ.ಎಸ್.ಕೆ ಮಿಲ್ ಕೂಲಿ ಕಾರ್ಮಿಕನ ಮಗಳು. ಅದರಲ್ಲೂ ತಳವರ ಜಾತಿಗೆ ಸೇರಿದವಳು. ನಮ್ಮ ಮನೆಯಲ್ಲಿ ಯಾರಿಗೂ ಆ ಹೊತ್ತು ವಿದ್ಯಾಭ್ಯಾಸದ ಗಾಳಿ-ಗಂಧ ಇರಲಿಲ್ಲ. ಆದ್ರ ನಮ್ಮಪ್ಪ ಮಾತ್ರ ನನಗ್ ಸಾಲಿ ಕಲಿಸಾ ಮನಸು ಮಾಡಿದ್ದನು. ನಾನು ಆಸಕ್ತಿಯಿಂದ ಓದ ತೊಡಗಿದೆ. ನಮ್ಮ ಮನೆಯಲ್ಲಿ ಅಂದರೆ ಒಂದೇ ಒಂದು ಕೋಣೆಯಲ್ಲಿ, ರಾತ್ರಿ ಓದಿಕೊಳ್ಳಲು ಬೆಳಕು ಇರುತ್ತಿರಲ್ಲ. ನಮ್ಮ ಬಾಡಿಗೆ ಖೋಲಿ ಬ್ರಾಹ್ಮಣರ ಗಲ್ಲಿಯ ಕೊನೇಯ ತುದಿಯಲ್ಲಿತ್ತು. ಬಾಳಾಚಾರಿ ಎಂಬ ಬ್ರಾಹ್ಮಣ ಭಡಜಿಯ ಮನೆಗೆ ರಾತ್ರಿ ಓದಿಕೊಳ್ಳಲೆಂದು ಹೋಗುತ್ತಿದ್ದೆ. ಅವರ ಮನೆಯಲ್ಲಿ ಕಂದೀಲು ಇತ್ತು. ಅವರ ಮಕ್ಕಳೊಂದಿಗೆ ಕುಳಿತು ಓದುತ್ತಿದ್ದಾಗ ಆ ಮನೆಯ ಮಡಿ ಮುದುಕಿ- ಏ! ಶೂದ್ರ ಮುಂಡೇದೆ. ಆ ಕಡಿ ಕೂಡು. ನಮ್ ಪಾರಗೋಳಿಗಿ ಮುಟ್ಟಬ್ಯಾಡ ಅಂತಿತ್ತು. ಅವತ್ತು ಅದೆಲ್ಲಾ ಮಾಮೂಲಿ ಎಂಬಂತಾಗಿತ್ತು.

ಖರೆ ಹೇಳಬೇಕೂಂದ್ರ ಪಾಟಿ-ಪುಸ್ತಕ-ಕಾಪಿ ತರಲು ನಂಬಳಿ ರೊಕ್ಕ ಇರುತ್ತಿರಲಿಲ್ಲ. ಹೈಸ್ಕೂಲಿನಲ್ಲಿದ್ದಾಗ ನನ್ ಗೆಳತಿಯೊಬ್ಬಳಿಂದ ಎರಡು ಪುಸ್ತಕಗಳನ್ನು ಎರವಲು ಪಡೆದು ಓದುತ್ತಿದ್ದೆ. ನಾ ಅಥವಾ ನನ್ನಂಥವರು ಶಾಲಿ ಕಲಿತಿದ್ದು ಒಂದು ದೊಡ್ಡ ಪುರಾಣನೇ ಇದೆ. ಇರಲಿ. ಹೈಸ್ಕೂಲಿನ್ಯಾಗ ಇದ್ದಾಗಲೇ ನನಗೆ ಓದುವ ಗೀಳು ಹತ್ತಿತ್ತು. ಎಂ.ಕೆ.ಇಂದಿರಾ, ಅ.ನ.ಕೃ, ತ.ರಾ.ಸು, ಸಾಯಿಸುತೆ, ರಾಮರಾವ್, ಇವರ ಕಾದಂಬರಿಗಳನ್ನು ತುಂಬಾ ಆಸಕ್ತಿಯಿಂದ ಓದುತ್ತಿದ್ದೆ. ಹೀಂಗ ಓದುವಾಗಲೇ ನಾನು ಬರೀಬೇಕು ಅಂತ ಅನಸತಿತ್ತು. ಏನಾದರೂ ಬರೀಬೇಕು ಎಂಬ ತುಡಿತವಂತೂ ನನಗೆ ರಕ್ತಕ್ಕ ಮೆತ್ತಿದ ವಾಸನಿ ಹಂಗ್ ಬೆನ್ನ ಬಿತ್ತು. ಅಂತೂ ಕಾಲೇಜಿನ್ಯಾಗ ಇದ್ದಾಗ ಮ್ಯಾಗಝೀನ್ದಾಗ ಒಂದು ಸಣ್ಣ ಕತಿ ಬರಿದ್ಯ. ಅದೂ ಒಂದು ನಮೂನಿ ಖುಶಿ ಕೊಟ್ಟಿತು. ನಾನೂ ಬರೆಯಬಲ್ಲೆ ಎಂಬ ಧೈರ್ಯ ಮೂಡಿತು. ಹಂಗೇ ಬರಕೋಂತ ಹೊಂಟ್ಯಾ

2. ನೀವು ಬರೆದಿದ್ದನ್ನು ಯಾರಿಗಾದರೂ ಓದಿ ತೋರ್ಸಿ, ಸಲಹಾ, ಮಷ್ವರಾ, ಪಡಿತಿದ್ರೇನು?

ಛೆ! ಛೆ! ಅದೇನೂ ಇರಲಿಲ್ಲ. ನಮ್ ಕೇರ್ಯಾಗರೆ ಯಾರೂ ಸಾಹಿತ್ಯ, ಗೀಹಿತ್ಯಾ ಅಂತ ತಲೆ ಕೆಡಿಸಕೊತ್ತಿರಲಿಲ್ಲ. ಇನ್ ಮ್ಯಾಲಿನವರಂತೂ ನಮ್ಮನ್ ಖದರ್ ಮಾಡ್ತಿರಲಿಲ್ಲ. ನಾನ್ ಬರ್ಯಾದು, ನಾನೇ ಓದಾದು ಮಾಡ್ತಿದ್ದೆ. ಆಗ ಇಲ್ಲಿ ಅಂಥಾ ಸಾಹಿತ್ಯರ ವಾತಾವರಣನೂ ಅಷ್ಟಾಗಿ ಇರಲಿಲ್ಲ. ಹಿಂಗಾಗಿ ಅವಾಗೇನು ಜನಪ್ರಿಯ ಮಾದರಿಯ ಕಾದಂಬರಿ, ಕಥೆ ಪ್ರಕಟವಾಗಿತ್ತಿರಲಿಲ್ಲ. ನಾನು ಅವುಗಳಿಂದಲೇ ಪ್ರಭಾವಿತಳಾಗಿ ಅದೇ ಜಾಡಿನಲ್ಲಿ ಬರೆಯಲು ಪ್ರಯತ್ನಿಸಿದೆ.

3. ಅಂದ್ರ ಸಾಹಿತ್ಯ ದಾರಿಯಲ್ಲಿ ನೀವೂ ಏಕಲವ್ಯನಂತೆ ನಿಮಗ್ ನೀವೇ ಮಾದರಿಯಾಗಿ ತಿಳಿದಂಗ್ ಬರಿದ್ರಿ. ಓದಿಗಾಗಿ ಹ್ಯಾಂಗ್ ಸಂಘರ್ಷ ಮಾಡಿದೀರಲ್ಲ ಹಾಗೇ ಬರವಣಿಗೆಗಾಗಿ ಸಂಘರ್ಷ ಮಾಡಲಿಲ್ಲವೇ?

ಸಂಘರ್ಷ ಯಾಕ ಮಾಡಲಿಲ್ಲವ್ವ! ನನ್ನದು ತಣ್ಣಗಿನ ಸಂಘರ್ಷ, ನನ್ ಬಳಗಿನ ಸಂಘರ್ಷ ಅದು. ಬದುಕಿನ್ಯಾಗೂ ಪಡಬಾರದ ಪರಿಪಾಟಲು ಪಟ್ಟದ್ದಾಗಿತ್ತು. ಮಜ ಅಂದ್ರ ಬದುಕಿನ್ಯಾಗ ಕಿರಿಕಿರಿ ಹೆಚ್ಚಾದಾಗಲೆಲ್ಲಾ ನಾ ಹೆಚ್ಚೆಚ್ಚು ಬರವಣಿಗೆಯಲ್ಲಿ ತೊಡಗ್ತಿದ್ದೆ. ಬರಹಾ ನನಗೆ ಆಪ್ತಗೆಳತಿಯಾಗಿತ್ತು. ನೋವು ನುಂಗುವ ಧೃತಿಯಾಗಿತ್ತು. ನಾ ಬರೆದಿದ್ದು ನಾಡಿನ ಪತ್ರಿಕೆಗಳಲ್ಲಿ ಪ್ರಕಟಾದಾಗ, ಧನ್ಯತಾ ಭಾವ ಮೂಡುತ್ತಿತ್ತು. ಪ್ರಕಾಶಕರು, ಸಂಪಾದಕರು ನನ್ ಕತೆ, ಕಾದಂಬರಿಗಳಿಗಾಗಿ ದಾರಿ ಕಾಯುತ್ತಿದ್ದರು.

4. ನಿಮ್ಮೊಟ್ಟಿಗೆ ಅಂದು ಸಾಹಿತ್ಯದ ಸ್ಪರ್ಧೆಗಳಿರಲಿಲ್ಲವೇ?
ಅಯ್ಯೋ ಕನ್ನಡದಲ್ಲಿ ಬರೆಯುವ ಮಹಿಳೆಯರ ಸಂಖ್ಯನೇ ಕಡಿಮೆ ಇತ್ತು. ಅದರಲ್ಲೂ ನಮ್ ಭಾಗದಿಂದ ಕಥೆ, ಕಾದಂಬರಿ ಬರೆಯುವವರು ತುಂಬಾ ವಿರಳವಾಗಿದ್ದರು.

5. ನೀವು ಮೊದಮೊದಲಿನ ಜನಪ್ರಿಯ ಪ್ರೇಮಕಥಾ ಜಾಡನ್ನು ಬಿಟ್ಟು ಶೋಷಣಾ ಬದುಕನ್ನು ಕುರಿತು ಬರೆಯಲು ನಿಮಗೆ ಪ್ರೇರಣೆ ಎಲ್ಲಿಂದ ಬಂತು?

ನಮ್ ಭಾಗದ ಬದುಕಿನೊಳಗಿಂದ ನನಗೆ ಪ್ರೇರಣೆ ಸಿಕ್ತು. ನಮ್ ಭಾಗದ ಗುಡಿಸಲಗೇರಿ ಮಂದಿ ಬದುಕಿನ ಚಿತ್ರಣ, ಅದರಲ್ಲೂ ವಿಶೇಷವಾಗಿ ಹಿಂದುಳಿದ, ದಲಿತ ಮಹಿಳೆಯರ ಮೇಲಾಗುತ್ತಿರುವ, ತರಹೇವಾರಿ ಶೋಷಣೆಗಳು ನನ್ನ ಚಿತ್ತವನ್ನು ಕಲಕುತ್ತಲೇ ಇದ್ದವು. ನಮ್ ಭಾಗದ ಜನಪದ ಸಾಹಿತ್ಯದಲ್ಲಿ ಮಹಿಳೆಯರ ನೋವಿನ ನೆಲೆಗಳು ಮಡುಗಟ್ಟಿ ನಿಂತಿದ್ದವು. ವಚನಕಾರರು, ತತ್ವಪದಕಾರರು, ಇವರೆಲ್ಲಾ ಬೆನ್ನ ಹಿಂದಿನ ಬೆಳಕಾಗಿದ್ದರು. ಎಂಭತ್ತರ ದಶಕದಲ್ಲಿ ಬಂಡಾಯ-ದಲಿತ ಸಾಹಿತ್ಯ ಚಳುವಳಿಯು ಮುಂಚೂಣಿಗೆ ಬಂದಿತ್ತು. ಶಾಂತರಸ, ಲಂಕೇಶರಂಥ ಪ್ರಗತಿಪರ ಲೇಖಕರು ನನ್ನಂಥವರನ್ನು ಹುರಿದುಂಬಿಸಲೆಂದೇ ಟೊಂಕ ಕಟ್ಟಿ ನಿಂತಿದ್ದರು.

6. ಅದು ಸರಿ ಕಾದಂಬರಿ, ಕಥೆಗಳ ವಸ್ತುವಿನಲ್ಲೇನೊ ಒಂದು ನಿರ್ದಿಷ್ಟ ಒತ್ತಾಸೆ, ಪ್ರೇರಣೆ, ಒಳಗಿನ ತುಡಿತದಿಂದಾಗಿ ಜನಪ್ರಿಯ ಮಾದರಿ ಬಿಟ್ಟು ಗಂಭೀರ ಬರವಣಿಗೆಗೆ ಪಲ್ಲಟಗೊಂಡಿರಿ. ಆದರೆ ಭಾಷೆಯಲ್ಲೂ ಗ್ರಾಂಥಿಕ ಭಾಷಾ ವೈಖರಿಯಿಂದ ಇದ್ದಕ್ಕಿದ್ದಂತೆ ಹೈದ್ರಾಬಾದ ಕರ್ನಾಟಕದ ಜವಾರಿ ಭಾಷೆಗೆ ಪಲ್ಲಟಗೊಂಡಿರಲ್ಲಾ ಅದು ಏಕೆ?

ಅದು ಅನಿವಾರ್ಯವಾಗಿತ್ತು. ಒಂದು ವಸ್ತು ತನ್ನನ್ನು ಧಾರಣ ಮಾಡಬಲ್ಲಂಥ ಹೊರ ಮೈ ಚೌಕಟ್ಟನ್ನು ತಾನು ಸಿದ್ಧಪಡಿಸಿಕೊಳ್ಳುತ್ತದೆ. ಅಂದರೆ ಸೃಜನಶೀಲ ಬರವಣಿಗೆಯ ಶಕ್ತಿ ಇರುವುದೇ ಅದನ್ನು ನಿರ್ವಹಿಸುವ ಪರಿಕರದಲ್ಲಿ. ಅದು ರೂಪ ಇರಬಹುದು, ಭಾಷೆ ಇರಬಹುದು.
ನಾನು ಯಾರ ಬದುಕನ್ನು ಬರೆಯಲು ಹೊರಟಿದ್ದೆನೋ; ಅದು ಅವರದ್ದೇ ಭಾಷೆಯಲ್ಲಿ ಮಾತ್ರ ಹಿಡಿಯಲು ಸಾಧ್ಯವಾಗುತ್ತಿತ್ತು. ಭಾಷೆ ಎಂದರೆ ಕೇವಲ ಮಾತುಗಳಲ್ಲ. ಧ್ವನಿಯೂ ಅಲ್ಲ. ಅದು ಒಂದು ಬಗೆಯ ಸಂಸ್ಕೃತಿಯೂ ಹೌದು, ಒಂದು ರಾಜಕಾರಣವೂ ಹೌದು. ನನ್ ಕೆಳಗೇರಿಯ ಮಂದಿಯ ಬದುಕಿನ ಪಲಕುಗಳು ಹುದುಗಿರುವುದೇ ಅವರು ಆಡುತ್ತಿರುವ ಭಾಷೆಯಲ್ಲಿ. ನಮ್ಮ ದೇಶದಲ್ಲಿ ಸಾಮಾಜಿಕ ಭಾಷಾವಿಜ್ಞಾನ ಅಷ್ಟಾಗಿ ಅಭಿವೃದ್ಧಿಗೊಂಡಿಲ್ಲ. ಸಮಾಜೋರಾಜಕೀಯ ನೆಲೆಯಲ್ಲಿ ಭಾಷಾ ಅಧ್ಯಯನಗಳು ನಡೆಯುತ್ತಿಲ್ಲ. ಅಂಥಾ ಅಧ್ಯಯನಗಳು ನಡೆದಾಗ ಜನಸಾಮಾನ್ಯರು, ದಲಿತರು, ಶ್ರಮಿಕರು, ಆಡುವ ಭಾಷೆಯ ಸೊಗಡು, ಅದರ ಧ್ವನಿಕಾರು ಅನುರಣಶೀಲತೆ ಇವೆಲ್ಲವೂ ನಿಚ್ಚಳವಾಗುತ್ತದೆ.

7. ನೀವು ಬಳಸುವ ಭಾಷೆ ಮತ್ತು ವಸ್ತುವಿನ ಬಗೆಗೆ ಪುನರಾವರ್ತನೆಗಳಾಗಿವೆ ಎಂಬ ವಿಚಾರವಿದೆಯಲ್ಲ. ಹೌದೆ?

ಭಾಷೆಯ ಬಗೆಗೆ ಪುನರಾವರ್ತನೆ ಎಂಬ ವಿಷಯವೇ ಬರಬಾರದು. ನಾನು ಭಾಷಾ ಪ್ರಭೇದವನ್ನು ತೋರಿಸುವುದಾಗಿ ಆ ಭಾಷೆ ಬಳಸಿದವಳಲ್ಲ. ನಮ್ ಮಂದಿಯ ಭಾಷಾ ಇರುವುದೇ ಹಾಗೆ. ಅವರು ಎಷ್ಟು ಸಲ ಅಕ್ಷರಗಳಲ್ಲಿ ಪಡಿಮೂಡುತ್ತಾರೊ ಅಷ್ಟೂ ಸಲವೂ ಅವೇ ಮಾತಿನ ವರಸೆ ಇರಬೇಕಲ್ಲವೆ? ಇನ್ನು ವಸ್ತುವಿನ ಪುನರಾವರ್ತನೆ. ಅಲ್ಲಿಯೂ ಪುನರಾವರ್ತನೆ ಇದೆ ಎಂದು ನನಗೆ ಅನಿಸುತ್ತಿಲ್ಲ. ಪ್ರತಿಯೊಂದು ಭಿನ್ನ ವಿಭಿನ್ನ ಘಟನೆಗಳಿವೆ. ಈ ಭಾಗದ ಶೋಪಿತ ಮಂದಿಯ ಬದುಕು ಅಂದರೆ ಅದೊಂದು ನೋವಿನ ಸರಮಾಲೆ. ಅನಂತ ಸಂಕೀರ್ಣವಾದುದು. ಅದಕ್ಕೆ ಎಷ್ಟೋಂದು ಮಗ್ಗುಲಗಳಿವೆ ಗೊತ್ತೇ? ಎಷ್ಟೋ ಸಲ ಆ ಎಲ್ಲವನ್ನೂ ಹಿಡಿದಿಡಲು ಸಾಧ್ಯವಾಗಿಲ್ಲವಲ್ಲ ಎಂಬ ಹಳಹಳಿ ಇದೆ. ನಮ್ಮ ಭಾಗದಲ್ಲಿ ಜೋಗಣಿ ಬಿಡುವ ಸಂಪ್ರದಾಯ, ಉಪಪತ್ನಿಯರ ಪದ್ಧತಿ, ಕೂಡಿಕೆ ಮದುವೆಗಳು ಇವೆಲ್ಲಾ ಇನ್ನೂ ಇವೆ. ನಾ ಬರದದ್ದು ತುಸುಮಾತ್ರ. ಬರೆಯದೇ ಉಳಿದದ್ದು ಬಹಳವಿದೆ.

8. ಈಗ ಒಂದಿಷ್ಟು ನಿಮ್ಮ ಬದುಕು-ಬರಹದಾಚೆ ಮಾತಾಡೋಣ. ಸಮಕಾಲೀನ ಕನ್ನಡ ಸಾಹಿತ್ಯ ಸ್ಥಿತಿ-ಗತಿ ಬಗೆಗೆ ನಿಮಗೆ ಏನನಿಸುತ್ತದೆ?

ಏಕಕಾಲಕ್ಕೆ ಖುಷಿ ಮತ್ತು ವಿಷಾದ ಎರಡೂ ಆಗುತ್ತದೆ. ಖುಷಿ ಏಕೆಂದರೆ ನಮ್ಮ ಹೊಸ ತಲೆಮಾರಿನ ಲೇಖಕರು ನಮಗಿಂತ ತೀವ್ರವಾಗಿ ಭಾವ ಸಾಂದ್ರತೆಯೊಂದಿಗೆ ಮತ್ತು ಅಷ್ಟೇ ಆಪ್ತವಾಅಗಿ ಬರೆಯುತ್ತಿದ್ದಾರೆ. ಇದು ವೈಚಾರಿಕ, ವೈಜ್ಞಾನಿಕ ಬರಹಗಳ ಯುಗ. ಅನ್ಯ ಜ್ಞಾನಶಿಸ್ತುಗಳ ವಿಸ್ತೃತ ಅಧ್ಯಯನದ ಬೆಳಕಿನಲ್ಲಿ ಹೆಚ್ಚು ಮೌಲಿಕವಾದ, ಗಟ್ಟಿಯಾದ ಕೃತಿಗಳನ್ನು ರಚಿಸುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಸಾಹಿತ್ಯ ಮತ್ತು ಸೈದ್ಧಾಂತಿಕ ಬದ್ಧತೆಯಿಂದ ದೂರ ಸರಿದು ಜಾಗತಿಕ ಮಾರುಕಟ್ಟೆ ಲೋಕದಲ್ಲಿ ಅವರು ಕಳೆದುಹೋಗುತ್ತಿದ್ದಾರಲ್ಲ, ಇದಕ್ಕೆ ವಿಷಾದವಾಗುತ್ತದೆ. ಆನತೆಯ ಮನೋಭೂಮಿಕೆಯನ್ನು ಪ್ರಭಾವಿಸಬೇಕಾದ ಸಾಹಿತಿಯು ತಾನೇ ಜನಪ್ರಿಯ ಮಾರುಕಟ್ಟೆಯ ಜಾಹೀತಾತು ಲೋಕದಿಂದ ಪ್ರಭಾವಿತನಾದರೆ ಹೇಗೆ?

9. ಜಾಗತಿಕ ಮಾರುಕಟ್ಟೆ ನಿಯಂತ್ರಿತ ಏಕರೂಪೀ ಸಂಸ್ಕೃತಿ ನಿರ್ಮಾಣದಲ್ಲಿ ದೇಶೀಯ ಭಾಷೆ, ಸ್ಥಳೀಯ ಸಂಸ್ಕೃತಿಗಳು ನಾಶವಾಗುತ್ತದೆಯೆಂಬ ಕೂಗು ಕೇಳಿಬರುತ್ತಿದೆಯಲ್ಲ. ಅದಕ್ಕೆ ನಿಮ್ಮ ಅಭಿಪ್ರಾಯವೇನು?

ಹಾಂ! ಹಾಂ! ದೇಶೀ ಭಾಷೆ ಮತ್ತು ಸಂಸ್ಕೃತಿಯ ಅಳಿವಿನ ಬಗೆಗಿನ ಹೆದರಿಕೆಯೇನೋ ಸಕಾರಣವಾದದ್ದೇ. ಆದರೆ ಇದಕ್ಕೆ ಪರ್ಯಾಯವೇ ಇಲ್ಲ ಎಂದು ನಿರಾಶರಾಗಬೇಕಿಲ್ಲ. ಶ್ರಮಶಕ್ತಿ ಮತ್ತು ಬಂಡವಾಳಶಕ್ತಿಯ ನಡುವಿನ ಸಂಘರ್ಷ ಇದಾಗಿದೆ. ಈ ಹೊತ್ತಿನಲ್ಲಿ ಈ ಸಂಘರ್ಷ ಅನಿವಾರ್ಯ. ಅದನ್ನು ನಾವು ಎದುರಿಸಲೇಬೇಕಾಗಿದೆ. ಎದುರಿಸೋಣ. ಜಗತ್ತಿನಲ್ಲಿ ಶ್ರಮಿಕ ಮೂಲದ ಮುರನೇಯ ಶಕ್ತಿಯೊಂದು ಹೊಡೆ ಮುರಿದು ಏಳುತ್ತಿದೆ. ಇನ್ನೊಂದು ಜಗತ್ತು ಸಾಧ್ಯ ಎಂಬ ನಂಬಿಕೆ ನನ್ನದು.

10. ಭಯೋತ್ಪಾದನೆ, ಕೋಮುವಾದ, ಮೂಲಭೂತವಾದ ಇವುಗಳನ್ನು ಸಾಹಿತ್ಯದ ಮೂಲಕ ಎದುರಿಸಬಹುದೇ? ಸಾಹಿತ್ಯಕ್ಕೆ ಅಂಥ ಧಾರಣ ಶಕ್ತಿ ಇದೆಯಾ?

ಖಂಡಿತಾ ಇದೆ. ಎಲ್ಲೋ ಓದಿದ ನೆನಪು. ಕಾವ್ಯ ಕ್ರಾಂತಿಯ ಜನನಿ. ಕಾವ್ಯ ಎಂದರೆ ವಿಶಾಲ ಅರ್ಥದಲ್ಲಿ ಸಾಹಿತ್ಯ ಎಂದೇ ಇದೆ. ಬದುಕಿನ ಪ್ರತಿಬಿಂಬವೇ ಸಾಹಿತ್ಯ ಎಂದಾಗಿರುವುದರಿಂದ ಬದುಕಿನಲ್ಲಿರುವುದೆಲ್ಲವನ್ನು ಹಿಡಿಯಬಲ್ಲ ಶಕ್ತಿ ಸಾಹಿತ್ಯವೆಂಬ ಪರಿಕರಕ್ಕಿದೆ. ಪರಿಕರ ಎಂದೆನಲ್ಲಾ, ಅಂದರೆ ಇಷ್ಟೇ ಆಯಾಕಾಲದ ಕ್ರಿಯಾಶೀಲ ಮನಸ್ಸುಗಳು ತನ್ನ ಪ್ರತಿಭೆಯನ್ನು ನಿಕಷಕೊಡ್ಡಿ ಆಯಾಕಾಲ ಮತ್ತು ಸಂದರ್ಭ ಬಯಸುವ ಹೊಸ ಪರಿಕರ, ಪರಿಕಲ್ಪನೆಗಳನ್ನು ನೆರವಿಕೊಳ್ಳಬೇಕು. ಸಾಹಿತ್ಯ ಎನ್ನುವುದು ಒಂದು ಹೊಸ ಹರೆಯದ ಕುದುರಿ ಇದ್ದಂತೆ. ಸವಾರಿ ಮಾಡುವವನು ಅದಕ್ಕೆ, ತನಗೆ ಅನುಕೂಲವಾಗುವ ನಡೆ ಕಲಿಸಬೇಕಾಗುತ್ತದೆ ಅಷ್ಟೆ.

11. ಈಗಿನ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಮಾಧ್ಯಮವೇ ಮರೆಯಾಗುತ್ತಿರುವಾಗ ಈ ತೆರನ ಸಾಹಿತ್ಯ ಸಮ್ಮೇಳನ ಅಥವಾ ಕನ್ನಡಪರ ಚಳುವಳಿಗಳಿಂದ ಕನ್ನಡ ಉಳಿಸಿ ಬೆಳೆಸಲು ಸಾಧ್ಯವೇ?

ಗಂಭೀರವಾದ ಸಕಾಲಿಕ ಪ್ರಶ್ನೆ. ಶಿಕ್ಷಣದ ಖಾಸಗೀಕರಣ ಎಲ್ಲಿಯವರೆಗೆ ಮುಂದುವರೆಯುತ್ತಿದೆಯೋ ಅಲ್ಲಿಯವರೆಗೆ ಕನ್ನಡ ಮಾಧ್ಯಮಕ್ಕೆ ಕುತ್ತು ಇದ್ದದ್ದೆ. ಶಿಕ್ಷಣವನ್ನು ಮಾಫಿಯಾ ಮಾಡುತ್ತಿರುವ ವಿದ್ಯಮಾನದ ವಿರುದ್ಧ ಜನತೆ ಬಂಡೇಳಬೇಕು. ಜನತೆ ಬಂಡೆದ್ದಾಗಲೇ ರಾಜಕೀಯ ಇಚ್ಛಾಶಕ್ತಿ ಎಂಬುದು ಆಕಾರ ಪಡೆದುಕೊಳ್ಳುತ್ತದೆ. ಇಂದು ನಾವು ನೋಡುತ್ತಿರುವುದು ಕನ್ನಡ ಪರ ಚಳುವಳಿಗಳನ್ನಲ್ಲ. ಚಳುವಳಿಯ ರೂಪಧರಿಸಿಕೊಂಡಿರುವ ಕಾರ್ಯಕರ್ಮಗಳನ್ನು ಮಾತ್ರ ನೋಡುತ್ತಿದ್ದೇವೆ. ಯಾವುದೇ ಅದ್ದೂರಿ, ಅರ್ಥಪೂರ್ಣವೆನಿಸುವ ಕಾರ್ಯಕ್ರಮಗಳಿಗಾದರೂ ಒಂದು ಮಿತಿ ಇದೆ. ಇನ್ನು ಫೇಕ್ ಕಾರ್ಯಕ್ರಮಗಳಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ. ಕಾರ್ಯಕ್ರಮಗಳ ಮಿತಿಯನ್ನು ಮೀರುವುದೇ ಚಳುವಳಿ. ಚಳುವಳಿಗೆ ಪರಿಣಾಮವೇ ಗುರಿ. ಅವಿಶ್ರಾಂತ ಚಟುವತಿಕೆಗಳೇ ನಡೆ. ಇಂಥ ಚಳುವಳಿಗಳ ಅವಶ್ಯಕತೆ ಇದೆ.

ಇನ್ನು ಸಾಹಿತ್ಯ ಸಮ್ಮೇಳನಗಳ ಸಫಲತೆಯ ಪ್ರಶ್ನೆ. ಒಂದು ಮಾತನ್ನು ನಾವೆಲ್ಲ ಸ್ಪಷ್ಟಪಡಿಸಿಕೊಳ್ಳಬೇಕಿದೆ. ಇದು ಸಾಮ್ರಾಜಶಾಹಿ ಶಕ್ತಿಗಳ ಕೈ ಮೇಲಾಗಿರುವ ಜಾಗತಿಕ ಅರಾಜಕ ಸ್ಥಿತಿಯಾಗಿದೆ. ಇಂದ್ಥ ಸ್ಥಿತಿಯಲ್ಲಿ ಎಲ್ಲ ಚಟುವಟಿಕೆಗಳು ಅಂದರೆ ಸಾಂಸ್ಕೃತಿಕ ಚಟುವಟಿಕೆ ಇರಬಹುದು, ಆರ್ಥಿಕ ಪರ್ಯಾಯವಿರಬಹುದು, ಸಾಮಾಜಿಕ ಪಲ್ಲಟಗಳಿರಬಹುದು, ರಾಜಕೀಯ ಸ್ಥಿತ್ಯಂತರಗಳಿರಬಹುದು. ಹೀಗೆ ಎಲ್ಲ ವಿದ್ಯಮಾನಗಳ ಬಗೆಗೆ ಸಕಾರಣ ಗುಮಾನಿ, ದಿವ್ಯ ನಿರ್ಲಕ್ಷ್ಯ, ಒಂಥರಾ ನಿರಾಸೆ ಹುಟ್ಟಿಕೊಳ್ಳುತ್ತವೆ. ಆದರೆ ಈ ಸ್ಥಿತಿ ಶಾಶ್ವತವಲ್ಲ. ಒಂದು ಜನವಿರೋಧಿ ವ್ಯವಸ್ಥೆಯಿಂದ ಜನಪರ ದಿಕ್ಕಿಗೆ ಪಯಣಿಸುವ ಸಂದರ್ಭದಲ್ಲಿನ ಕ್ಷಣಿಕ ನಿಲುದಾಣ. ಇದನ್ನು ನಾವೆಲ್ಲ ಹಾದು ಬರಲೇಬೇಕು. ಆದರೆ ಮಿಂದಿನ ದಾರಿಯ ಹುಡಕಾಟಕ್ಕಾಗಿ ನಾವೆಲ್ಲ ಬದ್ಧರಾಗಿರಬೇಕು ಅಷ್ಟೇ. ಆ ಕಾರಣಕ್ಕಾಗಿ ಕತ್ತಲೆ ಎತ್ತೆತ್ತಲೂ ಆವರಿಸಿಕೊಂಡಿರುವ ಮನೆಯಲ್ಲಿ ಇಂಥ ಸಮ್ಮೇಳನಗಳ ಮೂಲಕ ಸಣ್ಣ ದೀಪ ಹಚ್ಚಿಕೊಂಡಾದರೂ ನಾಳಿನ ಉದಯದವರೆಗೆ ಕಾಯಬೇಕಿದೆ. ಆ ದೀಪವಾದರೂ ನನಗೆ ಬೆಳಕು ತೋರಲೆಂದು ಬೇಕು. ನನ್ನ ಕಣ್ಣ ಕತ್ತಲೆ ಕರಗಿಸುವಷ್ಟು ಶಕ್ತಿ ಪುಟ್ಟ ಪಣತೆಗಿದೆ ಎಂಬುದನ್ನು ಮರೆಯದಿರೋಣ.

ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು - ಭಾಗ -೨

೩) ತಾತ್ವಿಕವಾಗಿ ಭಿನ್ನ ನೆಲೆ-ನಿಲುವುಗಳ ಕಾರಣದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಿಗೆ ಪಯರ್ಾಯ ನೆಲೆಗಳು ಹುಟ್ಟಿಕೊಂಡಿದ್ದು, ಬೆಳೆದದ್ದು ಗಮನಿಸಲೇಬೇಕಾದ ಸಂಗತಿಯಾಗಿದೆ. ತಾತ್ವಿಕ ಭಿನ್ನ ನೆಲೆಗಳ ಕ್ರಿಯೆ ಕೇವಲ ಇತ್ತೀಚಿನದಲ್ಲ. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 23ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ (ಡಿಸೆಂಬರ್ 26, 27, 28) ಪ್ರಗತಿಶೀಲ ಲೇಖಕರು ಒಗ್ಗೂಡಿ ಒಂದು ಒಕ್ಕೂಟವನ್ನು ರಚಿಸಿಕೊಂಡರು. ಅದನ್ನು ಪ್ರಗತಿಶೀಲ ಲೆಖಕರ ಒಕ್ಕೂಟವೆಂದು ಕರೆಯಲಾಯಿತು. ಸಾಹುಇತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನಕ್ಕೆ ದ.ರಾ.ಬೇಂದ್ರೆಯವರು ಅಧ್ಯಕ್ಷರಾಗಿದ್ದರು. ಬೇಂದ್ರೆಯವರ ಬಗ್ಗೆ ಭಿನ್ನಾಭಿಪ್ರಾಯವಿರಲಿಲ್ಲ. ಭಾರತದಲ್ಲಿ ಪ್ರಗತಿಶೀಲ ಸಾಹಿತ್ಯ ಚಳುವಳಿ ರೂಪುಗೊಳ್ಳುತ್ತಿದ್ದ ಕಾಲವದು. ಹಿಂದಿನ ವರ್ಷ ಮುಂಬೈಯಿಯಲ್ಲಿ ನಡೆದ ಪ್ರಗತಿಶೀಲ ಸಾಹಿತ್ಯ ಸಮ್ಮೇಳನಕ್ಕೆ ಖ್ಯಾತ ನಾಟಕಕಾರ ಶ್ರೀರಂಗರು ಹೋಗಿ ಬಂದಿದ್ದರು. ಸಾಹಿತ್ಯ ಪರಿಷತ್ತಿನ ನೆಲೆ ನಿಲುವುಗಳಿಗೆ ಭಿನ್ನವಾಗಿ ಪ್ರಗತಿಪರ ಚಿಂತನೆಯ ಲೇಖಕರು ಒಂದಾಗಿ ಕ್ರಿಯಾಶೀಲರಾಗಬೇಕೆಂಬ ಹಂಬಲದಿಂದ ಹುಟ್ಟಿದ ಒಕ್ಕೂಟದಲ್ಲಿ ಶ್ರೀರಂಗ, ಅ.ನ.ಕೃ, ನಿರಂಜನ, ಬಸವರಾಜ ಕಟ್ಟೀಮನಿ, ಕೃಷ್ಣಕುಮಾರ ಕಲ್ಲೂರ, ಇನಾಂದಾರ್ ಮುಂತಾದ ಅನೇಕ ಪ್ರಸಿದ್ಧರು ಇದ್ದರು. ಮುಂದೆ 1952ನೇ ಜೂನ್ 4ರಿಂದ 7ರವರೆಗೆ ಹಿರಿಯೂರಿನಲ್ಲಿ ಪ್ರಗತಿಪರ ಲೇಖಕರ ಸಮಾವೇಶ ನಡೆಯಿತು. ಆನಂತರದ ದಿನಗಳಲ್ಲಿ ಅ.ನ.ಕೃ ಮತ್ತು ನಿರಂಜನರ ನಡುವೆ ತಾತ್ವಿಕ ಭಿನ್ನಾಭಿಪ್ರಾಯವುಂಟಾಗಿ ಒಕ್ಕೂಟದ ಒಡಕಿನಲ್ಲಿ ಪಯರ್ಾವಸಾನವಾಯಿತು.ಇದು ನಡೆದಿದ್ದು 1954ರಲ್ಲಿ. ಅ.ನ.ಕೃ ಅವರು ವೇಶ್ಯೆಯರನ್ನು ಕುರಿತು ಬರೆದ ನಗ್ನಸತ್ಯ, ಸಂಜೆಗತ್ತಲು ಮತ್ತು ಶನಿಸಂತಾನ- ಎಂಬ ಕಾದಂಬರಿಗಳು ವಿವಾದದ ಕೇಂದ್ರವಾದವು. ಅ.ನ.ಕೃ ಅವರು ಸಂಪ್ರದಾಯವಾದಿಗಳ ವಿರೋಧದ ಜೊತೆಗೆ ನಿರೂಪಣೆಯ ವಿಧಾನ ಮತ್ತು ವಸ್ತು ನಿರ್ವಹಣೆ ಕುರಿತಂತೆ ನಿರಂಜನರಾದಿಯಾಗಿ ಇನ್ನು ಕೆಲವರಿಂದ ಪ್ರತಿರೋಧ ಎದುರಿಸಿದರು. ತಮ್ಮ ನಿಲುವಿನ ಸಮರ್ಥನೆಗಾಗಿ ಸಾಹಿತ್ಯ ಮತ್ತು ಕಾಮ ಪ್ರಚೋದನೆ ಎಂಬ ಕೃತಿಯನ್ನು ಬರೆದರು.

ಮುಂದೆ 1979ರ ಮಾರ್ಚ್ ತಿಂಗಳಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನವು ವಿವಾದಕ್ಕೆ ಗುರಿಯಾಯಿತು. ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದ ಮತ್ತು ಧರ್ಮಸ್ಥಳದಲ್ಲಿ ನಡೆದ ಈ ಸಮ್ಮೇಳನದ ದಿನದಗಳಂದೇ ಬೆಂಗಳೂರಲ್ಲಿ ಬಂಡಾಯ ಸಾಹಿತ್ಯದ ಸಮ್ಮೇಳನ ನಡೆಯಿತು. ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೆಳೆಯುತ್ತಾ ಬಂದ ಎಡಪಂಥೀಯ, ಪ್ರಗತಿಪರ, ಪ್ರಜಾಸತ್ತಾತ್ಮಕ ನಿಲುವುಗಳಿಗೆ ಸಂಘಟನೆಯ ನೆಲೆ ಒದಗಿಸಲು ಧರ್ಮಸ್ಥಳದ ಸಮ್ಮೇಳನ ಒಂದು ಸನ್ನಿವೇಶವನ್ನು ಒದಗಿಸಿತು. ಆ ವೇಳೆಗಾಗಲೇ ಅಡಿಗರು ರಾಜಕೀಯವಾಗಿ ಸಂಘಪರಿವಾರದವರಾಗಿದ್ದರು. ಹಂಪನಾ ಅವರು ಸಮ್ಮೇಳನವನ್ನು ಧರ್ಮಸ್ಥಳಕ್ಕೆ ಕೊಂಡೊಯ್ದಿದ್ದರು. ಈ ವೇಳೆಗೆ ಕನರ್ಾಟಕದಲ್ಲಿ ದಲಿತ ಸಂಘರ್ಷ ಸಮಿತಿ, ಸಮುದಾಯದಂತಹ ಆಂದೋಲನಾತ್ಮಕ ಸಂಘಟನೆಗಳು ಕ್ರಿಯಾಶೀಲವಾಗಿದ್ದವು. ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಆಂದೋಲನಕ್ಕೆ ಅವಕಾಶವಿತ್ತು. ಅದು ಅನಿವಾರ್ಯವೂ ಆಗಿತ್ತು. ಆ ವೇಳೆಗೆ ರಾಷ್ಟ್ರದಲ್ಲಿ ರಾಜಕೀಯವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಧ್ರುವೀಕರಣ ಆರಂಭವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲೂ ಇಂತಹ ಧ್ರುವೀಕರಣದ ಅಗತ್ಯವನ್ನು ಕರ್ನಾಟಕವು ಮೊದಲನೇ ಬಂಡಾಯ ಸಾಹಿತ್ಯದ ಸಮ್ಮೇಳನದ ಮೂಲಕ ಕಂಡುಕೊಂಡಿತು. ಮಾರ್ಕ್ಸ್ವಾದ, ಗಾಂಧೀವಾದ, ಅಂಬೇಡ್ಕರ್ವಾದ, ಲೋಹಿಯಾವಾದ- ಇವೇ ಮುಂತಾದ ತಾತ್ವಿಕ ನಂಬಿಕೆ ಇರುವವರು ಮತ್ತು ಒಟ್ಟಾರೆ ಪ್ರಗತಿಪರರು ಬಂಡಾಯ್ ಅಸಾಹಿತ್ಯ ಸಂಘಟನೆಯ ವಿಶಾಲ ತಳಹದಿಯ ಮೇಲೆ ಒಂದಾದರು. ಆರಂಭದ ಕೆಲ ವರ್ಷ ತಾತ್ವಿಕ ಗಟ್ಟಿತನವನ್ನು ಬೆಳೆಸಿಕೊಳ್ಳುವ ಕಾರ್ಯತಂತ್ರವಾಗಿ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಗವಹಿಸದಿರಲು ನಿರ್ಧರಿಸಲಾಯಿತು. ಇದು ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳುವ ಕಾರ್ಯತಂತ್ರವಾಗಿದ್ದರಿಂದ ಅನಂತರ ಯಾವುದೇ ಸಂಸ್ಥೆಗಳಿಗೆ ಹೋದರೂ ನಮ್ಮ ವಿಚಾರಗಳನ್ನು ಪ್ರತಿಪಾದಿಸಬೇಕು ಎಂಬ ಬದ್ಧತೆಯಿಂದ ಷರತ್ತನ್ನು ತೆರವುಗೊಳಿಸಲಾಯಿತು. ಒಟ್ತಾರೆ ಕ್ರಿಯಾಶೀಲತೆಗಳ ಏರಿಳಿತಗಳಿದ್ದರೂ ಬಂಡಾಯ ಸಾಹಿತ್ಯ ಸಂಘಟನೆ ಈಗಲೂ ಇದೆ. ತನ್ನ ಮೊದಲನೇಯ ಸಮ್ಮೇಳನದ ಕರಪತ್ರದಲ್ಲೇ ಸ್ಪಷ್ಟಪಡಿಸಿದಂತೆ ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ವಿರುದ್ಧವಲ್ಲ ಸಾಂಸ್ಕೃತಿಕವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಕ್ರೋಢೀಕರಿಸುವ ಚಳುವಳಿ.

ತಾತ್ವಿಕ ವಿವಾದದ ಕಾರಣ ಹೇಳಿ ಹುಟ್ಟಿದ ಇನ್ನೊಂದು ಸಮ್ಮೇಳನ (ಸಂಘಟನೆಯಲ್ಲ) ಜಾಗತಿಕ ಸಾಹಿತ್ಯ ಸಮ್ಮೇಳನ 1990ರ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯಾಗಿ ಅಥವಾ ಪರ್ಯಾಯವಾಗಿ ಬೆಂಗಳೂರಿನಲ್ಲಿ ಜಾಗೃತ ಸಾಹಿತ್ಯ ಸಮ್ಮೇಳನ ನಡೆಯಿತು. 1990ರ 59ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಾ.ಆರ್.ಸಿ.ಹಿರೇಮಠ ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗ ವಿವಾದದ ಅಲೆಗಳು ಎದ್ದವು. ಕೆಲವರು ಶ್ರೇಷ್ಠತೆಯ ಪ್ರಶ್ನೆಯನ್ನು ಎತ್ತಿದರು ಮತ್ತು ಶ್ರೇಷ್ಠತೆಯ ವಾದವನ್ನು ಬೆಳೆಸಿದರು. ಸಾಹಿತ್ಯದ ಶ್ರೇಷ್ಠತೆ ಮುಖ್ಯವೆಂದು ಪ್ರತಿಪಾದಿಸಿದ ಈ ಗೆಳೆಯರಲ್ಲಿ ಕೆಲವರಿಗಾದರೂ ಶ್ರೇಷ್ಠತೆಯ ಪ್ರಶ್ನೆ ಜಟಿಲವೆಂಬ ಅರಿವು ಇತ್ತೆಂದು ನಾನು ಭಾವಿಸುತ್ತೇನೆ. ಆದರೆ ಎಲ್ಲರಿಗೂ ಇದರ ಅರಿವು ಇರಲಿಲ್ಲವಾದ್ದರಿಂದ ನವ್ಯ ಸಾಹಿತ್ಯದ ವ್ಯಕ್ತಿನಿಷ್ಠ ಶ್ರೇಷ್ಠತೆಯ ಹಿನ್ನೆಲೆ ಪಡೆದವರೇ ಹೆಚ್ಚಾಗಿ ಜಾಗೃತ ಸಾಹಿತ್ಯ ಸಮ್ಮೇಳನದ ಭಾಗವಾಗಿದ್ದರು. ನಮ್ಮ ಸಾಹಿತ್ಯದ ಶ್ರೇಷ್ಠದ ಕಲ್ಪನೆ ಪುನರ್ ನವೀಕರಣಗೊಳ್ಳುವ ಲಕ್ಷಣಗಳು ಕಾಣಿಸಿದ ಈ ಸಮ್ಮೇಳನವು ಚರ್ಚೆ ಮತ್ತು ಭಾಗವಹಿಸುವಿಕೆಯ ದೃಷ್ಟಿಯಿಂದ ಯಷಸ್ವಿಯಾಯಿತೆಂದೇ ಹೇಳಬೇಕು. ಆದರೆ ಈ ದೇಶದ ಸಾಮಾಜಿಕ ಸ್ಥರಗಳಿಂದುಂಟಾದ ವೈರುಧ್ಯಗಳನ್ನು ಗ್ರಹಿಸದೇ ಕೇವಲ ವ್ಯಕ್ತಿನಿಷ್ಠ ಅನುಭವ ಮತ್ತು ಕೃತಿನಿಷ್ಠ ನೆಲೆಯನ್ನು ಗಮನಿಸಿ ಪ್ರತಿಪಾದಿತವಾಗುವ ಸೀಮಿತ ಶ್ರೇಷ್ಠತೆಯ ಕಲ್ಪನೆಯ ಎದುರು ಅನೇಕ ಪ್ರಶ್ನೆಗಳಿವೆಯೆಂಬುದನ್ನು ಮರೆಯಬಾರದು. ಶ್ರೇಷ್ಠತೆಯು ಪ್ರಗತಿಪರಬದ್ಧ ಲೇಖಕರನ್ನು ಮುಗಿಸುವ ಒಂದು ಅಸ್ತ್ರವಾಗಬಾರದು. ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಕೆ.ವಿ.ಸುಬ್ಬಣ್ಣನವರು ಬರೆದ ಶ್ರೇಷ್ಠತೆಯ ವ್ಯಸನ ಎಂಬ ಲೇಖನವನ್ನು ಇಲ್ಲಿ ನೆನೆಯಬಹುದು.

ಈಗ 74ನೇ ಕನ್ನಡ ಸಾಹಿತ್ಯ ಸಮ್ಮೇಳನವು ಉಡುಪಿಯಲ್ಲಿ ನಡೆಯುವಾಗ ಸಂಘಪರಿವಾರದ ಸಂಬಂಧವುಳ್ಳವರೆಂದು ಭಾವಿಸಲಾದ ಪ್ರೊ.ಎಲ್.ಎಸ್.ಶೇಷಗಿರಿರಾಯರು ಅಧ್ಯಕ್ಷರಾದುದು ಮತ್ತು ಸಮ್ಮೇಳನದ ವ್ಯವಸ್ಥೆಯ ಮುಂಚೂಣಿಯಲ್ಲಿ ಸಂಘಪರಿವಾರದವರೇ ತುಂಬಿದ್ದರೆನ್ನುವುದು ತಮ್ಮ ತಾತ್ವಿಕ ವಿರೋಧಕ್ಕೆ ಕಾರಣವೆಂದು ಪ್ರತಿಪಾದಿಸುವ ಕೋಮು ಸೌಹಾರ್ಧ ವೇದಿಕೆಯ ಗೆಳೆಯರು ಇತರೆ ಪ್ರಗತಿಪರರ ಜೊತೆ ಸೇರಿ ಡಿಸೆಂಬರ್ 9ರಂದು ಉಡುಪಿಯಲ್ಲಿ ಸೌಹಾರ್ಧ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ್ದರು. ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಕೋಮು ಸೌಹಾರ್ದ ವೇದಿಕೆಯವರ ಪರವಾಗಿ ನಿಂತ ಚಂದ್ರಶೇಖರ ಪಾಟೀಲರು ಇಲ್ಲಿ ಅದೇ ವೇದಿಕೆಯವರ ಪ್ರತಿರೋಧವನ್ನಿ ಎದುರಿಸಬೇಕಾಗಿ ಬಂದಿದ್ದು ಒಂದು ವಿಪರ್ಯಾಸ! ಆದರೆ ಕೋಮು ಸೌಹಾರ್ದ ವೇದಿಕೆಯವರ ಜೊತೆ ಉಡುಪಿಯ ಪ್ರಗತಿಪರರು (ಉದಾ: ಜಿ.ರಾಜಶೇಖರ್ ಮುಂತಾದವರು) ಸೇರಿದ ಮೇಲ ಸೌಹಾರ್ದ ಸಮ್ಮೇಳನವು ಪರ್ಯಾಯ ಸಮ್ಮೇಳನವಲ್ಲ ಎಂದು ತಿಳಿಸಲಾಯಿತು. ಆದರೂ ತಾತ್ವಿಕ ಭಿನ್ನತೆ ಇದ್ದೇ-ಇತ್ತು. ಹೀಗಾಗಿ ಸೌಹಾರ್ಧ ಸಾಹಿತ್ಯ ಸಮ್ಮೇಳನವು ಧಾರ್ಮಿಕ ಮೂಲಭೂತವಾದಕ್ಕೆ ಪ್ರತಿರೋಧಿಯಾದ ಸಮ್ಮೇಳನವಾಯಿತು.

ಈ ತಾತ್ವಿಕ ಭಿನ್ನ ಮತದ ಘಟನೆಗಳು ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಇತಿಮಿತಿಯನ್ನು ತೋರಿಸುತ್ತವೆ. ಸಾಹಿತ್ಯ ಪರಿಷತ್ತಿನ ನೇತೃತ್ವ ವಹಿಸಿದವರು ಒಟ್ಟಾರೆ ಪ್ರಗತಿಪರ ಸ್ವರೂಪವನ್ನು ಪರಿಷತ್ತಿನ ವ್ಯಾಪ್ತಿಯಲ್ಲೇ ನೀಡಲು ಪ್ರಯತ್ನಿಸಬಹುದೆಂಬುದು ನಿಜವಾದರೂ ಅದು ತಾತ್ವಿಕವಾಗಿ ನಿರ್ದಿಷ್ಟ ಸಾಮಾಜಿಕ ರಾಜಕೀಯ ಬದ್ಧತೆ ತೋರುವುದು ಕಷ್ಟವೆಂದು ಇಲ್ಲೀವರೆಗಿನ ಬೆಳವಣಿಗೆಗಳು ತೋರಿಸಿವೆ- ಹೀಗಾಗಿ ತಾತ್ವಿಕ ವಿವಾದಗಳು ಹುಟ್ಟುತ್ತಲೇ ಇರುತ್ತವೆ

ಕನ್ನಡ ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು - ಭಾಗ - ೧


ಸಾಹಿತ್ಯ ಪರಿಷತ್ತು, ಸಾಹಿತ್ಯ ಸಮ್ಮೇಳನಗಳು ಎಂದರೇನೆ ವಿವಾದಗಳು ಎಂಬಂತಾಗಿದೆ ಸ್ಥಿತಿ. ಕಸಾಪ ಹಾಗೂ ಸಮ್ಮೇಳನಗಳಿಗೆ ಇರುವಷ್ಟೇ ದೀರ್ಘ ಇತಿಹಾಸ ವಿವಾದಗಳಿಗೂ ಇದೆ. ಇಂತಿಪ್ಪ ಕನ್ನಡ ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳ ಕುರಿತು ಖ್ಯಾತ ಸಾಹಿತಿ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ವಿವರವಾಗಿ ಚರ್ಚಿಸಿದ್ದಾರೆ. ಕೊಂಚ ದೀರ್ಘ ಲೇಖನವಾದ್ದರಿಂದ ಎರಡು ಭಾಗಗಳಾಗಿ ಪ್ರಕಟಿಸುತ್ತಿದ್ದೇವೆ



ಕನ್ನಡ ಸಾಹಿತ್ಯ ಪರಿಷತ್ ವ್ಯವಸ್ಥೆಗೊಳಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಒಂದಲ್ಲಾ ಒಂದು ವಿವಾದವೇಳುತ್ತಿರುವುದು ಇತ್ತೀಚೆಗೆ ಸಹಜ ಕ್ರಿಯೆಯೆಂಬಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿರುವುದು ಇದಕ್ಕೆ ಒಂದು ಕಾರಣ. ಸಾಮಾನ್ಯವಾಗಿ ಸರಕಾರ ಹಾಗು ಅದರ ಅಂಗಸಂಸ್ಥೆಗಳ ನಡುವೆ ವಿವಾದಗಳನ್ನುಂಟುಮಾಡುವ ಪ್ರವೃತಿ ನಮ್ಮಲ್ಲಿದೆ. ವಿಶೇಷವಾಗಿ ಪ್ರಷಸ್ತಿಗಳು ಮತ್ತು ಅಧ್ಯಕ್ಷರು ಹಾಗು ಸದಸ್ಯರ ನೇಮಕಾತಿ ಸಂದರ್ಭದಲ್ಲಿ ನ್ಯಾಯ, ಸಾಮಾಜಿಕ ನ್ಯಾಯಗಳ ಬಗ್ಗೆ ಪ್ರಶ್ನೆಯನ್ನು ಎತ್ತಲಾಗುತ್ತದೆ. ಕೆಲವೊಮ್ಮೆ ಈ ನ್ಯಾಯಗಳ ಬಗ್ಗೆ ಅಷ್ಟೇನೂ ಅರಿವಿಲ್ಲದ ಗುಣಮಟ್ಟ ಪ್ರತಿಭೆ ಮುಂತಾದ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಆದರೆ ಯಾವುದೇ ಖಾಸಗೀ ಸಂಸ್ಥೆ ಕೊಡುವ ಪ್ರಶಸ್ತಿ, ಮತ್ತು ಒಳಗೊಳ್ಳುವ ಆಡಳಿತಾತ್ಮಕ ಸ್ವರೂಪದ ಬಗ್ಗೆ ಸಾಮಾಜಿಕ-ಪ್ರಾದೇಶಿಕ ನ್ಯಾಅಯದ ಪ್ರಶ್ನೆಗಳನ್ನು ಎತ್ತುವುದಿಲ್ಲ. ಖಾಸಗೀ ಸಂಸ್ಥೆಗಳೆಂದರೆ ಗುಣಮಟ್ಟ ಅಥವ ಪ್ರತಿಭೆಗಳನ್ನು ತಾನಾಗಿಯೇ ಪರಿಗಣಿಸುತ್ತವೆಯೆಂಬ ನಂಬಿಕೆಯಿಂದಲೋ ಏನೊ ಆ ಪ್ರಶ್ನೆಯನ್ನಂತೂ ಕೇಳುವುದೇ ಇಲ್ಲ. ಪ್ರಚಾರ ಮಾತ್ರ ಸಾಕಷ್ಟು ಸಿಕ್ಕುತ್ತವೆ. ಸಾರ್ವಜನುಕ ಮತ್ತು ಖಾಸಗೀ ಕ್ಷೇತ್ರಗಳಿಗೆ ಪ್ರತ್ಯೇಕ ನ್ಯಾಯ ಮತ್ತು ಪ್ರತ್ಯೇಕ ಮಾನದಂಡ ಎಂಬುದು ಆರ್ಥಿಕ ಕ್ಷೇತ್ರಕ್ಕಷ್ಟೇ ಅಲ್ಲ ಸಾಂಸ್ಕೃತಿಕ ಕ್ಷೇತ್ರಕ್ಕೂ ಅನ್ವಯವಾಗುತ್ತಾ ಬಂದಿರುವುದು ಒಂದು ಒಪ್ಪಿತ ವಿಪರ್ಯಾಸವಾಗಿಬಿಟ್ಟಿದೆ. ಈ ಅಂಶವನ್ನು ಪ್ರಸ್ತಾಪಿಸಲು ಕಾರಣವಿದೆ.

1915ರಲ್ಲಿ ಸ್ಥಾಪಿತವಾದ ಕನ್ನಡ ಸಾಹತ್ಯ ಪರಿಷತ್ತನ್ನು ಅಧೀಕೃತವಾಗಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿದ್ದು, ಜನರು ಹಾಗೆಯೇ ಭಾವಿಸಿದ್ದು ಮತ್ತು ಸಾಹಿತ್ಯ ಪರಿಷತ್ತು ಮತ್ತು ಅದರ ಸಮ್ಮೇಳನಗಳು ಸರ್ಕಾರದ ಸಹಾಯವನ್ನು ಅವಲಂಬಿಸಿದ್ದು ಪ್ರಶ್ನೆಗಳನ್ನು ಎತ್ತಲು ಒಂದು ತಾತ್ವಿಕ ತರ್ಕವನ್ನು ಒದಗಿಸಿದೆ. ಬೇರೆ ಕೆಲವು ಸಂಸ್ಥೆಗಳು ನಡೆಸುವ ಸಮ್ಮೇಳನ ಅಥವಾ ಆ ಸಮಾವೇಶಗಳ ಬಗ್ಗೆ ಪ್ರಶ್ನೆಗಳು ಪಿಸುಗುಡುವುದೂ ಇಲ್ಲವೆಂಬುದನ್ನು ಇಲ್ಲಿ ಗಮನಿಸಬೇಕು. ಇದರರ್ಥ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ, ಮತ್ತು ಸಮ್ಮೇಳನಗಳ ಸ್ವರೂಪದ ಬಗ್ಗೆ ಪ್ರಶ್ನಿಸಬಾರದೂ ಎಂದಲ್ಲ. ಪ್ರಶ್ನಾರ್ಹವಾದ ಕೆಲಸಗಳನ್ನು ಮಾಡಿದಾಗ ಸಾಹಿತ್ಯ ಪರಿಷತ್ತನ್ನೂ ಒಳಗೊಂಡಂತೆ ಎಲ್ಲಾ ಸಂಸ್ಥೆಗಳ ಕಾರ್ಯ ವೈಖರಿಯನ್ನು ಪ್ರಶ್ನಿಸುವುದು ಸರಿಯಾದುದು. ಎಂಬ ಅಭಿಪ್ರಾಯ ನನ್ನದು.

ಇರಲಿ, ಈಗ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳ ಸುತ್ತ ಹಬ್ಬುತ್ತಾ ಬಂದ ವಿವಾದಗಳನ್ನು ಗಮನಿಸೋಣ. ವಿವಾದಗಳು ಎಲ್ಲಾ ಸಂದರ್ಭಗಳಲ್ಲೂ ತಾತ್ವಿಕ ನೆಲೆಯನ್ನು ಪಡೆದಿರುತ್ತವೆಯೆಂದೂ ಭಾವಿಸಬೇಕಾಗಿಲ್ಲ. ಒಂದೊಂದು ಸಾರಿ ಒಂದೊಂದು ಕಾರಣಕ್ಕೆ ವಿವಾದಗಳೆದ್ದಿವೆ. ಕೆಲವೊಮ್ಮೆ ವೈಯಕ್ತಿಕ, ಕೆಲವೊಮ್ಮೆ ತಾತ್ವಿಕ. ಕನ್ನಡ ಸಾಹಿತ್ಯ ಸಮ್ಮೆಳನದ ಬಗ್ಗೆ ಇಲ್ಲೀವರೆಗೆ ಎದ್ದಿರುವ ವಿವಾದಗಳು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು. (1) ಸಮ್ಮೇಳನಾಧ್ಯಕ್ಷರ ಆಯ್ಕೆ ಬಗ್ಗೆ, (2) ವಿಚಾರಗೋಷ್ಠಿಗಳ ಸ್ವರೂಪ ಮತ್ತು ವ್ಯಕ್ತಿಗಳ ಆಯ್ಕೆ ಕುರಿತು, (3) ತಾತ್ವಿಕ ಭಿನ್ನಾಭಿಪ್ರಾಯಗಳು.

(1) ಈಗ ಮೊದಲನೆಯ ಅಂಶವನ್ನು ಗಮನಿಸೋಣ. ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮತ್ತು ಅಸಮಾಧಾನ- ಎರಡು ಈಗ ಒಟ್ಟಿಗೆ ಬೆಸೆದುಕೊಂಡಿದೆ. ಸಾಹಿತ್ಯ ಪರಿಷತ್ತು ಸವರ್ಾನುಮತ ಅಥವಾ ಬಹುಮತಗಳ ಆಧಾರದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ, ಅನೇಕ ಅಂಶಗಳು ಪರಿಗಣಿತವಾಗುವುದು ಗುಟ್ಟಿನ ವಿಷಯವೇನೂ ಅಲ್ಲ. ಇಲ್ಲೀವರೆಗೆ ಆಯ್ಕೆಯಾದ ಬಹುಪಾಲು ಅಧ್ಯಕ್ಷರು ಅರ್ಹರಲ್ಲ ಎಂದು ಹೇಳುವಂತಿಲ್ಲವಾದರೂ ಎಷ್ಟು ಜನ ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ತುಳಿತಕ್ಕೊಳಗಾದ ಸಮಾಜದ ಸ್ಥರದಿಂದ ಬಂದಿರುವವರಿಗೆ, ಅರ್ಹತೆಯ ಆಧಾರವನ್ನು ಪರಿಗಣಿಸಿಯೂ ಅಧ್ಯಕ್ಷರಾಗುವ ಅವಕಾಶ ಲಭಿಸಿದೆ ಎಂಬ ಪ್ರಶ್ನೆ ಜೀವಂತವಾಗಿಯೇ ಇದೆ.ಈ ಪ್ರಶ್ನೆಗೆ ಅವರದ್ದೇ ಆದ ತಾತ್ವಿಕ ನೆಲೆಯಿದೆ. ವಿಶೇಷವಾದ ತಾತ್ವಿಕ ನೆಲೆಯಿಲ್ಲದಿದ್ದರೂ ಅಧ್ಯಕ್ಷರ ಆಯ್ಕೆ ವಿವಾದಾಸ್ಪದವಾದ ಸಂದರ್ಭಗಳೂ ನಮ್ಮಲ್ಲಿವೆ.

ಈ ಸಂದರ್ಭ ಎರಡು ನಿದರ್ಶನಗಳನ್ನು ಕೊಡಬಯಸುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಆಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ.ದೇ.ಜವರೇಗೌಡರು. ಸಮ್ಮೇಳನದ ಅಧ್ಯಕ್ಷರಾದರು. ಆಗ ಜವರೇಗೌಡರು ಕನ್ನಡಪರ ಕೆಚ್ಚಿಗೆ ಹೆಸರಾಗಿದ್ದರು. (ಈಗಲೂ ಆ ಕೆಚ್ಚು ಕಡಿಮೆಯಾಗಿಲ್ಲ. ಆದರೆ ಅವರ ಆದ್ಯತೆಗಳ ಬಗ್ಗೆ ನನ್ನಂಥವರ ಆಕ್ಷೇಪವಿದೆ.) ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಜಿ. ನಾರಾಯಣ ಅವರು ದೇಜಗೌ ಅವರ ಆಯ್ಕೆಯ ರುವಾರಿ ಎಂದೇ ಆಗ ಜನಜನಿತವಾಗಿತ್ತು. ಈ ಸಮ್ಮೇಳನದ ಬಗ್ಗೆ ಎರಡು ವಿವಾದಗಳು ಎದ್ದಿದ್ದವು. ಒಂದು-ಸುವರ್ಣ ಮಹೋತ್ಸವ ಸಮ್ಮೇಳನದ ಹೆಸರಿನಲ್ಲಿ ಕಟ್ಟಡ ನಿರ್ಮಾಣದಂಥಾ ಕೆಲಸದ ಹೊರತಾಗಿ ದುಂದು ವೆಚ್ಚ ಮಾಡಲಾಗುತ್ತಿದೆ- ಎಂಬ ಆಕ್ಷೇಪ. ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡುವ ಮೂಲಕ ಕೆಟ್ಟ ಸಂಪ್ರದಾಯವನ್ನು ಹಾಕಲಾಗುತ್ತಿದೆಯೆಂದು ಪ್ರತಿಪಾದಿಸಿ, ದುಂದು ವೆಚ್ಚವನ್ನು ವಿರೋಧಿಸಿ ಸಮ್ಮೇಳನದ ದಿನದಂದು ಸಮ್ಮೇಳನದ ಜಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ನನ್ನನೂ ಒಳಗೊಣ್ಡಂತೆ ಅನೇಕ ಪ್ರಗತಿಪರರು ಈ ಧರಣಿಯಲ್ಲಿ ಭಾಗವಹಿಸಿದ್ದರು. ಈ.ನಾರಾಯಣ ಅವರು ತಾವು ಮಾಡುತ್ತಿದ್ದ ವೆಚ್ಚಕ್ಕೆ ಸಮರ್ಥನೆ ನೀಡಿದರು. ವಿವಾದ ಮತ್ತು ವಿರೋಧದ ಎರಡನೇಯ ಅಂಶ ಸಮ್ಮೇಳನಾಧ್ಯಕ್ಷರಿಗೆ ಸಂಬಧಿಸಿದ್ದು . ದೇಜಗೌ ಚಿಕ್ಕವಯಸ್ಸಿನಲ್ಲೆ ಅಧ್ಯಕ್ಷರಾದರೆಂಬ ಗುಸುಗುಸುವಿನ ಜೊತೆಗೆ ಶ್ರೀ ಗೋಪಾಲಕೃಷ್ಣ ಅಡಿಗರು ಬಹಿರಂಗವಾಗಿ ಗುಟುರು ಹಾಕಿದರು. ಕೆಲವು ತಾತ್ವಿಕ ಕಾರಣಗಳನ್ನು ನೀಡಿ ಕನ್ನಡ ಸಾಹಿತ್ಯ ಪರಿಶತ್ತಿನ ಪ್ರಸ್ತುತತೆಯನ್ನೇ ಪ್ರಶ್ನಿಸಿದರು. ಲೆಖನ ಬರೆದರು. ನವ್ಯ ಸಾಹಿತಿಗಳಲ್ಲಿ ಕೆಲವರು ಅಡಿಗರ ಬೆಂಬಲಕ್ಕೆ ನಿಂತರು. ಆದರೆ ಅಡಿಗರ ನಿಲುವು ತಾತ್ವಿಕವೆ, ವೈಯ್ಯಕ್ತಿಕವೆ ಎಂಬ ಅನುಮಾನಕ್ಕೆ ಅವಕಾಶವಿದೆ. ಈ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಗೆ ಮೊದಲು ಒಪ್ಪಿಕೊಂಡು, ದೇಜಗೌ ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನಿರಾಕರಿಸಿದರಲ್ಲದೇ ಸಾಹಿತ್ಯ ಪರಿಷತ್ತಿನ ಪ್ರಸ್ತುತತೆಯನ್ನೇ ಪ್ರಶ್ನಿಸಿದ್ದನ್ನು ಗಮನಿಸಿದಾಗ, ಪ್ರಸ್ತುತ-ಅಪ್ರಸ್ತುತ ವಿಶಯಕ್ಕೂ ದೇಜಗೌ ಆಯ್ಕೆಗೂ ಸಂಬಂಧವಿರುವುದು ಸ್ಪಷ್ಟವಾಗುತ್ತದೆ. ಮುಂದೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಅಡಿಗರು ಅಧ್ಯಕ್ಷರಾದಾಗ ಪ್ರಸ್ತುತತೆಯ ಪ್ರಶ್ನೆ ಅಪ್ರಸ್ತುತವಾದದ್ದು ಈಗ ಇತಿಹಾಸ!

ತುಮಕೂರಿನಲ್ಲಿ ನಡೆದ 69ನೇ ಸಾಹಿತ್ಯ ಸಮ್ಮೇಳನಕ್ಕೆ ಡಾ.ಯು.ಆರ್.ಅನಂತಮೂರ್ತಿಯವರು ಅಧ್ಯಕ್ಷರಾಗಿ ಆಯ್ಕೆಯಾದಾಗ ಅಪಸ್ವರದ ಅಬ್ಬರ ಕೇಳಿಸಿತು. ಪತ್ರಿಕಾ ಹೇಳಿಕೆ, ಕರಪತ್ರ, ಇತ್ಯಾದಿ ವಿಧಾನಗಳ ಮೂಲಕ ಅತ್ರುಪ್ತಿ ಅಭಿವ್ಯಕ್ತವಾಯಿತು. ಅನಂತಮೂತರ್ಿಯವರ ಕೆಲವು ಅಭಿಪ್ರಾಯ ಹಾಗು ನಡವಳಿಕೆಗಳ ಬಗ್ಗೆ ಆಕ್ಷೇಪಗಳಿವೆಯಾದರೂ ಸಮ್ಮೇಳನದ ಅಧ್ಯಕ್ಷರಾಗಲು ಅವರೂ ಅರ್ಹರಲ್ಲಿ ಒಬ್ಬರು ಎಂದು ನನ್ನ ಭಾವನೆ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನಂತಮೂರ್ತಿಯವರ ಬಗ್ಗೆ ಆಕ್ಷೇಪವೆತ್ತಿದವರು ಮುಂದಿನ ಸಮ್ಮೇಳನಕ್ಕೆ ಪ್ರಧಾನವಾಗಿ ಪತ್ರಕರ್ತರಾದ ಶ್ರೀ ಪಾಟೀಲ ಪುಟ್ಟಪ್ಪನವರು ಆಯ್ಕೆಯಾದ ಬಗ್ಗೆ ವಿವಾದವುಂಟು ಮಾಡಲಿಲ್ಲವೆನ್ನುವುದು ಅನೇಕ ಸಂಗತಿಗಳನ್ನು ಸ್ವಯಂವೇದ್ಯಗೊಳಿಸುತ್ತದೆ. ಹಿರಿಯರಾದ ಪಾಟೀಲ ಪುಟ್ಟಪ್ಪನವರ ಕನ್ನಡಪರ ಬದ್ಧತೆ ಅಷ್ಟೇ ಹಿರಿಯದಾದುದು. ಆದರೆ ವಿವಾದಗಳು ಏಳುವುದು ಬೀಳುವುದು ಯಾಕೆ ಎಂಬ ಯಕ್ಷಪ್ರಶ್ನೆಗೆ ಒಳ ಉತ್ತರಗಳು ಇರುತ್ತದೆಯೆಂಬುದನ್ನು ಇಂತಹ ಕೆಲವು ಪ್ರಸಂಗಗಳು ಮನವರಿಕೆ ಮಾಡಿಕೊಡುತ್ತವೆ.

2 ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸುವ ಗೋಷ್ಠಿಗಳ ವಿಷಯ ಮತ್ತು ವ್ಯಕ್ತಿಅಗಳ ಆಯ್ಕೆ ಕುರಿತ ಅಸಮಾಧಾನ ಯಾವಾಗಲೂ ಇರುತ್ತದೆ. ಅಂತೆಯೇ ಈ ಅಂಶಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಸಮಾಧಾನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಅದನ್ನು ನಿರೀಕ್ಷಿಸಬಾರದು. ಸ್ಥಳೀಯ ವಿಷಯಗಳಿಲ್ಲ, ಸ್ಥಳೀಯರಿಗೆ ಅವಕಾಶವಿಲ್ಲ ಎಂಬ ಆಕ್ಷೇಪವನ್ನೂ ಒಳಗೊಂಡಂತೆ ಇಂಥಾ ವಿಷಯದ ಗೋಷ್ಠಿ ಇರಬೇಕಿತ್ತು., ಇಂಥಾ ವಿಷಯ ಇರಬಾರದಿತ್ತು ಎಂಬ ಟೀಕೆಗಳು ಕೇಳಿಬರುತ್ತಲೇ ಇರುತ್ತವೆ. ಬಹಳಷ್ಟು ಸಾರಿ ಸಾಹಿತ್ಯೇತರ ಮತ್ತು ಸಾಂಸ್ಕೃತಿಕೇತರ ವಿಷಯ ಮತ್ತು ವ್ಯಕ್ತಿಗಳ ಪಾರವೇ ಒತ್ತಾಯಗಳಿರುತ್ತವೆ. ಒಂದೇ ಸಮ್ಮೇಳನದಲ್ಲಿ ಎಲ್ಲಾ ವಿಷಯಗಳನ್ನೂ ಒಳಗೊಳ್ಳಲಾಗದು ಎಂಬ ವಾಸ್ತವವನ್ನು ಒಪ್ಪಿಕೊಳ್ಳುತ್ತಲೇ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳ ಸ್ವರೂಪ ಕುರಿತು ಅರ್ಥಪೂರ್ಣ ಚರ್ಚೆಯನ್ನು ಆಕ್ಷೇಪಿಸುವುದು ತಪ್ಪಲ್ಲ. ಇಷ್ಟು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಈ ಚರ್ಚೆ ನಡೆದು ಸಾರ್ವಜನಿಕ ಮನವರಿಕೆಗೆ ಮುಂದಾಗಬಹುದಾಗಿದೆ.

ಗೋಷ್ಠಿಗಳ ವಿಷಯದಲ್ಲಿ ವಿವಾದವುಂಟಾಗಿ ಅರ್ಥ-ಅನರ್ಥಗಳಿಗೆ ಕಾರಣವಾದ ಎರಡು ಪ್ರಸಂಗಗಳನ್ನು ಇಲ್ಲಿ ಪ್ರಸ್ತಾಪಿಸಬಹುದಾಗಿದೆ. ಒಂದು 1979ರಲ್ಲಿ ನಡೆದ ಪ್ರಸಂಗ. ಅಡಿಗರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನಕ್ಕೆ ಮುಂಚೆ ಸದರಿ ಸಮ್ಮೇಳನದಲ್ಲಿ ದಲಿತ ಗೋಷ್ಠಿ (ವಿಶೇಷವಾಗಿ ಸಾಹಿತ್ಯಕ್ಕೆ ಸಂಬಂಧಿಸಿ) ಇರಬೇಕೆಂದು ಶ್ರೀ ಚೆನ್ನಣ್ಣ ವಾಲೀಕಾರ ಮತ್ತಿತರ ಸ್ನೇಹಿತರು ಒತ್ತಾಯ ಮಾಡಿದರು. ಆಗ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾ.ಹಂಪನಾ ಅವರು ಸಾಹಿತ್ಯದಲ್ಲಿ ದಲಿತ, ಬಲಿತ, ಕಲಿತ ಎಂಬುದಿಲ್ಲ ಎಂದು ಪ್ರಾಸಬದ್ಧವಾದ ಲಘು ಪ್ರತಿಕ್ರಿಯೆ ನೀಡಿದರು. ಈ ಲಘು ಪ್ರತಿಕ್ರಿಯೆಯು ಗುರುತರ ಚಚರ್ೆಗೆ ಕಾರಣವಾಯಿತು. ದಲಿತ ಮತ್ತು ಪ್ರಗತಿಪರ ಸಾಹಿತಿಗಳು- ವಿಶೇಷವಾಗಿ ಅಂದಿನ ಯುವ ಸಾಹಿತಿಗಳು- ಪರಿಷತ್ತಿನ ಧೋರಣೆಯನ್ನು ಖಂಡಿಸಿದರು. ಈ ಮೂಲಕ ಪ್ರಗತಿಪರ ಚಿಂತನೆಯ ದಲಿತ ಮತ್ತು ದಲಿತೇತರ ಸಾಹಿತಿಗಳು ಒಂದಾಗಿ ಪ್ರತಿರೊಧ ಒಡ್ಡುವ ಪ್ರಕ್ರಿಯೆಗೆ ಒಂದು ಚಾಲನೆ ಸಿಕ್ಕಿತು. (ಈಗ ಹಂಪನಾ ಅವರೇ ದಲಿತರ ಪರ ಕಾಳಜಿ ಹೊಂದುವಷ್ಟು ಆರೋಗ್ಯಕರವಾಗಿ ಬದಲಾಗಿದ್ದಾರೆ)

ಎರಡನೇಯ ಪ್ರಸಂಗ- ಶಿವಮೊಗ್ಗದಲ್ಲಿ ನಡೆದ ಹಿಂದಿನ ವರ್ಷದ ಸಾಹಿತ್ಯ ಸಮ್ಮೆಳನದ ಪ್ರಾರಂಭದಲ್ಲೇ ಮುಖ್ಯಮಂತ್ರಿಗಳನ್ನು ಸರಿಯಾಗಿ ಆಹ್ವಾನಿಸಿಲ್ಲ ಎಂಬ ವಿವಾದ ಎದ್ದಿತ್ತು. ಇದನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪಾಟಿಲರು ವಿವಾದವಾಗದಂತೆ ಪರಿಹರಿಸಿಕೊಳ್ಳಬಹುದಿತ್ತೆಂಬ ಅಭಿಪ್ರಾಯ ಆಗ ಬಲವಾಗಿತ್ತು. ಈ ಸಣ್ಣ ವಿವಾದವನ್ನು ಮೀರಿಸಿ ಗೋಷ್ಠಿಗೆ ಸಂಬಂಧಿಸಿದ ವಿವಾದ ಭುಗಿಲೆದ್ದಿತ್ತು. ಒಂದು ಗೋಷ್ಠಿಗೆ ಗೌರಿ ಲಂಕೇಶ್, ವಿಠಲಹೆಗಡೆ, ಮುಂತಾದವರನ್ನು ಆಹ್ವಾನಿಸಲಾಗಿತ್ತು. ಇವರು ನಕ್ಸಲಿಸಂ ಪರವಾದವರೆಂದು ಆರೋಪಿಸಿದ ಸಂಘಅರಿವಾರದ ಶ್ರೇಷ್ಠರು ವೇದಿಕೆಗೆ ನುಗ್ಗಿ ಗದ್ದಲ ಮಾಡಿದರು. ಪೋಲೀಸರ ಪ್ರವೇಶ ಮತ್ತು ಲಾಠಿ ಚಾಜರ್ಿಗೆ ಕಾರಣವಾದ ಈ ಗೋಷ್ಠಿಯ ಆಯೋಜನೆ ಮತ್ತು ಅತಿಥಿಗಳ ಆಯ್ಕೆಯನ್ನು ಚಂದ್ರಶೇಖರ ಪಾತಿಲರು ಬಲವಾಗಿ ಸಮರ್ಥಿಸಿಕೊಂಡರು. ಅಂದಿನ ಉಪಮುಖ್ಯಮಂತ್ರಿ ಶ್ರೀಯಡಿಯೂರಪ್ಪನವರಾದಿಯಾಗಿ ಅನೆಕ ಮುಖಂಡರು ಸಂಘಪರಿವಾರದ ದಾಂಧಲೆ ಬಗ್ಗೆ ಸಹಾನುಭೂತಿ ಪರವಾಗಿದ್ದರು. ಆದರೂ ಚಂಪಾ ಅವರು ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ಬದ್ಧವಾಗಿ ನೀದಿದ ಸಮರ್ಥನೆ ಸರಿಯಾಗಿತ್ತು. ಗೌರಿ ಲಂಕೇಶ್, ವಿಠಲ್ ಹೆಗಡೆಯವರ ನಿಲುವನ್ನು ಒಪ್ಪದೇ ಇರಬಹುದು. ಆದರೆ ಅವರು ಸಮ್ಮೆಳನದಲ್ಲಿ ಭಾಗವಹಿಸಿ ಮಾತಾಡಲೇಬಾರದು ಎಂಬ ಹಟಮಾರೀ ನಿಲುವು ಅನರ್ಥಕಾರಿಯಾದುದು. ಅರ್ಥಪೂರ್ಣ ವಾಗ್ವಾದಕ್ಕೆ ಪೂರಕವಾಗುವುದು. ಪರಸ್ಪರ ಗೌರವೌತ ಮುಖಾಮುಖಿಗೆ ಮುಂದಾಗುವುದು ತಪ್ಪಲ್ಲ. ಆದರೆ ಇಲ್ಲಿ ಹಾಗಾಗಲಿಲ್ಲ. ಹೀಗೆ ಇಲ್ಲಿ ಉದಾಹರಿಸಿದ ಎರಡು ಪ್ರಸಂಗಗಳು ಅರ್ಥ-ಅನರ್ಥಗಳ ಸಂಕೇತಗಳೂ ಆಗಬಹುದು.
(ಮುಂದುವರೆಯುವುದು)

ಕನ್ನಡ ಸಾಹಿತ್ಯ ಸವೆಸಿದ ಹಾದಿ..




ಕಲಿಗಣನಾಥ ಗುಡದೂರು - ವೃತ್ತಿಯಿಂದ ಮೇಷ್ಟ್ರು, ಪ್ರವೃತ್ತಿಯಿಂದ ಲೇಖಕ. ಉತ್ತರ ಕರ್ನಾಟಕದ ಇತ್ತೀಚಿನ ಸತ್ವಯುತ ಲೇಖಕರಲ್ಲೊಬ್ಬರು. ಅವರೂ ಸಹ ಕನ್ನಡ ಬ್ಲೋಗಲೋಕದ ಸಹಜೀವಿಗಳು. ಗುಡದೂರು ಎಂಬ ಬ್ಲೋಗಲೋಕದ ಊರು ಅವರದು. ಅವರು ಸಾಹಿತ್ಯ ಅಂದು - ಇಂದು ಎಂಬ ವಿಷಯವಾಗಿ ಚರ್ಚಿಸಿದ್ದಾರೆ. ಇಂದಿನ ಲೇಖಕರಾಗಿ ಅಂದಿನ ಸಾಹಿತ್ಯವನ್ನು, ಅವರು ಹೇಗೆ ನೋಡುತ್ತಾರೆ? ಇಂದು ಬರುತ್ತಿರುವ ಸಾಹಿತ್ಯದ ಕುರಿತು ಅವರ ಅಭಿಪ್ರಾಯವೇನು?


ಕನ್ನಡ ಸಾಹಿತ್ಯ ಸವೆಸಿದ ಹಾದಿ...

ಸಾಹಿತ್ಯ ಸೃಷ್ಟಿಯೇ ಅದ್ಭುತ. ಭಾವನಾ ಪ್ರಪಂಚದೊಂದಿಗೆ ಬೆಸೆದುಕೊಂಡಿರುವ ಸಾಹಿತ್ಯ ಮೂಡಿಸುತ್ತಿರುವ ಪರಿಣಾಮ ಅನನ್ಯ. ಭಾಷೆಯ ಪೂರ್ವದಲ್ಲಿ ಸಾಹಿತ್ಯ ರೂಪು ಪಡೆದಿರಬಹುದೆಂಬುದು ಸೋಜಿಗ. ಮೌನ, ಸಂಕೇತ ಮತ್ತು ಸಂಜ್ಞೆಗಳ ಮೂಲಕವೂ ಸಾಹಿತ್ಯ ಅರಳಿದೆ ಎಂಬುದನ್ನೂ ತಳ್ಳಿಹಾಕುವಂತಿಲ್ಲ. ಸಾಹಿತ್ಯದ ಉಳಿವಿಗೆ ಮತ್ತು ಬೆಳವಣಿಗೆಗೆ ಭಾಷೆ ಹೆಚ್ಚುಗಾರಿಕೆ ನೀಡಿದೆ ಎಂಬುದು ಸತ್ಯ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಇಂಡಿಯಾದಲ್ಲಷ್ಟೆ ಅಲ್ಲ; ವಿಶ್ವಮಟ್ಟದಲ್ಲೂ ವಿಶೇಷ ಮನ್ನಣೆ ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಶತಮಾನದಿಂದೀಚೆಗೆ ವಿವಿಧ ಪ್ರಾಕಾರಗಳಲ್ಲಿ ಕನ್ನಡ ಸಾಹಿತ್ಯ ಕ್ರಾಂತಿ ಸ್ವರೂಪ ತಾಳಿದೆ. ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕನ್ನಡ ಸಾಹಿತ್ಯ ದೇಶದಲ್ಲೆ ಮುಂಚೂಣಿ ಸ್ಥಾನದಲ್ಲಿದೆ. ಕುವೆಂಪು, ಬೇಂದ್ರೆ, ಕಾರಂತ, ತೀನಂಶ್ರೀ, ಬಿ.ಎಂ.ಶ್ರೀ, ಗೋವಿಂದ ಪೈ, ಡಿ.ವಿ.ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ, ರಂಗನಾಥ ದಿವಾಕರ, ಸಾಲಿ ರಾಮಚಂದ್ರರಾಯರು, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ವಿ.ಸೀತಾರಾಮಯ್ಯ, ಪು.ತಿ.ನರಸಿಂಹಾಚಾರ್ಯ, ಜಿ.ಪಿ.ರಾಜರತ್ನಂ, ಕೆ.ಶಂಕರಭಟ್ಟ, ವಿ.ಕೃ.ಗೋಕಾಕ, ರಂ.ಶ್ರೀ.ಮುಗುಳಿ, ಈಶ್ವರ ಸಣಕಲ್ಲ, ಕೆ.ಎಸ್.ನರಸಿಂಹಸ್ವಾಮಿ, ಡಿ.ಎಸ್.ಕರ್ಕಿ, ಗೋಪಾಲಕೃಷ್ಣ ಅಡಿಗ, ಚೆನ್ನವೀರ ಕಣವಿ, ಜಿ.ಎಸ್.ಶಿವರುದ್ರಪ್ಪ, ಚದುರಂಗ, ತ್ರಿವೇಣಿ, ಅನಂತಮೂರ್ತಿ, ಗಿರೀಶ್ ಕಾರ್ನಾಡ, ಚಂದ್ರಶೇಖರ ಕಂಬಾರ, ಶಾಂತರಸ, ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಚದುರಂಗ ಸೇರಿದಂತೆ ಹಲವು ಹಿರಿಯ ಲೇಖಕರು ತಮ್ಮ ಬರೆವಣಿಗೆ ಮೂಲಕ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಿಗೆ ಜೀವ ತುಂಬಿದ್ದಾರೆ.


ಕುವೆಂಪು ಕನ್ನಡದ ಮಟ್ಟಿಗೆ ಮಹಾನ್ ಶಕ್ತಿಶಾಲಿ ಲೇಖಕರು. ತಮ್ಮ ವಿಸ್ತೃತ ಬರೆವಣಿಗೆ ಮೂಲಕ ಕನ್ನಡ ಸಾಹಿತ್ಯದ ಕಂಪನ್ನು ವಿಶ್ವಮಟ್ಟಕ್ಕೂ ಹಬ್ಬಿಸಿದರು. ಶ್ರೀರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ಸೇರಿದಂತೆ ಅನೇಕ ಮಹಾನ್ ಕೃತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ವೈಚಾರಿಕತೆಯ ಪ್ರಭೆ ಹೊಮ್ಮಿಸಿದರು. ಅವರ ಕಥೆ, ಕಾದಂಬರಿಗಳಲ್ಲಿ ಚಿತ್ರಿತವಾದ ಮಲೆನಾಡಿನ ಚಿತ್ರಣಗಳು ಕೇವಲ ಅಲ್ಲಿನ ಜನ, ಜೀವನ ಚಿತ್ರಣ, ನಿರೂಪಣೆಯೆನಿಸದೆ ಇಡೀ ಜನಸಮುದಾಯ ಮತ್ತು ಪರಿಸರದ ಕಥೆಗಳಾಗಿ ರೂಪುತಳೆದಿರುವುದು ವಿಶೇಷ. ವೈಚಾರಿಕತೆ ಮತ್ತು ವಿಶ್ವ ಮಾನವ ಪ್ರಜ್ಞೆ ಬೆಳೆಸುವಲ್ಲಿ ಕುವೆಂಪು ತೋರಿದ ಆಸ್ಥೆ ಎಂದಿಗೂ ಮಾದರಿ. ಕೆ.ಎಸ್.ಎನ್. ಚಿತ್ರಿಸಿದ 'ಮೈಸೂರು ಮಲ್ಲಿಗೆ' ಕಾವ್ಯ ಕೇವಲ ದಾಂಪತ್ಯಗೀತವೆನಿಸದೆ ಮಾದರಿ ಕಾವ್ಯದ ಹೆಗ್ಗುರುತಾಗಿದೆ. ಮಲ್ಲಿಗೆ ಕಾವ್ಯದಲ್ಲಿ ನವುರಾದ ಪ್ರಣಯದ ರಸಾನುಭವಗಳಿವೆ. ಸಂಯಮ ಮತ್ತು ಸಹಜವಿನೋದ ಕಾವ್ಯಕ್ಕೆ ಶೃಂಗಾರ ಕಳೆ ತಂದಿವೆ. ಆಡುಮಾತಿನ ಸರಸ, ನಯ, ಲಯ, ಗೇಯತೆ ವ್ಯಕ್ತವಾಗಿವೆ. ಸಣ್ಣ ಸಂಗತಿಗಳಲ್ಲಿ ಸೌಂದರ್ಯದ ಶೋಧವಿದೆ. ಶಿವರಾಮ ಕಾರಂತ ನಡೆದಾಡುವ ವಿಶ್ವಕೋಶದಂತೆ ಭಾವಪ್ರಪಂಚಕ್ಕೆ ವೈಜ್ಞಾನಿಕ, ವೈಚಾರಿಕೆ ಸ್ವರೂಪ ನೀಡಿದರು. ಬೇಂದ್ರೆ ಸರಳ ಸುಂದರ ಕಾವ್ಯಕ್ಕೆ ಆಧ್ಯಾತ್ಮ ಮತ್ತು ಗೇಯತೆಯ ಬಣ್ಣ ತೊಡಿಸಿದರು. ನೂರಾರು ಕಥೆಗಳನ್ನು ಬರೆದ ಮಾಸ್ತಿ ಕನ್ನಡ ಕಥಾ ಪರಂಪರೆಯ ಹಂದರ ವಿಸ್ತರಿಸಿದರು.


ಪ್ರಗತಿಶೀಲ, ನವ್ಯ, ನವ್ಯೋತ್ತರ, ನವೋದಯ, ದಲಿತ, ಬಂಡಾಯ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳು ವಿಶೇಷ ಕೆಚ್ಚು, ಹೆಚ್ಚುಗಾರಿಕೆ ಮೈಗೂಡಿಸಿಕೊಂಡವು. ಸಿದ್ಧಮಾದರಿಯಿಂದ ದೂರ ಸರಿದು ಕನ್ನಡ ಸಾಹಿತ್ಯದ ಲಯ, ಗತಿಯನ್ನೇ ಬದಲಿಸಿದ ಕೀರ್ತಿ ದಲಿತ, ಬಂಡಾಯಕ್ಕೆ ಸಲ್ಲುತ್ತದೆ. ಚೆನ್ನಣ್ಣ ವಾಲೀಕಾರ, ಬರಗೂರ ರಾಮಚಂದ್ರಪ್ಪ, ದೇವನೂರು ಮಹಾದೇವ, ಕೃಷ್ಣ ಆಲನಹಳ್ಳಿ, ಗೀತಾ ನಾಗಭೂಷಣ, ವೀಣಾ ಶಾಂತೇಶ್ವರ, ವೈದೇಹಿ, ಕುಂ.ವೀರಭದ್ರಪ್ಪ, ಚಂದ್ರಶೇಖರ ಪಾಟೀಲ್, ಡಾ.ಸಿದ್ದಲಿಂಗಯ್ಯ, ಸತ್ಯಾನಂದ ಪಾತ್ರೋಟ, ಮೂಡ್ನಾಕೂಡು ಚಿನ್ನಾಸ್ವಾಮಿ, ಜಂಬಣ್ಣ ಅಮರಚಿಂತ, ಕಾ.ತ.ಚಿಕ್ಕಣ್ಣ, ಕೃಷ್ಣಮೂರ್ತಿ ಹನೂರು, ಸವಿತಾ ನಾಗಭೂಷಣ, ರಾಜಶೇಖರ ನೀರಮಾನ್ವಿ, ವೀರಭದ್ರ, ಚಿತ್ರಶೇಖರ ಕಂಠಿ, ಡಾ.ಎಲ್.ಬಸವರಾಜು ಎರಡನೇ ಹಂತದ ಸಾಹಿತ್ಯ ಘಟ್ಟದಲ್ಲಿ ಬಲು ಉತ್ಸಾಹದಿಂದ ಬರೆದು ಕನ್ನಡ ಸಾಹಿತ್ಯಕ್ಕೆ ಹೊಸ ಚೈತನ್ಯ ನೀಡಿದ್ದಾರೆ. 1970-80ರ ಕಾಲಘಟ್ಟವನ್ನು ಚಳವಳಿಗಳ ಕಾಲಘಟ್ಟವೆಂದು ಗುರುತಿಸಲಾಗುತ್ತದೆ. ಚಳವಳಿಗಳ ದೆಸೆಯಿಂದಲೆ ಅಂದು ಹುಟ್ಟಿದ ಸಾಹಿತ್ಯಕ್ಕೆ ಬಹು ಮೌಲ್ಯ ಪ್ರಾಪ್ತವಾಯಿತು. ಸದ್ಯ ಬರೆಯುತ್ತಿರುವ ಲೇಖಕರ ಸುತ್ತ ಯಾವುದೇ ಚಳವಳಿಗಳಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈಗ ದಲಿತ, ಬಂಡಾಯ, ಮಹಿಳಾ ಮತ್ತು ಮುಸ್ಲೀಂ ಸಂವೇದನೆಗಳ ನಂತರ ಹೊಸತನದೊಂದಿಗೆ ಸಾಹಿತ್ಯ ರಚನೆ ನಡೆದಿದೆ. ಚಳವಳಿಗಳ ಸ್ವರೂಪ ಢಾಳಾಗಿ ಗೋಚರಿಸದಿದ್ದರೂ ನಿತ್ಯವೂ ಒಂದಿಲ್ಲೊಂದು ಸಂಕಷ್ಟ, ನೋವಿಗೆ ಎದುರುಗೊಳ್ಳುವ ಬದುಕು ಇಂದಿನದಾಗಿದೆ.


ಚಳವಳಿಗಳ ಕಾಲಘಟ್ಟಕ್ಕಿಂತಲೂ ಇಂದು ಜನತೆಯ ಬದುಕು ರಾಜ್ಯ, ದೇಶಗಳನ್ನೂ ಮೀರಿ ತೀರಾ ಶೋಚನೀಯ ಸ್ಥಿತಿ ತಲುಪಿದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ವಿಶೇಷ ಆರ್ಥಿಕ ವಲಯ ಬದುಕಿನ ಲಯ ಮತ್ತು ಗತಿಯನ್ನೇ ಬದಲಿಸಿ, ಮನುಷ್ಯನ ಭಾವನೆಗಳ ಮೇಲೆಯೇ ಸವಾರಿ ನಡೆಸಿವೆ. ಆಧುನಿಕತೆಯ ಹೆಸರಲ್ಲಿ ಬದುಕು ಬರಡಾಗುತ್ತಿದೆ. ಸದ್ಯದ ತೀರಾ ಸಂಕಷ್ಟದ ಕಾಲಘಟ್ಟವೇ ಬರೆಹಗಾರರಿಗೆ ಹೇಳಿಮಾಡಿಸಿದ ಕಾಲಘಟ್ಟವಾಗಿದೆ. ಇಂದು ಪ್ರತಿ ಲೇಖಕ ಹೆಚ್ಚು ಜವಾಬ್ದಾರಿಯಿಂದ ಜನರ ಸಂಕಷ್ಟಗಳ ಪರಿಹಾರಕ್ಕೆ ಅಕ್ಷರ ರೂಪದ ಹೋರಾಟ ನಡೆಸಬೇಕಿದೆ. ಸಾಹಿತ್ಯ ರಚನೆಗೆ ಚಳವಳಿಗಳು ಹೊಸ ದಿಕ್ಕು ದೆಸೆ ತೋರಿಸುತ್ತವೆಯೆನ್ನುವುದೂ ನಿಜ. ಪ್ರಜಾಪ್ರಭುತ್ವ ವ್ಯವಸ್ಥೆ ಕಳೆದ ಅರವತ್ತು ವರ್ಷಗಳಲ್ಲಿ ಜನಸಾಮಾನ್ಯರ ಪಾಲಿಗೆ ಬರೀ ನಿರಾಶೆಯ ಮೂಟೆಯನ್ನೇ ಹೊತ್ತು ತಂದಿದೆ. ರಾಜಕಾರಣಿಗಳು, ಅಧಿಕಾರಿವರ್ಗ, ಪ್ರಭಾವಿಗಳು, ಬಂಡವಾಳಶಾಹಿಗಳ ಹಿಡಿತದಲ್ಲಿ ದೇಶ ಮತ್ತು ರಾಜ್ಯಗಳ ಆಡಳಿತ ವ್ಯವಸ್ಥೆಗಳು ನರಳುತ್ತಿವೆ. ಎಸ್ಇಝಡ್ ಹೆಸರಲ್ಲಿ ದೇಶದ ಬೆನ್ನೆಲುಬಾದ ರೈತರಿಂದ ಸಹಸ್ರಾರು ಎಕರೆ ಜಮೀನನ್ನು ಸರ್ಕಾರವೇ ಭೂಸ್ವಾಧೀನಮಾಡಿಕೊಂಡು ಪುಡಿಗಾಸಿನ ತೆರಿಗೆ ಆಸೆಗೆ ಎಂ.ಎನ್.ಸಿ.ಗಳಿಗೆ ಮಾರಾಟ ಮಾಡುವ ಕುತಂತ್ರ ನಡೆಸುತ್ತಿದೆ. ರೈತರ, ಕಾರ್ಮಿಕರ, ಕೂಲಿಗಳ, ದುಡಿಯುವ ವರ್ಗ ಒಂದಿಲ್ಲೊಂದು ಕಾರಣಕ್ಕೆ ದಿನದ ಬಹುತೇಕ ಅವಧಿ ತಮ್ಮ ಹಕ್ಕುಗಳ ರಕ್ಷಣೆಗೆ ಮತ್ತು ಸಂವಿಧಾನಬದ್ಧ ಸೌಲಭ್ಯಗಳನ್ನು ಪಡೆಯಲು ಬೀದಿಗಿಳಿದು ಹೋರಾಟ ನಡೆಸಬೇಕಾದ ಸಂದರ್ಭ ಒದಗಿರುವುದು ಇದು ಕೇವಲ ಆರ್ಥಿಕ, ಸಾಮಾಜಿಕ ಸಮಸ್ಯೆಯೆಂದು ಸಾಹಿತ್ಯ ವಲಯ ಕೈಕಟ್ಟಿಕೂಡುವಂತಿಲ್ಲ. ಇದೇ ನೈಜ ಚಳವಳಿಗಳು ದೇಶದೆಲ್ಲೆಡೆ ವಿವಿಧ ಸ್ವರೂಪಗಳಲ್ಲಿ ನಡೆಯುತ್ತಿರುವ ಕಾಲಘಟ್ಟವಿದು. ಹಾಗಾಗಿ ಸದ್ಯ ಬರೆಯುವ ಲೇಖಕರಿಗೆ ವಿಫುಲ ವಿಷಯಗಳು ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ರೂಪು ತಳೆಯಲು ಕಾತರದಿಂದ ಕಾಯುತ್ತಿವೆ.


ಕಥೆ, ಕಾವ್ಯ, ಕಾದಂಬರಿ, ನಾಟಕ, ಹನಿಗವನ, ಪ್ರವಾಸಕಥನ, ಪ್ರಬಂಧ, ಲೇಖನವೆಂಬ ಪ್ರಾಕಾರಗಳಲ್ಲೆ ರಚನೆಯಾಗುತ್ತಿದ್ದ ಸಾಹಿತ್ಯದ ಸ್ವರೂಪ ಆಧುನಿಕತೆಯೊಂದಿಗೆ ಹೊಸ ಮಜಲು ಪಡೆಯುತ್ತಿದೆ. ಆತ್ಮಕಥೆಯ ರೂಪದ ಚಿತ್ರಣಗಳು, ಸಣ್ಣ ಸಣ್ಣ ಸಂಗತಿಗಳು, ತೀರಾ ನಿರ್ಲಕ್ಷ್ಯಕ್ಕೊಳಗಾದ ವ್ಯಕ್ತಿಗಳ ಚಿತ್ರಣಗಳು, ಇತಿಹಾಸದ ಪುನವಿಮರ್ಶೆ, ಮರುನಿರೂಪಣೆ, ಕಥೆಯೂ ಅಲ್ಲದ ಕಾವ್ಯವೂ ಅಲ್ಲದ ತೀರಾ ಗೇಯತೆಯೊಂದಿಗೆ ಬರೆಯುವ ಆಪ್ತ ಬರೆಹಗಳು ಇತ್ತೀಚೆಗೆ ಹೆಚ್ಚು ಇಷ್ಟವಾಗುತ್ತಿವೆ. ಉಳಿದೆಲ್ಲಾ ಸಾಹಿತ್ಯ ಪ್ರಾಕಾರಗಳಿಗಿಂತ ಹೆಚ್ಚು ಚರ್ಚಿತವಾಗುವ ಓದಿಸಲ್ಪಡುವ ಸಾಹಿತ್ಯ ಪ್ರಾಕಾರವಾಗಿ ಕಥಾ ಸಾಹಿತ್ಯ ಹಿರಿಮೆ ಹೊಂದಿದೆ. ಸದ್ಯ ಬರೆಯುತ್ತಿರುವ ನೂರಾರು ಲೇಖಕರ ಪಾಲಿಗೆ, ಹಿರಿಯರು ಭಾವಿಸುವ ಹಾಗೆ, ಕನ್ನಡ ಸಾಹಿತ್ಯದಲ್ಲಿ ಈಗ ಶೂನ್ಯ ಆವರಿಸಿಲ್ಲ. ನಿತ್ಯವೂ ಹೊಸ ಕಲ್ಪನೆಗಳೊಂದಿಗೆ ಇದುವರೆಗೆ ಚಿತ್ರಿತವಾಗದ ಮತ್ತೊಂದು ಹೊಸ ಭಾವನಾ ಪ್ರಪಂಚ ನಮ್ಮ ಮುಂದೆ ಮೈದೆಳೆಯುತ್ತಿದೆ. ಸದ್ಯ ಬರೆಯುತ್ತಿರುವ ಮೊಗಳ್ಳಿ ಗಣೇಶ, ಅಮರೇಶ ನುಗಡೋಣಿ, ಅಬ್ಬಾಸ್ ಮೇಲಿನಮನಿ, ವಿವೇಕ ಶಾನಭಾಗ, ನಟರಾಜ ಹುಳಿಯಾರ, ಬಾಳಾಸಾಹೇಬ್ ಲೋಕಾಪುರ, ಚನ್ನಪ್ಪ ಕಟ್ಟಿ, ಎನ್.ಕೆ.ಹನುಮಂತಯ್ಯ, ಚಂದ್ರು ತುರುವೀಹಾಳ, ಅರುಣ್ ಜೋಳದ ಕೂಡ್ಲಿಗಿ, ಆರೀಫ್ ರಾಜಾ, ಚಿದಾನಂದ ಸಾಲಿ, ಮಂಜುನಾಥ ಲತಾ, ವಿ.ಎಂ.ಮಂಜುನಾಥ, ವಿ.ಆರ್.ಕಾಪೆಂಟರ್, ಛಾಯಾ ಭಗವತಿ, ಜೋಗಿ, ಡಿ.ಎಸ್.ರಾಮಸ್ವಾಮಿ, ಎಂ.ಡಿ.ವಕ್ಕುಂದಾ, ಪ್ರಹ್ಲಾದ ಅಗಸನಕಟ್ಟೆ, ರಾಘವೇಂದ್ರ ಪಾಟೀಲ್, ಸಬಿಹಾ ಭೂಮಿಗೌಡ, ದೀಪಾ ಹಿರೇಗುತ್ತಿ, ವಿನಯಾ ವಕ್ಕುಂದಾ, ಮಲ್ಲಿಕಾಜರ್ುನಗೌಡ ತೂಲಹಳ್ಳಿ, ಮಹಾಂತೇಶ ನವಲಕಲ್, ಆನಂದ ಋಗ್ವೇದಿ, ಪೀರ್ಭಾಷಾ, ಟಿ.ಎಸ್.ಗೊರವರ್, ವೀರಣ್ಣ ಮಡಿವಾಳರ, ಚ.ಹ.ರಘುನಾಥ, ಸಂದೀಪ್ ನಾಯಕ, ವಸುಧೇಂದ್ರ, ದೇವು ಪತ್ತಾರ, ದಸ್ತಗೀರಸಾಬ್ ದಿನ್ನಿ, ಶಿವರಾಜ ಬೆಟ್ಟದೂರು, ವಿ.ಹರಿನಾಥ ಬಾಬು, ಜಹಾಂಗೀರ, ಕನ್ನಾಡಿಗ ನಾರಾಯಣ, ಕೆ.ಪಿ.ಸುರೇಶ, ಲಕ್ಷ್ಮಣ ಬಾದಾಮಿ, ಎಲ್.ಸಿ.ಸುಮಿತ್ರಾ, ನಾಗಣ್ಣ ಕಿಲಾರಿ, ನಾಗತಿಹಳ್ಳಿ ರಮೇಶ, ಸಜರ್ಾಶಂಕರ ಹರಳಿಮಠ, ಸಿದ್ದರಾಮ ಹೊನಕಲ್, ಸಿದ್ದು ಯಾಪಲಪವರ್ಿ ನಾಗರಾಜ ವಸ್ತಾರೆ, ನಾಗಮಂಗಲ ಕೃಷ್ಣಮೂತರ್ಿ, ರೂಪಾ ಹಾಸನ್, ಸುನಂದಾ ಪ್ರಕಾಶ ಕಡಮೆ, ವಿಜಯಕಾಂತ ಪಾಟೀಲ್, ಕಲ್ಲೇಶ ಕುಂಬಾರ, ವಿಶ್ವನಾಥ ಪಾಟೀಲ್, ವೀರೇಶ ಸೌದ್ರಿ ಹೀಗೇ ಲಿಸ್ಟ್ ಬೆಳೆಯುತ್ತಲೇ ಹೋಗುತ್ತದೆ. ಇವರು ಸೇರಿದಂತೆ ಇನ್ನೂ ಹಲವರು 21ನೇ ಶತಮಾನದ ಆರಂಭದಿಂದ ಇನ್ನಿಲ್ಲದ ಕಸುವಿನಿಂದ ಬರೆಯುತ್ತಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ಆಶಾದಾಯಕವೆನಿಸಿದೆ.


ಐತಿಹಾಸಿಕ ಹಾಗೂ ಸಾಹಿತ್ಯಿಕವಾಗಿಯೂ ಬಲು ಮುಖ್ಯವಾದ ಗದಗ ನಗರದಲ್ಲಿ ನಡೆಯಲಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ದಲಿತಪರ ಲೇಖಕಿ ಗೀತಾ ನಾಗಭೂಷಣ ಆಯ್ಕೆಯಾಗಿರುವುದು ಇಡೀ ನಾಡಿನ ಸಮಸ್ತ ದಲಿತ ಸಮುದಾಯಕ್ಕೆ ಸಂದ ಗೌರವವಾಗಿದೆ. ಹಿಂದಿನ ಸಮ್ಮೇಳನಗಳಲ್ಲಿ ಘೋಷಣೆಯಾದ ಅನೇಕ ಹಕ್ಕೊತ್ತಾಯಗಳು ಇಂದಿಗೂ ಜಾರಿಯಾಗದೇ ಇರುವಾಗ ಮತ್ತೊಂದು ಸಾಹಿತ್ಯ ಸಮ್ಮೇಳನ ಫೆ.28ರಂದು ಎದುರಾಗಲಿದೆ. ಸಾಹಿತ್ಯ ಸಮ್ಮೇಳನವೆಂಬುದು ರಾಷ್ಟ್ರೀಯ ಹಬ್ಬಗಳ ಆಚರಣೆಯ ಕಾಟಾಚಾರವನ್ನೇ ಪಡೆದುಕೊಂಡಿರುವುದು ದುರ್ದೈವದ ಸಂಗತಿ. ಸಾಹಿತ್ಯ ಸಮ್ಮೇಳನ ಸಮಸ್ತ ಕನ್ನಡ ಜನರ ನಾಡಹಬ್ಬದ ಸ್ವರೂಪ ಪಡೆಯಬೇಕಿದೆ. ಪ್ರತಿ ಕನ್ನಡಗಿನ ಹೆಮ್ಮೆಯ ಆಚರಣೆ ಎನಿಸಬೇಕಿದೆ. ಕನ್ನಡ ನೆಲದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಮತ್ತು ವಿರೋಧ ಪಕ್ಷದ ಸ್ಥಾನದಲ್ಲಿರುವ ಪಕ್ಷಗಳು ಕನ್ನಡಿಗರ ಹಕ್ಕೊತ್ತಾಯಗಳಿಗೆ ಕಾಲಮಿತಿ ಹೇರಿಕೊಂಡು ತಪ್ಪದೇ ಮನ್ನಣೆ ನೀಡಿ, ಜಾರಿಗೊಳಿಸುವ ಮೂಲಕ ಕನ್ನಡತನ ಮೆರೆಯಬೇಕಿದೆ. ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಮಹಿಳೆಯೊಬ್ಬರು ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸ್ಥಾನದಲ್ಲಿ ಕಾಣಿಸಿಕೊಂಡಿರುವುದೇ ಹೆಗ್ಗಳಿಕೆಯ ಸಂಕೇತವಾಗದೆ, ಮಹಿಳಾಪರ ಸಾಹಿತ್ಯಕ್ಕೆ ಉತ್ತೇಜನ ಸಿಗಬೇಕಿದೆ. ಕನ್ನಡ ಭಾಷೆಗೆ ಕರ್ನಾಟಕದಲ್ಲಿ ಅಗ್ರಸ್ಥಾನ ದೊರೆಯಬೇಕಿದೆ. ಇದನ್ನು ನೀಡಬೇಕೆಂಬುದು ಕೇವಲ ಒತ್ತಾಸೆಯಲ್ಲ; ಕನ್ನಡ ಸರ್ಕಾರದ ಆದ್ಯ ಕರ್ತವ್ಯವಾಗಬೇಕಿದೆ. ಎಲ್ಲಾ ವಲಯ, ರಂಗಗಳಲ್ಲೂ ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕು ಅವರ ಬದುಕು ಬಂಗಾರವಾಗಬೇಕಿದೆ. ಕನ್ನಡದಲ್ಲಿ ಮಾತನಾಡುವುದು, ಕರ್ನಾಟಕದಲ್ಲಿ ಬದುಕುವುದು, ಕನ್ನಡ ಭಾಷೆಯಲ್ಲಿ ಅಭ್ಯಾಸ ಮಾಡುವುದು, ಕರ್ನಾಟಕದಲ್ಲೇ ಉದ್ಯೋಗ ಪಡೆಯುವುದು ಕೇವಲ ಅಭಿಮಾನವೆನಿಸದೆ, ಪ್ರತಿ ಕನ್ನಡಿಗ ಹೊಂದಲೇಬೇಕಾದ ಹಕ್ಕಾಗಿದೆ. ಕನ್ನಡ ನಮ್ಮ ಹಕ್ಕಾಗಬೇಕಿದೆ, ಬದುಕಾಗಬೇಕಿದೆ, ಬವಣೆ ನೀಗಿಸುವ ಅಸ್ತ್ರವಾಗಬೇಕಿದೆ. ಈ ನಿಟ್ಟಿನಲ್ಲಿ ಸಾಹಿತ್ಯದ ವಿವಿಧ ಪ್ರಾಕಾರಗಳು ರೂಪು ತಳೆದು ಕನ್ನಡಕ್ಕೆ ಮತ್ತಷ್ಟು ಕಸುವು, ಕಿಮ್ಮತ್ತು ನೀಡಿ, ಎಂದಿನ ವಿಶ್ವಮನ್ನಣೆ ಕಾಪಾಡಿಕೊಳ್ಳಬೇಕಿದೆ.

ಬನ್ನಿ ಕನ್ನಡಿಗರೆಲ್ಲರೂ... ಕನ್ನಡದ ತೇರನೆಳೆಯಲು ವೀರನಾರಾಯಣನ ಗದಗಿಗೆ... ನಮ್ಮದೇ ನಾಡಹಬ್ಬದಿ ನೆಮ್ಮದಿಯಿಂದ ಸೇರೋಣ... ಕನ್ನಡತನ ಮೆರೆಯೋಣ... ಕನ್ನಡದ ಬದುಕಿಗೆ ಹೋರಾಡೋಣ.... ಕನ್ನಡಕ್ಕೇ ಕೈ ಎತ್ತೋಣ... ಕನ್ನಡದಿಂದಲೇ ತಲೆ ಎತ್ತಿ ನಡೆಯೋಣ....


ಪ್ರಾದೇಶಿಕ ಆಡುನುಡಿ ಬಗ್ಗೆ ಏಕೆ ಈ ಅಲಕ್ಷ ಮನೋಭಾವ?

ಶರತ್ ಕಲ್ಕೋಡ್ - ಸದ್ಯ ಓ ಮನಸೇ ಪಾಕ್ಷಿಕದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಪತ್ರಿಕೋದ್ಯಮದ ಹಿರಿಯರು. ಕನ್ನಡದ ಆಡುನುಡಿಗಳನ್ನು ಮಾಧ್ಯಮಗಳಲ್ಲಿ ಅಪಹಾಸ್ಯ ಮಾಡುತ್ತಿರುವ ಪರಿಯನ್ನು ಕಂಡು ನೊಂದವರು. ಅದೇ ಅವರ ಲೇಖನಿಯಿಂದ ಹೊರ ಬಂದಿದೆ.

ಪ್ರಾದೇಶಿಕ ಆಡುನುಡಿ ಬಗ್ಗೆ ಏಕೆ ಈ ಅಲಕ್ಷ ಮನೋಭಾವ?

ಎಲ್ಲಾ ಭಾಷೆಗಳಲ್ಲೂ ಇರುವಂತೆ ಕನ್ನಡದಲ್ಲೂ ಪ್ರಾದೇಶಿಕ ಆಡು ನುಡಿಗಳಿವೆ. ಉದಾಹರಣೆಗೆ: ಧಾರವಾಡದ ಕನ್ನಡ, ಮಂಗಳೂರು ಕನ್ನಡ, ಗುಲ್ಬರ್ಗ ಕನ್ನಡ, ಇತ್ಯಾದಿ. ಆಯಾಯ ಪ್ರಾದೇಶಿಕ ಜೀವನ ಶೈಲಿ, ಉಡುಗೆ ತೊಡುಗೆಗಳಂತೆ ಭಾಷೆಯಲ್ಲೂ ವೈವಿಧ್ಯವಿರುವುದು ಸಹಜ. ಆದರೆ ಈ ಪ್ರಾದೇಶಿಕ ವೈವಿಧ್ಯವೇ ನಮ್ಮಲ್ಲಿ ತಮಾಷೆಯ ವಸ್ತುವಾಗುವುದು ಮಾತ್ರ ವಿಪರ್ಯಾಸದ ಸಂಗತಿ.

ಮಂಗಳೂರು (ದಕ್ಷಿಣ ಕನ್ನಡ) ಕನ್ನಡ ಬಹಳ ಪರಿಶುದ್ಧವೆಂದು ಅವರ ಭಾವನೆ. ದಕ್ಷಿಣ ಕನ್ನಡಿಗರ ಹೆಚ್ಚಿನವರ ಮಾತ್ರ ಭಾಷೆ ತುಳು, ಕೊಂಕಣಿ ಹಾಗೂ ಇನ್ನಿತರ ಭಾಷೆಗಳಾಗಿರುವುದು. ಅವರ ಕನ್ನಡದ ಸ್ಪಷ್ಟ ಬಳಕೆ ಕಾರಣವಾಗಿರಬಹುದು. ಆದರೆ ದಕ್ಷಿಣ ಕನ್ನಡದಲ್ಲೇ ಕುಂದಾಪುರ ಕನ್ನಡ, ಹವ್ಯಕ ಕನ್ನಡ ಪರಿಭೇದಗಳುಂಟು. ಕುಂದಾಪುರ ಕನ್ನಡದಲ್ಲಿ 'ಹೋಯ್ಕು', 'ಬರ್ಕು' ಪದಗಳ ಪ್ರಯೋಗ ಹೊಸಬರಿಗೆ ಬೇರೆ ಭಾಷೆಯಾಗಿ ಕಂಡರೆ ಆಶ್ಚರ್ಯದ ಮಾತಲ್ಲ. ಹಾಗೇ ಧಾರವಾಡದಲ್ಲಿ ಬಳಕೆಯಾಗುವ ಕನ್ನಡ ಭಾಷೆಯ ಉಚ್ಛಾರವೆ ಬೇರೆ. ಅಷ್ಟೇ ಅಲ್ಲ, ಅಲ್ಲಿ ಬಳಸುವ ಪದಗಳು ಮೈಸೂರಿನಲ್ಲಿ ಬಳಕೆಯಾಗುವ ಪದಗಳಿಗಿಂತ ಭಿನ್ನವಾದ ಅರ್ಥವನ್ನು ಕೊಡುತ್ತದೆ. ಕೆಲವೊಮ್ಮೆ ಅಪಾರ್ಥವನ್ನೂ ಎಡೆಮಾಡಿಕೊಡುತ್ತದೆ. ಆದರೆ ನಾನು ಇಲ್ಲಿ ವಿಶ್ಲೇಷಿಸಲು ಹೊರಟಿರುವುದು ಪ್ರಾದೇಶಿಕ ಭಾಷೆಯ ಶಬ್ಧ ಬಳಕೆ, ಶೈಲಿಗಳ ಕುರಿತು ಅಲ್ಲ. ಈ ಪ್ರಾದೇಶಿಕ ಭಾಷಾ ವೈವಿಧ್ಯವನ್ನು ನಮ್ಮ ದೃಶ್ಯ ಮಾಧ್ಯಮದವರು, ಹೇಗೆ ದುರುಪಯೋಗ ಪಡಿಸಿಕೊಂಡು ತಮಾಷೆಯ ವಸ್ತುವನ್ನಾಗಿ ಮಾಡಿ, ಆ ಮೂಲಕ ಆ ಪ್ರದೇಶದ ಜನರನ್ನು ಗೇಲಿ ವಸ್ತುವನ್ನಾಗಿ ಮಾಡಿದ್ದಾರೆ. ಹೀಗೆ ಮಾಡುವುದು ಸರಿಯೇ ಎನ್ನುವುದರ ಬಗ್ಗೆ.

ಸಿನಿಮಾ, ನಾಟಕ, ಟಿವಿ ಸಿರೀಯಲ್ಗಳಲ್ಲಿ, ಅಷ್ಟೇ ಏಕೆ ಕೆಲವೊಮ್ಮೆ ಬರಹಗಳಲ್ಲೂ ಕೂಡ, ಪ್ರಾದೇಶಿಕ ಭಾಷೆಯನ್ನು, ಅದರ ಸೊಗಡನ್ನು ತಮಾಷೆಯಾಗಿ ಬಳಸುವ, ಪ್ರಯೋಗಿಸುವ ವೈಖರಿಯನ್ನು ನೀವು ಈಗಾಗಲೇ ಗಮನಿಸಿರುತ್ತೀರಿ. ಇದಕ್ಕೆ ಹಲವು ದಶಕಗಳ ಇತಿಹಾಸವೇ ಇದೆ. ಅಡುಗೆ ಭಟ್ಟನ ಪಾತ್ರಕ್ಕೆ ಮಂಗಳೂರು ಕನ್ನಡ ಬಳಸುವುದು, ಪೊಲೀಸ್ನ ಪಾತ್ರಕ್ಕೆ ಉತ್ತರ ಕರ್ನಾಟಕ ಭಾಷೆ ಬಳಸುವುದು ಬಹಳ ಮಾಮೂಲಿಯಾದ ಹವ್ಯಾಸ. ಈ ರೀತಿಯ ಪ್ರಯೋಗಗಳ ಫಲವಾಗಿ ಆ ಪ್ರದೇಶದ ಜನರು ಹಾಗೂ ಅವರಾಡುವ ಭಾಷೆ, ಅವಹೇಳನಕ್ಕೆ, ತಮಾಷೆಗೆ ಗುರಿಯಾಗುತ್ತಾರೆ ಎಂಬ ಕಲ್ಪನೆಯ ಇಲ್ಲದೆ ಇದನ್ನು ಮಾಧ್ಯಮದವರು, ತಮ್ಮ ಅವಶ್ಯಕತೆಗೆ, ಅನುಕೂಲಕ್ಕೆ ತಕ್ಕಂತೆ ಬಳಸಿ ಕೊಳ್ಳುತ್ತಾರೆ. ಕೆಲವೊಮ್ಮೆ ಅದನ್ನು ಸಹಜವಾಗಿ ಕೂಡ ಬಳಸುವುದಿಲ್ಲ. ಅಶ್ಲೀಲವಾಗಿ, ಶೇಷಾರ್ಥ ಬರುವಂತೆ ಬಳಸುತ್ತಾರೆ. ಹೀಗೆ ಮಾಡುವುದು ಸರಿಯೆ?

ಇದು ಸರಿಯಾದ ಕ್ರಮವಲ್ಲ ಎಂಬುದು ಪ್ರಜ್ಞಾವಂತರೆಲ್ಲರ ಅನಿಸಿಕೆ. ಹೀಗೆ ಭಾಷೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಹಾಗೆ ಮಾಡುವುದರಿಂದ ಆಯಾಯ ಪ್ರದೇಶದ ಜನರನ್ನು ಅವಹೇಳನ ಮಾಡಿದಂತಾಗುತ್ತದೆ. ಭಾಷೆಗೂ ಹಾನಿ ಮಾಡಿದಂತೆ ಆಗುತ್ತದೆ ಎಂಬ ಎಚ್ಚರದ ಮಾತನ್ನು, ತಿಳುವಳಿಕೆ ನುಡಿಯನ್ನು ಮಾಧ್ಯಮದವರಿಗೆ ಯಾರೂ ಹೇಳಿದಂತಿಲ್ಲ. ಹೇಳಿದರೂ ಆ ಮಾತುಗಳನ್ನು ಅಲಕ್ಷಿಸುವ ಮಾಧ್ಯಮ ಮಂದಿಯೇ ಹೆಚ್ಚು.

ದೃಶ್ಯ ಮಾಧ್ಯಮದಲ್ಲಿ ಜಾತಿ ಬಗ್ಗೆ ನಿಂದನೆಯಾದರೆ, ಆಯಾಯ ಜಾತಿಯ ಜನ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಸೆನ್ಸಾರ್ ಮಂಡಲಿ ಎಚ್ಚರ ವಹಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಸರ್ಕಾರವೂ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಆದರೆ ಭಾಷೆ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಯಾಕೆಂದರೆ ಇಲ್ಲಿ ಜಾತಿ- ವರ್ಗದ ಪ್ರಶ್ನೆ ಏಳುವುದಿಲ್ಲ. ಭಾಷೆ ಆ ಪ್ರದೇಶದ ಸಮುದಾಯಕ್ಕೆ ಸೇರಿದ್ದು. ಹಾಗಾಗಿ ಪ್ರತಿಭಟಿಸುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಹೀಗೆ ಪ್ರಾದೇಶಿಕ ಆಡುನುಡಿಗಳನ್ನು ದೃಶ್ಯ ಮಾಧ್ಯಮಗಳು ಕಳೆದ ಹಲವು ದಶಕಗಳಿಂದಲೂ ದುರುಪಯೋಗ ಪಡಿಸಿಕೊಳ್ಳುತ್ತಲೇ ಬಂದಿದ್ದಾವೆ ಎಂಬುದು ನನ್ನ ವಾದವಲ್ಲ. ಅದಕ್ಕಿಂತ ಭಿನ್ನವಾಗಿ, ಪ್ರಾದೇಶಿಕ ಭಾಷೆಯ ಸೊಗಡನ್ನು, ಅದರ ಆಳ-ಅಗಲದ ವಿಸ್ತಾರವನ್ನು ಬಳಸಿಕೊಳ್ಳುವ ಮೂಲಕ, ಅದರ ಪ್ರತಿಷ್ಠೆ- ಶೋಭೆ ಹೆಚ್ಚಿಸಿದವರೂ ಇದ್ದಾರೆ ಎಂಬುದು ನಮ್ಮ ನಾಡ- ನುಡಿಯ ಪುಣ್ಯ. ಉದಾಹರಣೆಗೆ ಗಿರೀಶ ಕಾಸರವಳ್ಳಿಯವರ ಸಿನಿಮಾ- 'ತಾಯಿ ಸಾಹೇಬ', 'ದ್ವೀಪ', 'ಗುಲಾಬಿ ಟಾಕೀಸ್'- ಹೀಗೆ ಅವರ ಯಾವುದೇ ಸಿನಿಮಾ ನೋಡಿ, ಕಥೆ, ಸಂಭಾಷಣೆ, ವಸ್ತು, ತಂತ್ರಗಳ ಬಗ್ಗೆ ಎಚ್ಚರವಹಿಸುವಂತೆ, ಭಾಷೆಯ ಬಗ್ಗೆಯೂ ಕಾಸರವಳ್ಳಿ ಅವರು ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತಾರೆಂಬುದು ಗಮನಾರ್ಹ. ಹೆಮ್ಮೆಯ-ಸಂತೋಷದ ಅಂಶ ಕೂಡ. 'ಗುಲಾಬಿ ಟಾಕೀಸ್' ನಲ್ಲಂತೂ ಕುಂದಾಪುರ ಕನ್ನಡದ ಗಟ್ಟಿತನ, ಹಾಸ್ಯ- ವ್ಯಂಗ್ಯ, ದುಃಖ ದುಮ್ಮಾನ ಸಂತೋಷಗಳನ್ನು ಅಭಿವ್ಯಕ್ತಿಸಲು ಹೇಗೆ ಸಶಕ್ತವಾಗಿದೆ ಎಂಬುದನ್ನು ಚಿತ್ರದ ಉದ್ದಕ್ಕೂ ಗಮನಿಸಿ. ಪಾತ್ರ ಹಾಗೂ ದೃಶ್ಯಗಳ ಜೊತೆಜೊತೆಗೆ ಕುಂದಾಪುರದ ಭಾಷೆಯೂ ತನ್ನತನದ ಛಾಪು ಮೂಡಿಸುತ್ತದೆ. 'ಗುಲಾಬಿ ಟಾಕೀಸ್' ಕೇವಲ ದೃಶ್ಯ ಮಾಧ್ಯಮವಾಗಿ ಮಾತ್ರವಲ್ಲ; ಭಾಷಾ ಮಾಧ್ಯಮವಾಗಿ ಎಷ್ಟು ಅರ್ಥಪೂರ್ಣವಾಗಿ ಹೊರಹೊಮ್ಮಿದೆ ಎಂಬುದನ್ನು ಚಿತ್ರದುದ್ದಕ್ಕೂ ನೀವು ಸಂಭಾಷಣೆಯನ್ನು ಎಚ್ಚರದಿಂದಲೇ ಗಮನಿಸಬೇಕಾಗುತ್ತದೆ. ಅಂದರೆ ಪ್ರಾದೇಶಿಕವಾದ 'ಕುಂದಾಪುರದ ಕನ್ನಡ' ಅಭಿವ್ಯಕ್ತಿಯ ಭಾಷೆಯಾಗಿ ಪ್ರೇಕ್ಷಕನಿಗೆ ಎಲ್ಲೂ ಅಡ್ಡಿ-ಆತಂಕಗಳನ್ನು ಒಡ್ಡುವುದೇ ಇಲ್ಲ. ಬದಲಾಗಿ 'ಕುಂದಾಪುರದ ಕನ್ನಡ'ದ ಬಗ್ಗೆ ಪ್ರೇಕ್ಷಕರಿಗೆ ಹೊಸ ಅರಿವು ಮೂಡಿಸುವಲ್ಲಿ ಹೊಸ ಅನುಭವ ಕಟ್ಟಿಕೊಡುವಲ್ಲಿ ಸಫಲವಾಗುತ್ತದೆ. ದೃಶ್ಯ ಮಾಧ್ಯವನ್ನು ಸೃಷ್ಟಿಸಲು ಹೊರಟ ಮಂದಿಯ ಜವಾಬ್ದಾರಿ ಇರುವುದು ಇಲ್ಲೇ.

ಯಾವುದೇ ಘೋಷಣೆಗಳಿಲ್ಲದೆ ಪ್ರಾದೇಶಿಕ ಆಡುಭಾಷೆಗೂ ಹೊಸ ಆಯಾಮ ನೀಡುವಲ್ಲಿ ಸದ್ದು-ಗದ್ದಲ ಮಾಡದೇ ಗೆದ್ದಿರುತ್ತಾನೆ. ಆ ಮೂಲಕ ಆ ಪ್ರದೇಶಗಳ ಭಾಷೆಗೂ ಹೊಸತನ, ಮೌಲ್ಯ, ಘನತೆ, ಗಾಂಭೀರ್ಯ, ಒದಗಿಸಿಕೊಡುವ ಆಯುಧ. ಆ ಆಡು ನುಡಿಯ ಜನರ ಪ್ರೀತಿ-ವಿಶ್ವಾಸಗಳಿಸುವ ಮೂಲಕ ಅವರ ಹೃದಯದಲ್ಲಿ ವಿಶಿಷ್ಟವಾದ-ಸ್ಥಾನಮಾನ ಪಡೆಯುತ್ತಾನೆ. ಈ ರೀತಿ ಮಾಡುವುದು ಮಾಧ್ಯಮದ ಮಂದಿಗೆ ಒಂದು ರೀತಿಯ ಅಗ್ಗಳಿಕೆ ಅಲ್ಲವೇ? ಪ್ರಾದೇಶಿಕ ಭಾಷೆಗೆ ಹೊಸ ಮೆರಗೂ ನೀಡಿದಂತಾಗುತ್ತದೆ. ಇದು ಖಂಡಿತಾ ಸಾಮಾನ್ಯವಾದ ಸಾಧನೆಯೇನಲ್ಲ. ಕನ್ನಡದ ಪ್ರಾದೇಶಿಕತನವನ್ನೂ ಎಚ್ಚರದಿಂದ ಬಳಸುವಂತೆ ಪ್ರಜ್ಞಾವಂತ ಮಾಧ್ಯಮದ ಮಂದಿ ಕಾರ್ಯೋನ್ಮುಖರಾಗಲು ಇದು ಸಕಾಲಿಕ ಅಲ್ಲವೇ!?

ಹೊಸ ಬಗೆಯ ಕ್ವಿಜ್ ಶುರು! - ಇದಾರ ಕೆತ್ತನೆ?

ಇವತ್ತಿನಿಂದ ಅವಧಿ-ಆಲೆಮನೆ-ನುದಿನಮನದಲ್ಲಿ ಹೊಸ ಬಗೆಯ ಕ್ವಿಜ್ ಶುರು!

ಇಂದಿನಿಂದ ದಿನಕ್ಕೊಂದು ಪ್ರಶ್ನೆ! ತುಂಬಾನೇ ಸುಲಭ ನಾವು ಒಬ್ಬರ ಕೈ ಬರವಣಿಗೆ ಅಥವಾ ಸಹಿಯನ್ನು ಹಾಕುತ್ತೇವೆ, ಅದು ಬರೆದ ಕೈಗಳಾರವು ಎಂದು ನೀವು ಊಹಿಸಬೇಕಷ್ಟೆ!
ಸರಿ ಹಾಗಾದರೆ ತಯಾರಾ? ಇಗೋ ಬರುತ್ತಿದೆ ನೋಡಿ ಮೊದಲ ಪ್ರಶ್ನೆ -

ಇದಾರದೆಂದು ಗುರುತಿಸಲು ನಿಮಗೆ ನಾಳೆ ಬೆಳ್ಳಿಗ್ಗೆಯವರೆಗೂ ಸಮಯಾವಕಾಶ! ತಲೆ ಕೆರದುಕೊಳ್ಳಬೇಡಿಸ್ವಾಮಿ ಸ್ವಲ್ಪ ಗಮನವಿಟ್ಟು ನೋಡಿ ಥಟ್ ಅಂತ ಹೇಳಿಬಿಡಬಹುದು...

ಕನ್ನಡ ಸಾಹಿತ್ಯ ಮತ್ತು ರಂಗಭೂಮಿ



ಕನ್ನಡದ ರಂಗಭೂಮಿಗೆ ಅತ್ಯಂತ ಶ್ರೀಮಂತ ಇತಿಹಾಸವಿದೆ. ಇಂದು ಕೂಡ ಬೇರೆ ಇತರತ್ರ ಭಾಷೆಗಳಿಗಿಂತ ಕನ್ನಡದ ರಂಗಭೂಮಿ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿದೆ.
ಈ ಕ್ರಿಯಾಶೀಲ ಶ್ರೀಮಂತಿಕೆಗೂ ಕನ್ನಡ ಸಾಹಿತ್ಯಕ್ಕೂ ನಡುವಿನ ಸೂಕ್ಷ್ಮ ಸಂಬಂಧದ ಕುರಿತು ಸದ್ಯ ಮೈಸೂರಿನ ರಂಗಾಯಣದ ನಿರ್ದೇಶಕರಾಗಿರುವ ಲಿಂಗದೇವರು ಹಳೆಮನೆ ಚರ್ಚಿಸಿದ್ದಾರೆ.


ಕನ್ನಡ ಸಾಹಿತ್ಯ ಮತ್ತು ರಂಗಭೂಮಿ

ಸಾಹಿತ್ಯದ ಪ್ರಕಾರಗಳಲ್ಲಿ ನಾಟಕಕ್ಕೆ ವಿಶಿಷ್ಟವಾದ ಸ್ಥಾನ ಇದೆ. ಹಿಂದೆ ನಾಟಕವನ್ನು ಕಾವ್ಯ ಎಂದೇ ಪರಿಗಣಿಸಲಾಗುತ್ತಿತ್ತು. 'ಕಾವ್ಯೇಷು ನಾಟಕಂ ರಮ್ಯಂ' ಎಂಬುದು ಪ್ರಸಿದ್ಧವಾದ ಹೇಳಿಕೆ. ಹಾಗಾಗಿ ಕನ್ನಡ ಸಾಹಿತ್ಯದಲ್ಲೂ ಬಹಳ ದೀರ್ಘಕಾಲ ನಾಟಕವನ್ನು ಓದುವ ಕೃತಿಯಾಗಿಯೇ ಪರಿಭಾವಿತವಾಗಿತ್ತು. ಕನ್ನಡದ ಮೊದಲ ನಾಟಕ ಗೀತಗೋವಿಂದವನ್ನು ತಿರುಮಲಾರ್ಯ ಬರೆದ ಸಂದರ್ಭದಲ್ಲಿ ಅದನ್ನು ಪ್ರದರ್ಶಿಸಿದರು ಎಂಬುದಕ್ಕೆ ದಾಖಲೆಗಳಂತೂ ಸಿಕ್ಕಿಲ್ಲ.

ಆಧುನಿಕ ಕಾಲದಲ್ಲಿ ಪ್ರಾರಂಭದ ಹಂತದಲ್ಲಿ ಓದುವ ನಾಟಕಗಳನ್ನು ಬರೆದವರೇ ಹೆಚ್ಚು. ಡಿ.ವಿ. ಗುಂಡಪ್ಪರವರಂತೂ ತಮ್ಮ ನಾಟಕಗಳನ್ನು ಓದುವ ನಾಟಕಗಳು ಎಂದೇ ಹೇಳಿಕೊಂಡರು. ಕುವೆಂಪು ಅವರು ತಮ್ಮ ನಾಟಕಗಳು ರಂಗಮಂದಿರದಲ್ಲಿ ಪ್ರದರ್ಶಿಸಲು ಸಾಧ್ಯ ಇಲ್ಲ. ಅವುಗಳನ್ನು ಮನೋ ರಂಗಮಂದಿರದಲ್ಲಿ ಕಲ್ಪಿಸಿಕೊಳ್ಳಬೇಕು ಎಂದರು. ಸಂಸ್ಕೃತದಿಂದ, ಇಂಗ್ಲಿಷಿನಿಂದ, ಗ್ರೀಕ್ನಿಂದ ನಾಟಕಗಳನ್ನು ಅನುವಾದಿಸಿದ, ರೂಪಾಂತರಿಸಿದ ಬಸವಪ್ಪಶಾಸ್ತ್ರಿಗಳು, ಶ್ರೀಕಂಠೇಶಗೌಡರು ಮತ್ತು ಕ.ವೆ. ರಾಘವಾಚಾರ್ಯರು ನಾಟಕವನ್ನು ಪ್ರದರ್ಶಿಸುವುದಕ್ಕೆ ಅನುಕೂಲವಾಗುವಂತೆ ಅನುವಾದಿಸಲಿಲ್ಲ, ರೂಪಾಂತರಿಸಲಿಲ್ಲ. ಅವು ಓದುವುದಕ್ಕೆ ಮಾತ್ರ ಸೂಕ್ತವಾಗಿದ್ದವು.

ನಾಟಕ ಇರುವುದು ಓದುವುದಕ್ಕಲ್ಲ, ರಂಗದ ಮೇಲೆ ಪ್ರದರ್ಶಿಸುವುದಕ್ಕೆ ಎಂದು ಮೊದಲು ಪ್ರತಿಪಾದಿಸಿದವರು ಶಿವರಾಮ ಕಾರಂತರು. ಅವರು ತಮ್ಮ 'ಗೀತನಾಟಕ'ಗಳಿಗೆ ಬರೆದ ಮುನ್ನುಡಿಯಲ್ಲಿ ಈ ಮಾತನ್ನು ಹೇಳಿದ್ದಾರೆ. ಆಡುವ ನಾಟಕಗಳನ್ನು ದೊಡ್ಡ ಪ್ರಮಾಣದಲ್ಲಿ ಬರೆದವರು ಕೈಲಾಸಂ ಮತ್ತು ಶ್ರೀರಂಗರು. ವಾಸ್ತವವಾದಿ ನಾಟಕಗಳನ್ನು ಬರೆದ ಈ ಇಬ್ಬರು ನಾಟಕಕಾರರು ಪ್ರಥಮತಃ ರಂಗ ಭಾಷೆಯನ್ನು ಅತ್ಯಂತ ಶಕ್ತಿಯುತವಾಗಿ ಬಳಸಿದರು. ಆದರೆ ಕೈಲಾಸಂ ಜೊತೆ-ಜೊತೆಗೇ ನಾಟಕಗಳನ್ನು ಬರೆದ ಪಂಪ ಅವರು ತಮ್ಮ ನಾಟಕಗಳನ್ನು ರಂಗ ಪ್ರದರ್ಶನಕ್ಕೆ ಅನುಕೂಲವಾಗುವಂತೆ ರಚಿಸಿದರೂ ಭಾಷೆಯ ವಿಷಯದಲ್ಲಿ ಮಾತ್ರ ಜಿಗುಟು ನಿಲುವನ್ನೇ ತಳೆದರು. ಓದುವ ನಾಟಕಗಳನ್ನು ಬರೆದವರು ನಿರ್ಮಿತ ಭಾಷೆಯನ್ನು ಹೆಚ್ಚಾಗಿ ಬಳಸಿಕೊಂಡರು ಎಂಬುದನ್ನು ನೆನಪಿನಲ್ಲಿಡಬೇಕು.

ಕಳೆದ ಶತಮಾನದ 60ರ ದಶಕದ ಹೊತ್ತಿಗೆ ನಾಟಕವನ್ನು ಲಿಖಿತ ಕೃತಿ ಎಂದೂ ರಂಗ ಪ್ರದರ್ಶನವನ್ನು 'ರಂಗಕೃತಿ' ಎಂದೂ ಪರಿಭಾವಿಸುವ ಪರಿಪಾಠ ಆರಂಭವಾಯಿತು. ರಂಗಭೂಮಿಯನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದಕ್ಕೆ ರಂಗಶಾಖೆಗಳು ಆರಂಭಗೊಂಡವು. ದೆಹಲಿ ರಾಷ್ಟ್ರೀಯ ನಾಟಕ ಶಾಲೆ ಈ ನಿಟ್ಟಿನಲ್ಲಿ ರಂಗಶಿಕ್ಷಣ ನೀಡಲು ಆರಂಭಿಸಿತು. ರಾಜ್ಯದಲ್ಲಿ ರಂಗಕಾರ್ಯಗಳು ನಡೆದು ಅನೇಕ ತಜ್ಞರು ಈ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಯಾವ ಉತ್ಸಾಹಿ ರಂಗಕರ್ಮಿಗಳಿಗೆ ತರಬೇತಿ ನಡೆಸಿದರು. ಹಾಗಾಗಿ ನಿರ್ದೇಶಕರು, ನಟರು, ರಂಗವಿನ್ಯಾಸಕಾರರು, ಬೆಳಕಿನ ವಿನ್ಯಾಸಕಾರರು ದೊಡ್ಡ ಸಂಖ್ಯೆಯಲ್ಲಿ ಹೊರಬರತೊಡಗಿದರು. ಈ ಪ್ರಯತ್ನಗಳಿಂದಾಗಿ ನಿರ್ದೇಶಕ ಹವ್ಯಾಸಿ ರಂಗಭೂಮಿಯ ಕೇಂದ್ರಸ್ಥಾನದಲ್ಲಿ ಪ್ರತಿಷ್ಠಾಪಿತವಾದ.

ನಾಟಕಕಾರರು ರಂಗಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡೇ ನಾಟಕ ರಚಿಸಲು ಆರಂಭಿಸಿದರು. ಗಿರೀಶ್ ಕಾರ್ನಾಡ್, ಚಂದ್ರ ಶೇಖರ ಕಂಬಾರ, ಲಂಕೇಶ್, ಪ್ರಸನ್ನ, ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದವರು ನಾಟಕವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡರು.
ಒಂದು ಕಡೆ ನಾಟಕಗಳು ರಚನೆಯಾಗುತ್ತಿದ್ದರೆ ಅವುಗಳನ್ನು ಪ್ರದರ್ಶನಕ್ಕೆ ಎತ್ತಿಕೊಳ್ಳುವುದರ ಜೊತೆಗೆ ಕನ್ನಡ ಸಾಹಿತ್ಯದ ಅತ್ಯತ್ತಮ ಕತೆಗಳನ್ನು, ಕವನಗಳನ್ನು ಮತ್ತು ಕಾದಂಬರಿಗಳನ್ನು ರಂಗಕ್ಕೆ ಅಳವಡಿಸುವ ಪ್ರಯತ್ನಗಳೂ ನಡೆದವು. ಪೂರ್ಣಚಂದ್ರ ತೇಜಸ್ವಿಯವರ ಅನೇಕ ಕತೆಗಳು, ಕಾದಂಬರಿಗಳು ರಂಗಕೃತಿಗಳಾಗಿ ಪರಿವರ್ತನೆ ಹೊಂದಿದವು. ಅವರ 'ಕುಬಿ ಮತ್ತು ಇಯಾಲ', 'ತಬರನಕತೆ', 'ಕೃಷ್ಣೇಗೌಡನ ಆನೆ', 'ಕರ್ವಾಲೋ', `ಜುಗಾರಿಕ್ರಾಸ್' ಮುಂತಾದವು ಯಶಸ್ವೀ ನಾಟಕಗಳಾಗಿ ಪ್ರದರ್ಶನಗೊಂಡವು. ದೇವನೂರ ಮಹಾದೇವ ಅವರ ಕತೆಗಳು, ಕಿರುಕಾದಂಬರಿಗಳಾದ 'ಒಡಲಾಳ' ಮತ್ತು 'ಕುಸುಮ ಬಾಲೆ' ಯಶಸ್ವೀ ಪ್ರದರ್ಶನ ಕಂಡವು. 'ಒಡಲಾಳ' ನಾಟಕವಂತೂ ಆಧುನಿಕ ಕನ್ನಡ ರಂಗಭೂಮಿಯಲ್ಲಿ ತನ್ನ ವಾಸ್ತವವಾದಿ ಪ್ರದರ್ಶನದಿಂದಾಗಿ ಹೊಸ ಸಂಚಲನವನ್ನೇ ಸೃಷ್ಟಿಸಿತು.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಈ ಕತೆ ಕಾದಂಬರಿಗಳನ್ನು ಕೆಲವರು ನಾಟಕದ ರೂಪದಲ್ಲಿ ರಚಿಸಿ ಪ್ರದರ್ಶಿಸಿದರೆ, ಇನ್ನು ಕೆಲವು ಕತೆ ಕಾದಂಬರಿಗಳನ್ನು ನಾಟಕದ ರೂಪದಲ್ಲಿ ಪುನಾರಚಿಸದೆ ಹಾಗೆಯೇ ಪ್ರದರ್ಶಿಸುವ ಪ್ರಯತ್ನಗಳೂ ನಡೆದವು. 80ರ ದಶಕದಲ್ಲಿಯೇ ದೆಹಲಿಯ ದೇವರಾಜ ಅಂಕುರ್ ಅವರು ಬೆಂಗಳೂರಿಗೆ ಬಂದು ಯು.ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿಯನ್ನು ಕಾದಂಬರಿಯ ರೂಪದಲ್ಲಿಯೇ ರಂಗದಲ್ಲಿ ಪ್ರದರ್ಶಿಸಿದರು. ಇದನ್ನು ಅವರು 'ಕಥಾಮಂಜ್' ಎಂದು ಕರೆದರು. ಈ ಪ್ರಯತ್ನ ಯಶಸ್ವಿಯಾದ್ದರಿಂದ ಮುಂದೆ ನಟರಾಜ ಹೊನ್ನವಳ್ಳಿ ಮಾಸ್ತಿಯವರ ಕತೆಗಳನ್ನು ಅದೇ ರೂಪದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಕ್ಕೆ ಅಳವಡಿಸಿದರು. ವೈಕುಂಠರಾಜು ಅವರ ಉದ್ಭವ, ಶಿವರಾಮ ಕಾರಂತರ ಕೆಲವು ಕಾದಂಬರಿಗಳು, ಕುವೆಂಪು ಅವರ ಕತೆಗಳು ಹೀಗೆ ಕನ್ನಡ ಸಾಹಿತ್ಯದ ಅತ್ಯಂತ ಸತ್ಯಯುತ ಕತೆ, ಕಾದಂಬರಿಗಳು ರಂಗಭೂಮಿಯಲ್ಲಿ ಅತ್ಯಂತ ಯಶಸ್ವೀ ಪ್ರದರ್ಶನಗಳನ್ನು ಕಂಡವು.

90 ರ ದಶಕದಲ್ಲಿ ಕನ್ನಡದಲ್ಲಿ ಸತ್ವಯುತ ನಾಟಕಗಳು ಬರುತ್ತಿಲ್ಲ ಎಂಬ ಮಾತು ಕೇಳಿ ಬರತೊಡಗಿತು. ಕೆಲವು ರಂಗನಿರ್ದೇಶಕರು ರಂಗಪ್ರದರ್ಶನಕ್ಕೆ ನಾಟಕವೇ ಏಕೆ ಬೇಕು? ಕತೆ, ಕವನ, ಕಾದಂಬರಿ ಹಾಗೂ ಪತ್ರಿಕಾ ಬರಹಗಳೂ ಕೂಡಾ ರಂಗ ಪ್ರದರ್ಶನಕ್ಕೆ ಬೇಕಾದ ಸತ್ವಯುತ ವಸ್ತುಗಳನ್ನು ಒದಗಿಸಬಲ್ಲವು ಎಂಬ ನಿರ್ಧಾರಕ್ಕೆ ಬಂದರು. ಹಾಗಾಗಿ ಕುವೆಂಪು ಅವರ, ಅಡಿಗರ, ಶಿವಪ್ರಕಾಶರ, ಸಿದ್ಧಲಿಂಗಯ್ಯನವರ ಪದ್ಯಗಳು ರಂಗ ಪ್ರದರ್ಶನಕ್ಕೆ ಸಿದ್ಧವಾದವು. ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು ಕೂಡಾ.

ಈಗ ನಾಟಕಗಳೇನೋ ನಿರೀಕ್ಷಿತ ಮಟ್ಟದಲ್ಲಿ, ಸಂಖ್ಯೆಯಲ್ಲಿ ಹೊರಬರುತ್ತಿಲ್ಲ. ಆದರೆ ರಂಗತಂಡಗಳಾಗಲಿ, ರಂಗನಿರ್ದೇಶಕರಾಗಲಿ ಆ ಕೊರತೆಯನ್ನು ದೊಡ್ಡದಾಗಿ ಪರಿಗಣಿಸಿಲ್ಲ. ಯಾಕೆಂದರೆ ಸತ್ವಯುತವಾದ ವಸ್ತು ನಾಟಕದ ರೂಪದಲ್ಲೇ ಪ್ರಕಟವಾಗಬೇಕಿಲ್ಲ. ಅದು ಬರವಣಿಗೆಯ ಯಾವುದೇ ರೂಪದಲ್ಲಿರಲಿ ಅದನ್ನು ರಂಗಕ್ಕೆ ಅಳವಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಿರ್ದೇಶಕರಿಗಿದೆ. ಹಾಗಾಗಿ ನಾಟಕ ಪ್ರಕಾರವಲ್ಲದೆ ಸಾಹಿತ್ಯದ ಬೇರೆ ಪ್ರಕಾರಗಳು ರಂಗಭೂಮಿಗೆ ದೊಡ್ಡ ನಿಧಿಯಾಗಿ ಪರಿಣಮಿಸಿದೆ.

ತೌಡು ಕುಟ್ಟುವ ಕೆಲಸ: ಮುಖ್ಯಮಂತ್ರಿಗೆ ಸೊಗಸಾ?

ಕರ್ನಾಟಕದಲ್ಲಿ ಕನ್ನಡಕ್ಕೊಂದು ಅಭಿವೃದ್ಧಿ ಪ್ರಾಧಿಕಾರ ಇರುವುದು ಕನ್ನಡದ ನೈಜ ಸ್ಥಿತಿಗತಿಯನ್ನು ತೋರಿಸುತ್ತದೆ. ಇರಲಿ . ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಗಿರಬೇಕೆನ್ನುವುದು ಉಸಿರಾಟದಷ್ಟೇ ಸಹಜ. ಆದರೆ ಕರ್ನಾಟಕ ಏಕೀಕರಣಗೊಂಡ ಈ ೫೩ ವರ್ಷಗಳಲ್ಲಿ ನೂರಾರು ಸರಕಾರೀ ಜಿಓಗಳು ಈ ವಿಷಯವಾಗಿ ಹೊರಡಿಸಲ್ಪತ್ತಿದ್ದರೂ ಮೊನ್ನೆ ಕೂಡ ಮುಖ್ಯಮಂತ್ರಿಗಳು ಈ ವಿಷಯವಾಗಿ ಗುಡುಗಬೆಕಾಯಿತು. ಈ ಎಲ್ಲ ಹಿನ್ನಲೆಯಲ್ಲಿ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡಿರುವ ಹಿರಿಯರು ಎಂ. ಕೆ. ಭಾಸ್ಕರ್ ರಾವ್ ಅವರು ತಮ್ಮ ಜ್ಹುಳುಪಾದ ಲೇಖನಿ ಪ್ರಯೋಗಿಸಿದ್ದಾರೆ


ತೌಡು ಕುಟ್ಟುವ ಕೆಲಸ: ಮುಖ್ಯಮಂತ್ರಿಗೆ ಸೊಗಸಾ?
ನೆಲದ ಭಾಷೆಯ ಅಭಿವೃದ್ಧಿಗಾಗಿ, ಅದನ್ನು ಬಳಕೆ ದೃಷ್ಟಿಯಿಂದ ಉತ್ತೇಜಿಸುವುದಕ್ಕಾಗಿ ಸಮಿತಿ, ಪ್ರಾಧಿಕಾರದಂಥ ವ್ಯವಸ್ಥೆಯನ್ನು ಸ್ಥಾಪಿಸಿರುವ ಭಾರತದ ಏಕಮೇವ ರಾಜ್ಯ ನಮ್ಮದು. 1980ರ ದಶಕದಲ್ಲಿ ಕನ್ನಡ ಕಾವಲು ಸಮಿತಿಯಾಗಿ ಜನ್ಮ ತಾಳಿದ ಇದು ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿದೆ. ಸಮಿತಿಯಾಗಲೀ, ಪ್ರಾಧಿಕಾರವಾಗಲೀ ಅದರ ಆಶಯ ಒಂದೇ. ದಿನದಿಂದ ದಿನಕ್ಕೆ ಅಧೋಗತಿಗೆ ಇಳಿಯುತ್ತಿರುವ ಕನ್ನಡ ಭಾಷೆಗೆ ಎಲ್ಲ ಹಂತದಲ್ಲೂ ಕಾಯಕಲ್ಪ ನಡಿ ಅದಕ್ಕೆ ಸಹಜವಾಗಿ ಸಲ್ಲಬೇಕಾದ ಸಾರ್ವಭೌಮ ಪಟ್ಟ ಕಟ್ಟುವುದು.
ದೇಶದ ಇನ್ಯಾವುದೇ ರಾಜ್ಯದಲ್ಲೂ ಆಯಾ ನೆಲದ ಭಾಷೆಯ ಅಭಿವೃದ್ಧಿಗೆ ಸರಕಾರೀ ವ್ಯವಸ್ಥೆಯೊಂದರ ಅಗತ್ಯ ಬಿದ್ದಿಲ್ಲ. ತಮಿಳುನಾಡು, ಆಂಧ್ರ ಪ್ರದೇಶ, ಕೇರಳ... ಹೀಗೆ ಯಾವುದೇ ರಾಜ್ಯವನ್ನು ನೋಡಿದರೂ ಅಲ್ಲೆಲ್ಲ ಸ್ಥಳೀಯರೇ ತಮ್ಮ ಭಾಷೆಯನ್ನು ಬೆಳೆಸುವ ಸಂಕಲ್ಪತೊಟ್ಟು ಯಶಸ್ವಿಯೂ ಆಗಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಸರ್ಕಾರ ಮನಸ್ಸು ಮಾಡಿದರೆ ಕನ್ನಡ ಉಂಟು ಇಲ್ಲವಾದರೆ ಇಲ್ಲ ಎಂಬಂಥ ದಯನಯ ಸ್ಥಿತಿ ನಿರ್ಮಾಣವಾಗಿದೆ.

ಮನವರಿಕೆಯಾಗದ ಮಾತು
ಕರ್ನಾಟಕ
ದಲ್ಲಿ ಕನ್ನಡವೇ ಆಡಳಿತ ಭಾಷೆ ಎನ್ನುವುದು ಸರ್ಕಾರದ ಘೋಷಿತ ನೀತಿ. ಆಡಳಿತದಲ್ಲಿ ಇದನ್ನು ಅಮಲಿಗೆ ತರಬೇಕಾಗಿರುವ ನಮ್ಮ ಅಧಿಕಾರಶಾಹಿಗೆ ಇದು ಇನ್ನೂ ಮನವರಿಕೆಯಾಗಿಲ್ಲ. ಈ ಕೆಲಸ ಮಾಡುವಲ್ಲಿ ಇದುವರೆಗೆ ಬಂದಿರುವ ಯಾವುದೇ ಸರ್ಕಾರವೂ ಯಶಸ್ಸು ಕಂಡಿಲ್ಲ. ಕನ್ನಡದ ವಿಚಾರದಲ್ಲಿ ತಾತ್ಸಾರ ಭಾವದಲ್ಲೇ ಇರುವ ಹಿರಿಯ ಮತ್ತು ಉನ್ನತ ಸ್ಥಾನಗಳಲ್ಲಿರುವ ಅಧಿಕಾರಿಗಳ ದಂಡೇ ನಮ್ಮಲ್ಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬಳಿಯಲ್ಲಿ ಇಂಥ ಅಧಿಕಾರಿಗಳ ಪಟ್ಟಿಯೇ ಇದೆ. ಕೆಲವು ಸಂದರ್ಭಗಳಲ್ಲಿ ಅಂಥವರ ಹೆಸರನ್ನು ಖುದ್ದಾಗಿ ಬಹಿರಂಗಪಡಿಸಿದ್ದೂ ಇದೆ. ಪರಿಣಾಮ ಏನು....?

ಸರ್ಕಾರದ ಮುಖ್ಯಸ್ಥರಿಗೆ ಕಾಲಕಾಲಕ್ಕೆ ತಾವು ಸಲ್ಲಿಸುವ ವರದಿಯಲ್ಲಿ ಈ ಹೆಸರುಗಳನ್ನು ಅವರು ಪಟ್ಟಿ ಮಾಡುತ್ತಲೇ ಇರುತ್ತಾರೆ. ರಾಜ್ಯದ ದುರ್ದೈವವೋ, ಕನ್ನಡದ ದುರವಸ್ಥೆಯೋ ಈ ಪಟ್ಟಿ ಬೆಳೆಯುತ್ತಲೇ ಇದೆಯೇ ಹೊರತೂ ಕಡಿಮೆ ಆಗಿಲ್ಲ. ಆ ಲಕ್ಷಣವೂ ತೋರುತ್ತಿಲ್ಲ. ಕರ್ನಾಟಕ
ಪರಭಾಷಾ ಐಎಎಸ್, ಐಪಿಎಸ್ ಅಧಿಕಾರಿಗಳಿಂದ ತುಂಬಿ ಹೋಗಿರುವ ರಾಜ್ಯ. ಆಂಧ್ರ, ಕೇರಳ, ತಮಿಳು ನಾಡಿನಲ್ಲಿ ಆಯಾ ರಾಜ್ಯದ ಭಾಷೆ, ಸಂಸ್ಕೃತಿ ಬಲ್ಲವರನ್ನು ಹೇಗೋ ತಂದು ಕೂರಿಸುವ ರಾಜಕೀಯ ಒಳ ಕೆಲಸ ಮಾಡುತ್ತದೆ. ಇಲ್ಲಿ ಮಾತ್ರ ಹಾಗೆ ಆಗುವುದೇ ಇಲ್ಲ. ಅದಕ್ಕೆ ಎರಡು ಕಾರಣ: ಒಂದನೆಯದಾಗಿ ಕನ್ನಡಿಗರು ತಮ್ಮ ಮಕ್ಕಳನ್ನು ಎಂಜಿನಯರ್, ಡಾಕ್ಟರ್ ಮಾಡುವುದಕ್ಕೆ ಆದ್ಯತೆ ಕೊಡುತ್ತಾರೆಯೇ ಹೊರತೂ ಅಖಿಲ ಭಾರತ ಸೇವಾ ವ್ಯವಸ್ಥೆಗೆ ಹೋಗುವುದನ್ನು ಕನಸಿನಲ್ಲಿಯೂ ಬಯಸುವುದಿಲ್ಲ. ಹಾಗಾಗಿ ಆಲ್ ಇಂಡಿಯಾ ಸರ್ವೀಸಸ್ ಕೇಡರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ. ಇರುವಷ್ಟನ್ನಾದರೂ ಕರ್ನಾಟಕಕ್ಕೇ ಕಳಿಸಬಹುದಲ್ಲ ಎಂದು ಕೇಳಲು ಅವಕಾಶವಿಲ್ಲ. ನಯಮಾವಳಿ ರೀತ್ಯ ಹೊರ ರಾಜ್ಯಗಳ ಸೇವೆಗೂ ಅವರು ಹೋಗುವುದು ಅನವಾರ್ಯ.


ರಾಜಕೀಯ ಬಲದ ಕೊರತೆ
ನೆರೆಯ ರಾಜ್ಯಗಳಲ್ಲಿ ಆಯಾ ರಾಜ್ಯದ ಐಎಎಸ್. ಐಪಿಎಸ್ಗಳೇ ಆಯಕಟ್ಟಿನ ತಾಣಗಳಲ್ಲಿರಲು ಕಾರಣ, ಆಯಾ ರಾಜ್ಯಗಳಿಗಿರುವ ರಾಜಕೀಯ ಬಲ. ತಮಿಳುನಾಡು, ಆಂಧ್ರ ಅಥವಾ ಕೇರಳ ರಾಜ್ಯಗಳ ರಾಜಕೀಯಕ್ಕೆ ಆ ಬಲವಿದೆ. ಇಂಥಿಂಥವರೇ ಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿ, ಅದಾಗದಿದ್ದರೆ ಬೆದರಿಸಿ ನಯೋಜನೆ ಮೇರೆಗೆ ತಮ್ಮ ರಾಜ್ಯಕ್ಕೆ ಹಾಕಿಸಿಕೊಳ್ಳುವ ತಾಕತ್ತು ಆ ರಾಜ್ಯಗಳ ರಾಜಕಾರಣಿಗಳಿಗೆ ಇರುವಂತೆ ಕರ್ನಾಟಕದ ರಾಜಕಾರಣಿಗಳಿಗೆ ಇಲ್ಲ. ಅಲ್ಲೆಲ್ಲ ವಿರೋಧಿ ರಾಜಕೀಯ ಮಾಡುವ ಕೆಲಸವನ್ನು ಕರ್ನಾಟಕದ ಪಾರಂಪರಿಕ ಭಜನಾ ರಾಜಕೀಯ ಮಾಡುವುದಿಲ್ಲ.
ಇನ್ನು ಪರಭಾಷೆಯಿಂದ ಆ ರಾಜ್ಯಗಳ ಕೇಡರಿಗೆ ಬರುವ ಅಧಿಕಾರಿಗಳು ಆಯಾ ರಾಜ್ಯಭಾಷೆಯನ್ನು ನಯಮಿತ ಅವಧಿಯಲ್ಲೇ ಕಲಿಯುತ್ತಾರೆ. ಅನವಾರ್ಯವೆನಸುವ ಒಂದು ಬಗೆಯ ಒತ್ತಡ ಅಲ್ಲೆಲ್ಲ ಕೆಲಸ ಮಾಡುತ್ತದೆ. ಇಲ್ಲಿ
ಕರ್ನಾಟಕ
ಕ್ಕೆ ಹೊರಗಿನಂದ ಬರುವ ಅಧಿಕಾರಿಗಳಿಗೆ ಕನ್ನಡದ ಮೇಲೆ ಪ್ರೀತಿ ಹುಟ್ಟುವುದೇ ಇಲ್ಲ. ಕಲಿತರೂ ಆಯಿತು, ಬಿಟ್ಟರೂ ಆಯಿತೆಂಬ ಧೋರಣೆಯಲ್ಲಿ ಅವರು ಸೇವೆಯಲ್ಲಿದ್ದು ನವೃತ್ತರಾಗುತ್ತಾರೆ. ಕನ್ನಡ ಕಲಿಯಲೇ ಬೇಕು, ಇಲ್ಲವಾದರೆ ಉಳಿಗಾಲವಿಲ್ಲ ಎಂಬ ಒತ್ತಡ ಇಲ್ಲಂತೂ ಇದುವರೆಗೂ ನಿರ್ಮಾಣವಾಗಿಲ್ಲ. ಆ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಯನ್ನು ಎಲ್ಲೆಲ್ಲಿಂದಲೋ ಬಂದ ಅಧಿಕಾರಿಗಳು ಕಲಿಯಬಹುದಾದರೆ ಇಲ್ಲೇಕೆ ಆಗುವುದಿಲ್ಲ? ಸರ್ಕಾರ ನಡೆಸುವವರು ಇದಕ್ಕೆಲ್ಲ ಉತ್ತರ ಹೇಳಬೇಕು.

ಚಿರಂಜೀವಿ ನಿದರ್ಶನ
ರಾಜ್ಯದ ಅಡಿಷನಲ್ ಚೀಫ್ ಸೆಕ್ರೆಟರಿಯಾಗಿ ನವೃತ್ತರಾಗಿರುವ ಹಿರಿಯ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರ ತೌರು ಪಂಜಾಬ್. ಸೇವೆಯ ಆರಂಭಿಕ ದಿನಗಳಲ್ಲಿ ಅವರನ್ನು
ಕರ್ನಾಟಕ
ಕೇಡರಿಗೆ ಹಾಕಲಾಯಿತು. ಗೊಣಗದೆ ಬಂದ ಅವರು ಮೊದಲು ಮಾಡಿದ ಕೆಲಸವೆಂದರೆ ಕನ್ನಡ ಕಲಿತಿದ್ದು; ಸಿದ್ಧ, ಪ್ರಸಿದ್ಧ ಕನ್ನಡ ಬರಹಗಾರರ ಕೃತಿ- ಕಾವ್ಯಗಳನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟು ಬೆಳೆದಿದ್ದು; ಕನ್ನಡ ಭಾಷೆ ಮತ್ತು
ಕರ್ನಾಟಕ
ದ ಸಂಸ್ಕೃತಿಯೊಂದಿಗೆ ತಮ್ಮನ್ನು ಅಭಿಮಾನಪೂರ್ವಕವಾಗಿ ಗುರುತಿಸಿಕೊಂಡಿದ್ದು... ಏನೆಲ್ಲ ಅವರ ಸಾಧನೆ.
ವಾರ್ತಾ ಇಲಾಖೆಗೆ ಅವರು ನಿರ್ದೇಶಕರಾಗಿದ್ದಾಗ ಉತ್ತರ ಭಾರತದ ರಾಜ್ಯವೊಂದರಿಂದ ಅವರಿಗೆ ಹಿಂದಿಯಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪತ್ರ ಬರುತ್ತದೆ. ಚಿರಂಜೀವಿ, ಆ ಪತ್ರಕ್ಕೆ ಕನ್ನಡದಲ್ಲಿ ಉತ್ತರ ಬರೆಯುವ ಮೂಲಕ ಹಿಂದಿಯ ಜಾಗವನ್ನು ತೋರಿಸುತ್ತಾರೆ. ಅವರು ತಮ್ಮ ಆಡಳಿತ ಭಾಷೆಯಲ್ಲಿ ಪತ್ರ ಬರೆಯಬಹುದಾದರೆ ನಾವೇಕೆ ಬರೆಯಬಾರದು ಎಂಬ ಅವರ ನಲುವು ಇಂದಿಗೂ ನಮ್ಮ ಬಹುತೇಕ ಅಧಿಕಾರಿಗಳಿಗೆ ಅನುಸರಿಲು ಆಗದ ಮಾದರಿಯಾಗೇ ಉಳಿದಿದೆ.
ಕನ್ನಡದಲ್ಲಿ ಮಾತಾಡುವುದಷ್ಟೇ ಅಲ್ಲದೆ ಓದಿ ಬರೆಯುವುದು ಈ ಸರ್ದಾರ್ಜಿಗೆ ಸಾಧ್ಯವಾಗುತ್ತದಾದರೆ ಉಳಿದವರಿಗೆ ಏಕೆ ಆಗುವುದಿಲ್ಲ. ಮನಸ್ಸಿದ್ದರೆ ಮಹಾದೇವ. ನಮ್ಮ ಅಧಿಕಾರಿಗಳಿಗೆ ಮನಸ್ಸಿಲ್ಲ ಎನ್ನುವುದು ಒಂದು ಮುಖ. ಕನ್ನಡದ ವಿಚಾರದಲ್ಲಿ ಆಫ್ಟರ್ ಆಲ್ ಕನ್ನಡ ಎಂಬ ತಾತ್ಸಾರ ಭಾವವಿರುವುದು ಇನ್ನೊಂದು ಮುಖ. ಈ ತಾತ್ಸಾರಕ್ಕೆ ಮದ್ದರೆಯುವ ಕೆಲಸವನ್ನು ಯಾವ ಮುಖ್ಯಮಂತ್ರಿಯೂ ಮಾಡಲಿಲ್ಲ.

ನಾಯಿಯನ್ನೇ ಆಡಿಸುವ ಬಾಲ
ಯಾವುದೇ ಪಕ್ಷವಿರಲಿ, ಅಧಿಕಾರಿಗಳ ಮರ್ಜಿಯಲ್ಲಿ ಮಂತ್ರಿ, ಮುಖ್ಯಮಂತ್ರಿ ಇರುತ್ತಾರೆ. ಹಾಗಾಗಿ ಕ್ರಮ ಕೈಗೊಳ್ಳುವುದು ಆಗದ ಮಾತು. ನಾಯಿ ಬಾಲ ಅಲ್ಲಾಡಿಸುವ ಬದಲಿಗೆ ಬಾಲವೇ ನಾಯಿಯನ್ನು ಆಡಿಸುವ ಈ ಅವ್ಯವಸ್ಥೆ ಕಾರಣವಾಗಿ ಆಡಳಿತದಲ್ಲಿ ಕನ್ನಡ ಸಂಪೂರ್ಣ ಅನುಷ್ಠಾನ ಇನ್ನೂ ಗಗನಕುಸುಮವೇ ಆಗಿದೆ. ಸರ್ಕಾರ
ನಡೆಸುವ ಜನ ಆಗೀಗ ಹೇಳುವ ಮಾತನ್ನು ನಂಬಬಹುದಾದರೆ ವಿಧಾನ ಸೌಧ, ವಿಕಾಸ ಸೌಧ, ಬಹುಮಹಡಿ ಕಟ್ಟಡಗಳ ಹೊರತಾಗಿ ಇತರೆಲ್ಲಡೆ ಕನ್ನಡವೇ ಆಡಳಿತ ಭಾಷೆಯಾಗಿ ಸಮರ್ಪಕ ರೀತಿಯಲ್ಲಿ ಜಾರಿಯಾಗಿದೆ. ಅದು ಹೌದೇ ಆಗಿದ್ದರೆ ಈ ಮೂರು ಜಾಗದಲ್ಲೇಕೆ ಇನ್ನೂ ಆಗಿಲ್ಲ...? ಏನು ಅಡ್ಡಿ, ತೊಂದರೆ...? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಸರ್ಕಾರಕ್ಕೆ ಕಷ್ಟ ಆಗಬಾರದು.

ಕನ್ನಡ ಅನುಷ್ಠಾನಕ್ಕೆ ಅಡ್ಡಿಯಾಗಿರುವ ಅಧಿಕಾರಿಗಳನ್ನು ವಿಧಾನ, ವಿಕಾಸ ಸೌಧ, ಬಹುಮಹಡಿ ಕಟ್ಟಡಗಳಿಂದ ಕಿತ್ತು ಹೊರಗೆಸೆಯಬೇಕು. ಆಡಳಿತ ಭಾಷೆಯ ಅನುಷ್ಠಾನಕ್ಕೆ ಅನುವರ್ತಿಯಾಗುವ ಅಧಿಕಾರಿಗಳನ್ನು ತಂದು ಕೂರಿಸಬೇಕು. ಯಾವುದೇ ಮುಲಾಜಿಗೂ ಒಲಿಯದ ಈ ಕೆಲಸ ಮಾಡುವುದಕ್ಕೆ ಗಂಡೆದೆ ಬೇಕು. ಕನ್ನಡ ಅನುಷ್ಠಾನದಲ್ಲಿ ನರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮದ ಬೆದರಿಕೆ ಹಾಕಿರುವ ಯಡಿಯೂರಪ್ಪ ಗಂಡೆದೆ ತಮಗಿದೆ ಎನ್ನುವುದನ್ನು ತೋರಿಯಾರೆ...? ಯಕ್ಷ ಪ್ರಶ್ನೆ.
ಕರ್ನಾಟಕ
ದಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಸಾರಿದ ಸರ್ಕಾರಿ ಆದೇಶ, ಸೂಚನೆ, ಸುತ್ತೋಲೆಗಳ ಸಂಖ್ಯೆ ಸಾವಿರದ ಆಜೂಬಾಜಿನಲ್ಲಿದೆ. ಸರ್ಕಾರದ ಆದೇಶ ಪಾಲನೆ ಕಡ್ಡಾಯ. ಅದಕ್ಕೆ ವ್ಯತಿರಿಕ್ತವಾಗಿ ನಡೆಯುವುದು ಶಿಕ್ಷಾರ್ಹ ಅಪರಾಧ. ಆದೇಶ, ಸುತ್ತೋಲೆಗಳನ್ನು ಪಾಲಿಸದವರು ಸಾಮಾನ್ಯ ಜನರಾ ಇಲ್ಲವೇ ಸರ್ಕಾರಿ ಅಧಿಕಾರಿಗಳಾ? ಅನುಮಾನ ಬೇಡ.
ಸರ್ಕಾರಿ
ಅಧಿಕಾರಿಗಳೇ ಅದರಲ್ಲೂ ಐಎಎಸ್, ಐಪಿಎಸ್ ಅಧಿಕಾರಿಗಳೇ ಆರೋಪಿಗಳು.
ಸರ್ಕಾರಿ
ಆದೇಶ ಪಾಲಿಸದ ತಪ್ಪಿಗೆ ಏನಾದರೂ ಶಿಕ್ಷೆ ಕೊಡುವುದಿದ್ದರೆ ಮೊದಲು ಅದನ್ನು ಜಾರಿ ಮಾಡಿಬೇಕಿರುವುದು ಈ ಅಧಿಕಾರಿಗಳ ವಿರುದ್ಧ. ಎಷ್ಟು ಜನ ಕನ್ನಡ ವಿರೋಧಿ ಅಧಿಕಾರಿಗಳಿಗೆ ಶಿಸ್ತಿನ ಕ್ರಮದ ರುಚಿ ತೋರಿಸಲಾಗಿದೆ...?
ಸರ್ಕಾರ
ತನ್ನ ಬಳಿ ಇರುವ ವಿವರವನ್ನು ಸಾರ್ವಜನಕಗೊಳಿಸುವುದಕ್ಕೂ ಇದು ಸಕಾಲ.

ಏನು ಕ್ರಮ ಜರುಗಿಸುತ್ತೀರಿ?
ಯಡಿಯೂರಪ್ಪನವರೇ ಹೇಳಿರುವಂತೆ ಇದುವರೆಗೆ ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಅಂಥ ಕಟ್ಟುನಟ್ಟಿನ ಕ್ರಮಗಳನ್ನೇನೂ ಈವರೆಗಿನ
ಸರ್ಕಾರ
ಗಳು ತೆಗೆದುಕೊಂಡಿಲ್ಲ. ಅದರ ಬೆನ್ನಲ್ಲೇ ಅವರು ಹೇಳಿರುವ ಮತ್ತೊಂದು ಮಾತು ನಮ್ಮ
ಸರ್ಕಾರ
ಯಾವುದೇ ಕಾರಣಕ್ಕೂ ಸುಮ್ಮನರುವುದಿಲ್ಲ ಹೌದು ಏನದು ಅವರು ತೆಗೆದುಕೊಳ್ಳಲಿರುವ ಉಗ್ರ ಕ್ರಮ? ಅದನ್ನೇನೂ ಮುಖ್ಯಮಂತ್ರಿ ಬಹಿರಂಗಪಡಿಸಿಲ್ಲ. ಆದರೆ ಅಂಥ ಅಧಿಕಾರಿಗಳ ಸೇವಾ ದಾಖಲೆಯಲ್ಲಿ ಕನ್ನಡ ವಿರೋಧಿ ನಲುವಿನ ಉಲ್ಲೇಖ ಸೇರಿಸಲಾಗುವುದು ಎಂದಿದ್ದಾರೆ. ಇದರಿಂದ ಏನಾಗುತ್ತದೆ...? ಆ ಅಧಿಕಾರಿಗಳ ಸೇವಾ ಹಿರಿತನಕ್ಕೆ ಅದು ಅಡ್ಡಿಯಾಗುತ್ತದೆಯೇ...? ವೇತನ ಬಡ್ತಿ ಸ್ಥಗಿತಗೊಳ್ಳುತ್ತದೆಯೇ...? ಸೇವಾ ಬಡ್ತಿಗೆ ಹಿನ್ನಡೆ ಆಗುತ್ತದೆಯೇ....? ಊಹುಂ ಇಲ್ಲ ಏನೂ ಆಗುವುದಿಲ್ಲ.
ಈ ವಿವರ ಮುಖ್ಯಮಂತ್ರಿಗಿಂತ ಅಧಿಕಾರಿಗಳಿಗೇ ಚೆನ್ನಾಗಿ ಗೊತ್ತಿರುತ್ತದೆ. ಮುಖ್ಯಮಂತ್ರಿಯಾಡುವ ಇಂಥ ಬೆದರಿಕೆ ಮಾತುಗಳನ್ನೆಲ್ಲ ಹೇಗೆ ಮ್ಯಾನೇಜ್ ಮಾಡಬೇಕು ಎನ್ನುವುದೂ ಅವರಿಗೆ ಗೊತ್ತಿರುತ್ತದೆ. ಎಂದೇ ಯಡಿಯೂರಪ್ಪ ವೀರಾವೇಷದಿಂದ ಮಾತಾಡುವಾಗೆಲ್ಲ ಈ ಅಧಿಕಾರಿಗಳು ಮೀಸೆಯಡಿಯಲ್ಲೇ ಮುಸಿಮುಸಿ ನಗುತ್ತಿರುತ್ತಾರೆ. ಆ ಸಂದರ್ಭಗಳಲ್ಲೆಲ್ಲ ಅವರಿಗೆ ಮುಖ್ಯಮಂತ್ರಿ ಬೆದರುಬೊಂಬೆಯಂತೆ ಕಾಣಿಸಿದರೆ ಆಶ್ಚರ್ಯವೇನೂ ಇಲ್ಲ.
ಕರ್ನಾಟಕದ ಇತಿಹಾಸದಲ್ಲೇ ಇದುವರೆಗೆ ಯಾರೇ ಒಬ್ಬ ಐಎಎಸ್, ಐಪಿಎಸ್ ಅಧಿಕಾರಿ ವಿರುದ್ಧ ಕೈ ಎತ್ತುವುದು
ಸರ್ಕಾರ
ಕ್ಕೆ ಸಾಧ್ಯವಾಗಿಲ್ಲ. ಎಂಥ ಸಂದರ್ಭಗಳಲ್ಲೂ ತಮ್ಮವರನ್ನು ಕಾಪಾಡಿಕೊಳ್ಳುವಷ್ಟರಮಟ್ಟಿಗೆ ಈ ಲಾಬಿ ಪ್ರಬಲವಾಗಿದೆ. ಈ ಲಾಬಿಯನ್ನು ಎದುರು ಹಾಕಿಕೊಂಡು ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಯಡಿಯೂರಪ್ಪ ಕ್ರಮ ಜರುಗಿಸಿದ್ದೇ ಹೌದಾದರೆ ಅವರು ಹೊಸ ಅಧ್ಯಾಯವೊಂದನ್ನು ಈ ಇತಿಹಾಸಕ್ಕೆ ಸೇರಿಸಿದಂತಾಗುತ್ತದೆ.

ಕನ್ನಡ ಭಾಷೆಯನ್ನು ಕಲಿಯಬೇಕೆಂದು ಕರ್ನಾಟಕಕ್ಕೆ ಬಂದು ನೆಲೆಸಿರುವ ಇತರ ಭಾಷಿಕ ಜನರಲ್ಲಿ ಆಸೆ ಹುಟ್ಟಿಸುವ ಪರಿಸರವೇ ಇನ್ನೂ ನಮ್ಮಲ್ಲಿ ಮೂಡಿಲ್ಲ. ಇದಕ್ಕೆ ಕಾರಣ ಸಾಮಾಜಿಕ ವ್ಯವಸ್ಥೆಯಲ್ಲ, ಬದಲಿಗೆ ರಾಜಕೀಯ ಇಚ್ಚಾಶಕ್ತಿಯ ಕೊರತೆ.
ಕರ್ನಾಟಕ
ದಲ್ಲಿ ಆಡಳಿತ ನಡೆಸಿದ ಯಾರೊಬ್ಬರಿಗೂ ಕನ್ನಡಕ್ಕೆ ಉತ್ತೇಜನ ನೀಡುವ ಮನಸ್ಸಿರಲಿಲ್ಲ.

ಆರ್. ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ಈ ಮಾತಿಗೆ ಭಿನ್ನವಾದ ಪ್ರಯೋಗವೊಂದನ್ನು ಮಾಡುವ ಯತ್ನ ನಡೆದಿತ್ತು.
ಕರ್ನಾಟಕ
ದಲ್ಲಿರುವವರಿಗೇ ಉದ್ಯೋಗಾವಕಾಶ ಆದ್ಯತೆ ಮೇಲೆ ದೊರೆಯಲೆಂಬ ಆಶಯದಿಂದ ಅವರು ಮಾಡಿದ ಮಣ್ಣಿನ ಮಕ್ಕಳಿಗೇ ಉದ್ಯೋಗ ಹೇಳಿಕೆಗೆ ಸ್ವಾಗತ ದೊರೆಯಬೇಕಾದ ನಾಡಿನಲ್ಲಿ ಟೀಕೆ ಎದುರಾಯಿತು.
ಕಮ್ಯೂನಸ್ಟ್ ಪಕ್ಷಗಳಂತೂ ಇದನ್ನು ಸಂಕುಚಿತ ಮನೋಭಾವ ಎಂದು ಜರಿದು ಬೀದಿಗೇ ಇಳಿದವು. ರಾಜಕೀಯ ಮಾಡಲು ಏನಾದರೂ ಒಂದು ನೆಪ ಬೇಕು, ರಾವ್ ಹೇಳಿಕೆ ಅವುಗಳಿಗೆ ವರವಾಯಿತು ಎಂದಿಟ್ಟುಕೊಳ್ಳೋಣ. ಆದರೆ ಬುದ್ಧಿಜೀವಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವ ತಥಾಕಥಿತ ವರ್ಗವೂ ಕನ್ನಡದ,
ಕರ್ನಾಟಕದ
ಹಿತಕ್ಕೆ ಬೆನ್ನು ಹಾಕಿ ನಂತಿತೆನ್ನುವುದು ವಿಚಿತ್ರ ಹಾಗೂ ವಿಪರ್ಯಾಸ. ಇಂಥ ಗೊಂದಲ ಪ್ರವೃತ್ತಿಯನ್ನು
ಕರ್ನಾಟಕದ
ಗಡಿಯಾಚೆ ಕಾಣಲು ಸಾಧ್ಯವೇ ಇಲ್ಲ. ಹಾಗಾಗಿ ಅಲ್ಲೆಲ್ಲ ಆಯಾ ರಾಜ್ಯ ಭಾಷೆ ಹುಲುಸಾಗಿ ಬೆಳೆಯುತ್ತದೆ. ಈಗ ಕರ್ನಾಟಕದಲ್ಲಿ ಪರಿಸ್ಥಿತಿ ತಿರುವುಮುರುವಾಗಿದೆ. ಕಮ್ಯೂನಸ್ಟರೂ ಸೇರಿದಂತೆ ಅಂದು ವಿರೋಧಿ ಪಾಳಯದಲ್ಲಿದ್ದವರೆಲ್ಲರೂ ಮಣ್ಣಿನ ಮಕ್ಕಳಿಗೆ ಉದ್ಯೋಗದ ಜಪ ಮಾಡುತ್ತಿರುವ ಬದಲಾವಣೆಯನ್ನು ನೋಡಬಹುದು. ಆದರೆ ಅದನ್ನು ನೋಡಲು ಗುಂಡೂರಾಯರಿಲ್ಲ.

ಈಗ ಯಡಿಯೂರಪ್ಪ ಮಾತಿನಾಚೆಗೆ ಜಿಗಿಯಬೇಕು. ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದ್ದು ಬಹಿರಂಗ ಸುದ್ದಿಯಾಗಬೇಕು. ಹಾಗೆ ಅವರು ಮಾಡಿದ್ದೇ ಹೌದಾದಲ್ಲಿ ರಾಜ್ಯದ ಉದ್ದಗಲಕ್ಕೆ ಆ ಸುದ್ದಿ ಸ್ಪಷ್ಟ ಸಂದೇಶವನ್ನೂ ರವಾನಸುತ್ತದೆ, ಅಧಿಕಾರಿ ವಲಯದಲ್ಲಿ ಸಂಚಲನಕ್ಕೂ ಕಾರಣವಾಗುತ್ತದೆ. ಹಾಗೆ ಮಾಡದೇ ಮಾತಿಗಷ್ಟೇ ಈ ಪೌರುಷ ಸೀಮಿತವಾದರೆ ಅದು ಗಾಳಿಯನ್ನು ಗುದ್ದಿದಂತೆ; ತೌಡು ಕುಟ್ಟಿದಂತೆ!
(ಈ ಭಾನುವಾರ ವಾರಪತ್ರಿಕೆಯಲ್ಲಿ ಪ್ರಕಟಿತ)